Advertisement

NITK ಅತ್ಯಾಧುನಿಕ ತುರ್ತು ಪ್ರತಿಕ್ರಿಯೆ ಕೇಂದ್ರ “ಸರ್ಚ್‌’ ಕಾರ್ಯೋನ್ಮುಖ

12:21 AM Dec 13, 2023 | Team Udayavani |

ಸುರತ್ಕಲ್‌: ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ತುರ್ತು ಸಹಾಯ, ಪ್ರತಿಕ್ರಿಯೆ ಮತ್ತು ಸಂವಹನ ಕೇಂದ್ರ (ಸರ್ಚ್‌)ವನ್ನು ಇಲ್ಲಿನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ)ದ ಸೆಂಟರ್‌ ಫಾರ್‌ ಸಿಸ್ಟಮ್‌ ಡಿಸೈನ್‌ ಸಂಸ್ಥೆಯ ಆವರಣದಲ್ಲಿ ಪ್ರಾರಂಭಿಸಿದೆ. ಇದು ಕರಾವಳಿ ಪ್ರದೇಶಗಳಿಗೆ ಅನುಗುಣವಾಗಿ ತುರ್ತು ಪರಿಸ್ಥಿತಿಗಳ ಸಂದರ್ಭ ಆಪತ್ಕಾಲೀನ ನೆರವಿನ ಬಗ್ಗೆ ಮಾಹಿತಿ ನೀಡಲು ನೆರವಾಗಲಿದೆ.

Advertisement

ಯಾವುದೇ ದೊಡ್ಡ ಮಟ್ಟದ ಅನಾಹುತಗಳಾದಾಗ ಆಯಾ ಪ್ರದೇಶಕ್ಕೆ ಈ ಉಪಕರಣ, ಕ್ಯಾಬೀನ್‌ ಸಹಿತ ತೆರಳಿ ಆಪಾಯ ದಲ್ಲಿರುವವರನ್ನು ಸಂಪರ್ಕಿಸಿ ರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ.

ಇಷ್ಟು ಮಾತ್ರವಲ್ಲದೆ ಇಲ್ಲಿನ ವ್ಯವಸ್ಥೆಯು ಒಂದು ರೆಸ್ಕೂé ಬೋಟ್‌, ಕಯಾಕಿಂಗ್‌, ಡ್ರೋನ್‌, ತುರ್ತು ಔಷಧ ಕೊಂಡೊಯ್ಯಬಲ್ಲ ಸಣ್ಣ ಪ್ರಮಾಣದ ಡ್ರೋನ್‌, ಹೈ ರೆಸಲ್ಯೂಷನ್‌ ಕೆಮರಾ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ಈ ತಂತ್ರಜ್ಞಾನವು ಅತ್ಯಾಧುನಿಕ ರೇಡಿಯೋ ತರಂಗಾಂತರದ ಮೂಲಕ ವಿಶ್ವದ ಯಾವುದೇ ಮೂಲೆಯಲ್ಲಿ ಅಪಾಯವಾದಾಗ ಗುರುತಿಸಬಲ್ಲದು. ಇದು ಸ್ವಾಯತ್ತ ಸಾಗರ ನೌಕೆಗಳು, ವೈಮಾನಿಕ ವಾಹನಗಳು ಮತ್ತು ಹವ್ಯಾಸಿ ರೇಡಿಯೊ ಕೇಂದ್ರಗಳನ್ನು ಏಕಕಾಲದಲ್ಲಿ ಸಂಯೋಜಿಸುವ ಮೂಲಕ ವಿಪತ್ತು ನಿರ್ವಹಣೆ, ತುರ್ತು ಪ್ರತಿಕ್ರಿಯೆ ಮತ್ತು ಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ವಿಧಾನವಾಗಿ ಪರಿಣಮಿಸಿದೆ. ಸದ್ಯಕ್ಕೆ ಹವ್ಯಾಸಿ ರೇಡಿಯೋ ಕಾರ್ಯಾಚರಣೆಗಳನ್ನು ಮಂಗಳೂರು ಹವ್ಯಾಸೀ ರೇಡಿಯೋ ಕ್ಲಬ್‌ ಸಹಕಾರದೊಂದಿಗೆ ಕಲ್ಪಿಸಲಾಗಿದೆ.

ಸಮುದ್ರ ಮಾಲಿನ್ಯದ ಮೇಲೆ ನಿಗಾ
ವಿಪತ್ತು ಪ್ರತಿಕ್ರಿಯೆಗಾಗಿ ವಿನ್ಯಾಸಗೊಳಿಸಿದ್ದರೂ ಈ ಕೇಂದ್ರವು ಇನ್ನಿತರ ಅನೇಕ ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುತ್ತದೆ. ವಿಶೇಷವಾಗಿ ಈ ಭಾಗದ ನೀರು ಮತ್ತು ಗಾಳಿಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡುವುದು, ಕಡಲ್ಕೊರೆತದ ಮಾದರಿಗಳನ್ನು ವಿಶ್ಲೇಷಿಸುವುದು ಮತ್ತು ಕಾಂಡ್ಲಾ ವನಗಳ ಬೆಳವಣಿಗಳನ್ನು ಪರಿ ಶೀಲಿಸುವಲ್ಲಿಯೂ ಸಹಕಾರಿಯಾಗಿದೆ.

ಕರಾವಳಿ ನಿಯಂತ್ರಣ ವಲಯದ ಉನ್ನತಾಧಿಕಾರಿಗಳು ಕೂಡ ಈ ಕೇಂದ್ರದಲ್ಲಿನ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಕಡಲ್ಕೊರೆತದ ಆಧ್ಯಯನ ನಡೆಸುತ್ತಿದ್ದಾರೆ. ವೃತ್ತಿಪರರು, ಜಿಲ್ಲಾ ಆಡಳಿತಗಾರರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ರೇಡಿಯೋ ಉತ್ಸಾಹಿಗಳನ್ನು ಒಳಗೊಂಡಂತೆ ಅನೇಕ ಮಂದಿಗೆ ಇದು ಉಪಯುಕ್ತವಾಗಿದೆ. ಮುಂದಿನ ದಿನಗಳಲ್ಲಿ ಈ ತುರ್ತು ಕೇಂದ್ರವು ಸರಕಾರಿ ಮಟ್ಟದಲ್ಲಿ ಇರುವ ತುರ್ತು ರಕ್ಷಣಾ ವ್ಯವಸ್ಥೆಯೊಂದಿಗೆ ತುರ್ತು ನೆರವು, ಜಲಮಾಲಿನ್ಯ ತಡೆ, ಹವಾಮಾನ ವೈಪರೀತ್ಯ, ಕಾಡು ಪ್ರಾಣಿಗಳ ಉಪಟಳ ತಡೆ, ಡೇಟಾ ಸಂಗ್ರಹ ಮತ್ತಿತರ ಕ್ಷೇತ್ರದಲ್ಲಿ ಜತೆಗೂಡಿ ಕೆಲಸ ಮಾಡಲು ಸಾಧ್ಯವಾಗಲಿದೆ.

Advertisement

ಸಾಧಕರು
ಸರ್ಚ್‌ನ ಮುಖ್ಯಸ್ಥ ಮತ್ತು ಟ್ರಾನ್ಸ್‌ ಡಿಸಿಪ್ಲಿನರಿ ಆರ್‌ ಆ್ಯಂಡ್‌ ಡಿ ಪ್ರಭಾರಿ ಪ್ರೊ| ಡಾ| ಪೃಥ್ವಿರಾಜ್‌ ಯು., ಸರ್ಚ್‌ನ ಪರಿಕಲ್ಪನೆ ಮತ್ತು ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರೊ| ಕೆ.ವಿ ಗಂಗಾಧರನ್‌, ಡಾ| ಮೋಹಿತ್‌ ಪಿ. ತಾಹಿಲಿಯಾನಿ, ಮತ್ತು ಡಾ| ಶ್ರೀವಲ್ಸಾ ಕೊಲತಾಯರ್‌ ಸೇರಿದಂತೆ ಇತರ ಪ್ರಮುಖ ಅಧ್ಯಾಪಕರು “ಸರ್ಚ್‌’ ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ.ಎನ್‌ಐಟಿಕೆಯ ಹಳೆ ವಿದ್ಯಾರ್ಥಿಗಳು ಆರ್ಥಿಕ ನೆರವು ನೀಡಿದ್ದಾರೆ.

“ಸರ್ಚ್‌’ ಉದ್ಘಾಟನೆ
ಎನ್‌ಐಟಿಕೆ ಸುರತ್ಕಲ್‌ ನಿರ್ದೇಶಕರಾದ ಪ್ರೊ| ಬಿ. ರವಿ ಉಪಸ್ಥಿತಿಯಲ್ಲಿ “ಸರ್ಚ್‌’ ಉದ್ಘಾಟನೆ ನಡೆಯಿತು. 1983ನೇ ವರ್ಷದ ಹಳೆ ವಿದ್ಯಾರ್ಥಿ ಶ್ರೀರಂಗನ್‌ ರಾಮಸಾಮಿ ಮತ್ತು 1971ನೇ ವರ್ಷದ ಸೋನಾ ಗ್ರೂಪ್‌ನ ಅಧ್ಯಕ್ಷರಾದ ಯಜ್ಞನಾರಾಯಣ ಕಮ್ಮಾಜೆ, ಎನ್‌ಸಿಸಿ ಕಚೇರಿಯ ಅ ಕಾರಿ ಕಮಾಂಡಿಂಗ್‌ ಕರ್ನಲ್‌ ಅನಿಲೇಶ್‌ ಕೌಶಿಕ್‌ ಸೇರಿದಂತೆ ಹಳೆಯ ವಿದ್ಯಾರ್ಥಿಗಳಾದ ರಾಮ್‌ ಭಂಡಾರೆ, ಎ.ಎಸ್‌. ಕಾರಂತ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next