ಬೆಳ್ತಂಗಡಿ: ಚಿಕ್ಕಮಗಳೂರು ಜಿಲ್ಲೆಯ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ಲಾಳರಾಯ ದುರ್ಗ ಹಾಗೂ ಬೆಳ್ತಂಗಡಿ ತಾಲೂಕಿನ ಬಂಡಾಜೆ ಫಾಲ್ಸ್ ಚಾರಣಕ್ಕೆ ತೆರಳಿದ್ದ 10 ಮಂದಿ ಯುವಕರ ಪೈಕಿ ಓರ್ವ ನಾಪತ್ತೆಯಾಗಿದ್ದ ಘಟನೆ ಫೆ. 25ರ ರಾತ್ರಿ ನಡೆದಿತ್ತು.
ಕೆಎಂಸಿ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಅಭ್ಯಾಸ ಮಾಡುತ್ತಿರುವ ಧನುಷ್ ನಾಪತ್ತೆಯಾದ ಯುವಕ.
ಫೆ. 25ರಂದು ಬಂಡಾಜೆ ಫಾಲ್ಸ್ ನೋಡಲು ಬಂದಿದ್ದ ಧನುಷ್ ಹಾಗೂ ಆತನ 10 ಮಂದಿ ಗೆಳೆಯರು ಚಾರಣಕ್ಕೆ ತೆರಳಿದ್ದರು. ಧನುಷ್ ನಾಪತ್ತೆಯಾದಾಗ ಸ್ನೇಹಿತ ಆದಿತ್ಯ ಸಮೀಪದ ಸುಂಕ ಸಾಲೆ ಗ್ರಾಮಕ್ಕೆ ಬಂದು 112 ಪೊಲೀಸ್ ವಾಹನಕ್ಕೆ ಕರೆ ಮಾಡಿದ ವಿಚಾರ ತಿಳಿಸಿದ್ದರು.
ಪೊಲೀಸರು ಮೊಬೈಲ್ ಟವರ್ ಲೊಕೇಶನ್ನಡಿ ಪರಿಶೀಲಿಸಿದಾಗ ನಾಪತ್ತೆಯಾಗಿದ್ದ ಧನುಷ್ ಸುಮಾರು 8 ಕಿ.ಮೀ. ಕಾಡಿನ ಮಧ್ಯದಲ್ಲಿ ಇರುವುದು ಗೊತ್ತಾಗಿತ್ತು. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಸಂಪರ್ಕ ಅಸಾಧ್ಯವಾಗಿತ್ತು.
ತತ್ಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಮತ್ತು ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಅರಣ್ಯದೊಳಕ್ಕೆ ತೆರಳಿ ಕರೆ ಮಾಡಿದ್ದ ಹುಡುಗರನ್ನು ವಿಚಾರಿಸಿ ಅವರು ನೀಡಿದ ಮಾಹಿತಿಯ ಅನುಸಾರ ತಡರಾತ್ರಿಯೇ ಹುಡುಕಾಟ ನಡೆಸಿದರು. ರಾತ್ರಿ 3.30ರ ವೇಳೆಗೆ ಅರಣ್ಯದೊಳಗೆ ಯುವಕನನ್ನು ಪತ್ತೆಹಚ್ಚಲಾಯಿತು.
ಆತನ ಪೋಷಕರಿಗೆ ಕರೆ ಮಾಡಿ ಮಾತನಾಡಿಸಿದ ಬಳಿಕ ಎಲ್ಲರನ್ನೂ ಕೊಟ್ಟಿಗೆಹಾರಕ್ಕೆ ಕರೆದುಕೊಂಡು ಬಂದು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬಂದಿ ಮೆಹಬೂಬ್ ಸಾಧನಿ ಶಂಕರ್ ಬೋವಿ ಹಾಗೂ ಸ್ಥಳೀಯರು ಇದ್ದರು.