Advertisement

ಯುವ ಸಬಲೀಕರಣದ ಕುರಿತಾಗಿ…

06:49 PM Jun 20, 2019 | mahesh |

ಯುವಜನರಲ್ಲಿ ಸಹಜವಾಗಿಯೇ ಪ್ರೀತಿ-ಪ್ರೇಮದಂಥ ವಿಚಾರಗಳು ಸುಳಿದಾಡುತ್ತಿರುತ್ತವೆ. ಹಾಗೆಯೇ ಬೇರೆ ಬೇರೆ ವಿಷಯಗಳೂ ಸಂಚಲನಗೊಳ್ಳುತ್ತ ಇರುತ್ತದೆ. ನೋಡಿದ್ದೆಲ್ಲವೂ ಅಂದವಾಗಿ ಕಾಣುವುದು, ತಾನು ಮಾಡಿದ್ದೇ ಸರಿ ಎಂದು ಭಾವಿಸುವುದು- ಇದೆಲ್ಲವೂ ಆ ವಯಸ್ಸಿನಲ್ಲಿ ಸಹಜ. ಇಂದಿನ ಯುವಜನರು ತನ್ನ ಜೀವನದಲ್ಲಿ ಹಲವಾರು ಗೊಂದಲ ಮತ್ತು ಸಮಸ್ಯೆಗಳಿಗೆ ಒಳಗಾಗಿ ಅದರಿಂದ ಹೊರಬರಲಾಗದೆ ಕುಗ್ಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತಾರೆ. ತಮ್ಮ ಸಮಸ್ಯೆ ಮತ್ತು ಗೊಂದಲಗಳನ್ನು ಯಾರಲ್ಲೂ ಹೇಳಿಕೊಳ್ಳಲಾರರು. ಇದಕ್ಕೆ ಕಾರಣ ಸೂಕ್ತ ಮಾರ್ಗದರ್ಶನದ ಕೊರತೆ. ಹಾಗಾಗಿಯೇ ಯುವಜನರು ತಮ್ಮನ್ನು ತಾವು ಅಭಿವೃದ್ಧಿ ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ .

Advertisement

ಅದಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು ಇದರ ಸಹಯೋಗದೊಂದಿಗೆ ಸರಕಾರವು ಯುವಸ್ಪಂದನ ಯೋಜನೆಯನ್ನು ಜಾರಿಗೊಳಿಸಿತು. ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಯುವ ಸ್ಪಂದನ ಕಚೇರಿಗಳಿದ್ದು , ಯುವ ಸಮಾಲೋಚಕರು ಸಮಸ್ಯೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಅಲ್ಲದೆ, ಯುವಜನರು ಯಾವ ವಿಷಯದಲ್ಲಿ ಗೊಂದಲ ಮತ್ತು ಸಮಸ್ಯೆಗೆ ಒಳಗಾಗುತ್ತಾರೆ ಎಂಬುದನ್ನು ಅಧ್ಯಯನ ಮಾಡಿ ಇದನ್ನು ಹೇಗೆ ಬಗೆಹರಿಸಬೇಕೆಂಬ ತರಬೇತಿಯನ್ನು ಮತ್ತು ಇದರ ಬಗ್ಗೆ ಅರಿವು ಮೂಡಿಸುತ್ತಾರೆ. ಇದಕ್ಕೆ ಐದು ಜನ ಯುವಪರಿವರ್ತಕರು ಮತ್ತು ಒಬ್ಬರು ಯುವ ಸಮಾಲೋಚಕರು ಇರುತ್ತಾರೆ. ವೃತ್ತಿ ಮತ್ತು ಶಿಕ್ಷಣ, ಸಂಬಂಧಗಳು, ಲಿಂಗ ಮತ್ತು ಲೈಂಗಿಕತೆ, ವ್ಯಕ್ತಿತ್ವ ವಿಕಸನ, ಸುರಕ್ಷತೆ, ಆರೋಗ್ಯ ಜೀವನ ಶೈಲಿ ಇವೆಲ್ಲವೂ ಇಂದಿನ ಯುವಜನರಿಗೆ ಗೊಂದಲ ಉಂಟುಮಾಡುವ ಮುಖ್ಯ ಅಂಶಗಳು.

ಇದಕ್ಕೆ ಸಂಬಂದಪಟ್ಟ ಹಾಗೆ ಯಾವುದಾದರೂ ಸಮಸ್ಯೆ-ಗೊಂದಲಗಳು ಇದ್ದಲ್ಲಿ ಯುವಜನರು ಜಿಲ್ಲಾ ಯುವ ಸ್ಪಂದನ ಕೇಂದ್ರಕ್ಕೆ ಭೇಟಿ ನೀಡಿ ಯುವ ಸಮಾಲೋಚಕರ ಮಾರ್ಗದರ್ಶನಂತೆ ಪರಿಹಾರವನ್ನು ಕಂಡುಕೊಳ್ಳಬಹುದು. ಇಂದಿನ ಯುವಜನರಲ್ಲಿ ಕಂಡುಬರುವ ಉದ್ಯೋಗ ಸಮಸ್ಯೆ, ಮಾದಕ ವ್ಯಸನಕ್ಕೆ ಬಲಿಯಾಗುವುದು, ಪ್ರೀತಿ-ಪ್ರೇಮದಂತಹ ವಿಷಯಗಳು, ಸಂಬಂಧಗಳ ನಡುವಿನ ಸಮಸ್ಯೆಗಳಿಗೂ ಉಚಿತವಾಗಿ ಮಾರ್ಗದರ್ಶನ ಸಿಗುತ್ತದೆ. ಯುವಜನರು ಏನೇ ಸಮಸ್ಯೆ ಬಂದರೂ ಯುವಸ್ಪಂದನ ಕೇಂದ್ರಕ್ಕೆ ಬಂದು ತಮ್ಮ ಸಮಸ್ಯೆ ಗೊಂದಲವನ್ನು ಹೇಳಿಕೊಂಡರೆ ಅದನ್ನು ಗೌಪ್ಯವಾಗಿರಿಸಿ ಪರಿಹಾರ ನೀಡಲಾಗುತ್ತದೆ. ಯುವಜೀವನ ಅಂದರೆ ಅದು ಬಹಳ ಸುಂದರ ಜೀವನ. ಏನೇ ಸಮಸ್ಯೆ ಬಂದರೂ ಅದನ್ನು ಎದುರಿಸುತ್ತಾ ಸುಂದರ ಜೀವನ ನಡೆಸುವ ಮುಖಾಂತರ ದೇಶದ ಉತ್ತಮ ಪ್ರಜೆಗಳಾಗೋಣ.

ಶ್ರೀಕಾಂತ್‌ ಪೂಜಾರಿ, ಬಿರಾವು
ಜಿಲ್ಲಾ ಯುವ ಪರಿವರ್ತಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next