Advertisement

ಯುಗಪುರುಷನ ಆಯ್ದ ಕಥೆ

07:01 PM Jan 23, 2020 | mahesh |

ನಮಃ ಶ್ರೀ ಯತಿರಾಜಾಯ | ವಿವೇಕಾನಂದ ಸೂರಯೇ |
ಸಚ್ಚಿತ್ಸುಖಸ್ವರೂಪಾಯ | ಸ್ವಾಮಿನೇ ತಾಪಹಾರಿಣೇ ||
ಜಗತ್ತಿನ ಬಹುಪಾಲು ಜನರು ಕೇವಲ ಇತಿಹಾಸಕ್ಕೆ ಸೇರಿದವರಾಗಿರುತ್ತಾರೆ. ಆದರೆ, ಕೆಲವು ಮಹಾತ್ಮರು ತಮ್ಮ ವ್ಯಕ್ತಿತ್ವ, ಆದರ್ಶಗಳಿಂದ ಇತಿಹಾಸವನ್ನೇ ಸೃಷ್ಟಿಸಿಬಿಡುತ್ತಾರೆ. ಯುಗಗಳುರುಳಿದರೂ ಇವರ ಜೀವನ ಚರಿತ್ರೆಯಾಗಿ ನಮ್ಮನ್ನು ಕಾಡುತ್ತದೆ, ಜೊತೆಗೆ ಮುನ್ನಡೆಸುತ್ತದೆ ಕೂಡ. ಇದಕ್ಕೆ ಉತ್ತಮ ಉದಾಹರಣೆಯಾಗಿ ರಾಮಾಯಣದ ರಾಮನನ್ನು, ಭಾರತದ ಕೃಷ್ಣನನ್ನು, ಬುದ್ಧ -ಮಹಾವೀರರನ್ನು, ಕ್ರಿಸ್ತನನ್ನು ತೆಗೆದುಕೊಳ್ಳಬಹುದು. ಅಂತಹ ಮಹಾತ್ಮರ ಸಾಲಿನಲ್ಲಿ ಒಬ್ಬರಾಗಿ ನಮಗೆ ಸ್ವಾಮಿ ವಿವೇಕಾನಂದರು ಕಾಣಿಸುತ್ತಾರೆ.

Advertisement

ಈ ಧರೆಗೆ ನರೇಂದ್ರನಾಥದತ್ತನಾಗಿ ಜನವರಿ 12ನೇ 1863ರಂದು ವಿವೇಕಾನಂದರು ಕೊಲ್ಕತ್ತದಲ್ಲಿ ಜನಿಸಿದರು. ತಂದೆ ವಿಶ್ವನಾಥದತ್ತರು ವಕೀಲರು. ತಾಯಿ ಭುವನೇಶ್ವರೀದೇವಿ ಸುಸಂಸ್ಕೃತ ಮಹಿಳೆ. ಮಗನ ಜೀವನಕ್ಕೆ ಮುನ್ನುಡಿ ಬರೆದವಳು. ಸಣ್ಣವನಾಗಿದ್ದಾಗ ಕುದುರೆ ಸಾರೋಟುಗಾರನನ್ನು ನೋಡಿದ ನರೇಂದ್ರ ತಾನೂ ಅವನಂತೆ ಸಾರೋಟು ಓಡಿಸುವವವನಾಗಬೇಕು ಎನ್ನುತ್ತಾನೆ. ಮಗನ ಮಾತು ತಂದೆಗೆ ಸಿಟ್ಟು ತರಿಸುತ್ತದೆ, ಜೊತೆಗೆ ಬೈಗುಳವೂ ದೊರೆಯುತ್ತದೆ. ಆದರೆ, ತಾಯಿ ಮಗನನ್ನು ಯಾವ ರೀತಿಯಿಂದಲೂ ನಿಂದಿಸದೆ ಮನೆಯೊಳಗೆ ಕರೆದೊಯ್ದು ಗೋಡೆಯಲ್ಲಿ ನೇತು ಹಾಕಿರುವ ಭಾವಚಿತ್ರವನ್ನು ತೋರಿಸುತ್ತಾಳೆ. ಅರ್ಜುನನ ಸಾರಥಿಯಾಗಿ ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ ನಿಂತಿರುವ ಚಿತ್ರ. ಆಕೆ, “ಸಾರಥಿಯಾದರೆ ಶ್ರೀಕೃಷ್ಣನಂತಹ ಸಾರಥಿಯಾಗು’ ಎಂದು ಬಾಲ ನರೇಂದ್ರನಿಗೆ ಎಳೆ ವಯಸ್ಸಿನಲ್ಲೇ ಸ್ಫೂರ್ತಿ ತುಂಬುತ್ತಾಳೆ.

ತಾನಿನ್ನೂ ಚಿಕ್ಕವನಾಗಿರುವಾಗಲೇ ಮುಂದೆ ಶ್ರೇಷ್ಠ ವ್ಯಕ್ತಿಯಾಗುವ ಲಕ್ಷಣಗಳನ್ನು ತನ್ನ ಅಸಾಧಾರಣ ಪ್ರತಿಭೆಯಿಂದ ನರೇಂದ್ರ ತೋರಿಸಿಕೊಟ್ಟಿದ್ದನು. ಹಿರಿಯರಲ್ಲಿ ವಿನಯ, ಕಿರಿಯರಲ್ಲಿ ಪ್ರೀತಿ, ಅಪಾರ ಜ್ಞಾಪಕಶಕ್ತಿ, ಶ್ರದ್ಧೆ, ಭಕ್ತಿ ನರೇಂದ್ರನಿಗೆ ಬಾಲ್ಯದಲ್ಲೇ ಒಲಿದಿತ್ತು. ಅದರೊಂದಿಗೆ ಧ್ಯಾನದಲ್ಲಿ ವಿಶೇಷವಾದ ಆಸಕ್ತಿ. ಗಾಢ ಧ್ಯಾನದಲ್ಲಿ ಮುಳುಗುವ ನರೇಂದ್ರನಿಗೆ ಎಳವೆಯಲ್ಲೇ ದೇವರಿದ್ದಾನೆಯೇ? ಇದ್ದರೆ ಅವನನ್ನು ತಿಳಿಯುವುದು ಹೇಗೆ? ಮುಂತಾದ ಪ್ರಬುದ್ಧ ಪ್ರಶ್ನೆಗಳು ಮೂಡುತ್ತಿದ್ದವು.

ಹೀಗೆ ನರೇಂದ್ರನಾಥನಿಗೆ ರಾಮಕೃಷ್ಣ ಪರಮಹಂಸರ ಭೇಟಿಯಾಗುತ್ತದೆ. ಆಗ ಆತ ಕೇಳಿದ ಮೊದಲ ಪ್ರಶ್ನೆಯೇ “ನೀವು ದೇವರನ್ನು ಕಂಡಿದ್ದೀರಾ?’ ಎಂದಾಗಿತ್ತು. ಆಗ ಪರಮಹಂಸರು ಸ್ಪಷ್ಟವಾಗಿ “ಹೌದು’ ಎಂದುಬಿಟ್ಟಾಗ ಈತನಿಗೆ ಗೊಂದಲವುಂಟಾಗುತ್ತದೆ. ಮುಂದಿನ ವರ್ಷಗಳಲ್ಲಿ ರಾಮಕೃಷ್ಣರ ಶಿಷ್ಯನಾಗಿ ನರೇಂದ್ರನು ಹಲವಾರು ವಿಷಯಗಳನ್ನು ತಿಳಿದುಕೊಂಡು ಗುರುವಿಗೇ ಮರುಪ್ರಶ್ನೆಗಳನ್ನು ಹಾಕುತ್ತಿದ್ದನು. ಕಾಳಿಯನ್ನೇ ಸದಾ ಪೂಜಿಸುವ ಗುರು ಮತ್ತು ಮೂರ್ತಿಯನ್ನೇ ತಿರಸ್ಕರಿಸುವ ಶಿಷ್ಯನ ಮನೋಭಾವದ ಮಧ್ಯೆ ಕೊನೆಗೆ ಗುರುಗಳು ಜಯಶಾಲಿಯಾಗುತ್ತಾರೆ. ನರೇಂದ್ರನ ಸಂಶಯಗಳೆಲ್ಲ ದೂರವಾಗಿ ಆತನೂ ಸಂಪೂರ್ಣವಾಗಿ ಬದಲಾಗುತ್ತಾನೆ. 16 ಆಗಸ್ಟ್‌ 1886ರಂದು ರಾಮಕೃಷ್ಣ ಪರಮಹಂಸರು ನಿರ್ವಾಣ ಹೊಂದಿದ ನಂತರ, ಅವರ ಜವಾಬ್ದಾರಿಗಳನ್ನೆಲ್ಲ ಹೊತ್ತ ನರೇಂದ್ರ, ಪರಮಹಂಸರ ಶಿಷ್ಯರೊಂದಿಗೆ ವಿಧ್ಯುಕ್ತ ಸನ್ಯಾಸಾಶ್ರಮ ಸ್ವೀಕರಿಸುತ್ತಾನೆ. ವಿವಿದಿಷಾನಂದ ಎಂಬ ಹೊಸ ಹೆಸರಿಟ್ಟುಕೊಂಡರೂ ಕ್ರಮೇಣ ವಿವೇಕಾನಂದ ಎಂಬುದೇ ಶಾಶ್ವತವಾಗಿಬಿಡುತ್ತದೆ.

ಸನ್ಯಾಸಿಗಳಿಗೆ ಸಂಚಾರವೊಂದು ಗುಣ ಎಂಬಂತೆ ಎಲ್ಲ ಯುವ ಸಂನ್ಯಾಸಿಗಳು ಮಠ ತೊರೆದ ನಂತರ ವಿವೇಕಾನಂದರೂ ಪರಿವ್ರಾಜಕರಾಗುವತ್ತ ಗಮನ ಹರಿಸಿದರು. ಸಣ್ಣಪುಟ್ಟ ಯಾತ್ರೆಗಳಿಂದ ಆರಂಭಗೊಂಡ ಪಯಣ ಭಾರತವನ್ನು ಬಲು ಹತ್ತಿರದಿಂದ ಗಮನಿಸಬೇಕೆಂಬ ದೃಷ್ಟಿಕೋನದತ್ತ ವಾಲಿತು. ಸಮಗ್ರ ಭಾರತದ ಅಧ್ಯಯನ ಮಾಡಲು ಸಂತನೊಬ್ಬ ಹೊರಟು ನಿಂತಿದ್ದ. ಅವರು ಬರಿಯ ನೆಲ, ಜನ, ಧರ್ಮಗಳ ಅಧ್ಯಯನ ನಡೆಸಲಿಲ್ಲ. ಭಾರತದ ಸಂಸ್ಕೃತಿಯನ್ನು ಗಾಢವಾಗಿ ಅಗೆದರು. ಇಲ್ಲಿನ ವೈಭವ-ಅಭಾವ, ಬಡತನ- ದೊರೆತನ, ಯಾತನೆಗಳನ್ನು ಸ್ವಂತ ಅನುಭವದ ಮೂಲಕ ತಿಳಿಯುವುದು ಅವರ ಮುಖ್ಯ ಉದ್ದೇಶ ವಾಗಿತ್ತು. ಗುಜರಾತ್‌ ಹಾಗೂ ಮದರಾಸಿನಲ್ಲಿ ಪ್ರವಾಸ ಮಾಡುತ್ತಿದ್ದ ಸಂದರ್ಭ ದಲ್ಲಿ ಕೆಲವು ಗೆಳೆಯರು ಹಾಗೂ ಅವರ ಭಕ್ತರಿಂದ ಅಮೆರಿಕದ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸ ಬೇಕೆಂಬ ಸಲಹೆ ದೊರೆ ಯುತ್ತದೆ. 11ನೇ ಸೆಪ್ಟೆಂಬರ್‌ 1893. ಚಿಕಾಗೋ ನಗರದ “ಹಾಲ್‌ ಆಫ್ ಕೊಲಂಬಸ್‌’ ಸಭಾಭವನದಲ್ಲಿ ಕೊಲಂಬಿಯನ್‌ ಜಾಗತಿಕ ಮೇಳ ನಡೆಯುತ್ತಿರುತ್ತದೆ. ಅದರ ಒಂದು ಭಾಗ ಈ ಸರ್ವಧರ್ಮ ಸಮ್ಮೇಳನ. ಅಲ್ಲಿ ನೆರೆದಿದ್ದ ಜನಸಾಗರವನ್ನು ನೋಡಿ ವಿವೇಕಾನಂದರು ಒಮ್ಮೆ ಬೆರಗಾದರಂತೆ. ಕೊನೆಯ ಭಾಷಣ ಇವರದ್ದು. ದೇವರನ್ನು ನೆನೆದು ಅವರು ಭಾಷಣವನ್ನು ಆರಂಭಿಸಿದ್ದು “ಸಿಸ್ಟರ್ಸ್‌ ಆಂಡ್‌ ಬ್ರದರ್ಸ್‌ ಆಫ್ ಅಮೆರಿಕ’ಎಂದಾಗಿತ್ತು. ನೆರೆದಿದ್ದ ಜನ ಸಮೂಹವೆಲ್ಲ ಎರಡು ನಿಮಿಷ ಕರತಾಡನ ಮಾಡುತ್ತಾರೆ. ಭಾರತದ ಪರ ಆಡಿದ ಮೊದಲ ಮಾತೇ ಎಲ್ಲರೂ ನೆನಪಿಟ್ಟು ಕೊಳ್ಳುವಂತದ್ದಾಗುತ್ತದೆ. ಮಾತನಾಡಿದ್ದು ಕೆಲವೇ ನಿಮಿಷಗಳಾದರೂ ಭಾರತವನ್ನು ವಿಶ್ವಕ್ಕೆ ವಿಶಿಷ್ಟ ರೀತಿಯಿಂದ ಪರಿಚಯ ಮಾಡಿ ಕೊಡುತ್ತಾರೆ.

Advertisement

ಸ್ವಾಮಿಗಳು ಭಾರತೀಯರಿಗೆ ಸ್ಫೂರ್ತಿಯ ಚಿಲುಮೆಯಾದರು. ತಮ್ಮ ಮಹದಾಸೆಯಾಗಿದ್ದ ರಾಮಕೃಷ್ಣ ಮಿಷನ್‌ನ್ನು ಸ್ಥಾಪಿಸಿದರು. “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’. ಅಂದರೆ ತನ್ನ ಮೋಕ್ಷಕ್ಕಾಗಿ, ಜಗತ್ತಿನ ಹಿತಕ್ಕಾಗಿ ಕಾರ್ಯಪರರಾಗಬೇಕೆಂಬ ಸಂದೇಶ ಸಾರಿದರು.

ರೇಖಾ ಕೆ. ಎಂ.
ದ್ವಿತೀಯ ಬಿಎ
ಶ್ರೀ ಧ.ಮಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next