Advertisement

ಪ್ರಸ್ತುತ ದಿನದಲ್ಲಿ ಸರಳ ಸಾಮೂಹಿಕ ವಿವಾಹ ಅನಿವಾರ್ಯ

05:52 PM Aug 26, 2022 | Team Udayavani |

ದೊಡ್ಡಬಳ್ಳಾಪುರ: ವಿವಾಹಗಳು ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಸರಳ ಸಾಮೂಹಿಕ ವಿವಾಹಗಳ ಅಗತ್ಯವಿದ್ದು, ಸಪ್ತಪದಿ ಸಾಮೂಹಿಕ ವಿವಾಹಗಳ ಆಯೋಜನೆ ಸ್ತುತ್ಯಾರ್ಯವಾದ ಕಾರ್ಯವಾಗಿದೆ ಎಂದು ದೇವನಹಳ್ಳಿ ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ತಾಲೂಕಿನ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ನಡೆದ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಧುವರರಿಗೆ ಶುಭ ಹಾರೈಸಿ ಮಾತನಾಡಿದ ಅವರು, ಸಮಾಜದಲ್ಲಿ ಆಡಂಬರದ ಮದುವೆಗಳು ಕಡಿಮೆಯಾದರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗಳು ಅನ್ಯೋನ್ಯದಿಂದ ಬಾಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕಪಡಿಸಬೇಕಿದೆ ಎಂದರು.

ಬಡವರಿಗೆ ಅನುಕೂಲ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಹಿಂದೆ ಕೋವಿಡ್‌ ಕಾರಣದಿಂದ ಸಾಮೂಹಿಕ ವಿವಾಹ ಮುಂದೂಡಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿರುವುದರಿಂದ ಮತ್ತೆ ಸಾಮೂಹಿಕ ವಿವಾಹ ಆರಂಭಿಸಿರುವುದು ಉತ್ತಮ ಕಾರ್ಯ. ಆರ್ಥಿಕವಾಗಿ ದುರ್ಬಲರಾಗಿರುವವರು, ಗ್ರಾಮೀಣ ಪ್ರದೇಶದಲ್ಲಿರುವವರು, ಬಡವರಿಗೆ ಸಾಮೂಹಿಕ ವಿವಾಹಗಳು ನೆರವಾಗುತ್ತಿದ್ದು, ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವುದು ನಮಗೆ ಅತೀವ ಸಂತೋಷವಾಗಿದೆ ಎಂದು ತಿಳಿಸಿದರು.

ಹೊಸ ದಾಂಪತ್ಯಕ್ಕೆ ಕಾಲಿಟ್ಟ 15 ಜೋಡಿ: ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಎದುರು ಸಾಮೂಹಿಕ ವಿವಾಹಕ್ಕಾಗಿಯೇ ಹಾಕಿದ್ದ ಪೆಂಡಾಲ್‌ನಲ್ಲಿ ಬೆಳಗ್ಗೆ 9ರಿಂದ 9.50ರವರೆಗಿನ ಕನ್ಯಾ ಲಗ್ನದಲ್ಲಿ, ನೋಂದಣಿಯಾಗಿದ್ದ 15 ಜೋಡಿ ವಿವಾಹವಾಗಿ ಹೊಸ ದಾಂಪತ್ಯಕ್ಕೆ ಕಾಲಿರಿಸಿದರು.

ಹಿಂದೂ ಸಂಪ್ರದಾಯದಂತೆ, ಪೌರೋಹಿತರ ವೇದ ಮಂತ್ರ ಘೋಷದೊಂದಿಗೆ ನಡೆದ ವಿವಾಹದಲ್ಲಿ ಪಾಲ್ಗೊಂಡಿದ್ದ ವರನಿಗೆ 5 ಸಾವಿರ ರೂ. ಹಾಗೂ ವಧುವಿಗೆ 10 ಸಾವಿರ ರೂ. ಮತ್ತು ಚಿನ್ನದ ತಾಳಿ ಹಾಗೂ ಎರಡು ಚಿನ್ನದ ಗುಂಡು(ಒಟ್ಟು 40 ಸಾವಿರ ರೂ ಮೌಲ್ಯ) ಒಟ್ಟು 55 ಸಾವಿರ ರೂ.ನೀಡಲಾಯಿತು. ಸಾಮೂಹಿಕ ವಿವಾಹಕ್ಕೆ ಆಗಮಿಸುವ ವಧು-ವರ ಮತ್ತು ಅವರ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ದೇವಾಲಯದಿಂದ ಆಯೋಜಿಸಲಾಗಿತ್ತು.

Advertisement

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ಅಧ್ಯಕ್ಷ ಎಲ್ ಎನ್‌.ವೆಂಕಟೇಶ ಬಾಬು, ಅಪರ ಜಿಲ್ಲಾಧಿಕಾರಿ ವಿಜಯಾ ಈ.ರವಿಕುಮಾರ್‌, ತಹಶೀಲ್ದಾರ್‌ ಮೋಹನ ಕುಮಾರಿ, ಮುಜರಾಯಿ ಇಲಾಖೆಯ ಜಿಲ್ಲಾ ಸಹಾಯಕ ಆಯುಕ್ತರಾದ ಜಿ.ಜೆ.ಹೇಮಾವತಿ, ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್‌.ಅಪ್ಪಯ್ಯಣ್ಣ, ಗ್ರಾಪಂ ಅಧ್ಯಕ್ಷೆ ಭಾರತಿಬಾಯಿ, ಉಪಾಧ್ಯಕ್ಷ ವಾಸು ದೇವ್‌, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಟಿ.ವಿ. ಲಕ್ಷ್ಮೀನಾರಾಯಣ್‌, ಘಾಟಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ನಾಗರಾಜು, ಪ್ರಧಾನ ಆರ್ಚಕ ಸುಬ್ಬುಕೃಷ್ಣಶಾಸ್ತ್ರಿ, ಕೆಪಿಸಿಸಿ ಸದಸ್ಯ ಎಸ್‌.ಆರ್‌.ಮುನಿರಾಜು, ಮುಖಂಡ ಜಗನ್ನಾಥಾಚಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next