Advertisement

ಪ್ರತ್ಯೇಕ ಅಪಘಾತ: ಆರು ಮಂದಿ ಸಾವು

11:54 AM May 08, 2017 | Team Udayavani |

ಹನೂರು/ ಹೊಸಕೋಟೆ: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ವಾಹನ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಸಾರಿಗೆ ಬಸ್‌ ಹಾಗೂ ಬೈಕ್‌ ನಡುವೆ ಮುಖಾಮುಖೀ ಢಿಕ್ಕಿ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೌದಳ್ಳಿ – ರಾಮಾಪುರ ಮಾರ್ಗದ ಕೆಂಪಯ್ಯನಹಟ್ಟಿ ಸಮೀಪ ರವಿವಾರ ಸಂಭವಿಸಿದೆ. 

Advertisement

ಕುರಟ್ಟಿ ಹೊಸೂರು ಗ್ರಾಮದ ವೆಂಕಟರಾಮ್‌ಶೆಟ್ಟಿ ಅಲಿಯಾಸ್‌ ಕರಿಯಪ್ಪ, ಆತನ ಮೊಮ್ಮಗ ನಾಗೇಂದ್ರ (13) ಮತ್ತು ಶೆಟ್ಟಳ್ಳಿ ಗ್ರಾಮದ ಮಹದೇವಶೆಟ್ಟಿ ಮೃತರು. ಇವರು ಬೈಕ್‌ನಲ್ಲಿ ಕೌದಳ್ಳಿ ಕಡೆಯಿಂದ ರಾಮಾಪುರದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ತೆರಳುತ್ತಿದ್ದರು. ಈ ವೇಳೆ ನಂಜನಗೂಡು ಡಿಪೋಗೆ ಸೇರಿದ್ದ ತಮಿಳುನಾಡಿನ ಮೆಟ್ಟೂರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ ಹಾಗೂ ಬೈಕ್‌ ಮುಖಾಮುಖೀ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕರಿಯಪ್ಪ ಮತ್ತು ಆತನ ಮೊಮ್ಮಗ ನಾಗೇಂದ್ರ ಸ್ಥಳದಲ್ಲೇ ಅಸುನೀಗಿದ್ದಾರೆ. ಮಹದೇವಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾ.ಜಿಲ್ಲೆ ಹೊಸಕೋಟೆ ಸಮೀಪದ ಹುಸ್ಕೂರು ಕೋಡಿ ಬಳಿಯ ಪೆಟ್ರೋಲ್‌ ಬಂಕ್‌ ಮುಂಭಾಗ ಬೈಕ್‌ ಹಾಗೂ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ತಾಲೂಕಿನ ಕಟ್ಟಿಗೇನಹಳ್ಳಿಯ ಮುಬೀನ್‌ ತಾಜ್‌ (45), ಅವರ ಮಗ ಎಸ್‌. ತಬ್ರೇಜ್‌ (23), ಅತ್ತಿಗೆ ನಸೀಬಾ (21) ಮೃತಪಟ್ಟಿದ್ದಾರೆ. 

ಒಂದೇ ಕುಟುಂಬದ ಮೂವರೂ ಬೈಕಿನಲ್ಲಿ ಬೆಂಗಳೂರಿನಿಂದ ರವಿವಾರ ಸಂಜೆ ಗ್ರಾಮಕ್ಕೆ ಹಿಂದಿರುಗುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಬೈಕ್‌ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ರಭಸಕ್ಕೆ ಮುಂಭಾಗದಲ್ಲಿ ನಿಂತಿದ್ದ ಖಾಸಗಿ ಬಸ್‌ಗೆ ಅಪ್ಪಳಿಸಿತು. ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನೂ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ತಬ್ರೇಜ್‌ ಮತ್ತು ಮುಬೀನ್‌ ತಾಜ್‌ ಸಾವನ್ನಪ್ಪಿದ್ದು, ನಸೀಬಾ ಬೆಂಗಳೂರಿಗೆ ಕೊಂಡೊಯ್ಯುತ್ತಿದ್ದಾಗ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next