Advertisement

ವಲಸೆ ಕಾರ್ಮಿಕರಿಗೆ ವಸತಿ ಸೌಕರ್ಯ: ಜಪ್ಪಿನಮೊಗರಿನಲ್ಲಿ 2 ಎಕ್ರೆ ನಿವೇಶನ ವ್ಯವಸ್ಥೆಗೆ ಚಿಂತನೆ

12:14 AM Feb 16, 2021 | Team Udayavani |

ಮಹಾನಗರ: ಹೊರರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಉದ್ಯೋಗ ನಿಮಿತ್ತ ಮಂಗಳೂರಿಗೆ ಆಗಮಿಸುವ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆಯನ್ನು ಸರಕಾರದ ವತಿಯಿಂದಲೇ ಮಾಡಿ ಕೊಡಲು ನಿರ್ಧರಿಸಲಾಗಿದ್ದು, ಯೋಜನೆ ಸಿದ್ಧಪಡಿಸಲಾಗುತ್ತಿದೆ.
ನಗರದ ಜಪ್ಪಿನಮೊಗರು ವ್ಯಾಪ್ತಿಯಲ್ಲಿರುವ ಎರಡು ಎಕ್ರೆ ನಿವೇಶನದಲ್ಲಿ ಈ ಸಂಬಂಧ ವ್ಯವಸ್ಥೆ ಕಲ್ಪಿಸಲು ಉದ್ದೇಶಿ ಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರ ಇದಕ್ಕೆ ನೆರವು ನೀಡುವ ನಿರೀಕ್ಷೆಯಿದೆ.

Advertisement

ಸದ್ಯ ವಲಸೆ ಕಾರ್ಮಿಕರು ನಗರದ ವಿವಿಧ ಭಾಗಗಳಲ್ಲಿ ಬಾಡಿಗೆ ಆಧಾರಿತವಾಗಿ ವಾಸವಾಗಿದ್ದಾರೆ. ಇನ್ನು ಹಲವು ಮಂದಿ ಟೆಂಟ್‌ ಹಾಕಿ ಬೀದಿ ಬದಿಯಲ್ಲಿ/ಕೆಲಸ ಮಾಡುವ ಸ್ಥಳಗಳಲ್ಲಿ ವಾಸವಾಗಿದ್ದಾರೆ. ಇನ್ನು ಕೆಲವರಿಗೆ ಬಸ್‌ನಿಲ್ದಾಣ, ರೈಲು ನಿಲ್ದಾಣವೇ ಆಶ್ರಯದಾಣವಾಗಿದೆ. ಇಂತಹ ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆಯನ್ನು ನೀಡುವುದು ಸರಕಾರದ ಉದ್ದೇಶವಾಗಿದೆ.
ಕೊರೊನಾ ಕಾರಣ ಲಾಕ್‌ಡೌನ್‌ ಘೋಷಿಸಿದ ಸಂದರ್ಭ ದ.ಕ. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಬವಣೆ ಬೆಳಕಿಗೆ ಬಂದಿತ್ತು.

ಜಿಲ್ಲೆಯಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ಇದ್ದಾರೆ ಎಂಬ ಮಾಹಿತಿ ಕೂಡ ಜಿಲ್ಲಾಡಳಿತದಲ್ಲಿ ಇಲ್ಲದ ಕಾರಣದಿಂದ ಅವರಿಗೆ ಆಗ ವಸತಿ, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಮಾಡಿಕೊಡುವುದು ಜಿಲ್ಲಾಡಳಿತಕ್ಕೆ ಬಹುದೊಡ್ಡ ತಲೆನೋವಾಗಿತ್ತು.
ನೂತನ ವಸತಿ ಯೋಜನೆಯ ವ್ಯವಸ್ಥೆಯಲ್ಲಿ ಯಾವ ವಲಸೆ ಕಾರ್ಮಿಕರು ಇರಬೇಕು ಎಂಬುದನ್ನು ಜಿಲ್ಲಾಡಳಿತವೇ ಅಂತಿಮಗೊಳಿಸಲಿದೆ. ಹೀಗಾಗಿ, ಕಾ ರ್ಮಿಕರ ಆಯ್ಕೆ ಜಿಲ್ಲಾಡಳಿತದ ಹೊಣೆ. ಖಾಲಿ ನಿವೇಶನದಲ್ಲಿ ವಸತಿಯನ್ನು ಸರಕಾರವೇ ನಿರ್ಮಿಸಿಕೊಡಲಿದೆ. ತಾತ್ಕಾಲಿಕ ನೆಲೆಯಲ್ಲಿ ಕಾರ್ಮಿಕರು ಇದನ್ನು ಬಳಕೆ ಮಾಡಲಿದ್ದಾರೆ. ಅವರಿಂದ ಕನಿಷ್ಠ ಮೊತ್ತವನ್ನು ಪಡೆಯುವ ಬಗ್ಗೆಯೂ ಸದ್ಯ ಮಾತುಕತೆ ನಡೆಯುತ್ತಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ಆಗಬೇಕಿದೆ. ಈ ವ್ಯವಸ್ಥೆಯಲ್ಲಿ ಹೊರಜಿಲ್ಲೆ, ಹೊರ ರಾಜ್ಯದ ಕಾರ್ಮಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಯೋಜನೆ ಗಾಗಿ ಅನುದಾನ ನೀಡುವಂತೆ ದ.ಕ. ಜಿಲ್ಲಾಡಳಿತದಿಂದ ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ವಸತಿ ವ್ಯವಸ್ಥೆಗೆ ಯೋಜನೆ
ವಲಸೆ ಕಾರ್ಮಿಕರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರಕಾರ ಯೋಜನೆ ಹಮ್ಮಿಕೊಂಡಿದೆ. ಇದರಂತೆ ಮಂಗಳೂರು ಭಾಗದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಅಧಿಕವಿರುವ ಕಾರಣದಿಂದ ಅವರಿಗೆ ಪರ್ಯಾಯ ವಸತಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು. ಶೀಘ್ರದಲ್ಲಿ ಇದಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ.
– ಡಿ. ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

55 ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು!
ಲಾಕ್‌ಡೌನ್‌ ಸಮಯದಲ್ಲಿ ರಾಜ್ಯ ಸರಕಾರಕ್ಕೆ ದ.ಕ. ಜಿಲ್ಲಾಡಳಿತವು ನೀಡಿದ ವಲಸೆ ಕಾರ್ಮಿಕರ ವರದಿಯ ಪ್ರಕಾರ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಝಾರ್ಖಂಡ್‌, ಪಶ್ಚಿಮ ಬಂಗಾಲ ಸಹಿತ ವಿವಿಧ ರಾಜ್ಯಗಳ ಸುಮಾರು 40 ಸಾವಿರಕ್ಕೂ ಅಧಿಕ ಕಾರ್ಮಿಕರು ಮಂಗಳೂರು ಸಹಿತ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಗಲಕೋಟೆ, ಗದಗ, ವಿಜಯಪುರ ಸಹಿತ ರಾಜ್ಯದ 25 ಜಿಲ್ಲೆಗಳ 15 ಸಾವಿರಕ್ಕೂ ಅಧಿಕ ಮಂದಿ ಜಿಲ್ಲೆಯಲ್ಲಿ ಕಾರ್ಮಿಕರಾಗಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದರು. ಈ ಪೈಕಿ ಬಹುತೇಕ ಮಂದಿ ಈಗಾಗಲೇ ತಮ್ಮ ರಾಜ್ಯ/ಜಿಲ್ಲೆಗಳಿಗೆ ಹೋದವರು ವಾಪಾಸಾಗಿದ್ದರೆ, ಬಹುತೇಕ ಮಂದಿ ವಾಪಸ್‌ ಇನ್ನೂ ಬರಲಿಲ್ಲ.

Advertisement

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next