Advertisement

ಮಾನವೀಯ ಮೂರ್ತಿ

10:11 AM Mar 04, 2020 | mahesh |

ಅಂದು ಸಂಜೆ, ನನ್ನ ತಮ್ಮ ಮನೆಯಿಂದ ಬಂದು, ದಾವಣಗೆರೆ ಧಾರವಾಡ ಇಂಟರ್‌ಸಿಟಿ ಟ್ರೈನಿಗೆ ಹತ್ತಿಸಿದ. ರಶ್‌ ಇರಲಾರದೇನೋ ಅಂದುಕೊಂಡು ಬಂದಿದ್ದ ನನಗೆ ತುಂಬಿ ತುಳುಕುತ್ತಿರುವ ಬೋಗಿಯನ್ನು ನೋಡಿ ನಿರಾಸೆಯಾಯಿತು. ಲಗೇಜ್‌ ಒಂದು ಕಡೆ ಇಟ್ಟು ಹರಿಹರದಲ್ಲಿ ಇಳಿಯುವರು ಯಾರಾದರೂ ಇದ್ದಾರೇನೋ ಎಂದು ವಿಚಾರಿಸಲು ಶುರುಮಾಡಿದೆ. ಲಗೇಜ್‌ ಇಟ್ಟಿದ್ದ ಪಕ್ಕದ ಸೀಟಿನಲ್ಲಿ , ತಲೆಗೆ ಟೊಪ್ಪಿಗೆ ಧರಿಸಿದ, ಗಡ್ಡದಾರಿಯಾದ ಅಜಾನುಬಾಹು ಒಬ್ಬರು ಕುಳಿತಿದ್ದರು.

Advertisement

ನನ್ನನ್ನು ನೋಡಿ, ಹರಿಹರದಲ್ಲಿ ಪಕ್ಕದ ಸೀಟು ಖಾಲಿಯಾಗುತ್ತದೆ. ಇಲ್ಲೇ ನಿಂತಿರಿ ಅಂದರು. ಟೀ ಮಾರುವವರು, ವಡೆ, ಗಿರುಮಿಟ್‌, ನೀರು, ತಿಂಡಿ ತೀರ್ಥ ಮಾರಾಟ ಮಾಡುವವರು, ಜೊತೆಗೆ ಲಗೇಜು ಹಿಡಿದು ಬೋಗಿಯಿಂದ ಬೋಗಿಗೆ ಸೀಟು ಹುಡುಕುತ್ತಾ ಅಲೆಯುವವರು ಕ್ಷಣಕ್ಕೊಮ್ಮೆ ಹಾದುಹೋಗುತ್ತಿದ್ದರು. ಹೀಗಾದಾಗೆಲ್ಲ ಅಕ್ಕ ಪಕ್ಕ ನಿಂತಿದ್ದವರಿಗೆ ಸಹಜವಾಗಿ ತಗುಲುತಿತ್ತು. ನನಗೂ ಹೆಚ್ಚೇ ಆಗುತ್ತಿತ್ತು. ಮುಜುಗರ ಅನುಭವಿಸುತ್ತಿದ್ದ ನನ್ನನ್ನು ನೋಡಿ ಅದೇನೆನ್ನಿಸಿತೋ ಏನೋ, ಆ ಹಿರಿಯರು ತಕ್ಷಣ ಎದ್ದು ನಿಂತು, ನೀವು ಕುಳಿತುಕೊಳ್ಳಿ ಮೇಡಮ್‌ ಎಂದು ನನಗೆ ಜಾಗ ಬಿಟ್ಟುಕೊಟ್ಟರು. ಹರಿಹರದಲ್ಲಿ ಪಕ್ಕದ ಸೀಟು ಖಾಲಿಯಾದ ತಕ್ಷಣ, ಕಿಟಕಿಯ ಬಳಿ ಮತ್ತೂಬ್ಬ ವ್ಯಕ್ತಿ ಕುಳಿತಿದ್ದರು. ಆ ವ್ಯಕ್ತಿ ಬೇಸರ ಮಾಡಿಕೊಳ್ಳಲೇ ಇಲ್ಲ. ತಾವೇ ಮಧ್ಯ ಇಕ್ಕಟ್ಟಿನಲ್ಲಿ ಕುಳಿತು ನನಗೆ ಕೊನೆಯಲ್ಲಿ ಕುಳಿತುಕೊಳ್ಳುವ ಅವಕಾಶ ಮಾಡಿಕೊಟ್ಟರು. ಮತ್ತೆ ಮುಜುಗರ ಆಗಬಾರದು ಎಂದು. ರೈಲಿನಲ್ಲಿ ಹೆಣ್ಣು ಮಕ್ಕಳಿಗೆ ಆಗುವ ಮುಜುಗರವನ್ನು ಅರಿತು, ಸೀಟು ಬಿಟ್ಟು ಕೊಟ್ಟ ಆ ಮಾನವೀಯ ಮೂರ್ತಿ ಎಲ್ಲಿದ್ದರೂ, ಹೇಗಿದ್ದರೂ ಚೆನ್ನಾಗಿರಲಿ.

ನಳಿನಿ. ಟಿ. ಭೀಮಪ್ಪ

Advertisement

Udayavani is now on Telegram. Click here to join our channel and stay updated with the latest news.

Next