Advertisement

ಚಹಾದ ಜೋಡಿ!

10:27 AM Dec 17, 2017 | |

ಸಾಮಾನ್ಯ ಪರಿಚಿತರೊಂದಿಗೆ ಮಾತನಾಡುವಾಗ, “”ಹೇಗಿದ್ದೀರ? ತಿಂಡಿ ಆಯ್ತಾ?ಏನ್‌ ತಿಂಡಿ?” ಅಂತೆಲ್ಲಾ ಕೇಳುವುದು ರೂಢಿಯೊಳಗಿನ ಉಭಯಕುಶಲೋಪರಿ ಮಾತು. ನಾವು ಬದುಕಿರೋದೇ ತಿನ್ನೋಕ್ಕಾಗಿ ಅನ್ನೋ ಜಾಯಮಾನದವರು ನಾವು.ಆದುದರಿಂದಲೇ ಏನೋ ಸಾಮಾನ್ಯವಾಗಿ ತಿಂಡಿ ಆಯ್ತಾ? ಊಟ ಆಯ್ತಾ? ಏನು ಅಡುಗೆ ಎಂಬ ಅನಗತ್ಯ ಪ್ರಶ್ನೆಗಳನ್ನು ಕೇಳುವುದು ಮಾಮೂಲಿ. ಬದುಕೋದಕ್ಕೆ ತಿನ್ನಬೇಕು  ಅಂತ ನಾವು ಆಗಾಗ್ಗೆ ಈ ಗಹನವಾದ ಉಪದೇಶವನ್ನು ಉಚಿತವಾಗಿ ಕೇಳಿಸಿಕೊಂಡರೂ, ನಾವು ಬದುಕಿರುವವರೆಗೂ ರುಚಿ ರುಚಿಯಾದ ತಿಂಡಿ ಊಟಗಳನ್ನು ನಾವಲ್ಲದಿದ್ದರೂ ಇಡೀ ದಿನ ಒದರಿ ಸುಸ್ತಾದ ನಮ್ಮ ನಾಲಗೆಯಂತೂ ಬಯಸುವುದು ಸಹಜ. ನಮ್ಮ ಜಿಹ್ವಾ ಚಾಪಲ್ಯಕ್ಕೆ ನಮ್ಮ ಮನಸು ಕೂಡ “ಅಹುದಹುದು’ ಅನ್ನುತ್ತ ಸಮ್ಮತಿಸುತ್ತದೆ.

Advertisement

ಹಸಿವೆಯಿಂದ ಕಂಗೆಟ್ಟವನಿಗೆ ಒಮ್ಮೆ ಒಂದು ಹಿಡಿ ಅನ್ನ ಸಿಕ್ಕರೆ ಸಾಕೆಂಬ ಪರಿಸ್ಥಿತಿ. ಯಾವಾಗ ಹೊಟ್ಟೆ ತುಂಬಿತೋ ಮತ್ತೆ ಮನಸು ಬಗೆ ಬಗೆಯ ರುಚಿಯ ಕಡೆಗೆ ಓಲಾಡುವ ಮನಸ್ಥಿತಿ.ಆಗ ಮನಸು ಮರ್ಕಟ. ಇದುವೇ ಬದುಕಿನ ವಿಚಿತ್ರ. ನಮ್ಮ ಆಸೆ ಆಕಾಂಕ್ಷೆಗಳಿಗೆ ಮಿತಿಯೇ ಇರೋದಿಲ್ಲ ನೋಡಿ! 

ತಿಂಡಿಯ ವಿಚಾರ ಬಂದ ಕೂಡಲೇ ನಾಲಗೆ ಕೂಡ ದಿಕ್ಕು ತಪ್ಪಿಸಿ ಬಿಡುತ್ತದೆ. ಈಗ ನಾನು ಅದೇನೋ ಹೇಳ್ಳೋಕೆ ಹೋಗಿ ವಿಷಯಾಂತರ ಆಯ್ತು ನೋಡಿ. ಅದೇನಂತ ಹೇಳಿಯೇ ಬಿಡುತ್ತೇನೆ ಮೊದಲು. ಆಮೇಲೆ ಅದೂ ಮರೆತು ಹೋಗಿ ನಾಲಗೆ ಬೇರೆ ದಿಕ್ಕಿನತ್ತ ಹೊರಳಿಕೊಂಡರೆ ಕಷ್ಟ. ನನ್ನ ಮಗರಾಯ ಬೆಳಗ್ಗೆ ಎದ್ದು , ಹಲ್ಲುಜ್ಜುವ ಮುಂಚೆಯೇ ಸುಪ್ರಭಾತ ಹೊರಡಿಸುತ್ತಾನೆ : “ಇವತ್ತು ಚಹಾಕ್ಕೇನು?’ ಅಂದರೆ, “ಚಹಾದ ಜೊತೆ ಏನು?’ ಅಂತ; ಚಹಾ ಜೋಡಿ ಚೂಡಾದಂಗ ಅಂತಾರಲ್ಲ ಹಾಗೆ.  ಅವನ ಮೆಚ್ಚುಗೆಯ ತಿಂಡಿಯ ಮೇಲೆ ಅಂದಿನ ಅವನ ಮೂಡ್‌ ಹೊಂದಿಕೊಳ್ಳುವುದು ನಂತರದ ವಿಚಾರ. ಇಂತಹುದೇ ತಿನಿಸಿಗೆ ಇಂತಹುದೇ ಪಲ್ಯ, ಚಟ್ನಿ, ಸಾಂಬಾರ್‌ ಹೊಂದಿಕೆ ಆಗುತ್ತದೆ ಅಂತ ನಿಖರವಾಗಿ ಹೇಳಿ ಬಿಡುವಷ್ಟು ಪಾಕ ರುಚಿಯ ಪ್ರಾವೀಣ್ಯವನ್ನು ಪಡೆದುಕೊಂಡು ಬಿಟ್ಟಿದ್ದ. ಪ್ರತೀದಿನ ಒಂದೇ ರೀತಿಯ ತಿಂಡಿ ಅವನಿಗೆ ಒಗ್ಗದ ವಿಷಯ. ನನಗೋ ಕಿರಿಕಿರಿ ಹುಟ್ಟಿ ದಿಗಿಲಾಗಿ ಅಕ್ಕಪಕ್ಕದ ಮನೆಯ ಅಮ್ಮಂದಿರನ್ನೆಲ್ಲ ವಿಚಾರಿಸಿದಾಗ “ಎಲ್ಲರ ಮನೆಯ ದೋಸೆ ತೂತೇ’ ಅಂತ ಕೊಂಚ ಸಮಾಧಾನ ಆಯ್ತು ಅನ್ನಿ. ಬಹುಶಃ ಶಾಲೆಯಲ್ಲಿನ ಮಕ್ಕಳ ವೈವಿಧ್ಯಮಯ ಟಿಫಿನ್‌ ಬಾಕ್ಸ್‌ಗಳ ಒಳಗಿನ ಕತೆಯಿದು ಅಂತ ಆಮೇಲೆ ಗೊತ್ತಾಯ್ತು ಬಿಡಿ.

ನಾನು ಎಳವೆಯಲ್ಲಿ ಕೊಡಗಿನ ಅಜ್ಜಿ ಮನೆಯಿಂದ ಶಾಲೆಗೆ ಹೋಗುತ್ತಿದ್ದೆ.ಆಗ ಅಲ್ಲಿನ ಪ್ರತಿ ನಿತ್ಯದ ತಿಂಡಿಯೆಂದರೆ ಅಕ್ಕಿ ರೊಟ್ಟಿ. ಪ್ರತಿನಿತ್ಯ ಎಲ್ಲ ಮನೆಗಳಲ್ಲೂ ಬೆಳಗ್ಗಿನ ತಿಂಡಿ ಅದೊಂದೇ.ಆಗ ಮಾಮೂಲಿಯಂತೆ, “ತಿಂಡಿ ಆಯ್ತಾ…?’ ಅಂತ ಕೇಳುತ್ತಿದ್ದೇವೆಯೇ ಹೊರತು, “ಏನು ವಿಶೇಷ?’ ಎಂದು ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ. ಆಗೆಲ್ಲ ನಮಗೆ ಅಕ್ಕಿ ರೊಟ್ಟಿಯ ಹೊರತಾದ ಒಂದು ತಿಂಡಿಯನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವೇ ಇರಲಿಲ್ಲ. ನಿಗಿ ನಿಗಿ ಕೆಂಡದೊಳಗೆ ಹಾಕಿ ಅಜ್ಜಿ ಸುಟ್ಟು ಕೊಟ್ಟ ರೊಟ್ಟಿಯನ್ನು  ಹಾಗೇ ಒಲೆ ಬುಡದಲ್ಲಿ ಕುಳಿತುಕೊಂಡು ಚಟ್ನಿ ಸವರಿ ಅದೆಷ್ಟು ತಿಂದು ಮುಗಿಸುತ್ತಿದ್ದೆವೋ ಲೆಕ್ಕವಿಡುತ್ತಿರಲಿಲ್ಲ. ಮಧ್ಯಾಹ್ನದ ನಮ್ಮ ಶಾಲೆ ಬುತ್ತಿಗೂ ಅದೇ ರೊಟ್ಟಿ ! ಮತ್ತೆ ಲಗುಬಗೆಯಿಂದ ಒಂದು ರೊಟ್ಟಿಯನ್ನು ಪತ್ರಿಕೆಯಲ್ಲಿ ಸುರುಳಿ ಸುತ್ತಿಕೊಂಡು ಹೋದರೆ ಮುಗಿಯಿತು, ಅದನ್ನು ಕಚ್ಚಿ ತಿಂದು, ಬೋರ್‌ವೆಲ್‌ ನೀರು ಕುಡಿದರೆ ಅವತ್ತಿನ ನಮ್ಮ ಮಧ್ಯಾಹ್ನದ ಊಟದ ಶಾಸ್ತ್ರ ಮುಗಿಯುತ್ತಿತ್ತು.

ಈಗ ನಾವಿರುವ ಪ್ರಾಂತ್ಯಕ್ಕೆ ಬಂದರೆ ಇಲ್ಲಿ ಬೆಳಗ್ಗಿನ ತಿಂಡಿ ಅಕ್ಕಿಯ ಹಿಟ್ಟಿನ ಮತ್ತೂಂದು ರೂಪಾಂತರದ ತಿಂಡಿ ಬಡ್‌ ರೊಟ್ಟಿ ಅಂತ. ಇನ್ನು ನಾವು ಬೇರೆ ಬೇರೆ ಜಿಲ್ಲೆಗಳಿಗೆ ಹೋದರೆ, ಜೋಳದ ರೊಟ್ಟಿ, ಗೋಧಿ ರೊಟ್ಟಿ, ರಾಗಿ ಮುದ್ದೆ.. ಹೀಗೆ ಬದಲಾಗುತ್ತಾ ಹೋಗುತ್ತದೆ.ಹಾಗಾಗಿ, ಬೆಳಗ್ಗಿನ ತಿಂಡಿಯೆಂಬುದು ಆಯಾ ಪ್ರಾಂತ್ಯಕ್ಕೆ, ಆಯಾ ಹವಾಮಾನಕ್ಕೆ ಅನುಗುಣವಾಗಿರುತ್ತದೆ. 

Advertisement

ಆದರೆ ಈಗ ಬೆಳಗಿನ ಉಪಾಹಾರದ ಸ್ವರೂಪವೇ ಬದಲಾಗಿದೆ.  ದಿಢೀರ್‌ ತಿಂಡಿಗಳು, ಮ್ಯಾಗಿ, ಪುಲಾವ್‌, ಚಿತ್ರಾನ್ನ… ಈ ರೀತಿ ವಗೈರ ವಗೈರ ಐಟಮ್‌ಗಳು ಪ್ರತ್ಯಕ್ಷವಾಗಿ ತಾಯಂದಿರ ಬೆಳಗಿನ ಕೆಲಸವನ್ನು ಅದೆಷ್ಟೋ ಸರಳಗೊಳಿಸಿವೆ. 

ನೆನಪಾಯ್ತು ನೋಡಿ: ನೌಕರಿ ನಿಮಿತ್ತ ದೂರದ ಹುಬ್ಬಳ್ಳಿಯಿಂದ ನಮ್ಮೂರಿಗೆ ಬಂದ ಮೇಡಂ ಒಬ್ಬರಿಗೆ, ಸ್ವಂತ ಊರಿನ ಬಗೆ ಬಗೆಯ ತಿಂಡಿಯನ್ನು ಮಾಡಿ ನಮಗೂ ತಂದುಕೊಡುವುದು ಅವರಿಗೆ ಪ್ರಿಯವಾದ ಸಂಗತಿ. ಹೇಗಿದ್ದರೂ ನಮಗೆ ತಿನ್ನುವ ಚಪಲ. ಎಣ್ಣೆಯÇÉೇ ಮುಳುಗಿ ಹೋದ ಅವರ ಅಷ್ಟು ತಿನಿಸುಗಳನ್ನೂ , ಬೊಜ್ಜಿನ ಚಿಂತೆಯನ್ನು ಆ ಕ್ಷಣಕ್ಕೆ ಒತ್ತಟ್ಟಿಗಿಟ್ಟು  , ಅದು ಹೇಗೇ ಇರಲಿ, ಅದನ್ನು ಅಚ್ಚು ಕಟ್ಟಾಗಿ ತಿಂದು ಮುಗಿಸಿ, ತುಂಬಾ ಚೆನ್ನಾಗಿದೆ ಅಂತ ತಾರೀಫ‌ು ಬೇರೆ ಕೊಟ್ಟು ಬಿಡುತ್ತಿ¨ªೆವು. ಆದರೆ, ಒಂದೇ ಒಂದು ದಿನ ಕೂಡ ನಾವು ಕೊಟ್ಟ ತಿಂಡಿಯನ್ನು  ಅವರು ರುಚಿ ನೋಡುವುದು ಹೋಗಲಿ, ಮುಟ್ಟಿಯೂ ಕೂಡ ನೋಡುವುದಿಲ್ಲ. “ಚೂರು ರುಚಿನಾದ್ರು ನೋಡಿ’ ಅಂತ ಒತ್ತಾಯಿಸಿದರೆ, ಯಾವ ಮುಲಾಜೂ ಇಲ್ಲದೆ, “”ಅಕ್ಕಾ..ನಮಗೆ ನಿಮ್ಮೂರಿನ ತಿಂಡಿ ಹಿಡಿಸೋದೇ ಇಲ್ಲ ನೋಡ್ರಿ” ಅಂತ ನಿರ್ದಾÂಕ್ಷಿಣ್ಯವಾಗಿ ನಾವು ಪ್ರೀತಿಯಿಂದ ಕೊಟ್ಟ ತಿಂಡಿಯನ್ನು ತಿರಸ್ಕರಿಸುತ್ತ, ಅವರೂರಿನ ತಿನಿಸು ಮಾಡುವ ವಿಧಾನದ ಬಗ್ಗೆ ವ್ಯಾಖ್ಯಾನ ಮತ್ತೆ ಮತ್ತೆ ಕೊಡುತ್ತಿರುತ್ತಾರೆ. ಅಭಿಮಾನವೆಂದರೆ ಹೀಗೂ ಇರುತ್ತದಾ ಅಂತ ನಾನು ಒಳಗೊಳಗೆ ಯೋಚಿಸತೊಡಗುತ್ತೇನೆ. ಒಮ್ಮೆಯಾದರೂ ಹುಬ್ಬಳ್ಳಿ ಸಮೀಪದ ಅವರ ಊರಿಗೆ ಈ ಕಾರಣಕ್ಕಾಗಿಯಾದರೂ ಹೋಗಿ ಬರಬೇಕೆಂದು ತೀರ್ಮಾನಿಸಿರುವೆ.

ಹಿಂದಿನ ಕಾಲದಲ್ಲಿ ರೊಟ್ಟಿ ಮೊಸರನ್ನದ ಬುತ್ತಿ ಕಟ್ಟಿಕೊಂಡು ಸಾಹಸಕ್ಕೊ ಅನುಭವ ವಿಸ್ತರಣೆಗೊ ಯಾವುದಾದರೊಂದು ಕಾರಣಕ್ಕೆ ಲೋಕಪರ್ಯಟನೆ ಮಾಡುತ್ತಿದ್ದರೆಂಬ ರೋಚಕ ಕಥೆಗಳಿಗೆ ನಾವುಗಳೆಲ್ಲ ಕಿವಿಯಾಗಿದ್ದೇವೆ. ಈಗ ಅದೇ ಕತೆಯನ್ನು ಮಕ್ಕಳ ಮುಂದೆ ಹರಿಯಬಿಟ್ಟರೆ ಅಷ್ಟೆಲ್ಲ ಸಾಹಸ ಯಾತ್ರೆ ಕೈಗೊಳ್ಳುವವರ ಹಸಿವು ನೀಗಿಸಲು ಅಲ್ಲಲ್ಲಿ ಹೊಟೇಲು ಕಟ್ಟ ಬೇಕೆಂಬ ಪರಿಜ್ಞಾನ ಆ ರಾಜರುಗಳಿಗೆ ಇರಲಿಲ್ಲವಾ ಪ್ರಶ್ನೆಯ ಬಾಣ ಬಿಡುತ್ತಾರೆ. ಯಾಕೆಂದರೆ ಇವತ್ತಿನ ಪರಿಸ್ಥಿತಿಯೇ ಹಾಗಿದೆ. ಕಾಲಿಗೊಂದು ಕೊಸರಿಗೊಂದರಂತೆ ಹೋಟೇಲು, ರೆಸ್ಟೋರೆಂಟು, ಢಾಬಾ ಮತ್ತೂಂದು ಮಗದೊಂದು ಅಂತ ನೂರೆಂಟು ಹೆಸರಿಟ್ಟುಕೊಂಡು ನಮ್ಮ ಜೇಬಿಗೆ ಕತ್ತರಿ ಹಾಕುತ್ತಾರೆ. ಇವನ್ನೆಲ್ಲ ನೋಡುತ್ತ, ತಿನ್ನುತ್ತ ಬೆಳೆದ ನಮ್ಮ ಮಕ್ಕಳಿಗೆ ಅಂದಿನ “ರೊಟ್ಟಿ-ಮೊಸರೂಟದ ಬುತ್ತಿ’ ಸ್ವಲ್ಪ ವಿಚಿತ್ರ ಕಥೆಯಾಗಿ ಕಂಡರೂ ಅಚ್ಚರಿಯಿಲ್ಲ. 

ಈಗ ಮ್ಯಾಗಿಯ ಅವಾಂತರ ಜಗಜ್ಜಾಹಿರಾಗಿದೆ. “ಇನ್ನು ರೆಡಿಮೇಡ್‌ ಫ‌ುಡ್‌, ಹೋಟೇಲ್‌ ಊಟ ಯಾವುದೂ ಒಳ್ಳೆಯದಲ್ಲ.ಆರೋಗ್ಯವೇ ಭಾಗ್ಯ’ ಅಂತ ಇಷ್ಟುದ್ದ ಪ್ರವಚನ ಬಿಟ್ಟರೂ ಮಕ್ಕಳ ಕಿವಿಯೊಳಗೆ ಹೊಗುವುದೇ ಇಲ್ಲ.ಜಾಹೀರಾತಿನ ರಾಗವೇ ಅವರಿಗೆ ವೇದಘೋಷ. ಹೊರಗಡೆ  ಹೋಗುವಾಗ ಏನಾದ್ರೂ ಮಾಡಿ ಮನೆಯಿಂದಲೇ ಬಾಕ್ಸ್‌ ಕಟ್ಟಿ ತೆಗೆದು ಹೋಗುವ ಯೋಚನೆ ಮಾಡಿದ್ರೆ, ಮಕ್ಕಳು ಒಪ್ಪುವುದೇ ಇಲ್ಲ.ಅವರ ಪ್ರಯಾಣದ ಮುಖ್ಯ ಉದ್ದೇಶವೇ ಹೋಟೆಲ್‌ ತಿಂಡಿ ಸವಿಯುವುದಕ್ಕೋಸ್ಕರ ಎಂಬಂತಿದೆ. 

ಅದಿರಲಿ, ತಿಂಡಿಯೆಂದರೆ ಅದು ಬೆಳಗ್ಗಿನ ಉಪಹಾರವಷ್ಟೇ ಅಲ್ಲ. ಫ‌ಕ್ಕRನೆ ಮನಸಿಗೆ ಬರುವ ಚಿತ್ರ ಬೇಕರಿತಿಂಡಿ, ಕುರುಕುರು ತಿಂಡಿ, ಅಲ್ಲದೆ, ಇನ್ನಿತರ ಸಿಹಿ ತಿನಿಸುಗಳು.  ಮಾರುಕಟ್ಟೆಗೆ ಇಳಿದರೆ ನಮಗೆ ಇದರ ವೈವಿಧ್ಯಮಯ ವಿಶ್ವರೂಪ ದರ್ಶನವಾಗುತ್ತದೆ. ತಿಂಡಿಗೆ,ಅದರಲ್ಲೂ ಸಿಹಿ ತಿಂಡಿಗೆ ಅಸೆ ಪಡದವರು ಯಾರಿ¨ªಾರೆ? ರಾಮಕೃಷ್ಣ ಪರಮಹಂಸರಿಂದ ಮಹಾತ್ಮಾಗಾಂಧೀಜಿಯವರೆಗೆ  ಸಿಹಿಯ ಪ್ರಲೋಭನೆ ಬಿಡಲಿಲ್ಲವೆಂದಾದ ಮೇಲೆ ಇನ್ನು ನಮ್ಮಂತಹ ಹುಲು ಮನುಜರ ಪಾಡೇನು? ಆಬಾಲವೃದ್ಧರವರೆಗೆ ಎಲ್ಲ ಇದರ ಅಭಿಮಾನಿಗಳೆ. ನಮಗೆ ಎಳವೆಯಲ್ಲಿ ಅಪರೂಪಕ್ಕೊಮ್ಮೆ ಸಿಗುವ ಹತ್ತು ಪೈಸೆಯ ಪೆಪ್ಪರಮೆಂಟಷ್ಟೆ ಸಿಹಿ ತಿನಿಸು.ಆ ಪೆಪ್ಪರಮೆಂಟಿಗಾಗಿ ಅದೆಷ್ಟೋ ಕೆಲಸಗಳನ್ನು ಮಾಡಿ ಮುಗಿಸುತ್ತಿ¨ªೆವು. ವರುಷಕ್ಕೊಮ್ಮೆ ಸಿಗುವ ಒಂದು ಲಡ್ಡಿಗೋ  ಒಂದು ಜಿಲೇಬಿಗೋ… ಬಾಯಿಯಲ್ಲಿ ಜೊಲ್ಲು ಸುರಿಸುತ್ತ ಕಾಯುತ್ತಿದ್ದೆವು. ಇಂಥ ತಿನಿಸುಗಳಲ್ಲದೆ,  ಅದರಾಚೆಗೆ ನಮಗೆ ಏನೂ ದಕ್ಕುತ್ತಿರಲಿಲ್ಲ. ಉಳಿದಂತೆ, ಅಮ್ಮ-ಅಜ್ಜಿ ಮಾಡಿಟ್ಟ ಹಪ್ಪಳ-ಸಂಡಿಗೆ-ಕೋಡುಬಳೆ-ರವೆ ಉಂಡೆ ಇವಿಷ್ಟೇ ನಮ್ಮ ಮೆಚ್ಚಿನ ತಿನಿಸುಗಳು.

ಈಗ ನಮ್ಮ ಮಕ್ಕಳಿಗೆ ಇಂಥ ತಿಂಡಿಯನ್ನು ಮಾಡಿಟ್ಟರೆ, ಅವರು ಅದರತ್ತ ಕಣ್ಣೆತ್ತಿಯೂ ನೋಡಲಾರರು. ನಮ್ಮದೂ ಅದೇ ಪಾಡು ತಾನೇ.ಅದನ್ನು ರಾಜಾರೋಷವಾಗಿ ಹೇಳಲಾದೀತೆ? ಅದು ನಮ್ಮ ವೃತ್ತಿ ಧರ್ಮಕ್ಕೆ ಅನ್ಯಾಯ ತಾನೆ? 

ಒಂದು ಕಡೆಯಿಂದ ಹೈ ಶುಗರ್‌ ಅಂತ ಜನ ಬೊಬ್ಬಿಟ್ಟರೂ ಮತ್ತೂಂದು ಕಡೆಯಿಂದ ಗಾಜಿನ ಗೋಡೆಯೊಳಗಿಂದ ಲಡ್ಡು, ಜಹಾಂಗೀರ್‌, ಜಿಲೇಬಿ…ತರಾವರಿ  ತಿನಿಸುಗಳಿಗೆ ಬೇಡಿಕೆ ಏರುತ್ತಲೇ ಇವೆ.ಯಾವ ಸಕ್ಕರೆ ಖಾಯಿಲೆಗೂ ನನ್ನನ್ನು ಹೊಡೆದೋಡಿಸಲು ಸಾಧ್ಯವಿಲ್ಲವೆಂಬಂತೆ ಗಾಜಿನ ಗೋಳದೊಳಗಿನ ಬಣ್ಣ ಬಣ್ಣದ ತಿನಿಸುಗಳು ಮಿಣ ಮಿಣ ನಕ್ಕಂತೆ ತೋರುತ್ತಿವೆ. ಅದರಾಚೆಗೂ ಭಯ ಹುಟ್ಟಿಸುವ ಸತ್ಯದ ಸಂಗತಿಯೆಂದರೆ, ಹೆಚ್ಚಿನ ಮಕ್ಕಳಲ್ಲಿ ತಿಂಡಿ ಏನು ಅಂತ ಕೇಳಿ ನೋಡಿ. ಬನ್ನು ,ಬ್ರೆಡ್‌,ಬಿಸ್ಕತ್‌,ರಸ್ಕ್,ಮ್ಯಾಗಿ..ಹೀಗೆ ರೆಡಿಮೇಡ್‌ ಹೆಸರುಗಳನ್ನು ಹೇಳುತ್ತಾ ಹೋಗುವಾಗ ದಿಗಿಲಾಗುತ್ತದೆ. 

ಸದ್ಯ ನನ್ನ ಮಕ್ಕಳು ಬೆಳಗ್ಗಿನ ಉಪಾಹಾರಕ್ಕೆ  ಫಿಜ್ಜಾ,ನೂಡಲ್ಸ್‌ ಕೇಳುತ್ತಿಲ್ಲವಲ್ಲ ಅಂತ ದೊಡ್ಡ ಸಮಾಧಾನದ ಉಸಿರು ಹೊರಹೊಮ್ಮಿ, “ನಾಳೆಗೆ ಏನ್‌ ತಿಂಡಿ ಮಾಡಲಿ?’ ಅಂತ ಮನಸು ಕುಣಿಯುತ್ತ ಯೋಚಿಸತೊಡಗುತ್ತದೆ.

– ಸ್ಮಿತಾ ಅಮೃತರಾಜ್‌

Advertisement

Udayavani is now on Telegram. Click here to join our channel and stay updated with the latest news.

Next