ಶಿಡ್ಲಘಟ್ಟ: ನಗರಸಭೆಯ ಎಲ್ಲಾ ವಾರ್ಡ್ಗಳ ಜನರಿಗೆ ಮಾಸ್ಕ್ ಮತ್ತು ಸೋಪು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಲು ತಮ್ಮ ಸ್ವಂತ ಖರ್ಚಿನಿಂದ ನಗರಸಭಾ ಸದಸ್ಯರಿಗೆ ಮಾಸ್ಕ್ ಮತ್ತು ಸೋಪು ವಿತರಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ವಿರುದ್ಧ ಪ್ರತಿಯೊಬ್ಬರನ್ನು ಜಾಗೃತಿಗೊಳಿಸಬೇಕಾಗಿದೆ. ನಗರದ ಎಲ್ಲಾ ವಾರ್ಡ್ ಗಳಲ್ಲಿ ಸ್ವಚ್ಛತೆ ಕಾಪಾಡಿ ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವ ಮೂಲಕ ದೇಶವನ್ನು ಕೋವಿಡ್ 19 ಮಾರಿಯಿಂದ ರಕ್ಷಿಸಲು ಎಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ನಾಗರಿಕರು ಭಯ ಮತ್ತು ಆತಂಕಗೊಳ್ಳುವ ಅಗತ್ಯವಿಲ್ಲ. ವಿನಾಕಾರಣ ಮನೆಯಿಂದ ಹೊರಬರುವುದು ಬೇಡ. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲು ತಾಲೂಕು ಮತ್ತು ಜಿಲ್ಲಾಡಳಿತ ವಿಶೇಷ ಗಮನಹರಿಸಿದೆ. ಜನರು ಸಹ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಚ್ಚರಿ: ನಗರಸಭೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 18ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಣಕ್ಕಿಳಿದು ಗೆಲುವು ಸಾಧಿಸಿದ ಎನ್.ಎಸ್.ಕ್ರಿಯಾ ಟ್ರಸ್ಟ್ನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ಬೆಂಬಲಿತ ಸದಸ್ಯನಿಗೆ ಶಾಸಕರು ಮಾಸ್ಕ್ ಮತ್ತು ಸೋಪು ವಿತರಿಸಿ ಅಚ್ಚರಿ ಮೂಡಿಸಿದರು.
ತಹಶೀಲ್ದಾರ್ ಕೆ.ಅರುಂಧತಿ, ಟಿಎಚ್ಒ ಡಾ.ವೆಂಕಟೇಶ್ಮೂರ್ತಿ,ನಗರಸಭೆಯ ಪೌರಾ ಯುಕ್ತ ತ್ಯಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ನಾಗರಾಜ್, ಟಿ.ಕೆ.ನಟರಾಜ್, ಬಾಂಬೆ ನವಾಜ್, ಮೈನಾರಿಟಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಮಜದ್ ನವಾಜ್, ರಾಜುಕುಮಾರ್, ಬಾಬು ಹಾಗೂ ವಿವಿಧ ವಾರ್ಡ್ಗಳ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.