ನವದೆಹಲಿ: ರಾಜಕೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ತಾತ್ಕಾಲಿಕವಾಗಿ ಗೆಲುವು ಸಿಕ್ಕಿದೆ. ಪ್ರಕರಣ ಸಂಬಂಧ ಸಂಕಷ್ಟಕ್ಕೆ ಸಿಲುಕಿದ್ದ ಆಪ್ನ 20 ಶಾಸಕರ ಅನರ್ಹತೆಯನ್ನು ರದ್ದು ಮಾಡಿ ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆ ದೆಹಲಿ ಸಿಎಂ ಕೇಜ್ರಿವಾಲ್ ಇದನ್ನು “ಸತ್ಯಕ್ಕೆ ಸಂದ ಜಯ’ ಎಂದು ಬಣ್ಣಿಸಿದರೆ, ಆಪ್ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ಹೇಳಿದೆ.
ಶುಕ್ರವಾರ ದೆಹಲಿ ಹೈಕೋರ್ಟ್, 20 ಮಂದಿ ಶಾಸಕರನ್ನು ಅನರ್ಹಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಯನ್ನು ರದ್ದುಗೊಳಿಸಿ ತಲ್ಲದೆ, ಈ ಕುರಿತು ಹೊಸದಾಗಿ ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು. ಶಾಸಕರ ವಿರುದ್ಧದ ಚುನಾವಣಾ ಆಯೋಗದ ಶಿಫಾರಸು ಸರಿಯಲ್ಲ. ಇಲ್ಲಿ ಸಹಜ ನ್ಯಾಯದ ಉಲ್ಲಂಘನೆ ಯಾಗಿದೆ. ಅನರ್ಹಗೊಳಿಸುವ ಮುನ್ನ ಶಾಸಕರ ಮೌಖೀಕ ಹೇಳಿಕೆಯನ್ನು ದಾಖಲಿಸದೇ ಇದ್ದದ್ದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಶಾಸಕರ ಅರ್ಜಿಯನ್ನು ಮತ್ತೆ ಚುನಾವಣಾ ಆಯೋಗಕ್ಕೆ ಕಳುಹಿಸಿತು.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಎಲ್ಲ 20 ಶಾಸಕರಿಗೂ ವಿಧಾನಸಭೆ ಪ್ರವೇಶಿಸಲು ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವಕಾಶ ಕಲ್ಪಿಸಿದ್ದಾರೆ. ಅದರಂತೆ 10 ಶಾಸಕರು ಬಜೆಟ್ ಅಧಿವೇಶನಕ್ಕೆ ಶುಕ್ರವಾರ ಹಾಜರಾಗಿದ್ದು, ಅವರು ಆಗಮಿಸುತ್ತಿದ್ದಂತೆ ಪಕ್ಷದ ಉಳಿದ ಶಾಸಕರು “ಭಾರತ್ ಮಾತಾ ಕೀ ಜೈ’ ಎಂದು ಘೋಷಣೆಗಳನ್ನು ಕೂಗಿದ್ದಾರೆ.
ಇದು ಸತ್ಯಕ್ಕೆ ಸಂದ ಜಯ. ಚುನಾಯಿತ ಜನಪ್ರತಿನಿಧಿಗಳನ್ನು ತಪ್ಪಾಗಿ ಅನರ್ಹಗೊಳಿಸಲಾಗಿತ್ತು. ಈಗ ಹೈಕೋರ್ಟ್ ದೆಹಲಿ ಜನರಿಗೆ ನ್ಯಾಯ ದೊರಕಿಸಿದೆ. ದೆಹಲಿಗರಿಗೆ ಅಭಿನಂದನೆಗಳು.
ಅರವಿಂದ ಕೇಜ್ರಿವಾಲ್, ದೆಹಲಿ ಸಿಎಂ
ಆಪ್ನ 20 ಶಾಸಕರು ಎಲ್ಲ ಸೌಲಭ್ಯಗಳನ್ನೂ ಬಳಸಿ ಕೊಂಡಿದ್ದಾರೆ. ಅವರ ವಿರುದ್ಧದ ನಮ್ಮ ಹೋರಾಟ ಮುಂದುವ ರಿಯಲಿದೆ. ಹೈಕೋರ್ಟ್ ಇದನ್ನು ತಳ್ಳಿಹಾಕಿಲ್ಲ. ಬದಲಿಗೆ ಹೊಸದಾಗಿ ವಿಚಾರಣೆ ನಡೆಸಲು ಹೇಳಿದೆಯಷ್ಟೆ.
ಅಜಯ್ ಮಾಕೆನ್, ಕಾಂಗ್ರೆಸ್ ನಾಯಕ