Advertisement

ಅಪಮಾನ, ಅಪಹಾಸ್ಯವನ್ನು ಸವಾಲಾಗಿ ಸ್ವೀಕರಿಸಿ

09:31 PM Mar 10, 2020 | Lakshmi GovindaRaj |

ಮೈಸೂರು: ಪುರುಷರು ಮಹಿಳೆಯರಿಗೆ ಸಮಾನ ಅವಕಾಶ ದೊರಕಿಸಿಕೊಡಲು ಧ್ವನಿ ಎತ್ತಬೇಕು ಎಂದು ಜಿಪಂ ಯೋಜನಾ ನಿರ್ದೇಶಕಿ ಕೆ.ಸುಶೀಲಾ ಹೇಳಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಮುಕ್ತ ವಿವಿಯ ಅಕ್ಕಮಹಾದೇವಿ ಪೀಠದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

Advertisement

ಬಡ ಕುಟುಂಬಗಳಿಗಿಂತ ಶ್ರೀಮಂತ ಹಾಗೂ ಸುಶಿಕ್ಷಿತರ ಕುಟುಂಬದಲ್ಲೇ ಮಹಿಳೆಯರ ಮೇಲೆ ಹೆಚ್ಚಾಗಿ ದೌರ್ಜನ್ಯ ನಡೆಯುತ್ತಿವೆ. ನಾವು ಮಹಿಳಾ ಸಮಾನತೆಯ ಬಗ್ಗೆ ಮಾತನಾಡುತ್ತೇವೆ. ಜನಸಂಖ್ಯೆಯಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯರು ಇದ್ದಾರೆ. ಇದರಿಂದ ಈಗಾಗಲೇ ಮಹಿಳೆಯರಿಗೆ ಸಮಾನತೆ ಸಿಕ್ಕಂತಾಗಿದೆ. ಆದರೆ ಸರಿಸಮಾನವಾದ ಅವಕಾಶ ಸಿಕ್ಕಿಲ್ಲ ಎಂದರು.

ಈ ಹಿಂದೆ ಮಹಿಳಾ ಆಯೋಗದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತದ್ದ ವೇಳೆ ದಿನಕ್ಕೆ ದಾಖಲಾಗುತ್ತಿದ್ದ ನೂರಾರು ಪ್ರಕರಣಗಳನ್ನು ನೋಡಿದ್ದೇನೆ. ಅವುಗಳಲ್ಲಿ ಬಡ ಕುಟುಂಬದ ದೌರ್ಜನ್ಯ ಪ್ರಕರಣ ಹಾಗೂ ಶ್ರೀಮಂತ ಕುಟುಂಬದ ಹಾಗೂ ಸುಶಿಕ್ಷಿತರ ಕುಟುಂಬ ಪ್ರಕರಣಗಳನ್ನೂ ಗಮನಿಸಿದ್ದೇನೆ. ಅದರಲ್ಲೂ ವಿಚಾರಣೆ ವೇಳೆ ಕಾಲಿಗೆ ಬಿದ್ದು, ಅತಿ ವಿನಯವಾಗಿ ಮಾತನಾಡುವ ನಾಟಕವಾಡಿ ನಾನೇನು ತಪ್ಪು ಮಾಡಿಲ್ಲ.

ಎಲ್ಲಾ ಹೆಂಡತಿಯದ್ದೇ ತಪ್ಪೆಂದು ಹೇಳಿರುವ ಶ್ರೀಮಂತರನ್ನು ಕಂಡಿದ್ದೇನೆ. ತನ್ನಷ್ಟೇ ಸರಿಸಮಾನವಾಗಿ ದುಡಿದರೂ ಮನೆಯಲ್ಲಿ ನಿರಂತರ ಕಿರುಕುಳ ನೀಡಿ, ತಾನು ಮುಗ್ಧ ಎಂದು ನಂಬಿಸಲು ಪ್ರಯತ್ನಿಸಿದ್ದವರನ್ನು ನೋಡಿದ್ದೇನೆ. ಸಿಗರೇಟಿನಿಂದ ಸುಟ್ಟಿರುವ ಪ್ರಕರಣವನ್ನೂ ಕಂಡಿದ್ದೇನೆ. ಸಮಾಜದಲ್ಲಿ ಎಷ್ಟೇ ಬದಲಾವಣೆಗಳಾªರೂ ಉತ್ತಮ ಶಿಕ್ಷಣ ಪಡೆದವರ ಕುಟುಂಬಗಳಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ತಲೆ ತಗ್ಗಿಸುವ ಸಂಗತಿ ಎಂದರು.

ಶಿಕ್ಷಣವೊಂದೆ ಮಹಿಳೆಯರ ಬದುಕನ್ನು ಹಸನು ಮಾಡುತ್ತದೆ ಎಂಬುದನ್ನು ಅರಿತಿದ್ದ ಸಾವಿತ್ರಿಬಾಪುಲೆ ಮಹಿಳೆಯರಿಗೆ ಶಿಕ್ಷಣ ನೀಡಲು ಶಾಲೆಯೊಂದನ್ನು ಆರಂಭಿಸಿದರು. ಇದರಿಂದ ಸಮಾಜದ ಕೆಂಗಣ್ಣಿಗೆ, ಅಪಮಾನಕ್ಕೆ ಗುರಿಯಾಗಿದ್ದರು. ಸಗಣಿ ನೀರನ್ನು ಎರಚಿ ಅಪಮಾನಿಸಿದ್ದರು. ಆದರೂ ಛಲ ಬಿಡದೆ ಮಹಿಳೆಯರಿಗೂ ಶಿಕ್ಷಣ ಪಡೆಯಬೇಕು ಎಂಬ ಯಶಸ್ವಿ ಹೋರಾಟ ಮಾಡಿ ಗಮನ ಸೆಳೆದರು.

Advertisement

ಸಾವಿತ್ರಿ ಬಾಪುಲೆ ಅವರಂತೆ ಮಹಿಳೆಯರು ತಮಗಾದ ಅಪಮಾನ, ಅಪಹಾಸ್ಯವನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು. ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾನೂನುಗಳಿವೆ. ಅವುಗಳನ್ನು ಸಮರ್ಥವಾಗಿ ಜಾರಿಗೆ ತಂದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಬಹುದು. ಹೊಸ ಕಾನೂನುಗಳ ಅವಶ್ಯಕತೆ ಇರುವುದೇ ಇಲ್ಲ ಎಂದರು.

ಮುಕ್ತ ವಿವಿ ಪರೀಕ್ಷಾಂಗ ಕುಲಸಚಿವೆ ಡಾ.ಕವಿತಾ ರೈ ಅವರ “ವಚನ-ನಿರ್ವಚನ ವಚನಗಳ ವಿಮರ್ಶೆಗಳ ಆಯ್ದ ಸಂಕಲನ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌, ಸಾಹಿತಿ ಪ್ರೊ. ಮೊರಬದ ಮಲ್ಲಿಕಾರ್ಜುನ, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಡೀನ್‌ ಡಾ.ತೇಜಸ್ವಿ ನವಿಲೂರು, ಅಕ್ಕಮಹಾದೇವಿ ಪೀಠದ ಸಂಚಾಲಕಿ ಡಾ.ಎಚ್‌.ರಾಜೇಶ್ವರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next