Advertisement

ಆಧುನಿಕತೆಗೆ ತೆರೆದುಕೊಳ್ಳದ ಗ್ರಂಥಾಲಯ

03:40 PM Oct 21, 2019 | Team Udayavani |

ಕುಷ್ಟಗಿ: ಜ್ಞಾನ ವಿಕಾಸದ ಪ್ರೇರಣೆಯಾಗಿರುವ ಪಟ್ಟಣದ ಶಾಖಾ ಗ್ರಂಥಾಲಯ ಹೊಸ ಕಟ್ಟಡವಾಗಿ ನಾಲ್ಕು ವರ್ಷಗಳಾಗಿವೆ. ಮಾಹಿತಿ ತಂತ್ರಜ್ಞಾನದ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳದೇ ಸರ್ಕಾರದ ಇತಿಮಿತಿಯಲ್ಲಿ ಅದೇ ವ್ಯವಸ್ಥೆಯಲ್ಲಿರುವುದೇ ಓದುಗರ ನಿರಾಸಕ್ತಿಗೆ ಕಾರಣವಾಗಿದೆ.

Advertisement

ಬಹುತೇಕ ಓದುಗರು ಮೊಬೈಲ್‌ ಗೆ ಮುಖಮಾಡಿರುವ ಹಿನ್ನೆಲೆಯಲ್ಲಿ ಗ್ರಂಥಾಲಯಕ್ಕೆ ಓದುಗರು ಭೇಟಿ ನೀಡುವುದು ವಿರಳರಾಗುತ್ತಿದ್ದು, ಇದನ್ನು ತಪ್ಪಿಸಲು ಓದುಗರ ನಿರೀಕ್ಷಿಸದಂತೆ ಕಾಲಕ್ಕೆ ತಕ್ಕಂತೆ ಇ-ಗ್ರಂಥಾಲಯಕ್ಕೆ ಬೇಡಿಕೆ ವ್ಯಕ್ತವಾಗಿದೆ. ಪಟ್ಟಣದಲ್ಲಿ 1982ರಿಂದ ಮಂಡಲ ಗ್ರಂಥಾಲಯ ಅಸ್ತಿತ್ವದಲ್ಲಿದ್ದು, 15 ವರ್ಷಗಳ ಹಿಂದೆ ಶಾಖಾ ಗ್ರಂಥಾಲಯವಾಗಿ ಮಾರ್ಪಟ್ಟಿದೆ. ಮಂಡಲ ಗ್ರಂಥಾಲಯ ಹಳೆ ಕಟ್ಟಡ ತೆರವುಗೊಳಸಿ ಈ ಹೊಸ ಕಟ್ಟಡ ನಿರ್ಮಾಣವಾಗಲು 10 ವರ್ಷ ಹಿಡಿಯಿತು. 2015ರಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಕಟ್ಟಡದಲ್ಲಿ ಈಗಿನ ಓದುಗರ ನಿರಾಸಕ್ತಿಗೆ, ಸದ್ಯದ ಪರಿಸ್ಥಿತಿಗೆ ಸರಿ ಹೊಂದಿದೆ.

26 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ ಈ ಗ್ರಂಥಾಲಯದಲ್ಲಿ 600 ಜನ ಸದಸ್ಯತ್ವ ಹೊಂದಿದ್ದಾರೆ. ಇವರಲ್ಲಿ ಪುಸ್ತಗಳನ್ನು ತೆಗೆದುಕೊಂಡು ಹೋಗಿ, ಓದಿ ವಾಪಸ್‌ ಕೊಡುವುದನ್ನು ರೂಢಿಸಿಕೊಂಡವರು 150 ಜನ ಮಾತ್ರ. ಕೇವಲ 20 ಜನರಿಗೆ ಸೀಮಿತವಾಗಿರುವ ಈ ಗ್ರಂಥಾಲಯದ ಆಸನದ ವ್ಯವಸ್ಥೆಯಲ್ಲಿ ಟಿವಿ, ಮೊಬೈಲ್‌, ಸಾಮಾಜಿಕ ಜಾಲತಾಣದ ಪರಿಣಾಮದಿಂದ ಓದುಗರು ನಿಯತ ಕಾಲಿಕೆಗೆ ಸೀಮಿತವಾಗಿದ್ದಾರೆ.

ದಿನ ಪತ್ರಿಕೆ, ವಾರಪತ್ರಿಕೆ, ಮಾಸಿಕ ಓದಲಷ್ಟೇ ಗ್ರಂಥಾಲಯಕ್ಕೆ ಬರುತ್ತಿದ್ದು, ಕೊಠಡಿಯಲ್ಲಿರುವ 17,185 ಪುಸ್ತಕಗಳ ಭಂಡಾರವನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಆಸನದ ಅಭಾವವಿದೆ. ಕಥೆ, ಕವನ, ಕಾದಂಬರಿ, ಸಾಹಿತ್ಯ ಕೃತಿಗಳನ್ನು ಅಲ್ಲಿ ಓದುವ ಪೂರಕ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ಓದುಗರು ಪುಸ್ತಕಗಳ ವಿನಿಮಯಕ್ಕೆ ಗ್ರಂಥಾಲಯಕ್ಕೆ ಭೇಟಿ ನೀಡುವುದು ರೂಢಿಸಿಕೊಂಡಿದ್ದಾರೆ.

ಗ್ರಂಥಾಲಯದ ಎದುರಿಗೆ ಇರುವ ಪುರಸಭೆ ಆವರಣ, ಹೋಟಲ್‌ ಗಳಲ್ಲಿ ಗಂಟೆಗಟ್ಟಲೇ ಹರಟೆಯಲ್ಲಿ ಸಮಯ ಕಳೆಯುವ ಯುವಕರು ಗ್ರಂಥಾಲಯಕ್ಕೆ ಬರುವುದು ಅಪರೂಪವೆನಿಸಿದೆ. ನಿವೃತ್ತರು, ವೃದ್ಧರು, ಉದ್ಯೋಗ ಆಕಾಂಕ್ಷಿಗಳು, ಕೆಲ ಸಾಹಿತ್ಯಾಸಕ್ತರು ಓದುವ ಹಸ್ಯಾವ ರೂಢಿಸಿಕೊಂಡಿದ್ದು, ಈ ಪರಿಸ್ಥಿತಿಯಲ್ಲೂ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪುಸ್ತಕಗಳಿಗಾಗಿಹುಡುಕಿಕೊಂಡು ಗ್ರಂಥಾಲಯಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.

Advertisement

ಅವ್ಯವಸ್ಥೆ: ಗ್ರಂಥಾಲಯದ ಹಿಂಬದಿ ಜಾಗೆಯಲ್ಲಿ ಪುರಸಭೆ ವಿರೋಧ ಲೆಕ್ಕಿಸದೇ ಚರಂಡಿ ನಿರ್ಮಿಸಲಾಗಿದೆ.  ಇದರಿಂದಾಗಿ ಚರಂಡಿ ನೀರು ಗ್ರಂಥಾಲಯದ ಆವರಣ ಮೂಲಕ ಹೊರಗೆ ಹರಿಯುತ್ತಿದ್ದು, ಚರಂಡಿ ಮುಚ್ಚಿಸಲು ಗ್ರಂಥಾಲಯ ಸಿಬ್ಬಂದಿ ಸ್ಥಳೀಯ ನಿವಾಸಿಗರ ವಿರೋಧ ಕಟ್ಟಿಕೊಳ್ಳುವಂತಾಗಿದೆ. ಚರಂಡಿ ನೀರಿನ ದುರ್ವಾಸನೆ ಒಂದೆಡೆಯಾದರೆ, ಪಕ್ಕದ ಮಟನ್‌ ಮಾರ್ಕೆಟ್‌ ತ್ಯಾಜ್ಯವನ್ನು ಗ್ರಂಥಾಲಯದ ಪಕ್ಕದಲ್ಲಿ ಹಾಕುತ್ತಿರುವುದು ಅಸನೀಯವೆನಿಸಿದೆ.

ಇನ್ನೂ ಗ್ರಂಥಾಲಯದ ಹೊರಗೆ ಖಾಸಗಿ ವಾಹನಗಳ ಪಾರ್ಕಿಂಗ್‌ ಹಿನ್ನೆಲೆಯಲ್ಲಿ ರವಿವಾರ ವಾರದ ಸಂತೆಯಂದು ಗ್ರಂಥಾಲಯಕ್ಕೆ ದಾರಿಯೇ ಇರುವುದಿಲ್ಲ. ಕಳೆದ 2015ರಲ್ಲಿ ಗ್ರಂಥಾಲಯ ಇಲಾಖೆಯ ಅನುದಾನದ 11 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ನಿರ್ಮಿಸಿದ ಗ್ರಂಥಾಲಯದ ಹೊಸ ಕಟ್ಟಡ ಉದ್ಘಾಟನೆಯಾದಾಗಿನಿಂದ ಮಳೆಗಾಲದಲ್ಲಿ ಸೋರುತ್ತಿದೆ. ಗ್ರಂಥಾಲಯದ ಮೇಲ್ಛಾವಣಿ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ. ಮಳೆ ನೀರು ಸೋರಿ ಗ್ರಂಥಾಲದಲ್ಲಿರುವ ಪುಸ್ತಕಗಳು ಹಾಳಾಗುವ ಅಪಾಯದ ಹಿನ್ನೆಲೆಯಲ್ಲಿ ಸಂಬಂಧಿಸಿದವರಿಗೆ ಮಾಹಿತಿ ನೀಡಿದರೂ ಸರಿಪಡಿಸಿಲ್ಲ.

ಗ್ರಂಥಾಲಯದ ಆವರಣದಲ್ಲಿ ಕಿರು ಉದ್ಯಾನ ನಿರ್ಮಿಸಿ, ಅಲ್ಲಿ ಓದುಗರಿಗೆ ಅನುಕೂಲವಾಗಲು ವಿಶ್ರಾಂತಿ ಆಸನ ನಿರ್ಮಿಸುವ ಉದ್ದೇಶವಿದೆ. ಆದರೆ ಅಕ್ಕಪಕ್ಕದ ಗಲೀಜು ವ್ಯವಸ್ಥೆಯಿಂದ ಸಾಧ್ಯವಾಗಿಲ್ಲ. ಶರಣಪ್ಪ ವಡಿಗೇರಿ,ಗ್ರಂಥಾಲಯ ಮೇಲ್ವಿಚಾರಕ

ಗ್ರಂಥಾಲಯದಲ್ಲಿ ಓದುಗರಿಗೆ ಅಲ್ಲಿಯೇ ಓದುವ ವ್ಯವಸ್ಥೆ ಇದ್ದು, ಪುಸ್ತಕದ ಪುಟಗಳ ಝೆರಾಕ್ಸ್‌ ಮಾಡಿಕೊಳ್ಳಲು ಜೆರಾಕ್ಸ್‌ ಯಂತ್ರ, ವಿದ್ಯುತ್‌ ಇಲ್ಲದ ಸಂದರ್ಭದಲ್ಲಿ ಯುಪಿಎಸ್‌ ಹಾಗೂ ಇಂಟರ್‌ನೆಟ್‌, ಕಂಪ್ಯೂಟರ್‌ ಸೇವೆ ಅಗತ್ಯವಾಗಿದೆ. ಓದುಗರ ಸಂಖ್ಯೆಗೆ ಅನುಗುಣವಾಗಿ ಆಸನದ ಕೊರತೆ ಇದ್ದು, ಮೇಲ್ಮಹಡಿ ಸಭಾಂಗಣ ನಿರ್ಮಿಸಿ ಉನ್ನತೀಕರಿಸುವ ಅಗತ್ಯವಿದೆ. ಕೆ.ಎಸ್‌. ಬಿರಾದಾರ, ಓದುಗ

 

-ಮುಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next