Advertisement

Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್‌ 16

10:33 AM Oct 19, 2024 | Team Udayavani |

ಅರಿವಳಿಕೆ ಶಾಸ್ತ್ರ ಅಥವಾ ಅನಸ್ಥೇಶಿಯಾವು ಒಂದು ಸಂಕೀರ್ಣ ವೈದ್ಯಕೀಯ ವಿಭಾಗವಾಗಿದ್ದು, 165 ವರ್ಷಗಳಷ್ಟು ದೀರ್ಘ‌ಕಾಲದಿಂದ ಬೆಳೆದುಬಂದಿದೆ. ಅರಿವಳಿಕೆಯ ಬಹಿರಂಗ ಪ್ರದರ್ಶನವು ನಡೆದದ್ದು 1846ರ ಅಕ್ಟೋಬರ್‌ 16ರಂದು, ಅಂದು ಮಸಾಚುಸೆಟ್ಸ್‌ ಜನರಲ್‌ ಹಾಸ್ಪಿಟಲ್‌ನಲ್ಲಿ ಡಾ| ಡಬ್ಲ್ಯುಟಿಜಿ ಮೋರ್ಟನ್‌ ಅವರು ಅರಿವಳಿಕೆಯ ಮೊತ್ತಮೊದಲ ಸಾರ್ವಜನಿಕ ಉಪಯೋಗವನ್ನು ನಡೆಸಿದರು.

Advertisement

ವೈದ್ಯಕೀಯ ಶಾಸ್ತ್ರದ ಇತಿಹಾಸದಲ್ಲಿ ಇದೊಂದು ಬಹಳ ಗಮನಾರ್ಹ ಮೈಲಿಗಲ್ಲು ಆಗಿ ದಾಖಲಾಗಿದೆ. ಆದರೆ ಅರಿವಳಿಕೆಯ ಆವಿಷ್ಕಾರದ ಹಿರಿಮೆಯನ್ನು ಯಾರೇ ಒಬ್ಬರು ವ್ಯಕ್ತಿಗೆ ನೀಡುವಂತಿಲ್ಲ; ಬದಲಾಗಿ ಈ ವಿಶೇಷ ವೈದ್ಯಕೀಯ ಶಾಸ್ತ್ರದ ಬೆಳವಣಿಗೆಯಲ್ಲಿ ಅನೇಕ ಮಂದಿ ಕೊಡುಗೆ ನೀಡಿದ್ದಾರೆ. ಹೀಗಾಗಿ ಅರಿವಳಿಕೆಶಾಸ್ತ್ರಜ್ಞರು ರೋಗಿಯ ಪುನಶ್ಚೇತನ, ದ್ರವಾಂಶ ಪುನರ್‌ಸ್ಥಾಪನೆ, ಉಸಿರಾಟ ಮಾರ್ಗ ನಿರ್ವಹಣೆ, ವೆಂಟಿಲೇಟರ್‌ ನೆರವು, ಶಸ್ತ್ರಚಿಕಿತ್ಸಾತ್ಮಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಶಸ್ತ್ರಚಿಕಿತ್ಸೆಯ ಬಳಿಕದ ನೋವು ನಿರ್ವಹಣೆಯಂತಹ ಹಲವು ರೀತಿಯ ಕೌಶಲಗಳಲ್ಲಿ ಪಾರಮ್ಯವನ್ನು ಹೊಂದಿರಬೇಕಾಗುತ್ತದೆ.

ಅರಿವಳಿಕೆಯ ಹಿಂದಿನ ವಿಜ್ಞಾನ

ಅರಿವಳಿಕೆ ಅಥವಾ ಅನಸ್ಥೇಶಿಯಾ ಎಂಬುದು ಶಸ್ತ್ರಕ್ರಿಯೆ ಮತ್ತು ಅಂಗಾಂಶ ಮಾದರಿ ಪಡೆಯುವಂತಹ (ಉದಾಹರಣೆಗೆ, ಚರ್ಮದ ಬಯಾಪ್ಸಿಗಳು) ಕೆಲವು ರೋಗಪತ್ತೆ ಮತ್ತು ತಪಾಸಣೆ ಪರೀಕ್ಷೆಗಳು ಹಾಗೂ ದಂತವೈದ್ಯಕೀಯ ಚಿಕಿತ್ಸೆಗಳ ಸಂದರ್ಭದಲ್ಲಿ ರೋಗಿಗಳು ನೋವು ಅನುಭವಿಸುವುದನ್ನು ತಡೆಯುವ ವೈದ್ಯಕೀಯ ಪ್ರಕ್ರಿಯೆಯಾಗಿದೆ.

Advertisement

ನೋವಿನಿಂದ ಆಚೆಗೆ: ಅರಿವಳಿಕೆ ತಂತ್ರಗಳ ಪಕ್ಷಿನೋಟ

ನೋವಿನಿಂದ ಎಷ್ಟು ಮತ್ತು ಯಾವ ವಿಧವಾಗಿ ಮುಕ್ತಿ ಅಗತ್ಯವಿದೆ ಎಂಬುದನ್ನು ಆಧರಿಸಿ ಅರಿವಳಿಕೆಶಾಸ್ತ್ರಜ್ಞರು ಹಲವಾರು ವಿಧಾನಗಳ ಮೂಲಕ ಅರಿವಳಿಕೆಯನ್ನು ಒದಗಿಸುತ್ತಾರೆ:

ಸಂಪೂರ್ಣ ಅರಿವಳಿಕೆ (ಜನರಲ್‌ ಅನಸ್ಥೇಶಿಯಾ)

ಇದು ಇಡೀ ದೇಹದ ಮೇಲೆ ಪ್ರಭಾವ ಬೀರುತ್ತದೆ, ಇದರ ಪ್ರಭಾವದಿಂದಾಗಿ ರೋಗಿಗಳು ಸಂಪೂರ್ಣವಾಗಿ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ ಮತ್ತು ನಿಶ್ಚಲರಾಗಿರುತ್ತಾರೆ. ದೇಹದ ಆಂತರಿಕ ಅಂಗಗಳನ್ನು ಒಳಗೊಂಡ ಸಂಕೀರ್ಣ ಶಸ್ತ್ರಚಿಕಿತ್ಸೆಗಳು ಅಥವಾ ಬೆನ್ನಿನ ಶಸ್ತ್ರಕ್ರಿಯೆಯಂತಹ ದೇಹದಲ್ಲಿ ಗಾಯ ಮಾಡಿ ಕೈಗೊಳ್ಳುವ ಯಾ ಸಾಕಷ್ಟು ಸಮಯ ತೆಗೆದುಕೊಳ್ಳುವ ಚಿಕಿತ್ಸೆಗಳ ಸಂದರ್ಭದಲ್ಲಿ ಅರಿವಳಿಕೆ ಶಾಸ್ತ್ರಜ್ಞರು ಸಂಪೂರ್ಣ ಅರಿವಳಿಕೆಯನ್ನು ಉಪಯೋಗಿಸುತ್ತಾರೆ. ಈ ಅರಿವಳಿಕೆ ಔಷಧಗಳನ್ನು ರಕ್ತನಾಳಕ್ಕೆ ಇಂಜೆಕ್ಷನ್‌ ರೂಪದಲ್ಲಿ ನೀಡಲಾಗುತ್ತದೆ ಅಥವಾ ಉಸಿರಾಡಬಹುದಾದ ಅನಿಲದ ರೂಪದಲ್ಲಿ ನೀಡಲಾಗುತ್ತದೆ.

 ನಿಗಾಯುಕ್ತ ನಿದ್ರಾಸ್ಥಿತಿ (ಮಾನಿಟರ್ಡ್ ಸೆಡೇಶನ್‌)

ಇದು ಸಂಪೂರ್ಣ ಅರಿವಳಿಕೆಯಂತೆಯೇ ಇದ್ದು, ಇಡೀ ದೇಹವನ್ನು ವಿಶ್ರಾಂತ ಸ್ಥಿತಿಗೆ ಒಯ್ಯುತ್ತದೆ; ನಿದ್ರೆ ಆವರಿಸುವಂತೆ ಮಾಡಬಲ್ಲುದು. ಆದರೆ ನಿಗಾಯುಕ್ತ ನಿದ್ರಾಸ್ಥಿತಿ ಅಥವಾ ಮಾನಿಟರ್‌x ಸೆಡೇಶನ್‌ನಲ್ಲಿ ಯಾವ ಮಟ್ಟಿಗಿನ ನಿದ್ರಾಸ್ಥಿತಿ ಅಗತ್ಯ ಎಂಬುದನ್ನು ಆಧರಿಸಿ ರೋಗಿ ಪ್ರಜ್ಞಾಸ್ಥಿತಿಯಲ್ಲಿದ್ದು, ಮಾತನಾಡಲು ಕೂಡ ಶಕ್ತರಾಗಿರಬಲ್ಲರು. ಈ ವಿಧವಾದ ಅರಿವಳಿಕೆಯಲ್ಲಿ ಕೊಲೊನೊಸ್ಕೊಪಿ ಅಥವಾ ಸಂಕೀರ್ಣ ದಂತವೈದ್ಯಕೀಯ ಚಿಕಿತ್ಸೆಯಂತಹ ಪ್ರಕ್ರಿಯೆಗಳ ಜತೆಗೆ ನೋವು ನಿವಾರಕಗಳನ್ನು ಸಂಯೋಜಿಸಬಹುದಾಗಿರುತ್ತದೆ. ಇಂತಹ ಅರಿವಳಿಕೆಗಳನ್ನು ಚುಚ್ಚುಮದ್ದಿನ ಮೂಲಕ ರಕ್ತನಾಳಕ್ಕೆ ನೀಡಲಾಗುತ್ತದೆ.

 ಪ್ರಾದೇಶಿಕ ಅರಿವಳಿಕೆ (ರೀಜನಲ್‌ ಅನಸ್ಥೇಶಿಯಾ)

ಒಂದು ಕಾಲು, ಒಂದು ಕೈ ಅಥವಾ ಸೊಂಟದಿಂದ ಕೆಳಗೆ ಎಲ್ಲ ಭಾಗಗಳು – ಹೀಗೆ ನೋವು ಮತ್ತು ಸಂವೇದನೆಯಿಂದ ಮುಕ್ತಿ ಎಲ್ಲಿ ಅಗತ್ಯವಿದೆಯೋ ಆ ದೇಹ ಪ್ರದೇಶಕ್ಕೆ ಮಾತ್ರ ಅರಿವಳಿಕೆ ಸ್ಥಿತಿಯನ್ನು ಉಂಟು ಮಾಡುವ ವಿಧಾನ ಇದು. ಕೈಗಳು ಮತ್ತು ಸಂಧಿಗಳ ಶಸ್ತ್ರಚಿಕಿತ್ಸೆಗಳು ಮತ್ತು ಸಿಸೇರಿಯನ್‌ ಸೆಕ್ಷನ್‌ ಪ್ರಸವ ಸಂದರ್ಭಗಳಲ್ಲಿ ಮಾತ್ರವಲ್ಲದೆ ಹೆರಿಗೆಯ ಬಳಿಕದ ನೋವನ್ನು ಉಪಶಮನಗೊಳಿಸಲು ಈ ವಿಧವಾದ ಅರಿವಳಿಕೆಯನ್ನು ಉಪಯೋಗಿಸಲಾಗುತ್ತದೆ. ಪ್ರಾದೇಶಿಕ ಅರಿವಳಿಕೆಯ ಸಂದರ್ಭದಲ್ಲಿ ರೋಗಿ ಎಚ್ಚರದಿಂದ ಮತ್ತು ವಿಶ್ರಾಂತ ಸ್ಥಿತಿಯಲ್ಲಿರುತ್ತಾರೆ. ಇಂಜೆಕ್ಷನ್‌ ಅಥವಾ ಕ್ಯಾಥೆಟರ್‌ ಮೂಲಕ ಇಂತಹ ಅರಿವಳಿಕೆ ಔಷಧಗಳನ್ನು ನೀಡಲಾಗುತ್ತದೆ.

 ಸ್ಥಳೀಯ ಅರಿವಳಿಕೆ

ಸ್ಥಳೀಯ ಅರಿವಳಿಕೆಯು ದೇಹದ ಒಂದು ಸಣ್ಣ ಭಾಗದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಉದಾಹರಣೆಗೆ, ದಂತ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಒಂದು ಹಲ್ಲಿಗಾಗುವ ನೋವು ಅನುಭವಕ್ಕೆ ಬಾರದಂತೆ ಮಾಡಲು ಅಥವಾ ಹೊಲಿಗೆ ಹಾಕಬೇಕಾದ ಚರ್ಮದ ಒಂದು ಸಣ್ಣ ಭಾಗದಲ್ಲಿ ನೋವು ಅನುಭವಕ್ಕೆ ಬಾರದಂತಿರಲು ಈ ವಿಧವಾದ ಅರಿವಳಿಕೆಯನ್ನು ಉಪಯೋಗಿಸುತ್ತಾರೆ. ಪ್ರಾದೇಶಿಕ ಅರಿವಳಿಕೆಯಂತೆಯೇ ಸ್ಥಳೀಯ ಅರಿವಳಿಕೆಯಲ್ಲಿ ಕೂಡ ರೋಗಿ ಪ್ರಜ್ಞಾಸ್ಥಿತಿಯಲ್ಲಿ ಇರುತ್ತಾರೆ ಮತ್ತು ವಿಶ್ರಾಂತರಾಗಿರುತ್ತಾರೆ. ಸ್ಥಳೀಯ ಅರಿವಳಿಕೆ ಔಷಧಗಳನ್ನು ಇಂಜೆಕ್ಷನ್‌, ಚರ್ಮದ ಮೇಲೆ ಹಚ್ಚುವ ಮುಲಾಮು ಅಥವಾ ಸ್ಪ್ರೆà, ಕಣ್ಣಿಗೆ ಹಾಕುವ ಹನಿಬಿಂದುಗಳು ಅಥವಾ ಚರ್ಮದ ಮೇಲೆ ಹಚ್ಚುವ ಪ್ಯಾಚ್‌ ರೂಪದಲ್ಲಿ ನೀಡಲಾಗುತ್ತದೆ.

-ಮುಂದಿನ ವಾರಕ್ಕೆ

ಡಾ| ಮಾಲವಿಕಾ

ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು

ಅನಸ್ಥೇಶಿಯಾಲಜಿ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಅನಸ್ಥೇಶಿಯಾ ವಿಭಾಗ, ಕೆಎಂಸಿ, ಮಂಗಳೂರು)

 

 

Advertisement

Udayavani is now on Telegram. Click here to join our channel and stay updated with the latest news.

Next