Advertisement

“ಈ ತಾಯಿ” ಪಾತ್ರ ಮರೆಯಲು ಸಾಧ್ಯವೇ…1500 ಸಿನಿಮಾ…6ದಶಕ ನಟನೆ!

09:26 AM Mar 29, 2019 | Nagendra Trasi |

ಉತ್ತರ ಕನ್ನಡದ ಭಟ್ಕಳ ತಾಲೂಕಿನಲ್ಲಿ ಜನಿಸಿದ್ದ ಗೀತಾ ಅಲಿಯಾಸ್ ಪಂಡರಿಬಾಯಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವುದು ಹಳೆ ಕಥೆಯಾಗಿಬಿಟ್ಟಿದೆ. ಆದರೆ ಈಗಲೂ ಕಪ್ಪು-ಬಿಳುಪಿನ ಸಿನಿಮಾ ನೋಡುವಾಗ ಹಣೆಯಲ್ಲಿ ಅಗಲವಾದ ಕುಂಕುಮ, ತಾಯಿ ಮಮತೆ, ಪ್ರೀತಿಯ ಧಾರೆಯನ್ನು ಹರಿಸುವ ಅವರ ಅಮ್ಮನ ಪಾತ್ರ ಮರೆಯಲು ಸಾಧ್ಯವೇ? ಕನ್ನಡ ಚಿತ್ರರಂಗಕ್ಕೆ ಡಾ.ರಾಜ್ ಕುಮಾರ್ ಅವರು ಕಾಲಿಡುವ ಮುನ್ನವೇ ಚಿತ್ರರಂಗ ಪ್ರವೇಶಿಸಿದ್ದ ಪಂಡರೀಬಾಯಿ ಅವರು ನಿಜಜೀವನದಲ್ಲಿಯೂ ತಾಯಿ ಸ್ವರೂಪವೇ ಆಗಿದ್ದರು. ಕನ್ನಡ, ತಮಿಳು ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಬಳಿಕ ತಾಯಿ ಪಾತ್ರದಲ್ಲಿ ಮಿಂಚಿದ್ದರು.

Advertisement

ಹರಿಕಥೆ ಹೇಳುವ ಮೂಲಕ ಮುದ್ದುಮುಖದ ಬಾಲಕಿ ಎಲ್ಲರ ಮನಗೆದ್ದಿದ್ದಳು!

ಉತ್ತರ ಕನ್ನಡದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಪಂಡರಿಬಾಯಿ ಅವರ ತಂದೆ ಚಿತ್ರಕಲಾ(ಡ್ರಾಯಿಂಗ್) ಶಿಕ್ಷಕರಾಗಿದ್ದರು. ಅಷ್ಟೇ ಅಲ್ಲ ರಂಗಭೂಮಿ ನಟರು, ಹರಿಕಥೆ ಕೂಡಾ ಹೇಳುತ್ತಿದ್ದರು. ಹೀಗೆ ತಂದೆ ಪುಟ್ಟ ಮಗಳಾದ ಪಂಡರಿಬಾಯಿಗೂ ಹರಿಕಥೆ ಹೇಳುವ ಕಲೆಯನ್ನು ಕಲಿಸಿಕೊಟ್ಟಿದ್ದರು. ಅದರಂತೆ 8-9ವರ್ಷದ ಪುಟ್ಟ ಬಾಲಕಿಯಾಗಿದ್ದ ಪಂಡರಿಬಾಯಿ ಹರಿಕಥೆ ಹೇಳುವ ಮೂಲಕ ಎಲ್ಲರ ಮನಗೆದ್ದಿದ್ದಳು.

ಹರಿಕಥೆ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಪಂಡರಿಬಾಯಿ ಚಿತ್ರರಂಗ ಪ್ರವೇಶಿಸಲು ಸಾಧ್ಯವಾಗುವಂತೆ ಆಗಿದ್ದು ಹರಿಕಥೆಯಿಂದ!. ಒಮ್ಮೆ ಪುಟ್ಟ ಬಾಲಕಿ ಪಂಡರಿಬಾಯಿ ಮೈಸೂರಿನಲ್ಲಿ ಅಪಾರ ಜನಸ್ತೋಮದ ನಡುವೆ ಹರಿಕಥೆ ಹೇಳಿದ ಪರಿಗೆ ಅಂದಿನ ದಂತಕಥೆ, ಪಿಟೀಲು ಚೌಡಯ್ಯ ಅವರ ಗಮನಸೆಳೆದುಬಿಟ್ಟಿದ್ದಳು! ಆಗ ತಾನೊಂದು ಸಿನಿಮಾ ನಿರ್ಮಾಣ ಮಾಡಬೇಕು ಅದರಲ್ಲಿ ಈ ಬಾಲಕಿಗೆ ನಟಿಸಲು ಅವಕಾಶ ಕೊಡಬೇಕೆಂದು ಪಿಟೀಲು ಚೌಡಯ್ಯ ನಿರ್ಧರಿಸಿಬಿಟ್ಟಿದ್ದರಂತೆ! ಅದರಂತೆ ಪಂಡರಿಬಾಯಿ ತಮ್ಮ 13ನೇ ವಯಸ್ಸಿನಲ್ಲಿ ನಟಿಯಾಗಿ ಬೆಳ್ಳಿಪರದೆಗೆ ಎಂಟ್ರಿ ಕೊಡುವಂತಾಯಿತ. ಇದು ಪಂಡರಿಬಾಯಿ ಅವರ ಬದುಕಿನ ಟರ್ನಿಂಗ್ ಪಾಯಿಂಟ್!.

Advertisement

ಆರು ದಶಕಗಳ ಪಯಣ…1,500 ಸಿನಿಮಾಗಳಲ್ಲಿ ನಟನೆ!

1943ರಲ್ಲಿ ಕೆ.ಹಿರಣ್ಯಯ್ಯ ಹಾಗೂ ಎಂಎನ್ ಗೋಪಾಲ್ ಅವರ ಜಂಟಿ ನಿರ್ದೇಶನದ ವಾಣಿ ಎಂಬ ಕನ್ನಡ ಸಿನಿಮಾದಲ್ಲಿ ಪಂಡರಿಬಾಯಿ ಮೊತ್ತ ಮೊದಲು ಬಣ್ಣಹಚ್ಚಿದ್ದರು. ಚಿತ್ರದ ನಿರ್ಮಾಪಕರು ಪಿಟೀಲು ಚೌಡಯ್ಯ! ಈ ಸಿನಿಮಾದಲ್ಲಿ ಬಳ್ಳಾರಿ ಲಲಿತಾ, ಬಳ್ಳಾರಿ ರತ್ನಮಾಲಾ ಹಾಗೂ ಮುಸುರಿ ಕೃಷ್ಣಮೂರ್ತಿ, ಪಂಡರಿಬಾಯಿ ಮುಖ್ಯಭೂಮಿಕೆಯಲ್ಲಿದ್ದರು. ಆದರೆ ವಾಣಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ.

ಏತನ್ಮಧ್ಯೆ 1944ರಲ್ಲಿ ಸುಂದರ್ ರಾವ್ ಅವರು ನಿರ್ದೇಶಿಸಿದ್ದ ತಮಿಳು ಚಿತ್ರ ಹರಿದಾಸದಲ್ಲಿ ಪಂಡರಿಬಾಯಿಗೆ ನಟಿಸಲು ಅವಕಾಶ ಸಿಕ್ಕಿತ್ತು. ಎಂಕೆ ತ್ಯಾಗರಾಜಾ ಭಾಗವತರ್, ಟಿಆರ್ ರಾಜಕುಮಾರಿ ಮತ್ತು ಎನ್ ಸಿ ವಸಂತಕೋಕಿಲಂ ಜೊತೆ ನಟಿಸಿದ್ದ ಈ ಸಿನಿಮಾ ತಮಿಳುನಾಡಿನ ಒಂದೇ ಟಾಕೀಸ್ ನಲ್ಲಿ ಬರೋಬ್ಬರಿ 110 ವಾರಗಳ ಕಾಲ ಪ್ರದರ್ಶನ ಕಂಡಿತ್ತಲ್ಲದೆ..ಮೆಗಾ ಹಿಟ್ ಆಗುವುದರೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು!

ಕನ್ನಡದಲ್ಲಿ ಪಂಡರಿಬಾಯಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದು 1949ರ ಗೋರಾ ಕುಂಬಾರ. ಮಹಾರಾಷ್ಟ್ರದ ಪ್ರಸಿದ್ಧ ಸಂತರಾಗಿದ್ದ ಗೋರಾ ತಾತನ ಕುರಿತ ಸಿನಿಮಾ ಇದಾಗಿತ್ತು. ಗೋರಾ ಪಂಡರಾಪುರದ ಭಕ್ತನಾಗಿದ್ದ. ಹೀಗೆ ಗೋರಾ ಕುಂಬಾರನ ಜೀವನ ಚರಿತ್ರೆ ಕುರಿತು 1948ರಲ್ಲಿ ಚಕ್ರಧಾರಿ ಹೆಸರಿನಲ್ಲಿ, 1974ರಲ್ಲಿ ಕನ್ನಡದಲ್ಲಿ ಭಕ್ತ ಕುಂಬಾರ(ಇದರಲ್ಲಿ ಡಾ.ರಾಜ್, ಲೀಲಾವತಿ) ಹಾಗೂ 1977ರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಅಭಿನಯದ ಚಕ್ರಧಾರಿ ಎಂಬ ಚಿತ್ರ ಬಂದಿತ್ತು.

1948ರಲ್ಲಿ ಎವಿ ಮೇಯಪ್ಪನ್ ನಿರ್ದೇಶನ ಮತ್ತು ನಿರ್ಮಾಣದ ವೇತಾಳ ಉಳಗಂ(ಸ್ಮಶಾನ) ಎಂಬ ತಮಿಳು ಚಿತ್ರದಲ್ಲಿ ಪಂಡರಿಬಾಯಿ ಕಾಳಿದೇವಿಯ ಪಾತ್ರ ಮಾಡಿದ್ದರು. 1950ರಲ್ಲಿ ಎವಿಎಂ ಸ್ಟುಡಿಯೋ ನಿರ್ಮಾಣದ ರಾಜಾ ವಿಕ್ರಮ ಸಿನಿಮಾದಲ್ಲಿಯೂ ಪಂಡರಿಬಾಯಿ ನಟಿಸಿದ್ದರು. 1952ರಲ್ಲಿ ಕೃಷ್ಣನ್ –ಪಂಜು ನಿರ್ದೇಶನದ, ಎಂ.ಕರುಣಾನಿಧಿ ಚಿತ್ರಕಥೆಯ ಪರಾಶಕ್ತಿ ಸಿನಿಮಾ ಪಂಡರಿಬಾಯಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಈ ಚಿತ್ರದಲ್ಲಿ ಶಿವಾಜಿ ಗಣೇಶನ್, ಎಸ್.ವಿ.ಸಹಸ್ರನಾಮಂ, ಎಸ್.ಎಸ್.ರಾಜೇಂದ್ರನ್ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿದ್ದರು. 175 ದಿನಗಳ ಕಾಲ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿತ್ತು.

ನಂತರ ತಮಿಳಿನ ಎಕ್ ಥಾ ರಾಜಾ, ಮರ್ಮಯೋಗಿ, ತೆಲುಗಿನ ಗುಮಾಸ್ತ, ಗುಣಸಾಗರಿ, ಪೊಂಗೊತಾಯ್, ತಿರುಂಬಿ ಪಾರ್, ಕಣ್ಗಲ್, ಅಂದ ನಾಳ್ ಸಿನಿಮಾ ಯಶಸ್ವಿಯಾಗಿದ್ದವು. ಹೀಗೆ ಹತ್ತು ವರ್ಷಗಳ ಕಾಲ ತಮಿಳು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದ ಪಂಡರಿಬಾಯಿ ಅವರು 1954ರಲ್ಲಿ ಎಚ್.ಎಲ್.ಎನ್ ಸಿಂಹ ನಿರ್ದೇಶನದ ಬೇಡರ ಕಣ್ಣಪ್ಪ ಕನ್ನಡ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಅವರ ಹೀರೋಯಿನ್ ಆಗಿ ಪಂಡರಿಬಾಯಿ ನಟಿಸಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.

ಹೀರೋಯಿನ್ ಆಗಿದ್ದ ಪಂಡರಿಬಾಯಿ 1957ರಲ್ಲಿ ಚಿತ್ರ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ರಾಯರ ಸೊಸೆ ಎಂಬ ಕನ್ನಡ ಸಿನಿಮಾವನ್ನು ಮೊತ್ತ ಮೊದಲು ನಿರ್ಮಿಸಿದ್ದರು. ಆದರೆ ಸಿನಿಮಾ ಕನ್ನಡ ಮತ್ತು ತಮಿಳು ಬಾಕ್ಸಾಫೀಸ್ ನಲ್ಲಿ ಸೋತಿತ್ತು. 1959ರಲ್ಲಿ ಅಬ್ಬಾ ಆ ಹುಡುಗಿ, ಅನ್ನಪೂರ್ಣ, ಸತ್ಯ ಹರಿಶ್ಚಂದ್ರ, ಬಂಗಾರದ ಪಂಜರ, ಚಲಿಸುವ ಮೋಡಗಳು, ಅಪೂರ್ವ ಸಂಗಮ, ಅನುರಾಗ ಅರಳಿತು, ಶ್ರುತಿ ಸೇರಿದಾಗ ಹೀಗೆ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬರೋಬ್ಬರಿ 1,500 ಸಿನಿಮಾಗಳಲ್ಲಿ ನಟಿಸಿದ್ದ ಹೆಗ್ಗಳಿಕೆ ಪಂಡರಿಬಾಯಿ ಅವರದ್ದು!

50-60ರ ದಶಕದಲ್ಲಿ ಪಂಡರಿಬಾಯಿ ಅವರು ತಮಗಿಂತ ಹಿರಿಯ ನಟರಾಗಿದ್ದ ಎಂಜಿ ರಾಮಚಂದ್ರನ್, ಎನ್ ಟಿರಾಮರಾವ್ , ಶಿವಾಜಿಗಣೇಶನ್, ಡಾ.ರಾಜ್ ಕುಮಾರ್, ರಜನಿಕಾಂತ್ ಅವರಂತಹ ಘಟಾನುಘಟಿ ನಟರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದರು. ಕಾಲಚಕ್ರ ಉರುಳುತ್ತಿದ್ದಂತೆಯೇ ತಾಯಿ ಸೆಂಟಿಮೆಂಟ್ ಪಾತ್ರಗಳು ಕಡಿಮೆಯಾಗತೊಡಗಿದವು. ವಯಸ್ಸಿನ ಜೊತೆಗೆ ಪಂಡರಿಬಾಯಿ ಅವರಿಗೆ ಅವಕಾಶಗಳು ಇಳಿಮುಖವಾದವು. ಏತನ್ಮಧ್ಯೆ ಅಪಘಾತದಿಂದಾ ಒಂದು ಕೈಯನ್ನು ಕಳೆದುಕೊಂಡಿದ್ದರು.

ಪಾಂಡುರಂಗನ ಭಕ್ತೆ; ಕುಟುಂಬ ನಿರ್ವಹಣೆಗಾಗಿ ತಾವು ಮದುವೆಯಾಗಿದ್ದು 50ನೇ ವಯಸ್ಸಿಗೆ!

ತಾಯಿಯ ಪಾತ್ರದ ಮೂಲಕ ಇಂದಿಗೂ ಚಿರಸ್ಥಾಯಿಯಾಗಿ ನಮ್ಮೊಳಗೆ ಉಳಿದಿರುವ ಪಂಡರಿಬಾಯಿ ಅವರ ಕೊನೆಯ ದಿನಗಳು ತುಂಬಾ ಯಾತನಾಮಯ ಹಾಗೂ ಕಷ್ಟದಾಯಕವಾಗಿತ್ತು. ಪಂಡಾರಪುರದ ಪಾಂಡುರಂಗನ ಭಕ್ತೆಯಾಗಿದ್ದ ಪಂಡರಿಬಾಯಿ ಚೆನ್ನೈನ ವಡಪಳನಿಯ ತಮ್ಮ ಮನೆಯ ಕಂಪೌಂಡ್ ಒಳಗೆ ಪಾಂಡುರಂಗನ ದೇವಸ್ಥಾನವನ್ನು ಕಟ್ಟಿಸಿದ್ದರು. ತನ್ನ ಸಹೋದರರು, ಸಹೋದರಿಯರು, ಅವರ ಮಕ್ಕಳ ಪಾಲನೆ, ಪೋಷಣೆಗಾಗಿ ಪಂಡರಿಬಾಯಿ ಅವರು 50 ವರ್ಷಗಳವರೆಗೂ ಒಂಟಿಯಾಗಿ ಬದುಕಿದ್ದರು. ಅವರು ತಮ್ಮ 50ನೇ ವಯಸ್ಸಿಗೆ ಡಾ.ಪಿ.ಎಚ್.ರಾಮಾ ರಾವ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮಕ್ಕಳಿಲ್ಲ. ದೇವಸ್ಥಾನವನ್ನು ಬಳಿಕ ಪೇಜಾವರ ಮಠಕ್ಕೆ ಹಸ್ತಾಂತರಿಸುವಂತೆ ಪತಿಗೆ ತಿಳಿಸಿದ್ದರು.

ಅಪಘಾತದಿಂದಾಗಿ ಪಂಡರಿಬಾಯಿ ಅವರ ಆರೋಗ್ಯ ಹದಗೆಡತೊಡಗಿತ್ತು. ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿಲ್ಲವಾಗಿತ್ತು. ಈ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಮ್ಮ ಟ್ರಸ್ಟ್ ನಿಂದ ಆರ್ಥಿಕ ನೆರವು ನೀಡಿದ್ದರು. 2003ರ ಜನವರಿ 29ರಂದು ಪಂಡರಿಬಾಯಿ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದರು. ಪತ್ನಿಯ ಅಗಲಿಕ ಬಳಿಕ ಪತಿ ವಡಪಳನಿಯಲ್ಲಿದ್ದ ಜಾಗ ಮತ್ತು ದೇವಸ್ಥಾನವನ್ನು ಉಡುಪಿಯ ಪೇಜಾವರ ಮಠಕ್ಕೆ ಹಸ್ತಾಂತರಿಸಿದ್ದರು. ಆರು ದಶಕಗಳ ಕಾಲ ಚಿತ್ರರಂಗದಲ್ಲಿದ್ದ ಪಂಡರಿಬಾಯಿ ನಿಜಕ್ಕೂ ಶತಮಾನದ ಮಾದರಿ ಹೆಣ್ಣು ಎಂಬ ಮಾತು ಅತಿಶಯೋಕ್ತಿಯಲ್ಲ…

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next