Advertisement

ದಕ್ಷಿಣಕ್ಕೂ ಚಿಪ್ಕೋ ಚಳವಳಿ ಹರಡಿದ ಸಂತ

12:14 AM May 22, 2021 | Team Udayavani |

1970ರ ದಶಕದ ಕೊನೆಯಲ್ಲಿ ದಿಲ್ಲಿ ವಿವಿಯಲ್ಲಿ ನಾನು ಎಂಎ ಪದವಿ ಮುಗಿಸಿದ ವರ್ಷ. ಅದೇ ವೇಳೆಗೆ ಹಿಮಾಲಯದ ತಟದಲ್ಲಿ ವೃಕ್ಷಗಳ ಉಳಿವಿಗೆ ದೊಡ್ಡ ಆಂದೋಲನವೇ ನಡೆದಿತ್ತು. ಅದರ ಬಗ್ಗೆ ಪತ್ರಿಕೆಗಳಲ್ಲಿ ಕೇಳಿದ್ದೆ. ಮಲೆನಾಡ ಜಿಲ್ಲೆಯಿಂದ ಹೋದವನಿಗೆ ಒಂಥರಾ ಆಸಕ್ತಿ. ನಾನೂ ಈ ಚಳವಳಿ ಬಗ್ಗೆ ತಿಳಿದು­ಕೊಳ್ಳಲು ಕುತೂಹಲ­ದಿಂದ ಹುಡುಕಿಕೊಂಡು ಹೋದೆ.
ಅದು ತೆಹರಿಗಡ್ವಾಲ್‌ ಎಂಬ ಜಿಲ್ಲೆಯ ಗಂಗಾ ನದಿ ತಟದ ಒಂದು ಹಳ್ಳಿ. ಅಲ್ಲೇ ಒಂದು ಆಶ್ರಮ. ಸುಮಾರು 25 ಜನರಿದ್ದಿರಬಹುದು. ಒಬ್ಬರು ಖಾದಿ ದಿರಿಸಿನ, ತಲೆಯ ಮೇಲೆ ಬೆಳ್ಳನೆಯ ಕರ್ಚಿಪು ಕಟ್ಟಿಕೊಂಡ ಸಂತ ಇದ್ದರು. ಅವರೇ ಸುಂದರಲಾಲ್‌ ಬಹುಗುಣ. ಅವರ ಬಳಿ ಹೋಗಿ ಪರಿಚಯಿಸಿಕೊಂಡೆ. ಇಷ್ಟೆಲ್ಲ ಓದಿದವನು ನೌಕರಿಗೆ ಹೋಗುವುದಾದರೆ ಚಳವಳಿಗೆ ಬರುವುದು ಬೇಡ ಎಂದರು. ಮುಂದೆ ನೋಡೋಣ ಏನಾಗುತ್ತದೆ ಎಂದು ಸೇರಿಕೊಂಡೆ. ಅದೇ ನನ್ನ ಬದುಕಿಗೂ ಪ್ರೇರಣೆಯಾಯಿತು. ಇಷ್ಟು ದೂರ ನನ್ನನ್ನೂ ನಡೆಸಿತು.

Advertisement

ಗಾಂಧೀಜಿ ಅವರ ಸಾಬರಮತಿ ಆಶ್ರಮದಂತೆ ಬಹುಗುಣರದ್ದೂ ಸಿಲಿಯಾರದ ನವಜೀವನ ಆಶ್ರಮ. ಬೆಳಗ್ಗೆ ಪ್ರಾರ್ಥನೆ, ಆ ಬಳಿಕ ದೈಹಿಕ ಶ್ರಮ. ಅನಂತರ ಹೋರಾಟ. ಹೋರಾಟದ ಸಂಗತಿ ಜನರ ನಡುವೆ ಹಬ್ಬಿಸಲು ಪಾದಯಾತ್ರೆ ಹಮ್ಮಿಕೊಂಡಿದ್ದರು. ಅದರ ರೂಪುರೇಷೆಗಳ ಚರ್ಚೆ ಕೂಡ ನಡೆದಿದ್ದ ಕಾಲ. ನನಗೂ ಭಾಗವಹಿಸಲು ಅವಕಾಶ ಸಿಕ್ಕಿತು. ಮರಗಳ ಹನನದ ವಿರುದ್ಧ ಮರವನ್ನೇ ಬಿಗಿದಪ್ಪಿ ನಡೆಸುವ ಚಿಪ್ಕೋ ಚಳವಳಿ ಅದು. ವಂದನಾ ಶಿವ ಸೇರಿದಂತೆ ಇಂದಿನ ಪ್ರಮುಖ ಪರಿಸರ ಹೋರಾಟಗಾರರಿದ್ದರು.

ಹಿಮಾಲಯದ ಹಳ್ಳಿ ಹಳ್ಳಿಗಳಲ್ಲೂ ಮರ ಉಳಿಸಿ ಜಾಗೃತಿ ಮಾಡುವುದು, ಅದಕ್ಕಾಗಿ ಪಾದಯಾತ್ರೆ ಮಾಡುವುದು ಅವರ ಕನಸು, ಗುರಿ ಆಗಿತ್ತು. ಇದರ ಪರಿಣಾಮವೇ ಹಿಮಾಲಯದಲ್ಲಿ 4800 ಕಿಮೀ ದೂರ ಪಾದಯಾತ್ರೆ ಮಾಡಿದರು. ಕಾಶ್ಮೀರದಿಂದ ಕೊಹಿಮಾ ತನಕ. ನಾನೂ ಭೂತಾನ್‌, ಈಶಾನ್ಯ ರಾಜ್ಯಗಳಾದ ಅಸ್ಸಾಂ, ನಾಗಾಲ್ಯಾಂಡ್‌ಗಳಲ್ಲೂ ಪಾಲ್ಗೊಂಡಿದ್ದೆ. ಹಿಡಿದ ಪಟ್ಟು ಬಿಡದೆ ಸಾಧಿಸಿದವರು ಬಹುಗುಣ.

ಹಿಮಾಲಯದ ಚಿಪ್ಕೋ ಚಳವಳಿ ಮಾದರಿಯಲ್ಲೇ ಅಪ್ಪಿಕೋ ಚಳವಳಿಯನ್ನು ದಕ್ಷಿಣ ಭಾರತಕ್ಕೂ ಹಬ್ಬಿಸಿದವರು ಸುಂದರಲಾಲರು. 1983ರಲ್ಲಿ ಉತ್ತರ ಕನ್ನಡಕ್ಕೆ ಅಪ್ಪಿಕೋ ಚಳವಳಿಗಾಗಿ ಬಂದಿದ್ದರು. ಆಗ ಜಿಲ್ಲೆಯ ಕೆಲವು ಕಡೆ ಇಲ್ಲಿ ವಿವಿಧ ಮರಗಳನ್ನು ಕಡಿದು ಸಾಗುವಾನಿ ನೆಡುತೋಪಿನ ನಿರ್ಮಾಣ ಕಾರ್ಯ ನಡೆದಿತ್ತು. ಅದಕ್ಕೆ ಬಾಳೆಗದ್ದೆ ಯುವಕ ಸಂಘದವರು ಬಹುಗುಣರನ್ನು ಕರೆಸಿದ್ದರು. ಅಂದು ಬಾಳೆಗದ್ದೆ ಶಾಲೆಯಲ್ಲಿ ಕಡಿತಕ್ಕೆ ಮಾರ್ಕಿಂಗ್‌ ಆದ ಮರಗಳನ್ನು ಉಳಿಸುವ
ಪ್ರತಿಜ್ಞೆ ಮಾಡಿ­ಸಿದ್ದರು. ಅದೇ ಅಪ್ಪಿಕೋ ಚಳವಳಿಗೆ ನಾಂದಿ ಆಯಿತು.

1983, ಸೆ.8ರಂದು ಅಪ್ಪಿಕೋ ಚಳವಳಿ ಶುರುವಾಯಿತು. ಅದಕ್ಕೆ ಮೂಲ ಪ್ರೇರಣೆ ಕೊಟ್ಟವರು ಬಹುಗುಣರು. ಅಲ್ಲಿಂದ ಉತ್ತರ ಕನ್ನಡದ ನಂಟು ಬೆಳೆಯಿತು. ಅದೇ ವರ್ಷದ ಡಿಸೆಂಬರ್‌ನಲ್ಲಿ ಮತ್ತೆ ಬಹುಗುಣರು ಬಂದರು. ಅಪ್ಪಿಕೋ ಚಳವಳಿ ಜಾಗೃತಿಗಾಗಿ ಹಿಮಾಲಯದಲ್ಲಿ ನಡೆದಂತೆ ಇಲ್ಲೂ ಪಾದಯಾತ್ರೆ ನಡೆಸಿದರು. ಸಾಲಕಣಿಯಿಂದ ಮತ್ತಿಘಟ್ಟದ ತನಕ ಸುಮಾರು 25 ಕಿಮೀ ದೂರ ಎರಡು ಮೂರು ದಿನಗಳ ಕಾಲ ಪರಿಸರ ಕಾರ್ಯಕರ್ತರ ಜತೆ ನಡೆದು ಜಾಗೃತಿ ಮೂಡಿಸಿದರು.

Advertisement

ಇದೇ ಮಾದರಿ ಹೋರಾಟ ದಕ್ಷಿಣ ಕನ್ನಡ­ದಲ್ಲೂ ನಡೆಯಿತು. ಚಂಪಾ ದೈತೋಟರು ಕರೆಸಿದ್ದರು. ಕೊಡಗಿನಲ್ಲೂ ಆಯಿತು. ಸ್ನೇಹಕುಂಜದ ಕುಸುಮಕ್ಕ­ನನ್ನೂ ಭೇಟಿ ಮಾಡಿ ಪರಿಸರದ ಮಾತುಕತೆ ಆಡುತ್ತಿದ್ದರು. ಅಲ್ಲಿನ ಚಿಪ್ಕೋ ಇಲ್ಲಿ ಅಪ್ಪಿಕೋ ಆಗಿ ಮುಂದುರಿಯಿತು. ಉತ್ತರ ಕನ್ನಡದ ಅಪ್ಪಿಕೋ ಅಭಿಯಾನ, ಪಾದಯಾತ್ರೆಯಿಂದ ಉಳಿಸು-­ಬೆಳೆಸು-­­ಬಳಸು’ ಅಭಿಯಾನ ಶುರು­ವಾಯಿತು. ಅಂದಿನ ಸಿಎಂ ರಾಮಕೃಷ್ಣ ಹೆಗಡೆ ದೊಡ್ಮನೆ ಅವರನ್ನು ಭೇಟಿ ಮಾಡಿ ಅರಣ್ಯ ನೀತಿಯಲ್ಲಿನ ಬದಲಾವಣೆಗೂ ಮನವಿ ಮಾಡಿದ್ದರು. ಸರಕಾರಿ ನೀತಿ­ಯಲ್ಲೂ ಬದಲಾವಣೆಗೆ ಕಾರಣರಾದರು ಬಹುಗುಣ.

ಪಶ್ಚಿಮ ಘಟ್ಟಕ್ಕೂ ಹೋರಾಟದ ಸ್ಪರ್ಶ
2008ರಲ್ಲಿ ಅಪ್ಪಿಕೋ ಚಳವಳಿಯ ರಜತ ಮಹೋತ್ಸವಕ್ಕೆ ಬಂದು ಮಕ್ಕಳ ಜತೆ ಸಂವಾದದಲ್ಲೂ ಪಾಲ್ಗೊಂಡಿದ್ದರು. ಅಲ್ಲಿಂದಲೇ ಪಶ್ಚಿಮ ಘಟ್ಟ ಉಳಿಸಿ ಅಭಿಯಾನಕ್ಕೂ ಚಾಲನೆ ಸಿಕ್ಕಿತು. ಖಾದಿ ಬಟ್ಟೆ ತೊಟ್ಟು, ಸರಳ ಹಿಂದಿಯಲ್ಲಿ ಮಾತನಾಡುತ್ತ, ಮನೆ ಮಂದಿಯಂತೆ ಸರಳವಾಗಿ, ಮುಗ್ಧ ಮಗುವಿನಂತೆ ಕೆಲಸ ಮಾಡುತ್ತಿದ್ದ ಬಹುಗುಣರು ಅನೇಕ ಕಾರ್ಯಕರ್ತರಿಗೆ, ಪರಿಸರದ ಆಸಕ್ತರಿಗೆ ಪ್ರೇರಣೆ ಆಗಿದ್ದರು. ಬಹುಗುಣರು ನನಗೆ ಇಷ್ಟವಾಗಿದ್ದು ಅವರ ಸರಳತೆ. ಮುಗ್ಧ ಮನಸ್ಸು, ಕ್ರಿಯಾಶೀಲತೆ, ಪರಿಸರ ಉಳಿಸುವ ತುಡಿತದಿಂದ.

– ಪಾಂಡುರಂಗ ಹೆಗಡೆ, ಬಹುಗುಣರ ಒಡನಾಡಿ, ಪರಿಸರ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next