Advertisement

ಬೆಳಂದೂರು: ವಿದ್ಯಾರ್ಥಿಗಳಿಗೆ ಭತ್ತ ಬೇಸಾಯದ ಪಾಠ

12:56 AM Nov 23, 2019 | mahesh |

ಬೆಳಂದೂರು: ರೋಟರಿ ಕ್ಲಬ್‌ ಬೆಳ್ಳಾರೆ ಟೌನ್‌, ರೋಟರ್ಯಾಕ್ಟ್ ಕ್ಲಬ್‌ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇವುಗಳ ಸಹಭಾಗಿತ್ವದಲ್ಲಿ “ನಮ್ಮ ನಡೆ ಬೇಸಾಯದ ಕಡೆ’ ಅಭಿಯಾನದ ಮೂಲಕ ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಣಿಯೂರು ಮಠದ ಗದ್ದೆಯಲ್ಲಿ ಬೆಳೆದ ಭತ್ತದ ಕೃಷಿಯಲ್ಲಿ ಪೈರು ಬೆಳೆದು ಭರಪೂರ ಬೆಳೆ ದೊರಕಿದೆ.

Advertisement

ಈ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಪಾಠ ದೊರೆತಂತಾಗಿದೆ. ಕಾಲೇಜು ವಿದ್ಯಾರ್ಥಿಗಳ, ಪ್ರಾಚಾರ್ಯರ, ಉಪನ್ಯಾಸಕರ, ಆಡಳಿತ ಮಂಡಳಿಯ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದ ಸಾರ್ಥಕತೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳೇ ನಾಟಿ ಮಾಡಿದ ಭತ್ತದ ನೇಜಿ ಬೆಳೆದು ಪೈರಿನಲ್ಲಿ ಭರಪೂರ ಬೆಳೆ ಬಂದಿದೆ. ನ. 19ರಂದು ಪೈರಿನ ಕಟಾವು ನಡೆಯಿತು.

ಈ ಪೈರನ್ನು ಕಾಲೇಜಿನ ವಿದ್ಯಾರ್ಥಿಗಳೇ ಕಟಾವು ಮಾಡಿದರೆ ಉಪನ್ಯಾಸಕರು ಭತ್ತ ಬೇರ್ಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದರಲ್ಲಿ ಪಡೆದ ಭತ್ತವನ್ನು ಕಾಲೇಜಿನ ಮಧ್ಯಾಹ್ನದ ಊಟಕ್ಕೆ ಬಳಸುವ ಯೋಜನೆಯಂತೆ ನಾಟಿ ಮಾಡಲಾಗಿತ್ತು. ಪಾಠ, ಪ್ರವಚನದೊಂದಿಗೆ ಬದುಕಿನ ಪಾಠದಲ್ಲೂ ತೊಡಗಿಸಿಕೊಂಡಿರುವ ಇಲ್ಲಿನ ವಿದ್ಯಾರ್ಥಿಗಳ ಸಾಧನೆಗೆ ಈಗ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಆಸಕ್ತಿಯಿಂದಲೇ ಕಟಾವು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ಅರಿವು ಮೂಡಿಸುವ ಕಾರ್ಯ
ಯುವಜನತೆಗೆ ಭತ್ತದ ಬೇಸಾಯದ ಕುರಿತು ಅರಿವು ಕಡಿಮೆ. ಅಂಗಡಿ, ಮುಂಗಟ್ಟುಗಳಿಂದ ಅಕ್ಕಿಯನ್ನು ತರಿಸಿ ಊಟ ಮಾಡಲಾಗುತ್ತದೆ ಎಂಬುದಷ್ಟೇ ತಿಳಿದಿದೆ. ಕಾಲೇಜಿನ ವತಿಯಿಂದ ನೇಜಿ ನಾಟಿಯಿಂದ ಹಿಡಿದು ಪೈರು ಕಟಾವಿನ ವರೆಗೆ ಯಾವ ರೀತಿ ಜತನದಿಂದ ಭತ್ತದ ಬೆಳೆ ಬೆಳೆಯಬೇಕೆಂಬ ನಿಟ್ಟಿನಲ್ಲಿ ಈ ಗದ್ದೆ ಬೇಸಾಯ ಅರಿವು ಮೂಡಿಸಿದೆ.
 - ವಿಶ್ವನಾಥ ಮಾರ್ಕಜೆ, ಅಧ್ಯಕ್ಷರು, ರಕ್ಷಕ-ಶಿಕ್ಷಕ ಸಂಘ, ಸ.ಪ್ರ.ದ. ಕಾಲೇಜು, ಬೆಳಂದೂರು

ಬೆಳೆಯಿಂದ ಉತ್ತಮ ಫ‌ಸಲು
ಕಾಣಿಯೂರು ಮಠದ ಗದ್ದೆಯಲ್ಲಿ ವಿದ್ಯಾರ್ಥಿಗಳೇ ಸ್ವತಃ ನಾಟಿ ಮಾಡಿದ ನೇಜಿ ಉತ್ತಮ ಫ‌ಸಲು ನೀಡಿದೆ. ವಿದ್ಯಾರ್ಥಿಗಳೇ ಪೈರು ಕಟಾವು ಮಾಡಿದ್ದಾರೆ. ವಿದ್ಯಾರ್ಥಿಗಳಿಗೂ ನಮಗೂ ಇದೊಂದು ಸಾರ್ಥಕ ಕ್ಷಣ. ವಿದ್ಯಾರ್ಥಿಗಳು ಕಟಾವು ಮಾಡಿದರೆ, ಉಪನ್ಯಾಸಕರು ಭತ್ತ ಬೇರ್ಪಡಿಸಿದರು. ಈ ಮೂಲಕ ಬದುಕಿನ ಶಿಕ್ಷಣ ದೊರೆದಂತಾಗಿದೆ. ಭತ್ತದಿಂದ ಪಡೆದ ಅಕ್ಕಿಯನ್ನು ಕಾಲೇಜಿನಲ್ಲಿ ನಡೆಯುವ ಮಧ್ಯಾಹ್ನದ ಊಟಕ್ಕೆ ಬಳಸಿಕೊಳ್ಳಲಾಗುತ್ತದೆ. ಕಾಲೇಜಿನ ಆವರಣದಲ್ಲಿ ತರಕಾರಿಯನ್ನೂ ಬೆಳೆಸಲಾಗುತ್ತದೆ. ಗದ್ದೆ ನೀಡಿದ ಕಾಣಿಯೂರು ಮಠದವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
 - ಪ್ರೊ| ಪದ್ಮನಾಭ ಕೆ. ಪ್ರಾಚಾರ್ಯರು, ಸ.ಪ್ರ.ದ. ಕಾಲೇಜು, ಬೆಳಂದೂರು

Advertisement

ತಿಳಿಹೇಳುವ ಕಾರ್ಯ
ಬೇಸಾಯ ಎಂದರೆ ಏನು, ಅಕ್ಕಿಯನ್ನು ಯಾವ ರೀತಿ ಶ್ರಮ ವಹಿಸಿ ಮಾಡಲಾಗುತ್ತದೆ ಎಂಬು ದನ್ನು ತಿಳಿ ಹೇಳುವುದಕ್ಕಾಗಿ ಮತ್ತು ಮುಂದಿನ ಪೀಳಿಗೆ ಭತ್ತದ ಬೇಸಾಯವನ್ನು ಮುಂದುವರಿ ಸಲು ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯ ಮಾಡಲಾಗಿದೆ.
– ಶ್ರೀಧರ ರೈ ಮಾದೋಡಿ, ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿ, ಬೆಳಂದೂರು

Advertisement

Udayavani is now on Telegram. Click here to join our channel and stay updated with the latest news.

Next