Advertisement

ಶೀಘ್ರ ಸರ್ಕಾರಿ ಆಸ್ಪತ್ರೆ ಖಾಲಿ ಹುದ್ದೆ ಭರ್ತಿಗೆ ಕ್ರಮ

09:09 PM Feb 15, 2020 | Lakshmi GovindaRaj |

ಕೋಲಾರ: ನೇರ ನೇಮಕಾತಿ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳನ್ನು ಎರಡು ತಿಂಗಳೊಳಗಾಗಿ ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಆಯುಷ್‌ ಇಲಾಖೆ ಆಶ್ರಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ ಹಾಗೂ ಇತರೆ ಆರೋಗ್ಯ ಕೇಂದ್ರಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವೈದ್ಯರ ನೇಮಕ ಪ್ರಕ್ರಿಯೆ ಶೀಘ್ರ: ಹಿಂದೆ ವೈದ್ಯರ ಹುದ್ದೆಗಳನ್ನು ಕೆಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ನೇರ ನೇಮಕಾತಿ ಮೂಲಕ ನೇಮಕಾತಿ ಮಾಡುವುದರಿಂದ ಶೀಘ್ರವಾಗಿ ನೇಮಕ ಪ್ರಕ್ರಿಯೆ ಮುಗಿಯಲಿದೆ. ಕರ್ನಾಟಕದಲ್ಲಿ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಲು ರಾಜ್ಯದಲ್ಲಿ 56 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 7 ಆಸ್ಪತ್ರೆಗಳ ಕಾಮಗಾರಿ ಪ್ರಗತಿಯಲ್ಲಿದೆ.

ಎರಡು ತಿಂಗಳೊಳಗಾಗಿ ಅವುಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಜನ ಸಂಖ್ಯೆಯಲ್ಲಿ ಶೇ.60ರಷ್ಟು ಜನ ಬಡವರಿದ್ದಾರೆ. ಎಲ್ಲರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಎನ್‌.ಎಚ್‌.ಆರ್‌.ಎಂನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಕನಿಷ್ಠ ಇಪ್ಪತ್ತೂಂದು ಸಾವಿರ ಸಂಬಳವನ್ನು ನೀಡುವುದರ ಜೊತೆಗೆ ಹುದ್ದೆ ಕಾಯಂಗೊಳಿಸಲಾಗುವುದು.

ಗ್ರೂಪ್‌ ಡಿ ನೌಕರರ ನೇಮಕ ಶೇ.20ರಷ್ಟು ಕಡಿಮೆ ಮಾಡಲು ಆದೇಶವಿದ್ದು, ಅದನ್ನು ರದ್ದು ಮಾಡಿ ಎಲ್ಲರನ್ನೂ ಹುದ್ದೆಯಲ್ಲಿಯೇ ಮುಂದುವರಿಸುವಂತೆ ಆದೇಶ ನೀಡಲಾಗುವುದು. ಮಾರ್ಚ್‌ ತಿಂಗಳ ನಂತರ ಕೋಲಾರದಲ್ಲಿ ಒಂದು ದಿನ ಜಿಲ್ಲಾಸ್ಪತ್ರೆಯಲ್ಲಿಯೇ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.

Advertisement

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗ್ರೂಪ್‌ ನೌಕರರಿಗೆ ಸರ್ಕಾರದಿಂದ 20 ಸಾವಿರ ಸಂಬಳ ನೀಡುತ್ತಿದ್ದರೂ ಗುತ್ತಿಗೆದಾರರು ನೌಕರರ ಕೈಗೆ ಕೇವಲ 7-8 ಸಾವಿರ ನೀಡುತ್ತಿದ್ದಾರೆ. ಇದರಿಂದ ಅವರ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಯನ್ನು ಕಾಪೊìರೇಟ್‌ ಸಂಸ್ಥೆಗಳಿಗೆ ನೀಡಿ ಮಾಡಿಸಲಾಗುವುದು. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದರು.

ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ನಾಗೇಶ್‌ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 100 ಹಾಸಿಗೆಗಳ ನೂತನ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ದರ್ಗಾ ಮೊಹಲ್ಲಾದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ, ವೇಮಗಲ್‌ನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಚಿಕ್ಕ ತಿರುಪತಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಆಯುರ್ವೇದ ಚಿಕಿತ್ಸಾಲಯಗಳು ಲೋಕಾರ್ಪಣೆಗೊಂಡಿದೆ ಎಂದು ಮಾಹಿತಿ ನೀಡಿದರು.

ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಆ್ಯಂಬುಲೆನ್ಸ್‌ (108) ಸೇವೆಯನ್ನು ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ 5 ತುರ್ತು ಪರಿಸ್ಥಿತಿ ಹಾಸಿಗೆಗಳಿದ್ದು, ಇದನ್ನು 20 ರಿಂದ 25 ಕ್ಕೆ ಹೆಚ್ಚಳ ಮಾಡಬೇಕು. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜಿನ ಅಗತ್ಯವಿದ್ದು, ಆದಷ್ಟು ಬೇಗನೆ ಸರ್ಕಾರದೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜನ್ನು ಆರಂಭಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಮಾಡಿದರು.

ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ ಕುಮಾರ್‌ಗೆ ಸೂಚಿಸಿದರು. ಜಿಲಾಧಿಕಾರಿ ಜೆ.ಮಂಜುನಾಥ್‌, 1937ರಲ್ಲಿ ಕೃಷ್ಣರಾಜೇಂದ್ರ ಒಡೆಯರ್‌ ಅವರು ಜಿಲ್ಲಾ ಆಸ್ಪತ್ರೆಯನ್ನು ಸ್ಥಾಪಿಸಿದರು. ಅಂದು ನೂರು ಹಾಸಿಗೆಗಳಿದ್ದ ಆಸ್ಪತ್ರೆಯು ಈಗ 500 ಹಾಸಿಗೆಗಳಿಗೆ ಹೆಚ್ಚಾಗಿದೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷವಾದ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಂಕೇತಿಕವಾಗಿ ಆಯುಷ್ಮಾನ್‌ ಕಾರ್ಡ್‌, ಯು.ಡಿ.ಎ.ಡಿ ವಿಶೇಷ ಅಂಗವಿಕಲರ ಕಾರ್ಡ್‌ನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಜಿಪಂ ಅಧ್ಯಕ್ಷ ಸಿ.ಎಸ್‌ ವೆಂಕಟೇಶ್‌ ಮಾತನಾಡಿದರು. ವಿಧಾನ ಪರಿಷತ್‌ನ ಸದಸ್ಯ ವೈ.ಎ. ನಾರಾಯಣಸ್ವಾಮಿ, ಮಾಲೂರು ಶಾಸಕ ಕೆ.ಆರ್‌.ರಮೇಶ್‌ಕುಮಾರ್‌, ಕೆ.ವೈ.ನಂಜೇಗೌಡ, ಜಿಪಂ ಉಪಾಧ್ಯಕ್ಷ ಕೆ.ಯಶೋಧಾ ಕೃಷ್ಣಮೂರ್ತಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌,

ಜಿಪಂ ಸಿಇಒ ಎಚ್‌.ವಿ ದರ್ಶನ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ ಕುಮಾರ್‌, ಜಿಲ್ಲಾ ಶಸ್ತ್ರ ಚಿಕತ್ಸಕ ಡಾ.ನಾರಾಯಣಸ್ವಾಮಿ ಕೋಲಾರ ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ಉಪಾಧ್ಯಕ್ಷ ಲಕ್ಷ್ಮೀ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆಶೋಕ್‌ ಕೋಲಾರ ತಾಲೂಕು ತಹಶೀಲ್ದಾರ್‌ ಶೋಭಿತಾ ಅವರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next