Advertisement
ಸಾಮಾನ್ಯವಾಗಿ ಕೇಳಿ ಬರುವ ಶ್ರೀ ಮುತ್ತಯ್ಯ ಭಾಗವತರ “ಆಂದೋಳಿಕಾ’ ವರ್ಣದಿಂದ ಕಾರ್ಯಕ್ರಮ ಪ್ರಾರಂಭಿಸಿದಾಗಲೇ ಶ್ರೋತೃಗಳಿಗೆ ಕಲಾವಿದರ ಧೋರಣೆ ವಿಷದವಾಯಿತು. ಮುಂದೆ ಕಲಾವಿದರು ಆಯ್ದ ಕೃತಿಗಳು ಹಾಗೂ ಮಾಡಿದ ನಿರ್ವಹಣೆ ಎಲ್ಲವೂ ವಿಶೇಷ ಅನಿಸಿದವು. ಶ್ರೀ ತ್ಯಾಗರಾಜ ಸ್ವಾಮಿಗಳ “ಶ್ರೀ ರಘುಕುಲ’ (ಹಂಸದ್ವನಿ) ಅದರಲ್ಲಿ ಬಂದ ಸ್ವರಾಲಂಕಾರಗಳು ಗಮನೀಯ. ಮುಂದೆ ಬಂದ “ಈ ಪರಿಯ ಸೊಬಗಾವ’ ರಾಗ ಮಾಲಿಕೆಯಾಗಿ ಬಂದರೆ ಮುತ್ತುಸ್ವಾಮಿ ದೀಕ್ಷಿತರ ಕೃತಿ “ವಿಶಾಲಾಕ್ಷಿ – ವಿಶ್ವೇಸಿ’ಗಾಗಿ ಕಾಮವರ್ಧಿನಿ “ಗೃಹಭೇಧ’ಗಳೊಂದಿಗೆ ವಿಸ್ತಾರವಾಗಿ ಮಂಡಿತವಾಯಿತು. ಮಿಶ್ರಛಾಪು ತಾಳದ ಈ ಕೃತಿಯ “ಕಾಶೀರಾಜಿ ಕೃಪಾಲಿನಿ’ ಎಂಬಲ್ಲಿ ಸವಿಸ್ತಾರವಾದ ನೆರಮ್ ಮತ್ತು ಕಲ್ಪನಾ ಸ್ವರಗಳ ಎರಡು ಎಡುಪುಗಳ ನಿರ್ವಹಣೆ ವಿಶಿಷ್ಟವಾಗಿದ್ದಿತು. ಸಾಮಾನ್ಯವಾಗಿ ಕಾರ್ಯಕ್ರಮಗಳಲ್ಲಿ ರಾಗದ ಆರೈಕೆಯಾಗಿ ಕಾಣಿಸಿಕೊಳ್ಳದ “ದೇವಗಾಂಧಾರಿ’ ತ್ಯಾಗರಾಜರ “ನಾಮೊರಾಲಗಿರಿಪವೇಮೊ’ ಕೃತಿಗಾಗಿ ಸವಿಸ್ತಾರವಾಗಿ ಮಂಡನೆಯಾದುದು ಕಲಾವಿದರ ವಿಭಿನ್ನ ಧೋರಣೆಯ ಕಾರಣದಿಂದ. ಅನಂತರ ಬಂದ ಕಾ.ವಾ.ವಾ. (ಪಾಪನಾ ಶಂಶಿವನ್ – ವರಾಳಿ) ಸರಳವಾಗಿದ್ದರೆ “ಸಕಲ ಗೃಹಬಲ’ದ ಅನಂತರ ಸರಸಸಾಮದಾನ ಮತ್ತು “ಹಿತವು ಮಾಟ’ ಎಂಬಲ್ಲಿ ಉತ್ತಮ ಲೆಕ್ಕಾಚಾರದ ಕಲ್ಪನಾ ಸ್ವರಗಳು ಹಿಂದಿನ ತಲೆಮಾರಿನ ಸ್ವರಕಲ್ಪನೆಯನ್ನು ನೆನಪಿಸಿದರೆ ವಿಶೇಷವಲ್ಲ. ಮುಂದೆ ಬಂದುದು ಕಾರ್ಯಕ್ರಮದ ಪ್ರಧಾನ ರಾಗವಾಗಿ ಮೂಡಿದ ಭೈರವಿ. ಮಧು ಮಾದರಿ ಎನ್ನಬಹುದಾದ ಸೌಂದರ್ಯದೊಂದಿಗೆ ವಿವಿಧ ಆಯಾಮಗಳನ್ನು ನಿರಾಯಾಸವಾಗಿ ಮಂಡಿಸಿ “ಕೋಲುವೈಯುನ್ನಾಡೆ’ ಕೃತಿಯನ್ನು ಎತ್ತಿಕೊಂಡರು. ಕೃತಿಯನ್ನು ಸಾವಧಾನವಾಗಿ ಮಂಡಿಸಿ “ಮನಸುರಂಜಿಲ್ಲು’ ಎಂಬಲ್ಲಿ ವಿಸ್ತಾರವಾಗಿ ಸಾಹಿತ್ಯ ವಿಸ್ತಾರ ಮಾಡಿ ಅತ್ಯುನ್ನತ ಮಟ್ಟದ ಕಲ್ಪನಾ ಸ್ವರಗಳೊಂದಿಗೆ ಕಾರ್ಯಕ್ರಮವನ್ನು ಮುನ್ನಡೆಸಿದರು.
Advertisement
ಒಂದು ಪರಿಪೂರ್ಣ ಸಂಗೀತ ಕಛೇರಿ
06:53 PM Apr 18, 2019 | mahesh |