Advertisement

ಕದ್ರಿ ಕಂಬಳದಲ್ಲಿ ಅಪಘಾತ: ಸ್ಕೂಟಿಗೆ ಕಾರು ಢಿಕ್ಕಿ; ಯುವತಿಗೆ ಗಾಯ

08:29 AM Aug 08, 2020 | mahesh |

ಮಂಗಳೂರು: ನಗರದ ಕದ್ರಿ ಕಂಬಳ ಜಂಕ್ಷನ್‌ನಲ್ಲಿ ಶುಕ್ರವಾರ ಸ್ಕೂಟಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವರು ಗಾಯಗೊಂಡಿದ್ದಾರೆ. ಬಿ.ಸಿ.ರೋಡನ್‌ನ ವಾಣಿಶ್ರೀ (21) ಗಾಯಗೊಂಡವರು. ವಾಣಿಶ್ರೀ ಅವರು ಸ್ಕೂಟಿಯಲ್ಲಿ ಕೆ.ಪಿ.ಟಿ. ಕಡೆಯಿಂದ ಬಂಟ್ಸ್‌ ಹಾಸ್ಟೆಲ್‌ ಕಡೆಗೆ ಹೋಗುತ್ತಿದ್ದಾಗ ಕದ್ರಿ ದೇವಸ್ಥಾನ ರಸ್ತೆಯಿಂದ ಕೋಡಿಯಾಲ್‌ ಬೈಲ್‌ಕಡೆಗೆ ಹೋಗುತ್ತಿದ್ದ‌ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ, ಯುವತಿ ಕಾರಿನ ಮೇಲೆ ಬಿದ್ದು, ಅನಂತರ ಮುಂಭಾಗದಿಂದ ಕಾರಿನಡಿಗೆ ಸಿಲುಕಿದ್ದು, ಆಕೆಯನ್ನು ಕಾರು ಎಳೆದುಕೊಂಡು ಹೋಗಿದೆ.

Advertisement

ದುರ್ಘ‌ಟನೆಯಿಂದ ಗಾಬರಿಗೊಂಡ ಕಾರು ಚಾಲಕ ಕಾರನ್ನು ಮತ್ತೆ ಮುಂದಕ್ಕೆ ಚಲಾಯಿಸಲು ಪ್ರಯತ್ನಿಸಿದ್ದು, ಯುವತಿಯ ದೇಹವು ಕಾರಿನ ಕೆಳಕ್ಕೆ ಹೋಗಿತ್ತು. ಕೂಡಲೇ ಸ್ಥಳೀಯರು ಕಾರನ್ನು ಮೇಲೆತ್ತಿ ಅನಂತರ ಹಿಂದಕ್ಕೆ ದೂಡಿ ಯುವತಿಯನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು.
ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆಯುವ ವೇಳೆ ಶಾಸಕ ಯು.ಟಿ. ಖಾದರ್‌ ಅವರು ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿಲು ನೆರವಾದರು. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ಭೀಕರತೆಯನ್ನು ತೋರಿಸುತ್ತದೆ.

ಅಪಾಯಕಾರಿ ಸ್ಥಳ
ಈ ಜಂಕ್ಷನ್‌ ಅಪಾಯಕಾರಿ ಯಾಗಿ ಪರಿಣಮಿಸುತ್ತಿದ್ದು, ಡಿ. 1ರಂದು ಇದೇ ಸ್ಥಳದಲ್ಲಿ ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ ಹೊಡೆದು ಶಿಕ್ಷಕಿಯೋರ್ವರು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next