Advertisement

ಏಡ್ಸ್‌ ನಿಯಂತ್ರಣಕ್ಕೆ ಸರ್ಕಾರಿ ಯೋಜನೆ ಸಹಕಾರಿ

06:06 PM Dec 02, 2021 | Nagendra Trasi |

ವಿಜಯಪುರ: ಜಾಗತಿಕ ಸಮಸ್ಯೆಯಾಗಿ ಕಾಡುತ್ತಿರುವ ಎಚ್‌ಐವಿ ಸೋಂಕು ಹಾಗೂ ಏಡ್ಸ್‌ ರೋಗ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕಿದೆ. ಸರ್ಕಾರ ಈ ಮಾರಕ ರೋಗ ಪ್ರಮಾಣ ಕುಗ್ಗಿಸಲು ರೂಪಿಸಿರುವ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಸೋಂಕು ಹರಡುವಿಕೆ ತಡೆಯಲು ಸಾಧ್ಯ ಎಂದು ಜಿಲ್ಲಾ ಧಿಕಾರಿ ಸುನೀಲಕುಮಾರ ಹೇಳಿದರು.

Advertisement

ಬುಧವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ನಿಯಂತ್ರಣ ಘಟಕ, ಸ್ವಯಂ ಸೇವಾ ಸಂಘ ಸಂಸ್ಥೆಗಳು, ಎನ್‌ಎಸ್‌ಎಸ್‌ ಘಟಕಗಳು, ರೆಡ್‌ ರಿಬ್ಬನ್‌ ಕ್ಲಬ್‌ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್‌ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು, ಸೋಂಕಿನ ಬಗ್ಗೆ ಸರ್ಕಾರ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಮೂಲಕ ಇತ್ತೀಚಿಗೆ ಇದರ ಸಂಖ್ಯೆಯಲ್ಲಿ ಬಹಳ ಇಳಿಮುಖ ಕಂಡು ಬರುತ್ತಿದೆ ಎಂದರು.

ಪ್ರಸಕ್ತ ವರ್ಷದಲ್ಲಿ ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್‌ನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬ ಘೋಷ ವಾಕ್ಯದೊಂದಿಗೆ ಏಡ್ಸ್‌ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಏಡ್ಸ್‌ ರೋಗ ನಿಯಂತ್ರಿಸುವಲ್ಲಿ ಸರ್ಕಾರ ರೂಪಿಸಿರುವ ಅನೇಕ ಕಾರ್ಯಕ್ರಮಗಳು ಸಕಾರಾತ್ಮ ಪರಿಣಾಮ ನೀಡುತ್ತಿವೆ. ಇದರ ಬಗೆಗಿನ ಸೂಕ್ತ ಅರಿವು ಹಾಗೂ ಮಾಹಿತಿಯಿಂದಾಗಿ ಸೋಂಕಿನ ಪ್ರಮಾಣದಲ್ಲಿ ಗಣನೀಯ ಇಳಿಮುಖ ಕಂಡು ಬರುತ್ತಿದೆ. ಇದರ ಬಗ್ಗೆ ಜನರಲ್ಲೂ ಸರಿಯಾದ ಅರಿವು ಉಂಟಾಗುತ್ತಿದ್ದು, ಈಚೆಗೆ ಸೋಂಕಿತ ಗರ್ಭಿಣಿಯರಿಂದ ಅವರ ಮಕ್ಕಳಿಗೂ ಹರಡುತ್ತಿಲ್ಲ ಎಂದು ವಿವರಿಸಿದರು.

ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಪ್ರಾಮಾಣಿಕ ಪ್ರಯತ್ನದಿಂದಾಗಿ ಜನರಿಗೆ ಇದರ ಬಗ್ಗೆ ಬಹಳ ಜಾಗೃತಿ ಉಂಟಾಗಿದೆ. ಜನರಿಗೆ ಈ ರೋಗದ ಕಾರಣ ಹಾಗೂ ಚಿಕಿತ್ಸೆಗಳ ಬಗ್ಗೆ ಸರಿಯಾದ ಅರಿವು, ಮಾಹಿತಿ ಲಭ್ಯವಾಗುತ್ತಿದೆ. ಸೋಂಕಿತರು ಇದರ ಬಗ್ಗೆ ಈ ಹಿಂದೆ ಸಮಾಜದಲ್ಲಿದ್ದ ಸಂಕೋಚ ಪರಿಸ್ಥಿತಿ ಈಗಿಲ್ಲ. ಧೈರ್ಯದಿಂದ ಮುಂದೆ ಬಂದು ಚಿಕಿತ್ಸೆ ಪಡೆದು, ಆರೋಗ್ಯಯುತ ಜೀವನ ಶೈಲಿಯಿಂದ ತಮ್ಮ ಜೀವನಮಟ್ಟ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಅದರಂತೆ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಸಂಘ, ಸಂಸ್ಥೆಗಳು, ವಾಹನಗಳ ಚಾಲಕರು ಸೇರಿದಂತೆ ಪತ್ತೆಯಿಂದ ಹೊರಗುಳಿದಿರುವ ಸೋಂಕಿತರನ್ನು ಗುರುತಿಸಿ, ಅವರಿಗೆ ಸೂಕ್ತ ಅರಿವು ಹಾಗೂ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು. ಇದರಿಂದ ಸೋಂಕು ಅವರ ಕುಟುಂಬದವರಿಗೆ ಹರಡದಂತೆ ನೋಡಿಕೊಳ್ಳಬಹುದು. ಸೋಂಕಿತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಕೆಲಸವೂ ಆಗಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಏಡ್ಸ್‌ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಂಘ, ಸಂಸ್ಥೆಗಳ ಪದಾ ಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಗೋವಿಂದರೆಡ್ಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಜಾನಪದ ಕಲಾವಿದ ಸಿದ್ದಪ್ಪ ಬಿದರಿ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಕೆ ಚವ್ಹಾಣ, ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಎಸ್‌.ಎಲ್‌. ಲಕ್ಕಣ್ಣವರ, ಡಾ| ರಾಜೇಶ ಹೊನ್ನುಟಗಿ, ಪೀಟರ್‌ ಅಲೆಕ್ಸಾಂಡರ್‌,ಗಂಗಯ್ಯ ಹಿರೇಮಠ, ಜಿಲ್ಲಾ ಏಡ್ಸ್‌ ಮತ್ತು ಕ್ಷಯರೋಗ ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ| ಈರಣ್ಣ ಧಾರವಾಡಕರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next