Advertisement

ಅಪಘಾತದಲ್ಲಿ ಸಂಚಾರ ಠಾಣೆ ಪೇದೆ ಸಾವು

11:42 AM Mar 19, 2018 | Team Udayavani |

ಬೆಂಗಳೂರು: ಹಿಟ್‌ ಆ್ಯಂಡ್‌ ರನ್‌ ರಸ್ತೆ ಅಪಘಾತದಲ್ಲಿ ಬ್ಯಾಟರಾಯನಪುರ ಸಂಚಾರ ಠಾಣೆ ಪೇದೆ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಬ್ಯಾಟರಾಯನಪುರ ಸಂಚಾರ ಠಾಣೆಯ ರವಿಶಂಕರ್‌ (28) ಮೃತ ಪೇದೆ. ಶನಿವಾರ ಕರ್ತವ್ಯನಿರ್ವಹಿಸುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಘಟನೆ ಸಂಭವಿಸಿದ್ದು, ಅಪಘಾತವೆಸಗಿದ ವಾಹನದ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Advertisement

ಶನಿವಾರ ರವಿಶಂಕರ್‌ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ವೆಂಕೋಬರಾವ್‌ ದೇವೇಗೌಡ ವೃತ್ತದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ರವಿಶಂಕರ್‌ ಮೂತ್ರ ವಿಸರ್ಜನೆಗೆ ಸ್ವಲ್ಪ ದೂರಕ್ಕೆ ಹೋಗಿದ್ದಾರೆ. ಈ ವೇಳೆ ಅವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ತಲೆಗೆ ಗಂಭೀರ ಪೆಟ್ಟಾಗಿ ತೀವ್ರರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಸ್ತೆ ಬದಿ ಬಿದ್ದಿದ್ದ ಪೇದೆ ಮೃತ ದೇಹ ಕಂಡ ಶಾಲಾ ವಾಹನದ ಚಾಲಕ, ಜಂಕ್ಷನ್‌ನಲ್ಲಿದ್ದ ವೆಂಕೋಬಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಗೃಹದಳ ಸಿಬ್ಬಂದಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಸ್ಥಳೀಯರನ್ನು ವಿಚಾರಣೆ ನಡೆಸಿ ಅಪಘಾತ ಮಾಡಿದ ವಾಹನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದ್ದಾರೆ.

ನೆಲಮಂಗಲ ಸೊಂಡೆಕೊಪ್ಪ ಗ್ರಾಮದ ಮೂಲದ ರವಿಶಂಕರ್‌ 2012ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ್ದು, ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸ್ವಗ್ರಾಮದಲ್ಲೇ ನೆಲೆಸಿರುವ ರವಿಶಂಕರ್‌ ಪ್ರತಿನಿತ್ಯ ಕೆಲಸಕ್ಕೆ ಊರಿನಿಂದಲೇ ಬರುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಸಂಬಂಧಿಕರ ಯುವತಿ ಜತೆ ರವಿಶಂಕರ್‌ಗೆ ವಿವಾಹ ನಿಶ್ಚಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next