Advertisement

ಕಾಲು ಸ್ವಾಧೀನ ಇಲ್ಲದಿದ್ದರೂ ಯಶಸ್ವಿ ಕೃಷಿ ಹೆಜ್ಜೆ

02:41 PM Jul 05, 2022 | Team Udayavani |

ಹುಬ್ಬಳ್ಳಿ: ಹುಟ್ಟಿನಿಂದಲೇ ಇವರು ಅಂಗವಿಕಲರು. ಸಣ್ಣಪುಟ್ಟ ಕೆಲಸ, ಇದ್ದ ಜಮೀನು ಬಾಡಿಗೆ ಪಡೆದು ಉಳುಮೆ ಮಾಡುತ್ತಿದ್ದ ಇವರು ಕೃಷಿಯಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. ಒಂದು ಕಾಲು ಸ್ವಾಧೀನ ಇಲ್ಲದಿದ್ದರೂ ʼದುಡಿಮೆಯೇ ದುಡ್ಡಿನ ತಾಯಿ’ ಎಂದು ಮೈಮುರಿದು ದುಡಿಯುವ ಈ ವ್ಯಕ್ತಿ ಸುತ್ತಲಿನ ಯುವಕರಿಗೆ ಮಾದರಿಯಾಗಿದ್ದಾರೆ.

Advertisement

ಇವರೇ ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಮಹದೇವಪ್ಪ ಭಾಗಣ್ಣವರ. ಸುತ್ತಲಿನ ಗ್ರಾಮಸ್ಥರಿಗೆ ಇವರು ಚಿರಪರಿಚಿತರು. ಎಂತಹ ಕುದುರೆಯನ್ನಾದರೂ ಪಳಗಿಸಬಲ್ಲ ಛಾತಿ ಇವರದ್ದು. ಹುಟ್ಟಿನಿಂದಲೇ ಕುದುರೆಯ ಒಡನಾಡಿಯಾಗಿರುವ ಇವರ ಕೃಷಿ ಬದುಕಿಗೆ ಕುದುರೆಯೇ ದೊಡ್ಡ ಆಸರೆ. ತಮ್ಮ ಜಮೀನು ಅಲ್ಲದೆ ಇತರರ ಜಮೀನು ಲಾವಣಿ ಪಡೆದಿದ್ದಾರೆ. ಬಿಎ ಪದವೀಧರರಾಗಿರುವ ಇವರು ಸರಕಾರಿ ಕೆಲಸಕ್ಕೆ ಅಲೆದಾಡಿ ಸಾಕಾಗಿ ಕೊನೆಯಲ್ಲಿ ಕೃಷಿಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಕೃಷಿ ಜತೆ ಟಗರು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ.

ಅನಿವಾರ್ಯತೆ ಕಟ್ಟಿದ ಬದುಕು: ಕಲಿತಿದ್ದು ವ್ಯರ್ಥವಾಗಬಾರದೆಂಬ ಕಾರಣಕ್ಕೆ ಗ್ರಾಮದಲ್ಲಿ ಬ್ಯಾಂಕ್‌ ಮಿತ್ರ ಕೆಲಸ ಮಾಡುತ್ತಿದ್ದಾರೆ. ಅಂಗವಿಕಲ ಎನ್ನುವ ಕಾರಣಕ್ಕೆ ಕೃಷಿ ಭೂಮಿಯಲ್ಲಿ ಕೆಲಸ ಕಷ್ಟಸಾಧ್ಯವೆಂದು ಬಾಡಿಗೆ ಎತ್ತು, ಕೂಲಿ ನೀಡಿ ಕೃಷಿ ಚಟುವಟಿಕೆ ಮಾಡಿಸುತ್ತಿದ್ದರು. ಆದರೆ ವರ್ಷದಿಂದ ವರ್ಷಕ್ಕೆ ಬಾಡಿಗೆ ತುಟ್ಟಿ, ಸಕಾಲಕ್ಕೆ ಕೂಲಿ, ಎತ್ತುಗಳು ಸಿಗುತ್ತಿರಲಿಲ್ಲ. ಬರುವ ಆದಾಯದಲ್ಲಿ ಅರ್ಧದಷ್ಟು ಬಾಡಿಗೆ ನೀಡಬೇಕು. ಅದಲ್ಲದೇ ಅಕಾಲಿಕ ಮಳೆ, ಬರದಿಂದಾಗಿ ಕೆಲವೊಮ್ಮೆ ಬಾಡಿಗೆ ಹಣ ಕೂಡ ಮೈಮೇಲೆ ಬರುತ್ತಿತ್ತು. ಹೀಗಾಗಿ ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಎಲ್ಲಾ ಉಳುಮೆ ಕಾರ್ಯವನ್ನು ತಾವೇ ಮಾಡಬೇಕೆಂದು ನಿರ್ಧರಿಸಿ ತೊಡಗಿದ್ದರ ಫಲವಾಗಿ ಹಲವು ಏಳುಬೀಳುಗಳ ನಡುವೆಯೂ ಯಶಸ್ವಿಯಾಗಿದ್ದಾರೆ. ತಮ್ಮ 3.5 ಎಕರೆ, ಪತ್ನಿಯ 2 ಎಕರೆ, ಗ್ರಾಮಸ್ಥರ 4 ಎಕರೆ ಜಮೀನು ಲಾವಣಿ ಪಡೆದು ಒಕ್ಕಲುತನ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 2 ಎಕರೆ ಉದ್ದು, 2 ಎಕರೆ ಹೆಸರು, ಉಳಿದ ಭೂಮಿಯಲ್ಲಿ ಹತ್ತಿ ಬಿತ್ತಿದ್ದಾರೆ.

ಎತ್ತುಗಳ ಬದಲು ಕುದುರೆ: ತಾವೇ ಕೃಷಿ ಕಾರ್ಯ ಮಾಡಬೇಕೆಂದು ಯೋಚಿಸಿದಾಗ ಎತ್ತುಗಳನ್ನು ಕೊಳ್ಳುವುದು, ಅವುಗಳ ನಿರ್ವಹಣೆ ಖರ್ಚು ವೆಚ್ಚಗಳು ಹೆಚ್ಚು. ಮೇಲಾಗಿ ಒಂದು ಕಾಲು ಸ್ವಾಧೀನವಿಲ್ಲದ ಕಾರಣ ಅವುಗಳ ಮೂಲಕ ಕೃಷಿ ಕಾರ್ಯ ಅಸಾಧ್ಯವೆಂದು ಕುದುರೆ ಮೊರೆ ಹೋಗಿದ್ದಾರೆ. ಹುಟ್ಟಿನಿಂದಲೂ ಕುದುರೆಯ ಸ್ವಭಾವ ಅರಿತ ಮಹಾದೇವ ಕುದುರೆಯ ಮೂಲಕವೇ ಕೃಷಿ ಕಾರ್ಯ ನಡೆಸುತ್ತಿದ್ದಾರೆ. ಬಿತ್ತನೆ ಕಾರ್ಯವೊಂದನ್ನು ಬಿಟ್ಟರೆ ಕುಂಟೆ, ರಂಟೆ, ಸಣ್ಣ ಕುಂಟೆ, ಔಷಧಿ ಸಿಂಪರಣೆ, ಗೊಬ್ಬರ, ಬೆಳೆ ಸಾಗಾಟ ಹೀಗೆ ಪ್ರತಿಯೊಂದು ಕಾರ್ಯವನ್ನು ಕುದುರೆ ಮೂಲಕವೇ ಮಾಡುತ್ತಿದ್ದಾರೆ. ಕೃಷಿ ಕಾರ್ಯಕ್ಕಾಗಿ ಒಂದು ಕುದುರೆ ಬೇಕಾದಾಗ ಬೆಳಗಾವಿ ಕಡೆಯಿಂದ ಬಂದಿದ್ದ ಕುರಿಗಾಹಿಗಳಿಂದ ಒಂದು ಕುದುರೆ ಪಡೆದಿದ್ದರು. ಇದೀಗ ಎರಡು ಕುದುರೆಗಳಿದ್ದು, ಎರಡನ್ನು ಕೃಷಿ ಕಾರ್ಯಕ್ಕೆ ಬೇಕಾದ ರೀತಿಯಲ್ಲಿ ಸಜ್ಜುಗೊಳಿಸಿದ್ದಾರೆ.

Advertisement

ಕುದುರೆ ಹೂಡಲು ಬೇಕಾದ ಮಾದರಿಯಲ್ಲಿ ಕೃಷಿ ಪರಿಕರಗಳನ್ನು ಸ್ನೇಹಿತರೊಂದಿಗೆ ಸಿದ್ಧಪಡಿಸಿಕೊಂಡು ಯಶಸ್ವಿಯಾಗಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಹೊಲದಲ್ಲಿ ಓಡಾಡಿಕೊಂಡು ಕೆಲಸ ಮಾಡಲು ಆಗಲ್ಲ ಎನ್ನುವ ಕಾರಣಕ್ಕೆ ಕುಂಟೆ, ರಂಟೆ ಹೀಗೆ ಪ್ರತಿಯೊಂದು ಸಲಕರಣೆಗಳನ್ನು ಚಕ್ಕಡಿ ಮಾದರಿಯಲ್ಲಿ ಸಿದ್ಧಪಡಿಸಿಕೊಂಡಿದ್ದಾರೆ. ಇದರಲ್ಲಿ ಕುಳಿತುಕೊಂಡು ಎಲ್ಲಾ ಕಾರ್ಯ ಮಾಡುತ್ತಾರೆ. ಈ ಚಕ್ಕಡಿ ಕುಂಟೆ, ರಂಟೆ, ಸಣ್ಣ ಕುಂಟೆಗೆ ಹೊಂದಾಣಿಕೆಯಾಗವಂತೆ ಕೆಲಸ ತಂತ್ರಗಳನ್ನು ಅಳವಡಿಸಿದ್ದಾರೆ. ಬೆಳೆ ಸಾಲುಗಳ ಆಧಾರದ ಮೇಲೆ ಗಾಲಿಗಳನ್ನು ಅಗಲ ಹಾಗೂ ಕಿರಿದಾಗಿ ಮಾಡಿಕೊಳ್ಳಬಹುದಾಗಿದೆ.

ಹೆಗಲಾಗಿರುವ ಅರ್ಧಾಂಗಿ

ಪತ್ನಿ ದೀಪಾ ಪ್ರತಿಯೊಂದು ಕಾರ್ಯಕ್ಕೂ ಆಸರೆಯಾಗಿದ್ದಾರೆ. ಪತಿ ಸಂಪೂರ್ಣ ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದಂತೆ ಇವರು ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಪತಿ ಕುದುರೆ ಮೇಲೆ ಕುಳಿತು ಒಂದು ಪಂಪ್‌ ಮೂಲಕ ಔಷಧಿ ಸಿಂಪರಿಸಿದರೆ, ಪತ್ನಿ ನಡೆದುಕೊಂಡು ಇನ್ನೊಂದು ಪಂಪ್‌ ಮೂಲಕ ಔಷಧಿ ಸಿಂಪರಿಸುತ್ತಾರೆ. ಪ್ರತಿಯೊಂದು ಕೃಷಿ ಕಾರ್ಯಕ್ಕೂ ಪತ್ನಿ ಹೆಗಲಾಗಿ ದುಡಿಯುತ್ತಾರೆ. ಮನೆಯಲ್ಲಿ ತಾಯಿ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಕೈ ಜೋಡಿಸುತ್ತಾರೆ. ಹೀಗಾಗಿ ಕೃಷಿ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಮಹದೇವಪ್ಪ.

ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಇದ್ದ ಜಮೀನಿನಲ್ಲಿ ಬಾಡಿಗೆ ಎತ್ತು, ಕೂಲಿಗಳ ಮೂಲಕ ಕೆಲಸ ಮಾಡಿಸುತ್ತಿದ್ದೆವು. ಬಾಡಿಗೆ ಹೆಚ್ಚು, ಸಕಾಲಕ್ಕೆ ಸಿಗುತ್ತಿರಲಿಲ್ಲ. ಇದರಿಂದ ಬರುವ ಆದಾಯ ಬಾಡಿಗೆಗೆ ಕೊಡಬೇಕಾಗುತ್ತದೆ ಎಂದು ಸ್ವಂತ ಮಾಡಲು ನಿರ್ಧರಿಸಿದೆ. ಚಿಕ್ಕಂದಿನಿನಂಲೂ ಕುದುರೆಯೊಂದಿಗೆ ಹೆಚ್ಚು ಒಡನಾಟವಿದ್ದ ಕಾರಣ ಅದನ್ನ ಬಳಸಿ, ಅದಕ್ಕೆ ಪೂರಕವಾಗಿ ಸ್ನೇಹಿತರೊಬ್ಬರು ಕಡಿಮೆ ಖರ್ಚಿನಲ್ಲಿ ಕೃಷಿ ಪರಿಕರ ಮಾಡಿಕೊಟ್ಟರು. ಕಳೆದ ನಾಲ್ಕು ವರ್ಷದಿಂದ ಬಿತ್ತನೆ ಕಾರ್ಯವೊಂದನ್ನು ಬಿಟ್ಟು ಉಳಿದೆಲ್ಲ ಕಾರ್ಯವನ್ನು ನಾನು ಹಾಗೂ ಪತ್ನಿ ಮಾಡಿಕೊಂಡು ಹೋಗುತ್ತಿದ್ದೇವೆ. –ಮಹದೇವಪ್ಪ ಭಾಗಣ್ಣವರ, ಚಾಕಲಬ್ಬಿ

ಎಲ್ಲಾ ಅಂಗಾಂಗಗಳು ಚೆನ್ನಾಗಿದ್ದು, ಕೆಲಸ ಮಾಡಲು ಸೋಮಾರಿತನ ತೋರುವ ಯುವಕರಿಗೆ ಇವರು ಮಾದರಿಯಾಗಿದ್ದಾರೆ. ಅಂಗವಿಕಲತೆಯನ್ನು ಮೆಟ್ಟಿ ನಿಂತು ಕೃಷಿ ಕಾರ್ಯ ಮಾಡುತ್ತಿದ್ದಾರೆ. ತಮ್ಮ ಜಮೀನು ಜತೆಗೆ ಇತರೆ ಜಮೀನು ಲಾವಣಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಕೃಷಿ ಕಾರ್ಯವಷ್ಟೇ ಅಲ್ಲ ಗ್ರಾಮದಲ್ಲಿ ಬ್ಯಾಂಕ್‌ ಮಿತ್ರನಾಗಿ ಹಾಗೂ ಇತರೆ ಕಾರ್ಯಗಳನ್ನು ಮಾಡಿಕೊಡುತ್ತಿದ್ದಾರೆ. –ಡಾ| ಮಂಜುನಾಥ ಬಾರಕೇರ, ಗ್ರಾಮಸ್ಥ

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next