Advertisement

ದಿಲೀಪ್ ಸಿಂಗ್ ರಾಣಾ ಎಂಬ ದೈತ್ಯ ಕುಸ್ತಿಪಟುವಿನ ಯಶಸ್ವಿ ಪಯಣ!

06:20 PM Jul 15, 2021 | Team Udayavani |
ಸುಮಾರು ಆರು ವರ್ಷಗಳ ಕಾಲ ಪೊಲೀಸ್ ಕೆಲಸ ಮಾಡಿದ ದಿಲೀಪ್ ಸಿಂಗ್ ರಾಣಾ 1999ರಲ್ಲಿ ವೃತ್ತಿಪರ ಕುಸ್ತಿ ಅಖಾಡದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮೇರಿಕಾಗೆ ಹಾರುತ್ತಾನೆ. ಆಲ್ ಪ್ರೋ ರೆಸ್ಲಿಂಗ್ ಕ್ಯಾಂಪ್ ನಲ್ಲಿ ತರಬೇತಿ ಪಡೆಯುತ್ತಾನೆ. ಅಲ್ಲಿ ದಿಲೀಪ್ ಸಿಂಗ್ ರಾಣಾ, ಜೈಂಟ್ ಸಿಂಗ್ ಆಗಿ ಬದಲಾಗುತ್ತಾನೆ. 2000ನೇ ಇಸವಿಯ ಅಕ್ಟೋಬರ್ ಏಳರಂದು ಎಪಿ ಡಬ್ಲ್ಯೂ ಗೆ ವೃತ್ತಿಪರ ರೆಸ್ಲಿಂಗ್‌ ಪಟುವಾಗಿ ಜೈಂಟ್ ಸಿಂಗ್ ಕಣಕ್ಕಿಳಿಯುತ್ತಾನೆ. 2001ರ ಮೇ 21ರಂದು ಸಹವರ್ತಿ ಬ್ರೈನ್ ಓಎನ್ ಜಿ ಅವರ ಜೊತೆ ತರಬೇತಿ ಮಾಡುವ ವೇಳೆ ಆದ ಒಂದು ಯಡವಟ್ಟಿನಿಂದ ಬ್ರೈನ್ ರ ಪ್ರಾಣಪಕ್ಷಿಯೇ ಹಾರಿಹೋಗಿತ್ತು.
Now pay only for what you want!
This is Premium Content
Click to unlock
Pay with

ಭಾರತದಲ್ಲಿ ಕ್ರಿಕೆಟ್, ಇತ್ತೀಚೆಗೆ ಕಬಡ್ಡಿ ಬಿಟ್ಟರೆ ಅತೀ ಹೆಚ್ಚು ಜನಪ್ರಿಯ ಕ್ರೀಡೆಯೆಂದರೆ ವಿಶ್ವ ಮನೋರಂಜನಾ ಕುಸ್ತಿ, ಅಂದರೆ ಡಬ್ಲ್ಯೂ ಡಬ್ಲ್ಯೂ ಇ. ಅಮೆರಿಕಾದ ಸಂಸ್ಥೆಯೊಂದು ನಡೆಸುವ ಈ ಆಟ ಹಲವು ದಶಕಗಳಿಂದ ಭಾರತದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿದ್ದರೂ ಇದರಲ್ಲಿ ಭಾರತದ ಕ್ರೀಡಾಪಟುಗಳು ಪಾಲ್ಗೊಂಡಿದ್ದು ಕಡಿಮೆಯೇ. 1972ರ ಆಗಸ್ಟ್ 27ರಂದು ಹಿಮಾಚಲ ಪ್ರದೇಶದ ಧಿರೈನಾ ಎಂಬ ಊರಿನಲ್ಲಿ ದಿಲೀಪ್ ಸಿಂಗ್ ರಾಣಾ ಎಂಬಾತನ ಜನನ. ತಂದೆ ಜ್ವಾಲಾ ರಾಂ, ತಾಯಿ ತಾಂಡಿ ದೇವಿ. ದಿಲೀಪ್ ಸೇರಿ ಏಳು ಮಂದಿ ಮಕ್ಕಳ ತುಂಬು ಸಂಸಾರ. ಹಾಗಾಗಿ ಮನೆಯಲ್ಲಿ ಮಕ್ಕಳಂತೆ ಕಷ್ಟವೂ ತುಂಬಿ ತುಳುಕುತ್ತಿತ್ತು.

Advertisement

ಬಾಲಕ ದಿಲೀಪನಿಗೆ ವಿದ್ಯೆ ಗುಡ್ಡ ಹತ್ತಿತ್ತು. ಹಾಗಾಗಿ ಶಾಲೆಯ ಮೆಟ್ಟಿಲು ಈತನಿಗೆ ತುಸು ಎತ್ತರವಾಗಿಯೇ ಕಂಡಿತ್ತು. ಮನೆಯ ಬಡತನದಿಂದಾಗಿ ಸಣ್ಣ ಪ್ರಾಯದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ. ಹೀಗಾಗಿ ರಸ್ತೆ ಬದಿಯ ಕೂಲಿ ಕೆಲಸಗಳನ್ನು ದಿಲೀಪ್ ಮಾಡತೊಡಗಿದ. ಕೆಲ ಸಮಯ ಹೀಗೆ ಕಳೆದವನಿಗೆ ಪರಿಚಯಸ್ಥರ ನೆರವಿನಿಂದ ಶಿಮ್ಲಾದಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಸಿಕ್ಕಿತು.

ದಿಲೀಪ್ ಸಿಂಗ್ ರಾಣಾನದ್ದು 7.1 ಅಡಿ ಉದ್ದದ ಕಟ್ಟುಮಸ್ತಾದ ಜೀವ. ಸದೃಢ ಮೈಕಟ್ಟು. ಶಿಮ್ಲಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ದಿಲೀಪ್ ಒಂದು ದಿನ ಪಂಜಾಬ್ ಪೊಲೀಸ್ ಮುಖ್ಯಸ್ಥರಾಗಿದ್ದ ಮಹಲ್ ಸಿಂಗ್ ಮುಲ್ಲರ್ ಕಣ್ಣಿಗೆ ಬೀಳುತ್ತಾನೆ. ಅವರ ಸಹಾಯದಿಂದ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಗಳಿಸುವ ದಿಲೀಪ್ ಅಲ್ಲಿ ಬಿಡುವಿನ ವೇಳೆಯಲ್ಲಿ ಜಿಮ್ ಗೆ ಹೋಗಲು ಪ್ರಾರಂಭಿಸುತ್ತಾನೆ. ಹೀಗೆ 1992ರಲ್ಲಿ ಸಹೋದರರೊಂದಿಗೆ ಪೊಲೀಸ್ ಕೆಲಸಕ್ಕಾಗಿ ಜಲಂಧರ್ ಗೆ ಬಂದ ದಿಲೀಪ್ ಜಿಮ್ ನಲ್ಲಿ ಕುಸ್ತಿ ಅಭ್ಯಾಸ ಮಾಡಲಾರಂಭಿಸಿದ .

ಸುಮಾರು ಆರು ವರ್ಷಗಳ ಕಾಲ ಪೊಲೀಸ್ ಕೆಲಸ ಮಾಡಿದ ದಿಲೀಪ್ ಸಿಂಗ್ ರಾಣಾ 1999ರಲ್ಲಿ ವೃತ್ತಿಪರ ಕುಸ್ತಿ ಅಖಾಡದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮೇರಿಕಾಗೆ ಹಾರುತ್ತಾನೆ. ಆಲ್ ಪ್ರೋ ರೆಸ್ಲಿಂಗ್ ಕ್ಯಾಂಪ್ ನಲ್ಲಿ ತರಬೇತಿ ಪಡೆಯುತ್ತಾನೆ. ಅಲ್ಲಿ ದಿಲೀಪ್ ಸಿಂಗ್ ರಾಣಾ, ಜೈಂಟ್ ಸಿಂಗ್ ಆಗಿ ಬದಲಾಗುತ್ತಾನೆ. 2000ನೇ ಇಸವಿಯ ಅಕ್ಟೋಬರ್ ಏಳರಂದು ಎಪಿ ಡಬ್ಲ್ಯೂ ಗೆ ವೃತ್ತಿಪರ ರೆಸ್ಲಿಂಗ್‌ ಪಟುವಾಗಿ ಜೈಂಟ್ ಸಿಂಗ್ ಕಣಕ್ಕಿಳಿಯುತ್ತಾನೆ. 2001ರ ಮೇ 21ರಂದು ಸಹವರ್ತಿ ಬ್ರೈನ್ ಓಎನ್ ಜಿ ಅವರ ಜೊತೆ ತರಬೇತಿ ಮಾಡುವ ವೇಳೆ ಆದ ಒಂದು ಯಡವಟ್ಟಿನಿಂದ ಬ್ರೈನ್ ರ ಪ್ರಾಣಪಕ್ಷಿಯೇ ಹಾರಿಹೋಗಿತ್ತು. ಹೀಗೆ ದಿಲೀಪ್ ಸಿಂಗ್ ನ ಆರಂಭವೇ ಹಲವು ಕಹಿ ಘಟನೆಗಳಿಗೆ ಸಾಕ್ಷಿಯಾಯಿತು.
2001ರಲ್ಲಿ ವಿಶ್ವ ಚಾಂಪಿಯನ್ ಶಿಪ್ ರೆಸ್ಲಿಂಗ್ (ಡಬ್ಲ್ಯೂಸಿಡಬ್ಲ್ಯೂ) ಸೇರಿದ ಜೈಂಟ್ ದಿಲೀಪ್ ಯಾನೆ ಜೈಂಟ್ ಸಿಂಗ್, ನಂತರ ಜಪಾನಿನ ನ್ಯೂ ಜಪಾನ್ ಪ್ರೋ ರೆಸ್ಲಿಂಗ್ ನಲ್ಲೂ ಕುಸ್ತಿ ಆಡಿದ್ದರು.

2006ರ ಜನವರಿಯಲ್ಲಿ ಡಬ್ಲ್ಯೂಡಬ್ಲ್ಯೂಇ ಜೊತೆ ಒಪ್ಪಂದ ಮಾಡಿಕೊಂಡ ದಿಲೀಪ್ ರಾಣಾರನ್ನು ಸಂಸ್ಥೆ ನಿಜ ಹೆಸರಿನಿಂದಲೇ ‘ಡೀಪ್ ಸೌತ್ ರೆಸ್ಲಿಂಗ್’ ಗೆ ಕಳುಹಿಸುತ್ತದೆ. ಅಲ್ಲಿ ತರಬೇತಿ ಮುಗಿಸಿದ ದಿಲೀಪ್ ನಂತರ ಡಬ್ಲ್ಯೂಡಬ್ಲ್ಯೂಇ ಮುಖ್ಯಸುತ್ತಿಗೆ ಬರಲು ಸಿದ್ದವಾಗುತ್ತಾನೆ. ಜೈಂಟ್ ಸಿಂಗ್ ಎಂದು ಬದಲಾಗಿದ್ದ ದಿಲೀಪ್ ರಾಣಾಗೆ ಡಬ್ಲ್ಯೂಡಬ್ಲ್ಯೂಇ ದಲ್ಲಿ ಹೊಸ ಹೆಸರಿಡಲು ಸಂಸ್ಥೆ ನಿರ್ಧರಿಸಿ ‘ದಿ ಗ್ರೇಟ್ ಖಲಿ’ ಎಂದು ನಾಮಕರಣ ಮಾಡಿತ್ತು. 2006ರ ಎಪ್ರಿಲ್ ನಲ್ಲಿ ಸ್ಮ್ಯಾಕ್ ಡೌನ್ ಗೆ ಕಾಲಿಟ್ಟ ಖಲಿ, ರಸ್ಲಿಂಗ್ ನ ಡೆಡ್ ಮ್ಯಾನ್ ಖ್ಯಾತಿಯ ಅಂಡರ್ ಟೇಕರ್ ರನ್ನು ಕೇವಲ ಐದು ನಿಮಿಷದಲ್ಲಿ ಸೋಲಿಸಿಬಿಟ್ಟಿದ್ದರು. ಆ ಮೂಲಕ ಡಬ್ಲ್ಯೂಡಬ್ಲ್ಯೂಇ ಅಂಗಳದಲ್ಲಿ ಭಾರತದ ಪ್ರವೇಶವನ್ನು ದೊಡ್ಡದಾಗಿಯೇ ಸಾರಿದ್ದರು.

Advertisement

ನಂತರದ ದಿನಗಳಲ್ಲಿ ಜಾನ್ ಸೀನಾ, ಶಾನ್ ಮೈಕೆಲ್, ಎಡ್ಜ್, ಕೇನ್ ಮುಂತಾದವರ ಜೊತೆ ಸೆಣಸಾಡಿದ್ದ ಈ ಆಜಾನುಬಾಹು ಡಬ್ಲ್ಯೂಡಬ್ಲ್ಯೂಇ ವೇದಿಕೆಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. 2007ರಲ್ಲಿ ವಿಶ್ವ ಚಾಂಪಿಯನ್ ಕೂಡಾ ಆಗಿದ್ದರು. ನಂತರದ ದಿನಗಳಲ್ಲಿ ಖಲಿ ಸ್ವಲ್ಪ ಮಟ್ಟಿಗೆ ಪ್ಲೇ ಬಾಯ್ ಅವತಾರದಲ್ಲಿ ಕಂಡು ಬಂದರು. ಡಬ್ಲ್ಯೂಡಬ್ಲ್ಯೂಇ ನಲ್ಲಿ ಖಲಿ ಕಿಸ್ ಕ್ಯಾಮ್ ಎಂಬ ಕಾರ್ಯಕ್ರಮ ಮಾಡಿದ ಖಲಿ ಸಭೆಯ ನಡುವಿನಿಂದ ಯಾರಾದರೂ ಯುವತಿಯನ್ನು ಕರೆದು ಚುಂಬಿಸುತ್ತಿದ್ದರು.

ನಂತರದ ದಿನಗಳಲ್ಲಿ ತನ್ನ ಆಟದಲ್ಲಿ ಮೊದಲಿನ ಗೈರತ್ತನ್ನು ಖಲಿ ಮರೆತಂತಿತ್ತು. ದೊಡ್ಡ ದೊಡ್ಡ ಪಂದ್ಯಗಳಲ್ಲಿ ಅವಕಾಶವೂ ಸಿಗಲಿಲ್ಲ. ಹೀಗಾಗಿ ಖಲಿ 2014ರಲ್ಲಿ ಡಬ್ಲ್ಯೂಡಬ್ಲ್ಯೂಇ ಒಪ್ಪಂದ ಕೊನೆಗೊಳಿಸಿದರು. ನಂತರ ಭಾರತಕ್ಕೆ ಮರಳಿದ ಖಲಿ 2015ರಲ್ಲಿ ಜಲಂಧರ್ ನಲ್ಲಿ ತನ್ನದೇ ಒಂದು ತರಬೇತಿ ಸಂಸ್ಥೆ ಆರಂಭಿಸಿ ‘ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್ಟೈನ್ ಮೆಂಟ್’ ಎಂದು ಹೆಸರಿಟ್ಟರು. ಆದರೆ 2017ರಲ್ಲಿ ಮತ್ತೆ ಡಬ್ಲ್ಯೂಡಬ್ಲ್ಯೂಇ ಗೆ ಕಾಲಿಟ್ಟ ಗ್ರೇಟ್ ಖಲಿ ರಾಂಡಿ ಆರ್ಟನ್ ವಿರುದ್ದ ಪ್ರಸಿದ್ದ ಪಂಜಾಬ್ ಪ್ರಿಸನ್ ಪಂದ್ಯವಾಡಿದ್ದರು. ಪಂಜಾಬಿ ಚಿತ್ರ ನಟಿ ಹರ್ಮಿಂದರ್ ಕೌರ್ ಅವರನ್ನು ವಿವಾಹವಾಗಿರುವ ಖಲಿಗೆ ಅವ್ಲೀನ್ ಎಂಬ ಮಗಳಿದ್ದಾಳೆ. ಸದ್ಯ ಅಮೇರಿಕಾದ ನಾಗರಿಕನಾಗಿರುವ ದಿಲೀಪ್ ರಾಣಾ ಯಾನೆ ದಿ ಗ್ರೇಟ್ ಖಲಿ ಡಬ್ಲ್ಯೂಡಬ್ಲ್ಯೂಇ ಅಂಗಳದಲ್ಲಿ ಮೆರೆದಾಡಿದ ಹೆಮ್ಮೆಯ ಭಾರತೀಯ ಎನ್ನುವುದು ಸುಳ್ಳಲ್ಲ.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.