Advertisement

ವಸತಿ ನಿಗಮ ಮನೆಗಳಿಗೆ ಆಧಾರ್‌ ಕಡ್ಡಾಯ

07:15 AM Jul 21, 2017 | Harsha Rao |

ಬೆಳ್ತಂಗಡಿ: ವಸತಿ ನಿಗಮದಿಂದ ಮನೆ ಪಡೆದ ಫಲಾನುಭವಿಗಳ ಆಧಾರ್‌ ಸಂಖ್ಯೆಯನ್ನು ತತ್‌ಕ್ಷಣವೇ ನಿಗಮದ ವೆಬ್‌ಸೈಟ್‌ಗೆ ಜೋಡಣೆ ಮಾಡುವಂತೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಬುಧವಾರ ಆದೇಶ ನೀಡಿದ್ದಾರೆ. ಇದರ ವ್ಯವಸ್ಥಾಪಕ ನಿರ್ದೇಶಕ ಮನೀಷ್‌ ಮೌದ್ಗಿಲ್‌ ಅವರು ಕಾರಾಗೃಹದಲ್ಲಿನ ರಾಜ ಮರ್ಯಾದೆ ಸೌಲಭ್ಯ ಬಹಿರಂಗಪಡಿಸಿದ ಕಾರಾಗೃಹ ಇಲಾಖೆ ಡಿಐಜಿಯಾಗಿದ್ದ ರೂಪಾ ಮೌದ್ಗಿಲ್‌ ಅವರ ಪತಿ. ನಿಗಮದಿಂದ ಮನೆ ಪಡೆದ ಫಲಾನುಭವಿಯ ಆಧಾರ್‌ ಸಂಖ್ಯೆ ಜೋಡಿಸುವಂತೆ 10 ದಿನಗಳ ಗಡುವು ನೀಡಿ ಆದೇಶ ಹೊರಡಿಸಲಾಗಿದೆ.

Advertisement

ಆದೇಶದಲ್ಲೇನಿದೆ: ವಸತಿ ನಿಗಮದ ಮನೆಗಳು ನಕಲಿ ಫಲಾನುಭವಿಯ ಹೆಸರಿನಲ್ಲಿ ವಿತರಣೆಯಾಗುತ್ತಿರುವುದು ಗೊತ್ತಾಗಿದೆ. ಆದ್ದರಿಂದ ಪ್ರತಿ ಗ್ರಾ.ಪಂ.ಗಳು 2005ರಿಂದ ನಿಗಮದ ವಿವಿಧ ವಸತಿ ಯೋಜನೆಗಳ ಮೂಲಕ ವಸತಿ ಸೌಲಭ್ಯ ಪಡೆದವರ ಆಧಾರ್‌ ಸಂಖ್ಯೆಯನ್ನು ನಿಗಮದ ವೆಬ್‌ಸೈಟಿಗೆ ತುಂಬಿಸಬೇಕು. ಜು. 21ರಿಂದ ಈ ಅಭಿಯಾನ ಆರಂಭಿಸಿ ಜು. 31ರ ಒಳಗೆ ಪೂರ್ಣಗೊಳಿಸ ಬೇಕು. ಒಬ್ಬನೇ ವ್ಯಕ್ತಿಗೆ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಮನೆಗಳು ಮಂಜೂರಾಗಿದ್ದರೆ ಅಂತಹ ವ್ಯಕ್ತಿಯ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸ ಬೇಕು ಎಂದು ಸೂಚಿಸಲಾಗಿದೆ. 

ಮೌದ್ಗಿಲ್‌ ಅವರು ಸ್ವಹಸ್ತಾಕ್ಷರದಲ್ಲಿ ಬರೆದ ಆದೇಶವನ್ನು ರಾಜ್ಯದ ಎಲ್ಲ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಈ ಬಗ್ಗೆ ಜು.22ರಂದು ವೀಡಿಯೊ ಕಾನ್ಫರೆನ್ಸ್‌ ನಡೆಯಲಿದೆ.

ಕ್ರಿಮಿನಲ್‌ ಅಪರಾಧ: ವಸತಿ ನಿಗಮದ ಗಮನಕ್ಕೆ ಬಂದಂತೆ ಒಂದೇ ಗ್ರಾಮದಲ್ಲಿ ಒಬ್ಬನೇ ವ್ಯಕ್ತಿ ಪ್ರತಿ ವರ್ಷ ವಸತಿ ಯೋಜನೆಯ ಮನೆ ಪಡೆದು ಫಲಾನುಭವಿಯಾಗುತ್ತಿದ್ದಾನೆ. ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಇಂತಹ ಪ್ರಕರಣಗಳಿವೆ. ಇದರಿಂದ ಅರ್ಹ ಫಲಾನುಭವಿಗಳಿಗೆ ವಂಚನೆಯಾಗುತ್ತಿದೆ. ಸರಕಾರದ ಯೋಜನೆ ದುರ್ಬಳಕೆಯಾಗುತ್ತಿದೆ. ಹೆಚ್ಚಾಗಿ ಅಧಿಕಾರಸ್ಥರು ಹಾಗೂ ರಾಜಕೀಯ ಪ್ರಭಾವಿಗಳು ತಮ್ಮ ವರ್ಚಸ್ಸಿನ ಮೂಲಕ ಮನೆಗಳ ಹಂಚುವಿಕೆಯಲ್ಲಿ ಮೂಗು ತೂರಿಸುತ್ತಾರೆ. ತನಗೆ ಈ ಗ್ರಾಮದಲ್ಲಿ ಯಾವುದೇ ವಸತಿ ಸೌಕರ್ಯ ಇರುವುದಿಲ್ಲ ಎಂದು ಪ್ರಮಾಣಪತ್ರ ಬರೆದುಕೊಟ್ಟ ಅನಂತರವೇ ಮನೆ ಮಂಜೂರಾಗುವ ಕಾರಣ ಫಲಾನುಭವಿ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಅವಕಾಶ ಇದೆ.

ಯಾವ್ಯಾವ ವಸತಿ ಯೋಜನೆ: ನಿಗಮದ ಮೂಲಕ ಅನುಷ್ಠಾನವಾಗುವ ಎಲ್ಲ ವಸತಿ ಯೋಜನೆಗಳಿಗೂ ಈ ಸುತ್ತೋಲೆ ಅನ್ವಯವಾಗಲಿದೆ. ಗ್ರಾಮೀಣ ಆಶ್ರಯ, ಗ್ರಾಮ ಪಂಚಾಯತ್‌ ವಸತಿ ಯೋಜನೆ , ಇಂದಿರಾ ಆವಾಸ್‌ ಯೋಜನೆ , ಬಸವ ವಸತಿ ಯೋಜನೆಗೆ ಆಧಾರ್‌ ಕಡ್ಡಾಯವಾಗಿದ್ದು, ವಿಶೇಷ ವೃತ್ತಿ ಗುಂಪಿನವರಿಗೆ ವಸತಿ ಯೋಜನೆ, ಸಾಮಾನ್ಯ ಕುಶಲಯಂತ್ರಗಾರರ ವಸತಿ ಯೋಜನೆ, ಕರಕುಶಲಗಾರರ ವಸತಿ ಯೋಜನೆ, ಹಮಾಲರ ವಸತಿ ಯೋಜನೆ, ಬೀಡಿ ಕಾರ್ಮಿಕರ ವಸತಿ ಯೋಜನೆ, ನಾರು ಕುಶಲಗಾರರ ವಸತಿ ಯೋಜನೆ, ಚರ್ಮದ ಕುಶಲಗಾರರ ವಸತಿ ಯೋಜನೆ, ಅಲೆಮಾರಿ ಜನಾಂಗದವರ ವಸತಿ ಯೋಜನೆ, ನೇಕಾರರ ವಸತಿ ಯೋಜನೆ, ಗ್ರಾಮೀಣ ಅಂಬೇಡ್ಕರ್‌ ಯೋಜನೆ, ನವಗ್ರಾಮ ಯೋಜನೆ , ಆರ್ಥಿಕ ಹಿಂದುಳಿದ ವರ್ಗದ ಮನೆಗಳ ಕುರಿತು ಸ್ಪಷ್ಟತೆಯಿಲ್ಲ.

Advertisement

ಬೆಳಕಿಗೆ ಬಂದ ಬಗೆ: 6 ತಿಂಗಳ ಹಿಂದೆ ವಸತಿ ಪೂರ್ಣಗೊಳಿಸಿದ ಪ್ರತಿ ಫಲಾನುಭವಿಗೆ ನಿಗಮದ ಮುಖ್ಯಸ್ಥರಿಂದ ಧನ್ಯವಾದ ಪತ್ರ ಬಂದಿತ್ತು. ನಿರ್ಮಾಣ ಹಂತದಲ್ಲಿರುವವರಿಗೆ ಮಂಜೂರಾತಿ ವಿವರ ಹಾಗೂ ಶೀಘ್ರ ಕಾಮಗಾರಿ ಮುಗಿಸುವಂತೆ ಪತ್ರ ಬರೆಯಲಾಗಿತ್ತು. ಈ ಸಂದರ್ಭ ಒಂದೇ ಗ್ರಾಮದಲ್ಲಿ ಒಬ್ಬನೇ ವ್ಯಕ್ತಿಗೆ ಹೆಚ್ಚುವರಿ ಮನೆಗಳು ಮಂಜೂರಾಗಿರುವುದು ಬೆಳಕಿಗೆ ಬಂದಿರುವ ಸಾಧ್ಯತೆಯಿದೆ.

ನಿಯಮ
ಅರ್ಹ ವ್ಯಕ್ತಿ ಅರ್ಜಿ ಸಲ್ಲಿಸಿದ ಬಳಿಕ ವಸತಿ ನಿಗಮದ ಕಾಯ್ದೆಯಂತೆ ಮನೆ ಮಂಜೂರಾದಾಗ ಸಂಬಂಧ‌ಪಟ್ಟ ಆಡಳಿತದವರು ಫಲಾನುಭವಿಗೆ ನಮೂನೆ 9ರಲ್ಲಿ ಮಂಜೂರಾತಿ ಪತ್ರ ನೀಡಬೇಕು. ಮಂಜೂರಾತಿ ಪತ್ರ ದೊರೆತು 90 ದಿನಗಳ ಒಳಗೆ ಫಲಾನುಭವಿ ಪಂಚಾಂಗ ಹಾಕಬೇಕು. ಹೀಗೆ 90 ದಿನಗಳ ಒಳಗೆ ಮನೆಗೆ ಅಡಿಪಾಯ ಹಾಕದಿದ್ದರೆ ಆತನಿಗೆ ಮಂಜೂರಾದ ಮನೆ ರದ್ದಾಗುತ್ತದೆ. ಆತನಿಗೆ ಮನೆಯ ಆವಶ್ಯಕತೆ ಇಲ್ಲ ಎಂದೇ ತೀರ್ಮಾನಿಸಲಾಗುತ್ತದೆ.

ಇಕ್ಕಟ್ಟಿನಲ್ಲಿ  ಪಂಚಾಯತ್‌ ಅಧಿಕಾರಿಗಳು
ರಾಜಕಾರಣಿಗಳ ಒತ್ತಡದಿಂದ ಮನೆ ಮಂಜೂರು ಮಾಡಿಸಿಕೊಂಡವರು ಹಾಗೂ ಮಂಜೂರು ಮಾಡಿದ ಪಂಚಾಯತ್‌ ಅಧಿಕಾರಿಗಳಿಗೆ ಈಗ ಚಳಿ ಕಾಡಲಿದೆ. ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ಕಡ್ಡಾಯ ಎಂದು ಆದೇಶದಲ್ಲಿರುವ ಕಾರಣ ಅನೇಕರು ಸಿಕ್ಕಿಬೀಳುವ ಭಯದಲ್ಲಿದ್ದಾರೆ. ಏಕೆಂದರೆ ಒಂದು ತಾಲೂಕಿಗೆ 5-6 ಸಾವಿರ ಮನೆಗಳು ಪ್ರತಿ ವರ್ಷ ಮಂಜೂ ರಾಗುತ್ತವೆ. ತಾಲೂಕಿನಲ್ಲಿ  60 ಸಾವಿರ ಮನೆ ಗಳಿದ್ದು 25 ಸಾವಿರ ವಸತಿ ರಹಿತರಿದ್ದರೆ 5 ಸಾವಿರದಂತೆ ಮನೆಗಳ ಮಂಜೂರಾತಿಯಾದಾಗ 5 ವರ್ಷಗಳಲ್ಲಿ ಹೊಸ ಫಲಾನುಭವಿಗಳು ಮಾತ್ರ ಉಳಿಯಬೇಕು. ಆದರೆ ಮನೆರಹಿತರ ಸಂಖ್ಯೆ ದೊಡ್ಡದೇ ಇರುತ್ತದೆ. ಆದ್ದರಿಂದ ನಿಗಮ ಈ ಕ್ರಮಕ್ಕೆ ಮುಂದಾಗಿದೆ. ಇದರ ನಡುವೆ ರಾಜಕಾರಣಿಗಳ ಬೆಂಬಲಿಗರಿಗೆ ತೊಂದರೆಯಾದರೆ ಈ ಅಧಿಕಾರಿಯೂ ಎತ್ತಂಗಡಿಯಾದರೆ ಅಚ್ಚರಿಯಿಲ್ಲ.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next