Advertisement

ಶೇ.49 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

12:47 AM Jan 30, 2020 | Team Udayavani |

ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸುರೇಶ್‌ ಕುಮಾರ್‌ ಹೇಳಿದರು.

Advertisement

ಕಟ್ಟಡ ನಿರ್ಮಾಣ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಕುರಿತು ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು (ಐಐಎಂಬಿ)ನಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ಸಮಾವೇಶದಲ್ಲಿ ಮಾತ ನಾಡಿದ ಅವರು, ಕಾರ್ಮಿಕ ಇಲಾಖಾ ವ್ಯಾಪ್ತಿಯ ಕಾರ್ಮಿಕ ಕಲ್ಯಾಣ ಮಂಡಳಿಗೆ ಶೀಘ್ರ ದಲ್ಲೇ ಜಂಟಿ ಕಾರ್ಮಿಕ ಆಯುಕ್ತರನ್ನು ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಪಘಾತ, ಅವಘಡಗಳು ಸಂಭವಿಸಿದಾಗ ಕಾರ್ಮಿಕರಿಗೆ ನ್ಯಾಯಯುತವಾಗಿ ದೊರೆಯ ಬೇಕಾದ ಪರಿಹಾರವನ್ನು ಒದಗಿಸುವ ಬಗ್ಗೆ ಸೂಕ್ತ ತರಬೇತಿ ನೀಡುವ ಮೂಲಕ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. 2016 ರಿಂದ ಕಾರ್ಮಿಕರ ಮಕ್ಕಳಿಗೆ ನೀಡಬೇಕಾದ ಶಿಷ್ಯ ವೇತನದ ಬಾಕಿಯನ್ನು ಕೂಡಲೇ ವಿತರಿಸಲು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದರು.

ಕಾರ್ಮಿಕರ ಆನ್‌ಲೈನ್‌ ಹಾಗೂ ಆಫ್ಲೈನ್‌ ನೋಂದಣಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಟ್ಟಡ ಕಾರ್ಮಿಕರ ನೋಂದಣಿಯನ್ನು ತ್ವರಿತ ಗೊಳಿಸಲು ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಸ್ಥಳಗಳಿಗೆ ಅಧಿಕಾರಿಗಳೇ ಮೊಬೈಲ್‌ ವ್ಯಾನ್‌ ಮೂಲಕ ತೆರಳಿ ಕಾರ್ಮಿಕರ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಾದ ಕ್ರಮಕ್ಕೂ ಚಿಂತನೆ ನಡೆಸಲಿದ್ದೇವೆ ಎಂದು ಹೇಳಿದರು.

ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಮಾತನಾಡಿ, ನಮ್ಮ ನಗರಗಳಲ್ಲಿ ಕಾಣುವ ಕಟ್ಟಡಗಳಿಗಿಂತಲೂ ಗಗನಚುಂಬಿ ಕಟ್ಟಡಗಳನ್ನು ವಿದೇಶಗಳಲ್ಲಿ ನಿರ್ಮಿಸುತ್ತಿದ್ದಾರೆ. ಆದರೆ, ಅಲ್ಲಿ ಸಂಭವಿಸದ ಅವಘಡಗಳು ನಮ್ಮಲ್ಲೇಕೆ ಸಂಭವಿಸುತ್ತವೆ. ದೇಶದಲ್ಲಿ ಶೌಚಗುಂಡಿಯ ಶುಚಿ ಮಾಡುವ ಕಾರ್ಯದಲ್ಲಿ ಇಂದಿಗೂ ಹಲವರು ಮೃತಪಡುತ್ತಿದ್ದಾರೆ. ತಂತ್ರಜ್ಞಾನದ ಬಳಕೆಯಿಂದ ಕಟ್ಟಡ ಕಾರ್ಮಿಕರಿಗೆ ಆಗುವ ಅವಘಡಗಳನ್ನು ಹಾಗೂ ಸಾವುಗಳನ್ನು ತಡೆಗಟ್ಟಬಹುದು ಎಂದರು.

Advertisement

ಬೆಂಗಳೂರಿನಲ್ಲಿ 2015ರಲ್ಲಿ 89, 2016ರಲ್ಲಿ 50, 2017ರಲ್ಲಿ 64, 2018ರಲ್ಲಿ 75, 2019ರಲ್ಲಿ 70 ಹಾಗೂ 2020ರಲ್ಲಿ 8 ಮಂದಿ ಕಟ್ಟಡ ಕಾರ್ಮಿಕರು ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಅವಘಡಕ್ಕೆ ತುತ್ತಾಗಿ ಮೃತರಾಗಿರುತ್ತಾರೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಐ.ಪಿ.ಸಿ. 304 (ಎ) ಪ್ರಕಾರ ಕಂಟ್ರಾಕ್ಟರ್ ಮತ್ತು ಕಟ್ಟಡ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್‌ ಮೊದ ಲಾದವರು ಉಪಸ್ಥಿತರಿದ್ದರು.

ಹುದ್ದೆಗಳ ಭರ್ತಿಗೆ ವಕೀಲರ ಸಂಘ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಜಿಲ್ಲಾ ವೇದಿಕೆಯಲ್ಲಿ ಖಾಲಿ ಇರುವ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗಳ ಭರ್ತಿ ಮಾಡುವಂತೆ ಬೆಂಗಳೂರು ವಕೀಲರ ಸಂಘ ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗ ನಾಥ್‌ ಮನವಿ ಸಲ್ಲಿಸಿದ್ದಾರೆ.

ರಾಜ್ಯ ಆಯೋಗ ಮತ್ತು ಜಿಲ್ಲಾ ವೇದಿಕೆಗಳಲ್ಲಿ ಪ್ರಸ್ತುತ 30 ಸಾವಿರ ಪ್ರಕರಣಗಳು ಬಾಕಿ ಇವೆ. ರಾಜ್ಯ ಆಯೋಗದ ನ್ಯಾಯಾಂಗ ಸದಸ್ಯರ ಅವಧಿ 2019ರ ಜು.30 ರಂದು ಕೊನೆಗೊಂಡಿದ್ದು, ಅವಧಿ ವಿಸ್ತರಿಸಿಕೊಂಡು ಬರಲಾಗುತ್ತಿದೆ. ರಾಜ್ಯ ಆಯೋಗದ ಮಹಿಳಾ ಸದಸ್ಯರ ಹುದ್ದೆ 2018ರ ಫೆ.10ರಿಂದ ಖಾಲಿ ಇದೆ. ಇದಲ್ಲದೇ ಜಿಲ್ಲಾ ವೇದಿಕೆಗಳ 9 ಅಧ್ಯಕ್ಷರ ಹುದ್ದೆಗಳು ಹಾಗೂ 34 ಸದಸ್ಯರ ಹುದ್ದೆಗಳೂ ಖಾಲಿ ಇವೆ.

ಈ ವರ್ಷ ಇನ್ನಷ್ಟು ಹುದ್ದೆಗಳು ಖಾಲಿ ಆಗಲಿವೆ. ಇದರಿಂದ ಆಯೋಗದ ಕಾರ್ಯನಿರ್ವಹಣೆ ಹಾಗೂ ವ್ಯಾಜ್ಯಗಳ ವಿಲೇವಾರಿಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ನೇಮಕಾತಿ ಸಮಿತಿ ಕೈಗೊಂಡಿರುವ ತೀರ್ಮಾನದಂತೆ ಆಯ್ಕೆ ಪಟ್ಟಿ ಅನುಸಾರ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next