Advertisement

ಜಾತಿ ವ್ಯವಸ್ಥೆ ನಿರ್ಮೂಲನೆ ಆರೆಸ್ಸೆಸ್‌ ಗುರಿ

04:18 PM Oct 10, 2022 | Team Udayavani |

ಬಾಗಲಕೋಟೆ: ಪಾಶ್ಚಿಮಾತ್ಯರು ಕೇವಲ ನಮ್ಮ ದೇಶ ಮತ್ತು ದೇಹದ ಮೇಲೆ ದಾಳಿ ಮಾಡಿಲ್ಲ. ನಮ್ಮ ಮನಸ್ಥಿತಿಯ ಮೇಲೂ ದಾಳಿ ಮಾಡಿದ್ದರು. ಹೀಗಾಗಿ ಇಂದಿಗೂ ಒಡೆದಾಳುವ ನೀತಿ-ಜಾತಿ ವ್ಯವಸ್ಥೆ ಬೇರೂರಿವೆ. ಶಿವ ಎಂಬ ವ್ಯಕ್ತಿಗೆ ಶಿವಾಲಯದಲ್ಲೇ ಪ್ರವೇಶ ಸಿಗಲ್ಲ. ಇಂತಹ ವ್ಯವಸ್ಥೆಯನ್ನು ಬುಡದ ಸಮೇತ ಕಿತ್ತೆಸೆದು ಸಮಸ್ತ ಹಿಂದೂಗಳು ಒಂದಾಗಿ ಬದುಕಬೇಕು. ಇದುವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲ ಆಶಯ-ಗುರಿಯಾಗಿದೆ ಎಂದು ಆರ್‌ಎಸ್‌ಎಸ್‌ ಕರ್ನಾಟಕ ಉತ್ತರದ ಪ್ರಾಂತ ಪ್ರಚಾರ ನರೇಂದ್ರಜಿ ಹೇಳಿದರು.

Advertisement

ನಗರದ ಬಸವೇಶ್ವರ ಕಾಲೇಜು ಮೈದಾನದಲ್ಲಿ ರವಿವಾರ ಸಂಜೆ ಆರ್‌ಎಸ್‌ಎಸ್‌ ನಗರ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ಅವರು ಮಾತನಾಡಿದರು.

ಸಮಸ್ತ ಹಿಂದೂಗಳಿಗೆ ಈ ನೆಲದ ನೀರು-ದೇವಾಲಯ ಮುಕ್ತವಾಗಿ ದೊರೆಯಬೇಕು. ಪ್ರತಿಯೊಂದು ದೇವಾಲಯದಲ್ಲೂ ನಮ್ಮವರಿಗೆ ಪ್ರವೇಶ ಸಿಗಬೇಕು. ಈಚೆಗೆ ಜಿಲ್ಲೆಯ ಒಂದು ಹಳ್ಳಿಗೆ ಹೋದಾಗ ಶಿವಾಲಯದಲ್ಲಿ ಸಭೆ ನಡೆದಿತ್ತು. ಆದರೆ, ಅಲ್ಲಿ ಕೆಲವರಿಗೆ ಪ್ರವೇಶವಿರಲಿಲ್ಲ. ದೇವಾಲಯದ ಹೊರಗೆ ನಿಂತ ಯುವಕನ ಹೆಸರು ಕೇಳಿದರೆ ಆತ, ಶಿವು ಎಂದು ಹೇಳಿದ್ದ. ಶಿವು ಎಂದು ಹೆಸರಿಟ್ಟುಕೊಂಡ ವ್ಯಕ್ತಿಗೆ ಶಿವಾಲಯದಲ್ಲಿ ಪ್ರವೇಶವಿಲ್ಲ. ಆದರೆ, ಅದೇ ರಾಬರ್ಟ್‌, ಮೊಹ್ಮದ ಎಂಬ ಹೆಸರಿದ್ದ ವ್ಯಕ್ತಿಗಳು ನಮ್ಮ ಮನೆಯ ಅಡುಗೆ ಕೋಣೆವರೆಗೂ ಪ್ರವೇಶ ಕೊಡುತ್ತೇವೆ. ಆದರೆ, ಮೇಲು-ಕೀಳು ಎಂಬ ಜಾತಿ ವ್ಯವಸ್ಥೆಯಿಂದ ಹಿಂದೂಗಳಾದವರಿಗೂ ಕೀಳಾಗಿ ನೋಡುವ ಪದ್ಧತಿ ಕೆಲವರು ಬೆಳೆಸಿಬಿಟ್ಟಿದ್ದಾರೆ. ಅದು ಹೋಗಲಾಡಿಸಬೇಕಿದೆ ಎಂದರು.

ದರೋಡೆಕೋರರ ಆಕ್ರಮಣ: ನಮ್ಮ ದೇಶವನ್ನು 2500 ವರ್ಷಗಳ ಕಾಲ ದರೋಡೆಕೋರರು ದಾಳಿ ಮಾಡಿ, ಲೂಟಿ ಹೊಡೆದಿದ್ದಾರೆ. ಇಸ್ಲಾಂ ಮತ್ತು ಕ್ರೈಸ್ತರ ಆಕ್ರಮಣದಿಂದ ಇಲ್ಲಿನವರ ಜೀವನಶೈಲಿಯೇ ಬದಲಿಸಿಕೊಂಡರು. ಭಾರತ ಮಾತೆಯನ್ನು ಪುನರ್‌ ಪ್ರತಿಷ್ಠಾಪಿಸುವ ಆಶಯದೊಂದಿಗೆ ಸಂಘ 97 ವರ್ಷಗಳ ಹಿಂದೆ ಹುಟ್ಟಿಕೊಂಡಿದೆ. ಯಾವುದೇ ಸರ್ಕಾರದ ಆಶ್ರಯ ನಂಬಿ ತನ್ನ ಚಟುವಟಿಕೆ ನಡೆಸುತ್ತಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘ ಆಶ್ರಯಿಸಿದೆ. ನಮ್ಮ ದೇಶದ ನೆಲವೇ ಶೌರ್ಯ-ಪರಾಕ್ರಮದ ನೆಲವಾಗಿದೆ. ಮೌಲ್ಯಗಳಿಗಾಗಿ ಹಲವಾರು ಜನ ಬಲಿದಾನ ಮಾಡಿದ್ದಾರೆ. ಯುಗಾದಿ, ವಿಜಯದಶಮಿ ಹಬ್ಬಗಳೇ ಹಿಂದೂ ರಾಷ್ಟ್ರದ ಸ್ವಾತಂತ್ರ್ಯ ದಿನೋತ್ಸವಗಳು ಎಂದು ಹೇಳಿದರು.

ಆಂಗ್ಲರು ಕೇವಲ ನಮ್ಮ ದೇಶ-ಶರೀರದ ಮೇಲೆ ದಾಳಿ ಮಾಡಿಲ್ಲ. ಇಲ್ಲಿನ ಜನರ ಮೆದುಳಿನ ಮೇಲೂ ದಾಳಿ ಮಾಡಿದ್ದರು. ಇಂಗ್ಲಿಷ್‌ ಕಲಿತರೆ, ಅವರಂತೆ ಬದುಕಿದರೆ ಶ್ರೇಷ್ಠರು ಎಂಬ ಭಾವನೆ ಬಿತ್ತಿದ್ದರು. ಇದನ್ನು ಹೋಗಲಾಡಿಸಲು ಹಿಂದೂಗಳು ಜಾಗೃತರಾಗಬೇಕು. 1925ರಲ್ಲಿ ಹುಟ್ಟಿಕೊಂಡ ಆರ್‌ಎಸ್‌ಎಸ್‌ನ ಭಗವಾಧ್ವಜವನ್ನು ಹಾರಲು ಬಿಡಲ್ಲ ಎಂದು ಕೆಲವರು ಹೇಳಿದ್ದರು. ಆದರೆ, ಇಂದು ವಿಶ್ವದ 45 ರಾಷ್ಟ್ರಗಳಲ್ಲಿ ಭಗವಾಧ್ವಜ ಹಾರಾಡುತ್ತಿದೆ. ಹಿಂದೂ ಸಮಾಜವನ್ನು ಜಾಗೃತಗೊಳಿಸುತ್ತಿದೆ ಎಂದು ತಿಳಿಸಿದರು.

Advertisement

ದೇಶ ಮೊದಲು: ದೇಶ ಮೊದಲು ಎಂಬ ಗುರಿ-ಆಶಯದ ನಿಟ್ಟಿನಲ್ಲಿ ಸಂಘ ದಿಟ್ಟ ಹೆಜ್ಜೆ ಇಡುತ್ತಿದೆ. ಪ್ರತಿಯೊಬ್ಬರ ಮನದಲ್ಲೂ ದೇಶಭಕ್ತಿ ಅರಳಿಸುವುದೇ ಸಂಘದ ಮೂಲ ಧ್ಯೇಯ. ಯಾವುದೇ ಸ್ವಾರ್ಥ-ಅಹಂಕಾರ ಸಂಘಕ್ಕಿಲ್ಲ. ಹಿಂದೂ ಸಮಾಜದ ಮೇಲೆ ಸಂಘಕ್ಕೆ ನಂಬಿಕೆ ಇದೆ. ಇಂದು ಹಲವಾರು ಸವಾಲುಗಳು ನಮ್ಮೆದುರು ಇವೆ. ಹಣ-ಮತಾಂತರ-ಭಯೋತ್ಪಾದನೆ ಮೂಲಕ ಹಿಂದೂ ಸಮಾಜ ಛಿದ್ರಗೊಳಿಸಬೇಕೆನ್ನುವ ಮನಸ್ಸುಗಳಿವೆ. ನಮ್ಮ ದೇಶದಲ್ಲಿರುವ ಕ್ರಿಶ್ಚಿಯನ್‌, ಮುಸ್ಲಿಂರೂ ಹೊರಗಿನಿಂದ ಬಂದವರಲ್ಲ. ಆದರೆ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಮೂಡಬೇಕಿದೆ. ಸಂಘಕ್ಕೆ ಯಾರೂ ಶತ್ರುಗಳಿಲ್ಲ. ಜಾತಿ ಪದ್ಧತಿಯೇ ಇಂದು ದೊಡ್ಡ ಸವಾಲಾಗಿದೆ. ಮನೆಯೊಳಗೆ ಪೂಜೆಯ ಪದ್ಧತಿ ಯಾವುದೇ ಇರಲಿ, ಹೊರಗೆ ಬಂದರೆ ನಾವೆಲ್ಲ ಹಿಂದೂಗಳೆಂಬುದು ದೃಢವಾಗಿರಬೇಕು. ಜಾತಿ ವ್ಯವಸ್ಥೆ-ಮೇಲು-ಕೀಳು ಹೋಗಲಾಡಿಸಬೇಕು. ಇದು ಸಂಘದ ಮೂಲ ಗುರಿಯಾಗಿದೆ ಎಂದು ಹೇಳಿದರು.

ತೋಟಗಾರಿಕೆ ವಿವಿಯ ಕುಲಪತಿ ಡಾ| ಕೆ.ಎಂ. ಇಂದಿರೇಶ, ಆರ್‌ಎಸ್‌ಎಸ್‌ ಉತ್ತರ ಪ್ರಾಂತ ಸಹ ಸಂಘ ಚಾಲಕ ಅರವಿಂದರಾವ ದೇಶಮುಖ ಮುಂತಾದವರು ಉಪಸ್ಥಿತರಿದ್ದರು.

ಭವ್ಯ ಪಥ ಸಂಚಲನ ನಗರ ವಾರ್ಷಿಕೋತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂ ಸೇವಕರಿಂದ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಎರಡು ಮಾರ್ಗಗಳಲ್ಲಿ ಬಸವೇಶ್ವರ ಕಾಲೇಜು ಮೈದಾನದಿಂದ ಆರಂಭಗೊಂಡ ಪಥ ಸಂಚಲನಗಳು, ಒಂದು ಮಾರ್ಗ ಒಂದು ಮಾರ್ಗ ಕರವೀರ ಮಠ, ಶಿರೂರ ಅಗಸಿ, ಕಿಣಗಿ ಕ್ರಾಸ್‌, ಹುಂಡೇಕಾರ ಗಲ್ಲಿ ಕ್ರಾಸ್‌, ಚರಂತಿಮಠ, ಮಾರವಾಡಿ ಗಲ್ಲಿ ಕ್ರಾಸ್‌, ಜವಳಿ ಚೌಕ, ಶಾರದಾ ಪ್ರಸ್‌ ಕ್ರಾಸ್‌, ಹಳಪೇಟ ಕ್ರಾಸ್‌, ಭಾವಸಾರ ಗಜಾನನ ಚೌಕ, ಕೊಪ್ಪ ಆಸ್ಪತ್ರೆ, ಶಿವಾಜಿ ಸರ್ಕಲ್‌, ಹಳೆಯ ಅಂಚೆ ಕಚೇರಿ, ಶ್ರೀ ವೆಂಕಟೇಶ್ವರ ದೇವಸ್ಥಾನ, ವಲ್ಲಭಬಾಯಿ ಚೌಕ ಮೂಲಕ ಹಾಯ್ದು ಬಸವೇಶ್ವರ ವೃತ್ತಕ್ಕೆ ಆಗಮಿಸಲಿದೆ. ಇನ್ನೊಂದು ಮಾರ್ಗದಲ್ಲಿ ಬಸವೇಶ್ವರ ಕಾಲೇಜು ಮೈದಾನದಿಂದ ಆರಂಭಗೊಳ್ಳುವ ಪಥ ಸಂಚಲನ, ಸಾಸನೂರ ಪೆಟ್ರೋಲ್‌ ಬಂಕ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ಸರ್ಕಲ್‌, ಶಾಂತಿ ನಗರ ಕ್ರಾಸ್‌, ಹಳೆಯ ಐಬಿ ಕ್ರಾಸ್‌, ಹರಣಶಿಕಾರಿ ಗಲ್ಲಿ, ವಾಸವಿ ಚಿತ್ರ ಮಂದಿರ, ದರ್ಗಾ ನಗರ ಕ್ರಾಸ್‌, ಶಾರದಾ ಲಾಡ್ಜ, ಹೊಳೆ ಆಂಜನೇಯ ದೇವಸ್ಥಾನದ ಮೂಲಕ ಹಾಯ್ದು ಬಸವೇಶ್ವರ ವೃತ್ತ ತಲುಪಿದವು. ಎರಡೂ ಮಾರ್ಗಗಳು, ಬಸವೇಶ್ವರ ವೃತ್ತದಲ್ಲಿ ಸಂಗಮಗೊಂಡ ದೃಶ್ಯ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಅಲ್ಲದೇ ದೇಶದ ಮಹಾನ್‌ ನಾಯಕರ, ವೇಷಧರಿಸಿದ ಮಕ್ಕಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಗಮನ ಸೆಳೆದರು. ಪಥ ಸಂಚಲನ ಸಂಚರಿಸುವ ಮಾರ್ಗದ ರಸ್ತೆಗಳಿಗೆ ತಳಿರು ತೋರಣ ಕಟ್ಟಿ-ರಂಗೋಲಿ ಹಾಕಿ, ಹೂವುಗಳಿಂದ ಅಲಂಕಾರ ಮಾಡಿ ಸ್ವಾಗತಿಸಲಾಯಿತು.

ಹಲವಾರು ಸವಾಲುಗಳು ನಮ್ಮೆದುರು ಇವೆ. ಹಣ-ಮತಾಂತರ-ಭಯೋತ್ಪಾದನೆ ಮೂಲಕ ಹಿಂದೂ ಸಮಾಜ ಛಿದ್ರಗೊಳಿಸಬೇಕೆನ್ನುವ ಮನಸ್ಸುಗಳಿವೆ. ನಮ್ಮ ದೇಶದಲ್ಲಿರುವ ಕ್ರಿಶ್ಚಿಯನ್‌, ಮುಸ್ಲಿಂರೂ ಹೊರಗಿನಿಂದ ಬಂದವರಲ್ಲ. ಆದರೆ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಮೂಡಬೇಕಿದೆ. ಸಂಘಕ್ಕೆ ಯಾರೂ ಶತ್ರುಗಳಿಲ್ಲ. ಜಾತಿ ಪದ್ಧತಿಯೇ ಇಂದು ದೊಡ್ಡ ಸವಾಲಾಗಿದೆ. ಮನೆಯೊಳಗೆ ಪೂಜೆಯ ಪದ್ಧತಿ ಯಾವುದೇ ಇರಲಿ, ಹೊರಗೆ ಬಂದರೆ ನಾವೆಲ್ಲ ಹಿಂದೂಗಳೆಂಬುದು ದೃಢವಾಗಿರಬೇಕು.  -ನರೇಂದ್ರ, ಪ್ರಾಂತ ಪ್ರಚಾರಕರು, ಕರ್ನಾಟಕ ಉತ್ತರ, ಆರ್‌ಎಸ್‌ಎಸ್‌

Advertisement

Udayavani is now on Telegram. Click here to join our channel and stay updated with the latest news.

Next