Advertisement

ಸಂಶೋಧನೆಯನ್ನೇ ಪೂಜೆಯಾಗಿಸಿಕೊಂಡಿದ್ದ ವಿಜ್ಞಾನಿ

10:19 AM Mar 02, 2020 | mahesh |

ಸಂಶೋಧನೆಯೆಂದರೆ ಜ್ಞಾನದ ಹುಡುಕಾಟ. ಆದ್ದರಿಂದ ವಿದ್ಯಾಭ್ಯಾಸದ ಪ್ರತಿ ಅಂಗದಲ್ಲಿಯೂ ಸಂಶೋಧನೆಗೆ ಪ್ರಥಮ ಸ್ಥಾನವಿರಬೇಕು. ಜ್ಞಾನ ಎಂದರೆ ಗ್ರಂಥಗಳಿಗೆ ಸೀಮಿತ ವಾಗಿರುವ ಗತಿಸಿರುವ ಜ್ಞಾನ ಎಂದಲ್ಲ-ಅದು ಜೀವಂತ ವಾಗಿರುವ ಸದಾ ವರ್ಧಿಸುತ್ತಿರುವ ಸತ್ತ್ವ’ ಹಾಗೆಂದವರು ಸರ್‌ ಸಿ.ವಿ. ರಾಮನ್‌.

Advertisement

ವಿಜ್ಞಾನ ಸೃಜನಾತ್ಮಕ ಕಲೆಯ ಪರಾಕಾಷ್ಠೆ ಎಂದು ನಂಬಿದ್ದ ಅಪರೂಪದ ಶ್ರೇಷ್ಠ ವಿಜ್ಞಾನಿ ರಾಮನ್‌. ಉತ್ತಮ ವಾಗ್ಮಿಗಳಾಗಿದ್ದ ರಾಮನ್‌ 1929ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಆಡಿದ ನುಡಿಗಳು ಸ್ಮರಣೀಯ. ಬೌದ್ಧಿಕ ಮೌಲ್ಯಗಳನ್ನು ತಿಳಿಯು ವುದರ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನೂ ಉನ್ನತ ಸಂಸ್ಕೃತಿ ಒಳಗೊಂಡಿದೆ. ವಿಶ್ವವಿದ್ಯಾನಿಲಯ ವಿವಿಧ ಅಭಿಪ್ರಾಯ, ಭಾವನೆಗಳ ಸಮನ್ವಯ ಕ್ಷೇತ್ರವಾಗಬೇಕು. ಪರಸ್ಪರ ಸೌಹಾರ್ದ, ಸಹಿಷ್ಣುತೆ ಅಲ್ಲಿರಬೇಕು. ಉದಾತ್ತ ಧ್ಯೇಯಗಳಿಂದ ವಿಶ್ವವಿದ್ಯಾ ನಿಲಯಗಳು ಪ್ರಚೋದಿತವಾದರೆ ದೇಶದ ಸಮಸ್ಯೆಗಳನ್ನು ಪರಿಹರಿಸಲು ಅವು ಬೇರೆಲ್ಲ ಸಂಸ್ಥೆಗಳಿಗಿಂತಲೂ ಹೆಚ್ಚು ಸಮರ್ಥವಾಗುವವು ಎಂದು ರಾಮನ್‌ ಉದ್ಗರಿಸುತ್ತಲೇ ಸಭಿಕರು ಮುಗಿಲು ಮುಟ್ಟುವಂತೆ ಕರತಾಡನಗೈದಿದ್ದರು. ಚಂದ್ರಶೇಖರ ವೆಂಕಟ ರಾಮನ್‌ ಜನಿಸಿದ್ದು ತಮಿಳುನಾಡಿನ ತಿರುಚಿರಾಪಲ್ಲಿಯಲ್ಲಿ(1888). ತಂದೆ ಚಂದ್ರಶೇಖರ ಐಯ್ಯರ್‌. ತಾಯಿ ಪಾರ್ವತಿ. ತಂದೆ ಭೌತಶಾಸ್ತ್ರದ ಉಪನ್ಯಾಸಕರಾಗಿದ್ದರು. ಬಾಲಕನದು ಜನ್ಮದತ್ತ ಜಾಣ್ಮೆ. ಚುರುಕು ಹುಡುಗ ಶಾಲೆಯಲ್ಲಿರುವಾಗಲೇ ಸದಾ ಓದಿನಲ್ಲಿ ತರಗತಿಗೆ ಪ್ರಥಮ. ಮದರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಸ್ನಾತಕೋತ್ತರ ಪದವಿ ಪಡೆದಾಗ (1907) ವಯಸ್ಸು ಕೇವಲ 19! ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡು ಅಮೋಘವಾಗಿಯೇ ಉತ್ತೀರ್ಣತೆ. ಭಾರತದ ಡೆಪ್ಯುಟಿ ಅಕೌಂಟೆಂಟ್‌ ಜನರಲ್‌ ಹುದ್ದೆಗೆ ಆಯ್ಕೆ. ಕಲ್ಕತ್ತಾಗೆ ಪಯಣ. ಅದೇ ವರ್ಷ 14ರ ಹರೆಯದ ಲೋಕಸುಂದರಿ ಅಮ್ಮಾಳ್‌ರನ್ನು ಅವರು ಕೈಹಿಡಿದರು. ವಿವಾಹ ಸಾಂಪ್ರದಾಯಿಕವಾಗಿ ನೆರವೇರಲಿಲ್ಲ. ನಾನು, ಆಕೆ ಚೆನ್ನಾಗಿ ಬಾಳಬಲ್ಲೆವೆಂಬ ವಿಶ್ವಾಸ‌ವೇ ಸಾಕು, ಹಿರಿಯರ ಅಣತಿಗಿಂತ ಅದು ಮುಖ್ಯವೆಂಬ ನಿಲುವು ರಾಮನ್‌ರದು. ಬುದ್ಧಿ ಶ್ರೀಮಂತಿಕೆ ಆರ್ಥಿಕ ಶ್ರೀಮಂತಿಕೆಗಿಂತ ಮೇಲೆಂದು ಭಾವಿಸಿದ್ದ ಮಹಿಳೆಯಾಗಿದ್ದರು ಲೋಕಸುಂದರಿ. ಅತಿಶಯ ವೆಂದರೆ ಖ್ಯಾತ ಖಗೋಳ ವಿಜ್ಞಾನಿ ನೊಬೆಲ್‌ ಪ್ರಶಸ್ತಿ ವಿಜೇತ ಡಾ.ಸುಬ್ರಹ್ಮಣ್ಯನ್‌ ಚಂದ್ರಶೇಖರ್‌ರವರು ರಾಮನ್‌ರ ಸೋದರಳಿಯ. ಒಂದೇ ಕುಟುಂಬದಲ್ಲಿ ಇಬ್ಬರು ಮೇರು ಭೌತವಿಜ್ಞಾನಿಗಳು!

ಬೆಳಕಿಗಿಂತ ಬೆರಗಿಲ್ಲ. ಅಬ್ಬಬ್ಬ! ಮನುಷ್ಯನ್ನು ಅದೆಷ್ಟು ತಿಂಡಾಡಿ ಸುತ್ತಿದೆ, ಈ ನಿಟ್ಟಿನಲ್ಲಿ ವೇದವ್ಯಾಸರನ್ನು ನಾವು ಮೆಚ್ಚಲೇಬೇಕು. “ಎಲ್ಲಕ್ಕಿಂತ ವೇಗವಾಗಿ ಚಲಿಸುವುದು ಯಾವುದು?’ - ತಮ್ಮ ಅನನ್ಯ ಕೃತಿ ಮಾಹಾಭಾರತದಲ್ಲಿ “ಯಕ್ಷ ಪ್ರಶ್ನೆ’ ಸಂದರ್ಭದಲ್ಲಿ ಯಕ್ಷ ಧರ್ಮರಾಜನಿಗೆ ಕೇಳಲಾದ ಪ್ರಶ್ನೆಗಳಲ್ಲೊಂದು. “ಮನಸ್ಸು ಎಂಬ ಸರಿಯುತ್ತರ ಧರ್ಮರಾಯನಿಂದ. ಅವನ ಉತ್ತರ ಇಂದಿಗೂ ಸರಿಯೇ. ಏಕೆಂದರೆ ಬೆಳಕಿಗಿಂತ ವೇಗದ್ದು ಇನ್ನೂ ದಕ್ಕಿಲ್ಲ-ಮನಸ್ಸಿಗೆ ಹೊರತಾಗಿ! ರಾಮನ್‌ ತಮ್ಮ “ರಾಮನ್‌ ಎಫೆಕ್ಟ್’ ಪ್ರಕಟಿಸಿದ್ದು 1928ರಲ್ಲಿ. ಅದಕ್ಕಾಗಿಯೇ ಪ್ರತೀ ವರ್ಷ ಫೆಬ್ರವರಿ 28ನೇ ದಿನಾಂಕವನ್ನು ನಾವು ಭಾರತದ ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸುತ್ತೇವೆ.

ಏನಿದು ರಾಮನ್‌ ಪರಿಣಾಮ? ಪಾರಕ ಮಾಧ್ಯಮದ ಮೂಲಕ ಏಕವರ್ಣೀ ಬೆಳಕು ಹಾಯುವಾಗ ಅದರ ತರಂಗ ದೂರಕ್ಕೂ ಚೆದರಿದ ಬೆಳಕಿನ ತರಂಗ ದೂರಕ್ಕೂ ವ್ಯತ್ಯಯ ಕಂಡುಬರುತ್ತದೆ. ಮಾಧ್ಯಮದ ಅಣುಗಳ ಭ್ರಮಣ ಮತ್ತು ಕಂಪನಶಕ್ತಿ ಬೇಳಕಿನ ಕಣಗಳ ಮೇಲೆ ವರ್ತಿಸುವುದರಿಂದ ಈ ವ್ಯತ್ಯಯವಾಗುವುದು. ಸೂರ್ಯನ ಬೆಳಕನ್ನು ಗಾಳಿಯ ಅಣುಗಳು ಚದರಿಸುವುದೇ ಆಕಾಶ ನೀಲಿಯಾಗಿ ಕಾಣಿಸಲು ಕಾರಣವೆಂದು ಸಾಬೀತುಪಡಿಸಿದ ಧೀಮಂತ ರಾಮನ್‌. ಬೆಳಕು ಒಂದು ಅಣುವಿನೊಡನೆ ಪ್ರತಿಕ್ರಿಯಿಸುವಾಗ ತನ್ನ ಶಕ್ತಿಯ ಒಂದಂಶ ಅದಕ್ಕೆ ಹಸ್ತಾಂತರಿಸುತ್ತದೆ. ಹಾಗಾಗಿ ಬೆಳಕಿನ ಬಣ್ಣ ಬದಲಾಗುತ್ತದೆ. ಅಣು ನರ್ತನಗೈಯ್ಯುವುದು. ಬೆಳಕಿನ ವರ್ಣ ಬಲಾವಣೆಯೇ ಅಣುವಿನ ಹೆಗ್ಗುರುತುಗಳಾ ಗುತ್ತವೆ. ರಾಮನ್‌ “ರೋಹಿತ ವಿಜ್ಞಾನ’ಕ್ಕೆ ಈ ಹೆಗ್ಗುರುತುಗಳೇ ಆಧಾರಗಳು. ಜಗತ್ತಿನಾದ್ಯಂತ ಪ್ರಯೋಗಾಲ ಯಗಳಲ್ಲಿ ವಿವಿಧ ರೋಗಗಳ ಪತ್ತೆಗೆ ವೈದ್ಯವಿಜ್ಞಾನಿಗಳು ರಾಮನ್‌ರ ಮಹತ್ವದ ಶೋಧವನ್ನೇ ಅವಲಂಬಿಸಿದ್ದಾರೆಂದರೆ ವಿಜ್ಞಾನಕ್ಕೆ ಭಾರತದ ಕೊಡುಗೆ ಕುರಿತು ಹೆಮ್ಮೆ ಮೂಡುತ್ತದೆ.

ತಮ್ಮ ಶೋಧಕ್ಕೆ ರಾಮನ್‌ 1930ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆದರು. ಇದಕ್ಕೆ ಹಿಂದೆಯೇ ರಾಮನ್‌ಗೆ ಬ್ರಿಟಿಷ್‌ ಸರ್ಕಾರ ಸರ್‌ ಪದವಿಯಿತ್ತು ಗೌರವಿಸಿತ್ತು. ಪ್ರತಿಷ್ಠಿತ ನೋಬಲ್‌ ಬಹುಮಾನಕ್ಕೆ ಅರ್ಹರಾದ ಮೊಟ್ಟಮೊದಲ ಏಷ್ಯನ್‌ ಎಂಬ ಹಿರಿಮೆ ಕೂಡ ಅವರದು. ರಾಮನ್‌ರ ಈ ಶೋಧ ಬಹು ಉಪಯುಕ್ತವೆಂದು ಬೇರೆ ಹೇಳಬೇಕಿಲ್ಲ. ‘ನಾಸಾ’ದ ಮಂಗಳ ಗ್ರಹ ಅಭಿಯಾನದಲ್ಲೂ ಇದನ್ನು ಬಳಸಿಕೊಳ್ಳಲಾಗಿದೆ. ವಜ್ರ, ಹವಳ, ಮುತ್ತುಗಳ ಗುಣಮಟ್ಟ ನಿಷ್ಕರ್ಷೆಗೆ, ಕ್ಯಾನ್ಸರ್‌ ಗಡ್ಡೆಯ ತೀವ್ರತೆ ತಿಳಿಯಲು ಮಾತ್ರವಲ್ಲ ಪ್ರಾಗೈತಿಹಾಸಿಕ ವಿಜ್ಞಾನ ಅಧ್ಯಯನ, ಸಂಶೋಧನೆಗಳಿಗೂ ರಾಮನ್‌ ಪರಿಣಾಮ ಕೈಮರವಾಗಿದೆ. 1933 ರಲ್ಲಿ ರಾಮನ್‌ ಬೆಂಗಳೂರಿನ ಇಂಡಿ ಯನ್‌ ಇನ್‌ಸ್ಟಿಟ್ಯೂಟ್‌ ಅಫ್ ಸೈನ್ಸ್‌ ನ ನಿರ್ದೇಶಕರಾದರು.

Advertisement

1948ರಲ್ಲಿ ಸ್ವಯಂನಿವೃತ್ತಿ ಪಡೆದು ಬೆಂಗಳೂರಿನಲ್ಲಿ ತಮ್ಮದೇ ಸಂಶೋಧನಾ ಸಂಸ್ಥೆ “ರಾಮನ್‌ ಇನ್‌ಸ್ಟಿಟ್ಯೂಟ್‌’ ಸ್ಥಾಪಿಸಿದರು. ಪ್ರಯೋಗ-ಸಿದಾಂœತ- ಪ್ರಯೋಗ ಈ ಚಕ್ರವೇ ಅವರ ಪೂಜೆಯಾಯಿತು. ಕಣ್ಣು, ದೇಹ ರಚನೆ ಬಗ್ಗೆ ಅವರು ವಿಶೇಷ ಆಸಕ್ತಿ ತಳೆದರು. ಸಂಶೋಧನೆ ಮುಂದುವರೆಸಿದರು. ಅವರ ಸಂಸ್ಥೆಯ ಒಂದು ಭಾಗ ಮುತ್ತು, ವಜ್ರ, ಹವಳಗಳ ಸಂಗ್ರಹಾಲ ಯವೇ ಆಗಿತ್ತು.

ರಾಮನ್‌ ಸಂಗೀತ ವಾದ್ಯಗಳನ್ನು ಅಧ್ಯಯನ ಮಾಡಿದ್ದ ಯಶೋವಂತ. ಎಷ್ಟಾದರೂ ಧೀಮಂತಿಕೆಗೆ ಆಗಸವೇ ತಾನೆ ಮಿತಿ? ರಾಮನ್‌ ದೇಶ ವಿದೇಶ ಸುತ್ತಿ ವಿಜ್ಞಾನ ಸಮ್ಮೇಳನ ಗಳಲ್ಲಿ, ಸಂವಾದಗಳಲ್ಲಿ ಪಾಲ್ಗೊಂಡರು. ಪ್ರಬಂಧ ಮಂಡಿ ಸಿದರು. ಹಡಗಿನಲ್ಲಿ ಪಯಣಿಸುವಾಗಲೂ ಅವರ ನೆಟ್ಟ ದೃಷ್ಟಿ ಮುಗಿಲಿನತ್ತ. ಬಣ್ಣ, ಬಯಲು, ಸಾಗರ, ಹಕ್ಕಿ, ಅಲೆ, ಸೂರ್ಯ ಚಂದ್ರರ ಉದಯ, ಅಸ್ತದತ್ತಲೇ ಚಿತ್ತ. ನವೆಂಬರ್‌ 21, 1970 ರಂದು ಸರ್‌ ಸಿ.ವಿ. ರಾಮನ್‌ ಕೊನೆಯುಸಿರೆಳೆದರು. ಅಂತ್ಯ ಸಂಸ್ಕಾರ ಸಂದರ್ಭದಲ್ಲೂ ಸರಳತೆಯೇ. ಯಾರೂ ಅಳಬಾರದು, ಮರಣ ಅಸ್ವಾಭಾವಿಕವಲ್ಲ ಎಂಬ ಅವರದೇ ಸಂದೇಶವನ್ನು ಕುಟುಂಬದವರಾದಿಯಾಗಿ ಎಲ್ಲರೂ ಅಕ್ಷರಸಹ ಪಾಲಿಸಿದ್ದರು.

“ರಾಮನ್‌ ಪರಿಣಾಮ’ ಸಂಶೋಧನೆಗೆ ವೆಚ್ಚವಾದ ಹಣವೆಷ್ಟು ಗೊತ್ತೇ? ಕೇವಲ 200 ರೂ! ಈ ಕಾಲಕ್ಕೆ ಹೋಲಿಸಿದರೂ ಅದು ಅತಿ ಕಡಿಮೆ ಮೊತ್ತವೇ ಹೌದು. ರಾಮನ್‌ ಮಿತಭಾಷಿ. ಉಡುಗೆ ಸರಳ ಅರಳೆ ಸೂಟು. ತಲೆಗೆ ಜರಿಯ ಸೋಂಕಿಲ್ಲದ ಶ್ವೇತ ಶುಭ್ರ ರುಮಾಲು. ಹಾಸ್ಯಪ್ರವೃತ್ತಿ ಇವರು ನಿಜಕ್ಕೂ ವಿಜ್ಞಾನಿಯೆ ಎಂದು ಅಚ್ಚರಿಪಡುವಷ್ಟು ಅವರಲ್ಲಿ ಗಾಢವಾಗಿತ್ತು. ರಾಮನ್‌ ಸರ್‌, ಡಾರ್ವಿನ್ನನ ವಿಕಾಸವಾದಕ್ಕೆ ನಿಮ್ಮ ಕೊಡುಗೆಯೇನಾದರೂ ಇದೆಯೇ ಅಂತ ಸಂದರ್ಶಕರೊಬ್ಬರು ಕೇಳಿದಾಗ ಅವರ ಪ್ರತಿಕ್ರಿಯೆ; ಖಂಡಿತ ಉಂಟು, ಎರಡು ಮಕ್ಕಳು!. ಅಷ್ಟೇಕೆ ಸ್ವೀಡನ್ನಿನ ಸ್ಟಾಕೋಲ್ಮ್ನಲ್ಲಿ ನೊಬೆಲ್‌ ಪ್ರಶಸ್ತಿ ಪ್ರದಾನಿಸುವ ಸಮಾರಂಭದಲ್ಲೂ ಅವರು ಮೊನಚಿನಿಂದ ದೂರವಾಗೇನೂ ಇರಲಿಲ್ಲ. ಅಧಿಕೃತ ಸಭೆಗೆ ಮುನ್ನ ಏರ್ಪಾಡಾಗಿದ್ದ ಉಪಾಹಾರ ಕೂಟದಲ್ಲಿ ಗುಟುಕು ವೈನ್‌ ಎಲ್ಲರ ಮುಂದಿತ್ತು. ಮದ್ಯವೊಲ್ಲದ ರಾಮನ್‌ ಯು ಹ್ಯಾವ್‌ ಸೀನ್‌ ದಿ ರಾಮನ್‌ ಎಫೆಕ್ಟ್ ಆನ್‌ ಆಲ್ಕೊಹಾಲ್‌. ಟು ಡೇ ಪ್ಲೀಸ್‌ ಡೋಂಟ್‌ ಟ್ರೆç ಟು ಸೀ ದಿ ಆಲ್ಕೊಹಾಲಿಕ್‌ ಎಫೆಕ್ಟ್ ಆನ್‌ ರಾಮನ್‌! ಎಂದು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದರು.

ಹಿರಿಯ ವಿಜ್ಞಾನ ಲೇಖಕರಾಗಿದ್ದ ಪ್ರೊ.ಜಿ.ಟಿ. ನಾರಾಯಣ ರಾಯರು, ರಾಮನ್‌ ಸಂದರ್ಶಿಸುವ ನಿಮಿತ್ತ ಅವರ ಇನ್‌ಸ್ಟಿಟ್ಯೂಟ್‌ಗೆ ಹೋದರಂತೆ. ವಿಜ್ಞಾನಿಯ ದರ್ಶನ ಅಲಭ್ಯ ವೆಂದೇ ನಾರಾಯಣರಾಯರು ಭಾವಿಸಿದ್ದರು. ಹೋಗಲಿ, ಒಂದು ದಿನ ಗೊತ್ತು ಮಾಡಿಕೊಂಡು ಹೋದರಾಯಿತೆಂದು ಕುರ್ಚಿಯ ಮೇಲೆ ಕದಲದೆ ಕೂತರು. ಅರೆ! ಕೆಲವೇ ನಿಮಿಷಗಳಲ್ಲಿ ಪ್ರತ್ಯಕ್ಷಗೊಂಡವರು ರಾಮನ್‌ರ ಆಪ್ತ ಕಾರ್ಯದರ್ಶಿ ಅಲ್ಲ, ಸ್ವತಃ ಬನ್ನಿ ಎಂದು ನಗೆ ಸೂಸಿದ ಸಾಕ್ಷಾತ್‌ ರಾಮನ್‌! ವಿದ್ಯೆಯೊಡನೆ ವಿನಯವೆಂದರೆ ಇದೇ ಅಲ್ಲವೇ? 1954 ರಲ್ಲಿ ಭಾರತ ಸರ್ಕಾರ ಸಿ. ವಿ, ರಾಮನ್‌ರಿಗೆ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಪ್ರಶಸ್ತಿ ನೀಡಿತು. ವಿಜ್ಞಾನ ದಿನದ ಅರ್ಥಪೂರ್ಣತೆಯಿರುವುದು ಆಚರಣೆ ಗಿಂತಲೂ ಮಿಗಿಲಾಗಿ ವೈಜ್ಞಾನಿಕ ಮನೋಭಾವ ರೂಢಿಸಿ ಕೊಳ್ಳುವ ಪುನರ್ಸಂಕಲ್ಪದಿಂದ. ಭಾರತೀಯ ಪರಂಪರೆಯಲ್ಲಿ “ವಿಜ್ಞಾನವನ್ನು ಬ್ರಹ್ಮ ಎಂದು ತಿಳಿ’ (‘ವಿಜ್ಞಾನಂ ಬ್ರಹ್ಮತಿ ವ್ಯಜಾನಾತ್‌’) ಎಂಬ ನುಡಿಯಿದೆ. ವಿಜ್ಞಾನದ ಫ‌ಲ ಸಾಕು, ವಿಜ್ಞಾನ ಒಲ್ಲೆ ಎಂದರಾದೀತೆ?

– ಬಿಂಡಿಗನವಿಲೆ ಭಗವಾನ್‌

Advertisement

Udayavani is now on Telegram. Click here to join our channel and stay updated with the latest news.

Next