ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಮುಹೂರ್ತ ಘೋಷಣೆ ಆಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ಶುರುವಾಗಿದ್ದು, ಮತದಾರರ ಓಲೈಸಲು ಇರುವ ಅವಕಾಶ ಗಳನ್ನೆಲ್ಲ ಬಳಸಿಕೊಳ್ಳ ಲಾರಂಭಿಸಿವೆ.
ದಿನಾಂಕ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ಗೆ ಎರಡೆರಡು ಆಘಾತಗಳು ಉಂಟಾಗಿವೆ. ಗುಜರಾತ್ನ ಮತ್ತೂಬ್ಬ ಕಾಂಗ್ರೆಸ್ ಶಾಸಕ ವಲ್ಲಭ ಧರಾವಿಯ ಅವರು ಸೋಮವಾರ ರಾಜೀನಾಮೆ ನೀಡಿ, ಬಿಜೆಪಿಯತ್ತ ನಡೆದಿ ದ್ದಾರೆ. ಕಳೆದ 4 ದಿನಗಳಲ್ಲಿ ಪಕ್ಷ ತೊರೆದು ಬಿಜೆಪಿ ಸೇರಿದ 3ನೇ ಶಾಸಕ ಇವರಾಗಿದ್ದಾರೆ. ಇನ್ನೊಂದೆಡೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಬಿಜೆಪಿಗೆ ಸೇರ್ಪಡೆಯಾಗುವ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ವಿಪಕ್ಷ ನಾಯಕರೂ ಆಗಿರುವ ರಾಧಾಕೃಷ್ಣ ಅವರ ಪುತ್ರನೇ ಪಕ್ಷ ತೊರೆಯುತ್ತಿರುವುದು ಕಾಂಗ್ರೆಸ್ಗೆ ತೀವ್ರ ಮುಜುಗರ ಉಂಟುಮಾಡಿದೆ.
ರಂಜಾನ್ ವಿವಾದ: ಆಯೋಗ ರಂಜಾನ್ ಮಾಸದ ಅವಧಿಯಲ್ಲೇ ದಿನಾಂಕ ಘೋಷಣೆ ಮಾಡುವ ಮೂಲಕ ಆಡಳಿತಾರೂಢ ಪಕ್ಷಕ್ಕೆ ಅನುಕೂಲ ಕಲ್ಪಿಸಿದೆ ಎಂದು ಟಿಎಂಸಿ ಹಾಗೂ ಆಮ್ ಆದ್ಮಿ ಪಕ್ಷ ಆರೋಪಿಸಿವೆ. ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಆಯೋಗ, ನಾವು ಶುಕ್ರವಾರ ಮತ್ತು ಈದ್-ಉಲ್- ಫಿತರ್ ಹಬ್ಬದ ದಿನ ಮತದಾನ ನಿಗದಿಯಾಗದಂತೆ ನೋಡಿಕೊಂಡಿದ್ದೇವೆ. ಹಾಗಂತ, ಇಡೀ ತಿಂಗಳು ವಿನಾಯ್ತಿ ನೀಡುವುದು ಅಸಾಧ್ಯ ಎಂದಿದೆ. ವಿಪಕ್ಷಗಳು ಉದ್ದೇಶಪೂರ್ವಕವಾಗಿ ವಿವಾದ ಸೃಷ್ಟಿಸುತ್ತಿದೆ ಎಂದು ಬಿಜೆಪಿ ದೂರಿದರೆ, ರಂಜಾನ್ ಮಾಸದಲ್ಲಿ ಚುನಾವಣೆ ನಡೆದರೆ ಯಾವುದೇ ಸಮಸ್ಯೆಯಿಲ್ಲ ಎಂದು ಸಂಸದ ಒವೈಸಿ ಹೇಳಿದ್ದಾರೆ.
ಪವಾರ್ ಸ್ಪರ್ಧೆ ಇಲ್ಲ: ಚುನಾವಣೆಯಲ್ಲಿ ಮಹಾರಾಷ್ಟ್ರದ ಮಾಧಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂಗೆ ಅರ್ಜಿ: ಚುನಾವಣೆ ವೇಳೆ ಬೈಕ್ ರ್ಯಾಲಿಗಳು ಹಾಗೂ ರೋಡ್ ಶೋಗಳಿಗೆ ನಿರ್ಬಂಧ ಹೇರುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಉ. ಪ್ರದೇಶದ ಮಾಜಿ ಡಿಜಿಪಿ ವಿಕ್ರಂ ಸಿಂಗ್ ಮತ್ತು ಪರಿಸರವಾದಿ ಶೈವಿಕಾ ಅಗರ್ವಾಲ್ ಈ ಅರ್ಜಿ ಸಲ್ಲಿಸಿದವರು. ರೋಡ್ ಶೋ, ಬೈಕ್ ರ್ಯಾಲಿಗಳಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ, ಟ್ರಾಫಿಕ್ ಜಾಮ್ ಕೂಡ ಆಗಿ ಜನರಿಗೆ ಸಮಸ್ಯೆಯಾಗುತ್ತದೆ ಎಂದು ಅವರು ಅರ್ಜಿಯಲ್ಲಿ ಅರಿಕೆ ಮಾಡಿದ್ದಾರೆ.
ಶಬರಿಮಲೆ ವಿಚಾರ ಪ್ರಸ್ತಾವಿಸುವಂತಿಲ್ಲ
ಕೇರಳದಲ್ಲಿ ರಾಜಕೀಯ ಪಕ್ಷಗಳು ಪ್ರಚಾರದ ವೇಳೆ ಶಬರಿಮಲೆ ವಿವಾದವನ್ನು ಪ್ರಸ್ತಾಪಿಸುವಂತಿಲ್ಲ. ಪ್ರಸ್ತಾವಿಸಿದರೆ ಅದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿ ಸಿದೆ. ಈ ಹೇಳಿಕೆಯಿಂದ ಕೆರಳಿರುವ ಬಿಜೆಪಿ, ಇದೊಂದು ಅಸಮರ್ಥನೀಯ ಹೇಳಿಕೆ ಎಂದಿದೆ. ಅಲ್ಲದೆ, ಶಬರಿಮಲೆ ವಿವಾದದಲ್ಲಿ ರಾಜ್ಯ ಸರಕಾರ ಕೈಗೊಂಡ ನಿಲುವಿನ ಬಗ್ಗೆ ಖಂಡಿತ ಚರ್ಚಿಸುತ್ತೇವೆ. ಇದರಲ್ಲಿ ಯಾರೂ ಮಧ್ಯಪ್ರವೇಶಿಸಲು ಬಿಡುವುದಿಲ್ಲ ಎಂದೂ ಬಿಜೆಪಿ ಹೇಳಿದೆ. ಈ ನಡುವೆ, ಪ್ರಚಾರಕ್ಕಾಗಿ ಫ್ಲೆಕ್ಸ್ ಮತ್ತು ಇತರೆ ವಿಘಟನೀಯವಲ್ಲದ ವಸ್ತುಗಳನ್ನು ಬಳಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಸೋಮವಾರ ಆದೇಶಿಸಿದೆ.