Advertisement

ಶಿಥಿಲಾವಸ್ಥೆಯಲ್ಲಿ ಅಜೆಕಾರು ಓವರ್‌ ಹೆಡ್‌ ಟ್ಯಾಂಕ್‌

12:43 AM Mar 28, 2019 | sudhir |

ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಓವರ್‌ ಹೆಡ್‌ ಟ್ಯಾಂಕ್‌ ಸಂಪೂರ್ಣ ಬಿರುಕು ಬಿಟ್ಟಿದ್ದು ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಇರುವುದು ಸ್ಥಳೀಯರನ್ನು ಕಾಡುತ್ತಿದೆ.

Advertisement

ಸುಮಾರು 50 ವರ್ಷಗಳ ಹಿಂದೆ ನಿರ್ಮಾಣ ಗೊಂಡಿರುವ ಈ ಬೃಹತ್‌ ಓವರ್‌ ಹೆಡ್‌ ಟ್ಯಾಂಕ್‌ 50 ಸಾವಿರ ಲೀ. ನೀರು ಶೇಖರಣಾ ಸಾಮಾರ್ಥ್ಯ ಹೊಂದಿದೆ. ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಸುಮಾರು 480 ಮನೆಗಳಿಗೆ ಕುಡಿಯುವ ನೀರು ಒದಗಿಸುವ ಏಕೈಕ ನೀರಿನ ಮೂಲ ಇದಾಗಿದೆ.

ಟ್ಯಾಂಕ್‌ನ ಸ್ಲಾಬ್‌ ಮತ್ತು ಪಿಲ್ಲರ್‌ಗಳು ಬಿರುಕು ಬಿಟ್ಟಿದು,ª ಸಿಮೆಂಟ್‌ ತುಂಡು ತುಂಡಾಗಿ ಬೀಳುತ್ತಿದೆ. ಟ್ಯಾಂಕ್‌ ನಿರ್ಮಾಣ ಸಂದರ್ಭ ಬಳಸಲಾದ ಕಬ್ಬಿಣದ ಸಲಾಖೆಗಳು ತುಕ್ಕು ಹಿಡಿದಿವೆ.

ಪಂಚಾಯತ್‌ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಈ ಓವರ್‌ ಹೆಡ್‌ ಟ್ಯಾಂಕ್‌ ಕುಸಿತಗೊಂಡಲ್ಲಿ ಅಪಾರ ಪ್ರಮಾಣದ ಹಾನಿಯಾಗುವ ಜತೆಗೆ ಪ್ರಾಣಾಪಾಯ ಸಂಭವಿಸಬಹುದಾಗಿದೆ. ಅಲ್ಲದೆ ಪಂಚಾಯತ್‌ ವ್ಯಾಪ್ತಿಯ ಅಜೆಕಾರು ಪೇಟೆ, ಕೊಂಬಗುಡ್ಡೆ, ಕೈಕಂಬ, ನೂಜಿ ವಠಾರ, ಕುರ್ಪಾಡಿ ಪ್ರದೇಶ, ಪ.ಜಾತಿ, ಪ.ಪಂಗಡದ ಹಲವು ಕಾಲೊನಿಗಳ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಸಂಕಷ್ಟಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ.

ಸುಮಾರು 50 ಅಡಿ ಎತ್ತರದಲ್ಲಿರುವ ಈ ಓವರ್‌ ಹೆಡ್‌ ಟ್ಯಾಂಕ್‌ ಕುಸಿತಗೊಂಡರೆ ಸಮೀಪದಲ್ಲಿರುವ ಸುಮಾರು 30,000 ಲೀ. ಸಾಮರ್ಥ್ಯದ ಇನ್ನೊಂದು ಓವರ್‌ ಹೆಡ್‌ ಟ್ಯಾಂಕ್‌, ಪಂಚಾಯತ್‌ ಕಟ್ಟಡ, ಪಂಚಾಯತ್‌ ವಾಣಿಜ್ಯ ಮಳಿಗೆಗಳು, ಗ್ರಾಮ ಕರಣಿಕರ ಕಚೇರಿ ಕಟ್ಟಡಗಳಿಗೆ ಹಾನಿಯಾಗಲಿದೆ.

Advertisement

ನಿರುಪಯುಕ್ತ ಟ್ಯಾಂಕ್‌
ಓವರ್‌ ಹೆಡ್‌ ಟ್ಯಾಂಕ್‌ ಬಳಿಯಲ್ಲಿಯೇ ಸುಮಾರು 10 ವರ್ಷಗಳ ಹಿಂದೆ ಇನ್ನೊಂದು ಓವರ್‌ ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಲಾಗಿತ್ತು. ಇದರ ಎತ್ತರವೂ ಕಡಿಮೆ ಇದ್ದು ನೀರಿನ ಶೇಖರಣೆ ಸಾಮರ್ಥ್ಯ ಕಡಿಮೆ ಇರುವುದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಅಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪಂಚಾಯತ್‌ ಆಡಳಿತವು ಹೊಸ ಓವರ್‌ ಹೆಡ್‌ ಟ್ಯಾಂಕ್‌ನ ಬದಲಾಗಿ ಗ್ರಾಮಸ್ಥರಿಗೆ ನೀರು ಒದಗಿಸುವ ಉದ್ದೇಶದೊಂದಿಗೆ ಹಳೇಯ ಓವರ್‌ ಹೆಡ್‌ ಟ್ಯಾಂಕ್‌ನ ಮೂಲಕವೇ ನೀರು ಒದಗಿಸುತ್ತಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಹೊಸ ಓವರ್‌ ಹೆಡ್‌ ಟ್ಯಾಂಕ್‌ ನಿಷ್ಪ್ರಯೋಜಕವಾಗಿದೆ.

ತೆರವುಗೊಳಿಸಿದರೂ ಸಮಸ್ಯೆ
ಮರ್ಣೆ ಪಂಚಾಯತ್‌ ವ್ಯಾಪ್ತಿಯ ಹೆಚ್ಚಿನ ಪ್ರದೇಶಕ್ಕೆ ಈ ಓವರ್‌ ಹೆಡ್‌ ಟ್ಯಾಂಕ್‌ ಮೂಲಕವೇ ನೀರು ಒದಗಿಸುತ್ತಿದ್ದು ಈಗ ಕುಸಿಯುವ ಭೀತಿಯಿಂದ ತೆರವುಗೊಳಿಸಿದರೆ ಕುಡಿಯುವ ನೀರಿಗಾಗಿ ಸ್ಥಳೀಯರು ಸಂಕಷ್ಟ ಅನುಭವಿಸ ಬೇಕಾಗುತ್ತದೆ.

ಹಲವು ಬಾರಿ ಗ್ರಾಮ ಸಭೆಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ದುರಸ್ತಿ ಅಥವಾ ತೆರವುಗೊಳಿಸುವ ಬಗ್ಗೆ ನಿರ್ಣಯ ಕೈಗೊಂಡಿ ದ್ದರೂ ಯಾವುದೇ ಪ್ರಯೋಜನವಾಗಿಲ್ಲ. 2018-19ನೇ ಸಾಲಿನ ಡಿ.28ರಂದು ನಡೆದ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಓವರ್‌ ಹೆಡ್‌ ಟ್ಯಾಂಕನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಂಡು ಕಾರ್ಕಳ ಎಂಜಿನಿಯರಿಂಗ್‌ ಉಪ ವಿಭಾಗದ ಅಧಿಕಾರಿಗಳಿಗೆ ಪಂಚಾಯತ್‌ ಆಡಳಿತ ಮನವಿ ಮಾಡಿದ್ದರೂ ಇಲಾಖೆಯ ಅಧಿಕಾರಿಗಳಿಂದ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.

ಪರಿಶೀಲನೆ ಅಗತ್ಯ
ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಓವರ್‌ ಹೆಡ್‌ ಟ್ಯಾಂಕನ್ನು ಪರಿಶೀಲಿಸುವಂತೆ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಇಂಜಿನಿಯರಿಂಗ್‌ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಕಳೆದ 4 ವರ್ಷಗಳ ಹಿಂದೆ ಸ್ವಲ್ಪ ಮಟ್ಟಿನ ದುರಸ್ತಿ ಕಾರ್ಯ ನಡೆದಿತ್ತಾದರೂ ಈಗ ಮತ್ತೆ ಅಪಾಯಕಾರಿ ಸ್ಥಿತಿಯಲ್ಲಿ ಓವರ್‌ ಹೆಡ್‌ ಟ್ಯಾಂಕ್‌ ಇದ್ದು ತುರ್ತು ಪರಿಶೀಲನೆಯ ಅಗತ್ಯವಿರುವುದರಿಂದ ಮತ್ತೆ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಲಾಗುವುದು.
-ತಿಲಕ್‌ರಾಜ್‌, ಪಿಡಿಒ ಮರ್ಣೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next