Advertisement

ನಗರ ಸಭೆಯಲ್ಲಿ ಭ್ರಷ್ಟಾಚಾರ: ಎಸಿಬಿಯಿಂದ ದಾಳಿ

03:00 PM May 11, 2022 | Team Udayavani |

ಕನಕಪುರ: ಭ್ರಷ್ಟಾಚಾರದ ಆರೋಪ ಮತ್ತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಗರಸಭೆ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

Advertisement

ನಗರದ ನಗರಸಭೆ ಕಚೇರಿ ಮೇಲೆ ಮಂಗಳವಾರ ಮಧ್ಯಾಹ್ನ 1 ಗಂಟೆಯಲ್ಲಿ ಎಸಿಬಿ ಡಿವೈಎಸ್‌ಪಿ ಗೋಪಾಲ್‌ ಜೋಗಿನ್‌ ನೇತೃತ್ವದಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ವಿವಿಧ ಇಲಾಖೆಗಳ ದಾಖಲೆಗಳನ್ನು ಪರಿಶೀಲಿಸಿದರು. ನಗರಸಭೆಯಲ್ಲಿ ಇ-ಖಾತೆ ಸಂಬಂಧಪಟ್ಟಂತೆ ಸಕಾಲ ಯೋಜನೆಯಲ್ಲಿ ಅರ್ಜಿ ವಿಲೇವಾರಿ ಮಾಡದೆ, ಅಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿ, ಕಾಲಹರಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಈ ಸಂಬಂಧ ಅನೇಕ ಸಭೆಗಳಲ್ಲಿ ನಗರಸಭಾ ಸದಸ್ಯರು ಇ-ಖಾತೆ ವಿಳಂಬದ ಬಗ್ಗೆ ಧ್ವನಿಯೆತ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಇ-ಖಾತೆಗಾಗಿ ಸಲ್ಲಿಸಿದ ಅರ್ಜಿಗಳು ನಗರಸಭೆಯಿಂದ ಕಾಣೆಯಾಗಿರುವ ನಿದರ್ಶನಗಳಿವೆ. ನಗರಸಭಾ ಸದಸ್ಯರು ಇ-ಖಾತೆಗಾಗಿ ಸಲ್ಲಿಸಿದ ಅರ್ಜಿ ವರ್ಷ ಕಳೆದರೂ ವಿಲೇವಾರಿ ಮಾಡದೇ ಇರುವ ಆನೇಕ ಉದಾಹರಣೆಗಳಿವೆ. ಇದೇ ವಿಚಾರಕ್ಕೆ ಅಧಿಕಾರಿಗಳ ವಿರುದ್ಧ ನಗರಸಭಾ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದರು.

ಸಾರ್ವಜನಿಕರಿಂದ ದೂರು: ನಗರಸಭೆ ಕಚೇರಿಯಲ್ಲಿ ಇ- ಖಾತೆಯಲ್ಲಿ ಭ್ರಷ್ಟಾಚಾರ. ಕಟ್ಟಡಗಳ ಪರವಾನಗಿಯಲ್ಲಿ ಶಾಮೀಲು, ವಾಣಿಜ್ಯ ಕಟ್ಟಡಗಳ ತೆರಿಗೆ ವಸೂಲಿಯಲ್ಲಿ ಅಕ್ರಮ. ಸಂಬಂಧವೇ ಇಲ್ಲದವರಿಗೆ ಇ-ಖಾತೆ ನೀಡಿರುವುದು, ದೊಡ್ಡ ವಾಣಿಜ್ಯ ಕಟ್ಟಡಗಳಲ್ಲಿ ನಿಯಮಾನುಸಾರ ತೆರಿಗೆ ವಸೂಲಿ ಮಾಡದೆ, ಕಟ್ಟಡದ ಮಾಲೀಕರೊಂದಿಗೆ ಶಾಮೀಲಾಗಿರುವುದು ಸೇರಿದಂತೆ ಲಂಚದ ಬಗ್ಗೆ ಸಾರ್ವಜನಿಕರಿಂದ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಅನೇಕ ದೂರುಗಳು ಸಲ್ಲಿಕೆಯಾಗಿವೆ. ನಗರಸಭೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳವಾರ ಎಸಿಬಿ ಅಧಿಕಾರಿಗಳು ನಗರಸಭೆ ಕಚೇರಿ ಮೇಲೆ ಈ ದಾಳಿ ನಡೆಸಿದ್ದಾರೆ.

ನಗರ ಸಭೆ ಕಚೇರಿ ಮೇಲೆ ಡಿವೈಎಸ್‌ಪಿ ಗೋಪಾಲ್‌ ಜೋಗಿನ್‌ ನೇತೃತ್ವದಲ್ಲಿ ಪಿಎಸ್‌ಐ ಮಂಜುನಾಥ್‌, ಕೃಷ್ಣ ಹಾಗೂ 10ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡ ದಾಳಿ ನಡೆಸಿ ನಗರಸಭೆಯನ್ನು ಜಾಲಾಡಿದ್ದಾರೆ.

Advertisement

ದಾಖಲೆಗಳ ಪರಿಶೀಲನೆ: ಕಂದಾಯ, ಆರೋಗ್ಯ ಇಲಾಖೆ, ಟಪಾಲು ಶಾಖೆ, ಲೆಕ್ಕಾಧಿಕಾರಿಗಳ ಕಚೇರಿ, ಪೌರಾಯುಕ್ತರ ಕಚೇರಿ ಸೇರಿದಂತೆ ವಿವಿಧ ಇಲಾಖೆ ಕಚೇರಿಗಳಲ್ಲಿ ಅಧಿಕಾರಿಗಳು ದಾಖಲೆಗಳು ಮತ್ತು ಗಣಕ ಯಂತ್ರಗಳನ್ನು ಪರಿಶೀಲನೆ ಮಾಡಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ ಪರಿಶೀಲನೆ ಆರಂಭಿಸಿದ ಅಧಿಕಾರಿಗಳು, ಸತತವಾಗಿ 8 ಗಂಟೆಗಳ ಕಾಲ ನಗರಸಭೆ ಕಚೇರಿಯನ್ನು ಜಾಲಾಡಿದ್ದು, ನಗರಸಭೆಯಲ್ಲಿ ನಡೆದಿರುವ ಅಕ್ರಮಗಳ ಆರೋಪಕ್ಕೆ ಸಂಬಂಧಪಟ್ಟಂತೆ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಗತ್ಯವಿದ್ದರೆ ಮರುದಿನ ಬುಧವಾರವೂ ದಾಖಲೆಗಳ ಪರಿಶೀಲನೆ ಮುಂದುವರಿಯುವ ಸಾಧ್ಯತೆಗಳು ದಟ್ಟವಾಗಿವೆ.

ಇತ್ತೀಚಿಗೆ ನಗರ ಸಭೆಯ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಇ-ಖಾತೆ ಮಾಡಿಕೊಡಲು ಬಾಣಂತಮಾರಮ್ಮ ಬಡಾವಣೆ ನಿವಾಸಿಯೋಬ್ಬರ ಬಳಿ 15 ಸಾವಿರ ರೂ., ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ರೂ. ಮುಂಗಡವಾಗಿ ಲಂಚ ಪಡೆಯುವಾಗ ಲಂಚ ನೀಡಿದ ವ್ಯಕ್ತಿ ಅದನ್ನು ವಿಡಿಯೋ ಚಿತ್ರೀಕರಿಸಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.

ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳದೆ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಲಂಚ ಪ್ರಕರಣದ ತನಿಖೆಯು ಮುಂದುವರಿಯಲಿದೆ ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next