Advertisement

ಯುವಕರನ್ನು ಕೃಷಿಯತ್ತ ಸೆಳೆಯಲು ವಿಶೇಷ ಯೋಜನೆ

01:11 PM May 29, 2019 | Suhan S |

ಮಂಡ್ಯ: ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ರೈತರು ಮತ್ತು ಯುವಕರನ್ನು ಮತ್ತೆ ಕೃಷಿಯೆಡೆ ಕರೆತರುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ನಟರಾಜು ತಿಳಿಸಿದರು.

Advertisement

ತಾಲೂಕಿನ ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ನಡೆದ 16ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರ ಲಾಭದಾಯಕ ಉದ್ಯಮವಾಗಿಲ್ಲ ಎಂಬ ಕಾರಣಕ್ಕೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಮತ್ತೆ ಕೃಷಿ ಕ್ಷೇತ್ರಕ್ಕೆ ಕರೆತರುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಸಮಸ್ಯಾಧಾರಿತ ಸಂಶೋಧನೆ: ನಮ್ಮ ಕೃಷಿ ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿ ಏಳು ಕೃಷಿ ವಿಜ್ಞಾನ ಕೇಂದ್ರಗಳು ಕೆಲಸ ಮಾಡುತ್ತಿವೆ. ಮೂರು ಮುಖ್ಯ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಕೃಷಿ ಕಾಲೇಜಿನಲ್ಲಿ ಶೈಕ್ಷಣಿ ವ್ಯವಸ್ಥೆ, 11 ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಸಮಸ್ಯಾಧಾರಿತ ಸಂಶೊಧೀಧನೆ ನಡೆಸಲಾಗುತ್ತಿದೆ. ವಿಜ್ಞಾನಿಗಳು ಸಂಶೋಧನೆ ನಡೆಸಿದ ಬಳಿಕ ಅದನ್ನು ಸಮರ್ಥವಾಗಿ ರೈತರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಈ ಕೇಂದ್ರಗಳು ಮಾಡುತ್ತಿವೆ ಎಂದು ವಿವರಿಸಿದರು.

ಉತ್ತಮ ಕೆಲಸ: 10 ಜಿಲ್ಲೆಗಳಲ್ಲಿ ಬರುವ ಏಳು ವಿಜ್ಞಾನ ಕೇಂದ್ರಗಳ ಮೂಲಕ ಮುಂಚೂಣಿ ಪ್ರಾತ್ಯಕ್ಷಿತೆ, ಕ್ಷೇತ್ರ ಪ್ರಾತ್ಯಕ್ಷಿಕೆ, ವಿಸ್ತರಣಾ ಚಟುವಟಿಕೆಗಳನ್ನು ಮಾಡುವ ಮೂಲಕ ರೈತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಪಶುಪಾಲನೆ, ಬ್ಯಾಂಕುಗಳು, ನಬಾರ್ಡ್‌ ಸಂಸ್ಥೆ ಎಲ್ಲವೂ ಸೇರಿದಂತೆ ಕೃಷಿಕರು, ಮಹಿಳೆಯರೂ ನಮ್ಮ ವೈಜ್ಞಾನಿಕ ಸಮಿತಿ ಸದಸ್ಯರಾಗಿದ್ದು, ಎಲ್ಲರೂ ಕೃಷಿಗೆ ಸಂಬಂಧಿಸಿದಂತೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ರೈತರಿಗೆ ಸೂಕ್ತ ಮಾರ್ಗದರ್ಶನ: ಒಂದು ವರ್ಷದಿಂದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಎಲ್ಲ ಅಭಿವೃದ್ಧಿ ಇಲಾಖೆಗಳ ಜೊತೆಗೂಡಿ ಅನುಷ್ಠಾನಗೊಳಿಸಿದ್ದಾರೆ. ಅನುಷ್ಠಾನ ಸಂದರ್ಭದಲ್ಲಿ ಯಾವ ಸಮಸ್ಯೆಗಳಿವೆ, ರೈತರು ಸಮಸ್ಯೆಗಳನ್ನು ಎದುರಿಸುವುದು, ಮುಂದಿನ ಕಾರ್ಯಕ್ರಮಗಳನ್ನು ರೂಪಿಸುವುದರ ಕುರಿತೂ ಸಹ ಚರ್ಚೆ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸುವುದು, ರೈತರ ಆದಾಯ ದ್ವಿಗುಣಗೊಳಿಸುವುದು, ಖರ್ಚು ಕಡಿಮೆ ಮಾಡುವುದು, ಉತ್ಪಾದನೆ ಹೆಚ್ಚು ಮಾಡುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುರಿತು ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಸೂಕ್ತ ಮಾರ್ಗದರ್ಶನ ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಸಮಸ್ಯೆಗಳಿಗೆ ಪರಿಹಾರ: ಶೂನ್ಯ ಬಂಡವಾಳ, ಇಸೆ÷ೕಲ್ ಕೃಷಿ ಸೇರಿದಂತೆ ಇತರೆ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿ ಅನುಷ್ಠಾನಗೊಳಿಸಲು ಯೋಜನೆ, ಮಳೆ, ಹೊಸ ಕೀಟಗಳು, ರೋಗಗಳು ಹೆಚ್ಚುತ್ತಿರುವುದು, ರೈತರ ಹೊಸ ಸಮಸ್ಯೆಗಳನ್ನು ಎದುರಿಸುತ್ತಿರುವುದರ ಕುರಿತಂತೆ ಸಮಗ್ರ ಚರ್ಚೆ ನಡೆಸಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಕೃಷಿ ವಿಸ್ತರಣೆಗೆ ಕೆವಿಕೆ ಶ್ರಮ: ವಿ.ಸಿ. ಫಾರಂ ಕೃಷಿ ಮಹಾವಿದ್ಯಾಲಯದ ಡೀನ್‌ ಡಾ. ಟಿ. ಶಿವಶಂಕರ್‌ ಮಾತನಾಡಿ, ಈ ಹಿಂದೆ ಕೃಷಿ ವಿಶ್ವವಿದ್ಯಾನಿಲಯಗಳು ಮಾತ್ರ ರೈತರಿಗೆ ಪರಿಚಯವಿತ್ತು. ಆನಂತರ ಕೃಷಿ ವಿಜ್ಞಾನ ಕೇಂದ್ರಗಳ ಸ್ಥಾಪನೆಯಾಯಿತು. ಕೆವಿಕೆ ಎಂದರೆ ರೈತರಿಗೆ ಏನೂ ತಿಳಿಯುತ್ತಿರಲಿಲ್ಲ. ಇಂದು ಎಲ್ಲ ಗ್ರಾಮಗಳಲ್ಲೂ ಕೆವಿಕೆ ಎಂದರೆ ಏನು ಎಂದು ರೈತರಿಗೆ ತಿಳಿದಿದೆ. 600ಕ್ಕೂ ಹೆಚ್ಚು ಕೃಷಿ ವಿಜ್ಞಾ ನ ಕೇಂದ್ರಗಳು ಸ್ಥಾಪನೆಯಾಗಿವೆ. ದೇಶದ ಕೃಷಿ ವಿಸ್ತರಣೆ ಯಲ್ಲಿ ನರಮಂಡಲದಂತೆ ಕೆವಿಕೆ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ರೈತನಿಗೂ ಕೃಷಿ ವಿಜ್ಞಾನ ಮುಟ್ಟಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

ಈ ಹಿಂದೆ ಕೃಷಿ ಕಾಲೇಜಿನಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಸಿಗುತ್ತಿತ್ತು. ತೋಟಗಾರಿಕೆ, ಪಶುಪಾಲನೆಯಲ್ಲಿ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾತ್ರ ಮಾಹಿತಿ ಪಡೆಯಬಹುದಾಗಿತ್ತು. ಆದರೆ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಎಲ್ಲ ರೀತಿಯ ಮಾಹಿತಿಯನ್ನೂ ನೀಡಲಾಗುತ್ತಿದೆ. ಮಂಡ್ಯದಲ್ಲಿ ಬಹಳ ಚೆನ್ನಾಗಿ ಕೃಷಿ ವಿಜ್ಞಾನ ಕೇಂದ್ರ ಕೆಲಸ ಮಾಡುತ್ತಿದೆ. ರೈತರ ಸಂಘಗಳನ್ನು ಸ್ಥಾಪಿಸಿದೆ. ಮುಂದಿನ ವರ್ಷಕ್ಕೆ ಮತ್ತಷ್ಟು ಪರಿಣಾಮಕಾರಿ ಕಾರ್ಯ ಕ್ರಮಗಳನ್ನು ರೂಪಿಸಿಕೊಂಡಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಹಿರಿಯ ವಿಜ್ಞಾನಿ ಡಾ. ಎ.ಡಿ.ರಂಗನಾಥ್‌, ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ.ಜೆ. ಚಂದ್ರೇಗೌಡ, ಕೃಷಿ ಜಂಟಿ ನಿರ್ದೇಶಕಿ ಡಾ. ರಾಜಸುಲೋಚನಾ, ವಿಜ್ಞಾನಿಗಳಾದ ಡಾ. ರೂಪಶ್ರೀ ಎಚ್.ಡಿ., ಡಾ. ಕಮಲಾಬಾಯಿ ಕೂಡಗಿ, ಎಚ್.ಎಂ. ಮಹೇಶ್‌, ಡಾ. ಎಸ್‌. ಪವಿತ್ರಾ, ಅತೀಫ್‌ ಮುನಾವ್ವರಿ ಇತರರು ಭಾಗವಹಿಸಿದ್ದರು.

ಕೃಷಿ ಆದಾಯ ಹೆಚ್ಚಿಸಲು ನಾಲ್ಕು ಹಂತದ ಪ್ರಯತ್ನ:

ಕೃಷಿ ಕ್ಷೇತ್ರವನ್ನು ಲಾಭದಾಯಕ ಉದ್ಯಮವನ್ನಾಗಿಸುವ ಉದ್ದೇಶದಿಂದ ವೈಜ್ಞಾನಿಕ ಸಲಹಾ ಸಮಿತಿ ಸಭೆ ಕರೆಯಲಾಗಿದೆ ಎಂದು ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ನಿರ್ದೇಶಕ ಡಾ. ಎಂ.ಜೆ. ಚಂದ್ರೇಗೌಡ ತಿಳಿಸಿದರು. ತಾಲೂಕಿನ ವಿ.ಸಿ. ಫಾರಂ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ 16ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೃಷಿಯನ್ನು ಹೇಗೆ ವೈಜ್ಞಾನಿಕವಾಗಿ ಮಾಡಬೇಕು. ಕೃಷಿಯಲ್ಲಿ ಆದಾಯ ಹೆಚ್ಚಿಸುವ ಸಂಬಂಧ ನಾಲ್ಕು ಹಂತದಲ್ಲಿ ಪ್ರಯತ್ನ ಮಾಡಲಾಗುವುದು ಎಂದರು. ಅಲ್ಪ ವೆಚ್ಚದಲ್ಲಿ ಅಧಿಕ ಉತ್ಪಾದನೆ: ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವುದು, ಕೃಷಿಯಲ್ಲಿನ ಖರ್ಚು ಕಡಿಮೆ ಮಾಡುವುದು, ಕೃಷಿಯ ಜೊತೆಗೆ ಯಾವ ಚಟುವಟಿಕೆಯ ಜೊತೆಗೆ ಆದಾಯ ಹೆಚ್ಚಿಸುವುದು, ಕೊಯ್ಲಿನ ನಂತರ ಯಾವ ರೀತಿಯ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಅಥವಾ ತಂತ್ರಜ್ಞಾನ ಅಳವಡಿಸಿಕೊಂಡರೆ ರೈತರಿಗೆ ಹೆಚ್ಚಿನ ಆದಾಯ ತರಬಹುದೇ ಎಂಬುದರ ಕುರಿತಂತೆ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು, ರೈತರು, ಉದ್ಯಮಿಗಳು, ಬ್ಯಾಂಕ್‌ ಅಧಿಕಾರಿಗಳು ಚರ್ಚೆ ನಡೆಸಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಲಾಗಿದೆ. ರಾಜ್ಯದಲ್ಲಿ 33 ಕೃಷಿ ವಿಜ್ಞಾನ ಕೇಂದ್ರಗಳಿವೆ, ಕೇರಳದಲ್ಲಿ 14 ಒಟ್ಟು 48 ಕೃಷಿ ವಿಜ್ಞಾನ ಕೇಂದ್ರಗಳ ಉಸ್ತುವಾರಿ ವಹಿಸಿಕೊಂಡಿದ್ದು, ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಪರಿಹಾರಗಳು, ರೈತರಿಗೆ ಯಾವ ರೀತಿ ಅನುಕೂಲಗಳನ್ನು ಮಾಡಿಕೊಡಬಹುದು ಎಂಬುದರ ಕುರಿತು ಚರ್ಚೆ ಮಾಡಲಾಗುವುದು. ಕೇಂದ್ರದಿಂದ ವಿವಿಧ ಮಾಹಿತಿ: ಮಿಕ್ಕೆರೆ ಗ್ರಾಮದ ಪ್ರಗತಿಪರ ರೈತ ಮಹಿಳೆ ಲತಾ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಿಂದ ತುಂಬಾ ಅನುಕೂಲವಾಗಿದೆ. ಹೈನುಗಾರಿಕೆ, ರೇಷ್ಮೆಯನ್ನು ಅವಲಂಬಿಸಿ ನಾಟಿಕೋಳಿ ಸಾಕಾಣಿಕೆ ಮಾಡುತ್ತಿದ್ದೇವೆ. ಶ್ರೀಪದ್ಧತಿಯಲ್ಲಿ ಭತ್ತ ಬೆಳೆಯುವ ಕುರಿತಂತೆ ವಿಜ್ಞಾನಿಗಳಿಂದ ಮಾಹಿತಿ ಪಡೆದು, ಕಡಿಮೆ ನೀರು ಉಪಯೋಗಿಸಿಕೊಂಡು ಯಾವ ರೀತಿ ಬೆಳೆ ಬೆಳೆಯಬೇಕು. ಕಡಿಮೆ ಖರ್ಚಿನಲ್ಲಿ ಬೇಸಾಯ ಮಾಡುವುದು, ಆಳುಗಳು ಇಲ್ಲದಿದ್ದಾಗ ರೋಟರ್‌ ಬಳಸಿ ಯಾವ ರೀತಿ ಕಳೆ ತೆಗೆಯುವುದು, ಯಾವ ಸಂದರ್ಭದಲ್ಲಿ ರಸಗೊಬ್ಬರ ಬಳಸಬೇಕು ಇತ್ಯಾದಿ ಮಾಹಿತಿಗಳನ್ನು ಕೃಷಿ ವಿಜ್ಞಾನಿ ಗಳಿಂದ ಪಡೆಯುತ್ತಿದ್ದೇವೆ. ಆದಕಾರಣ ಹೆಚ್ಚಿನ ಅನುಕೂಲಗಳನ್ನು ಪಡೆಯುತ್ತಿದ್ದೇವೆ ಎಂದರು. ಲಾಭದಾಯಕ ಉದ್ಯಮ: ಹೈನುಗಾರಿಕೆಗೆ ಹೆಚ್ಚಿಗೆ ಮಾಡಿದ್ದೇವೆ. ಒಂದನ್ನೇ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ ಎಂಬ ಕಾರಣಕ್ಕೆ ಎರೆಹುಳು, ಮರಗಡ್ಡಿ, ಮೊಲ ಸಾಕಾಣಿಕೆ, ನಾಟಿ ಕೋಳಿ ಸಾಕಾಣಿಕೆ ಸೇರಿದಂತೆ ವಿವಿಧ ರೀತಿಯ ಕೃಷಿ ಮಾಡುತ್ತಿದ್ದೇವೆ. ಇದರಿಂದ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಂಡಿದ್ದೇವೆ ಎಂದು ವಿವರಿಸಿ ದರು. ಕೃಷಿ ಮಾಡುವ ಮುನ್ನ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಭೂಮಿಯಲ್ಲಿ ಯಾವ ಅಂಶ ಕಡಿಮೆ ಇರುತ್ತೆ ಅದನ್ನು ತಿಳಿದು ಕೃಷಿ ವಿಜ್ಞಾನಿಗಳ ಸಲಹೆ ಮೇರೆಗೆ ಕೃಷಿ ಚಟುವಟಿಕೆ ಆರಂಭಿಸಬೇಕು. ಯಾರೋ ಏನೋ ಹೇಳುತ್ತಾರೆ ಎಂದು ಕೇಳಿ ಕೃಷಿ ಮಾಡಿ ನಷ್ಟ ಮಾಡಿಕೊಳ್ಳುವುದನ್ನು ರೈತರು ಇನ್ನಾದರೂ ಬಿಡಬೇಕು ಎಂದು ಸಲಹೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next