Advertisement

ಭೂತಳದಲ್ಲಿ ಒರತೆಯ ಕೊರತೆ: ಬರಿದಾಗುತ್ತಿದೆ ಅಂತರ್ಜಲ

12:54 AM Feb 28, 2024 | Team Udayavani |

ಮಂಗಳೂರು: ಒಂದೆಡೆ ಮಳೆ ಕೊರತೆ, ಮತ್ತೊಂದೆಡೆ ಅತಿಯಾಗಿ ಬೋರ್‌ವೆಲ್‌ ಕೊರೆತದ ಪರಿಣಾಮ ಜಿಲ್ಲೆಯಲ್ಲೂ ಕೆರೆ ಬಾವಿಗಳು ಬತ್ತಿವೆ. ಅಂತರ್ಜಲ ಪ್ರಮಾಣ ಗಣನೀಯ ಕುಸಿತವಾಗಿದೆ. ಪ್ರಸಕ್ತ ಸಾಲಿನಲ್ಲಿ ವಾಡಿಕೆಯ ಮಳೆಯಾಗದ ಕಾರಣದಿಂದ ಮೂಡುಬಿದಿರೆ ಹಾಗೂ ಮಂಗಳೂರು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ.

Advertisement

ದ.ಕ.ದಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲದ ಪ್ರಮಾಣ ಇಳಿ ಮುಖವಾಗುತ್ತಿದೆ. ಜಿಲ್ಲೆಯಾದ್ಯಂತ ಕೃಷಿ, ಗೃಹೋಪಯೋಗ, ಕೈಗಾರಿಕಾ ಉಪಯೋಗಕ್ಕಾಗಿ ಬೋರ್‌ವೆಲ್‌ ಕೊರೆ ಯಲಾಗುತ್ತದೆ. ನೀರಿನ ಸಮಸ್ಯೆ ಕಂಡುಬಂದ ವೇಳೆ ಭೂಗರ್ಭದ ನೀರಿನತ್ತ ಚಿತ್ತ ಹರಿಸಲಾಗುತ್ತಿದೆ. ಪರಿಣಾಮ ಭೂಮಿಯೊಳಗಿನ ನೀರಿನ ಸ್ಥಿರ ಮಟ್ಟದಲ್ಲೂ ಇಳಿಕೆಯಾಗುತ್ತಿದೆ. 2021ರಲ್ಲಿ 11.99 ಮೀ. ಆಳದಲ್ಲಿದ್ದ ಸ್ಥಿರಮಟ್ಟ 2023ರಲ್ಲಿ ಬರೋಬ್ಬರಿ 21 ಮೀ. ಆಳಕ್ಕೆ ತಲುಪಿದೆ. ಈ ಸಾಲಿನಲ್ಲಿ ಜನವರಿ ಅಂತ್ಯದ ವರೆಗೆ 15.23 ಮೀ.ನಲ್ಲಿದ್ದು ಮೇಯಲ್ಲಿ ಮತ್ತಷ್ಟು ಆಳಕ್ಕೆ ಇಳಿಯುವ ಆತಂಕ ಇದೆ.

ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ದ.ಕ. ಜಿಲ್ಲೆಯಲ್ಲಿ ಮುಂಗಾರು ಮಳೆ ತೀವ್ರ ಕೊರತೆಯಾಗಿದೆ. ವಾಡಿಕೆಯ ಮಳೆಯೇ ಸುರಿಯದ ಹಿನ್ನೆಲೆ ನೀರಿನ ತತ್ವಾರ ಎದುರಾಗುವ ಆತಂಕ ಹೆಚ್ಚಿದೆ. ಈ ನಡುವೆ ಬೇಸಗೆ ಸುಡು ಬಿಸಿಲಿನ ಕಾರಣದಿಂದಾಗಿ ಅಣೆಕಟ್ಟುಗಳಲ್ಲಿ ನೀರು ಬೇಗನೇ ಆವಿಯಾಗುವುದು ಮತ್ತೂಂದು ಸಮಸ್ಯೆ.

ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು
ಅಂತರ್ಜಲ ಇಲಾಖೆಯಿಂದ ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಕೈಗಾರಿಕೆಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಸರಿಸುಮಾರು 6 ತಿಂಗಳಿಗೆ ಬೇಕಾದ ಮಳೆ ನೀರನ್ನು ಭೂಮಿಯೊಳಗೆ ಟ್ಯಾಂಕ್‌ ನಿರ್ಮಿಸಿ ಸಂಗ್ರಹಿಸುವ ಮೂಲಕ ಅಂತರ್ಜಲವನ್ನು ಅವಲಂಬಿಸುವುದು ತಪ್ಪುತ್ತದೆ. ಮಂಗಳೂರು ವಿಮಾನ ನಿಲ್ದಾಣ, ಎಚ್‌ಪಿಸಿಎಲ್‌, ಪುತ್ತೂರಿನ ರೈತ ಬಂಧು ಸೇರಿದಂತೆ ಹತ್ತಕ್ಕೂ ಅಧಿಕ ಸಂಸ್ಥೆಗಳು ಮಳೆನೀರು ಕೊಯ್ಲು ಮೂಲಕ ನೀರು ಸಂಗ್ರಹ ಕಾರ್ಯ ನಡೆಸುತ್ತಿವೆ.

ಈಚಿನ ವರ್ಷಗಳಲ್ಲಿ ಸಾವಿರ ಅಡಿಯ ತನಕ ಅಗೆದರೂ ನೀರಿಲ್ಲ ಎಂಬಂತಾಗಿದೆ. ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಸರಾಸರಿ 800 ಅಡಿ, ಉಳ್ಳಾಲ, ಬಂಟ್ವಾಳ, ಮೂಡುಬಿದಿರೆ, ಮಂಗಳೂರಿನಲ್ಲಿ ಸರಾಸರಿ 500 ಅಡಿ, ಕಡಬ, ಸುಳ್ಯದಲ್ಲಿ 600 ಅಡಿ ಸರಾಸರಿಯಲ್ಲಿ ನೀರಿನ ಒರತೆ ಸಿಗುತ್ತಿದೆ. ಈ ತಾಲೂಕುಗಳಲ್ಲಿ 800 ಅಡಿ ಮೀರಿದ ಬಳಿಕವೂ ನೀರಿನ ಪಸೆ ಸಿಗದ ಉದಾಹರಣೆಗಳೂ ಇವೆ.

Advertisement

ಹಿತ ಮಿತ ಬಳಕೆ ಅಗತ್ಯ
ಹರಿಯುವ ನೀರನ್ನು ನಿಲ್ಲಿಸಬೇಕು. ನಿಂತ ನೀರನ್ನು ಇಂಗಿಸಬೇಕು. ಅಂತರ್ಜಲ ಅತಿಯಾಗಿ ಬಳಕೆಯ ಮೇಲೆ ನಿಯಂತ್ರಣವಿರಬೇಕು. ಬೋರ್‌ವೆಲ್‌ಗ‌ಳನ್ನು ಮರುಪೂರಣಗೊಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ವಿವೇಚನಾ ರಹಿತವಾಗಿ ಅಂತರ್ಜಲ ಬಳಸಲಾಗುತ್ತಿದ್ದು ಇದಕ್ಕೆ ಮಿತಿ ಇರಬೇಕು. ರೈತರು ಮಳೆಯಾಧಾರಿತ ಬೆಳೆಗಳನ್ನು ಬೆಳೆಸುತ್ತ ಹೆಚ್ಚು ಆಸಕ್ತಿ ವಹಿಸಬೇಕು. ನೀರನ್ನು ನಿಯಮಿತ ಹಾಗೂ ನ್ಯಾಯಯುತವಾಗಿ ಬಳಸಬೇಕು.

ಕೊಳವೆ ಬಾವಿ ಕೊರೆಯುವುದಕ್ಕೆ ತಡೆಯೊಡ್ಡುವುದಾಗಲಿ, ಇಂತಿಷ್ಟೇ ಅಡಿ ಕೊರೆಯಬೇಕೆನ್ನುವ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ. ಜನರಾಗಿಯೇ ಮುಂದೆ ಎದುರಾಗಬಹುದಾದ ನೀರಿನ ಕ್ಷಾಮದ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಮುಂದಿನ ತಲೆಮಾರು ಜಲ ಕ್ಷಾಮದಿಂದ ದೂರ ಉಳಿಯಬೇಕೆಂದರೆ, ಇಂದು ಎಚ್ಚರವಹಿಸಬೇಕು. ಅನಗತ್ಯ ಪೋಲು ಮಾಡದೆ ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಬಳಸುವುದು ಜಲ ಸಂರಕ್ಷಣೆಯ ಭಾಗವಾಗುತ್ತದೆ.
-ಶೇಖ್‌ ದಾವೂದ್‌, ಹಿರಿಯ ಭೂವಿಜ್ಞಾನಿ

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next