Advertisement

ದೇಗುಲದ ಅಂಗಣದಿಂದ ಆರಂಭವಾದ ಶಾಲೆಗೀಗ 103ರ ಸಂಭ್ರಮ

09:45 AM Nov 06, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1916 ಶಾಲೆ ಆರಂಭ
ಮದ್ರಾಸ್‌ ಸರಕಾರದಿಂದ ಹೈಯರ್‌ ಪ್ರೈಮರಿ ಶಾಲೆಯಾಗಿ ಅನುಮತಿ

ಕಟೀಲು: ಇದು ಸುಮಾರು 100 ವರ್ಷಗಳ ಹಿಂದಿನ ಕಥೆ. ಆಗ ಕಟೀಲು ವ್ಯಾಪ್ತಿಯ ನಂದಿನಿ ನದಿಯ ದಡದ ಪ್ರದೇಶಗಳಾದ ಕಟೀಲು, ನಡುಗೋಡು, ಕೊಂಡೇಲ, ಕೊಡೆತ್ತೂರು ಇನ್ನು ಮುಂತಾದ ಪ್ರದೇಶಗಳ ಮಕ್ಕಳು ಶಾಲೆ ಕಲಿಯಲು ನಂದಿನಿ ನದಿಯನ್ನು ದಾಟಿ ಹೋಗಬೇಕಾಗಿದ್ದ ಪರಿಸ್ಥಿತಿ ಇತ್ತು. ಇದನ್ನು ಮನಗಂಡ ಕಟೀಲು ದೇಗುಲದ ಆಡಳಿತವೂ ಶಾಲೆಯನ್ನು ಆರಂಭಿಸಲು ಯೋಚಿಸಿತು. ಇದರ ಫ‌ಲವೇ ಕಟೀಲು ದೇಗುಲದ ಪ್ರಾಥಮಿಕ ಶಾಲೆ.ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇಗುಲ ಹಿರಿಯ ಪ್ರಾಥಮಿಕ ಶಾಲೆಯೂ 1916ರಲ್ಲಿ ಸ್ಥಾಪನೆಯಾಯಿತು. ಕೊಡೆತ್ತೂರುಗುತ್ತು ದಿ| ರಾಮಣ್ಣ ಶೆಟ್ಟಿ ಹಾಗೂ ದೇಗುಲ ಪ್ರಧಾನ ಅರ್ಚಕರಾದ ದಿ| ಲಕ್ಷ್ಮೀನಾರಾಯಣ ಆಸ್ರಣ್ಣರು ಈ ಶಾಲೆಯ ಸ್ಥಾಪಕರು.

2016ರಲ್ಲಿ ದಶಮಾನೋತ್ಸವ
1928ರಲ್ಲಿ ಪೂರ್ಣ ಪ್ರಮಾಣದ ಹೈಯರ್‌ ಪ್ರೈಮರಿ ಶಾಲೆಯಾಗಿ ಆಗಿನ ಮದ್ರಾಸ್‌ ಸರಕಾರದಿಂದ ಅನುಮತಿ ಸಿಕ್ಕಿತು. ಮೊದಲ ಮುಖ್ಯೋಪಾಧ್ಯಾಯರಾಗಿದ್ದವರು ಎರ್ಮಾಳು ತಿಮ್ಮಪ್ಪಯ್ಯ. ಈ ಶಾಲೆಯಲ್ಲಿರುವ 1929ರ ಅನಂತರದ ದಾಖಲೆ ಪ್ರಕಾರ 8,448 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿತಿದ್ದಾರೆ. 1976ರಲ್ಲಿ ವಜ್ರಮಹೋತ್ಸವ ಕಂಡ ಈ ಶಾಲೆಯು 2011ರಲ್ಲಿ ಹೊಸ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 2016ರಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿತು.

ಪ್ರಸ್ತುತ ಈ ಶಾಲೆಯಲ್ಲಿ 200 ವಿದ್ಯಾರ್ಥಿಗಳಿದ್ದು, ಮೂವರು ಶಿಕ್ಷಕರು ಸರಕಾರದ ಅನುದಾನದಿಂದ, ಮೂವರು ಮುಜರಾಯಿ ಇಲಾಖೆಯಿಂದ ಅನುಮೋದನೆಗೊಂಡ ಶಿಕ್ಷಕರು ಹಾಗೂ ಐದು ಮಂದಿ ತಾತ್ಕಾಲಿಕವಾಗಿ ದೇಗುಲದ ವತಿಯಿಂದ ವೇತನ ಪಡೆಯುವ ಶಿಕ್ಷಕರಿದ್ದಾರೆ. ನಾಲ್ಕು ಮಂದಿ ಬೋಧಕೇತರ ಸಿಬಂದಿಗಳಿದ್ದಾರೆ.

Advertisement

ಎಂಬಂತರ ದಶಕದಲ್ಲಿ ಹದಿನೆಂಟು ಶಿಕ್ಷಕರು, ಎಂಟುನೂರ ಐವತ್ತು ವಿದ್ಯಾರ್ಥಿಗಳು, ಹದಿನೇಳು ವಿಭಾಗಗಳು ಇದ್ದುದು ಈ ಶಾಲೆಯ ವೈಭವವನ್ನು ಸಾರಿಹೇಳುತ್ತವೆ. ಶುಕ್ರವಾರದ ಭಜನೆ ನಿರಂತರ. ಇಲ್ಲಿನ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಇವತ್ತಿಗೂ ಮಿಂಚುತ್ತಿದ್ದಾರೆ. ಪ್ರಸ್ತುತ ಸರೋಜಿನಿ ಅವರು ಮುಖ್ಯ ಶಿಕ್ಷಕಿಯಾಗಿದ್ದಾರೆ.

ಈ ಶಾಲೆ ಇದ್ದ ಸರಸ್ವತೀ ಸದನದಲ್ಲಿ ಕಟೀಲು ದೇವಸ್ಥಾನದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದರಿಂದ ಇಲ್ಲಿಗೆ ಬಂದ ಸಾಹಿತಿಗಳು, ಸಂಗೀತಗಾರರು, ರಾಜಕಾರಣಿಗಳು ಹೀಗೆ ಗಣ್ಯರ ಸಂಖ್ಯೆ ನೂರಾರು.

ವಿವಿಧ ಸೌಲಭ್ಯಗಳು
ಶಾಲೆಯಲ್ಲಿ ಕ್ರೀಡೆ, ಕಂಪ್ಯೂಟರ್‌, ನ್ಪೋಕನ್‌ ಇಂಗ್ಲಿಷ್‌, ಸಂಗೀತ, ಚಿತ್ರಕಲೆ ತರಗತಿಗಳಿವೆ. ಸಂಸ್ಥೆಗೆ ದೇಗುಲದಿಂದ ನಿರಂತರ ಸಹಕಾರದ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು, ಸಮವಸ್ತ್ರಗಳು ದಾನಿಗಳಿಂದ ಸಿಗುತ್ತವೆ. ಅಕ್ಷರದಾಸೋಹ ವ್ಯವಸ್ಥೆ ಜಾರಿಗೆ ಬರುವ ಮೊದಲೇ 1983ರಿಂದಲೇ ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಈ ಶಾಲೆಯಲ್ಲಿ ದೇಗುಲದಿಂದ ಆರಂಭಗೊಂಡಿತ್ತು.

ಶಿಕ್ಷಣಕ್ಕೆ ಪೂರಕವಾಗಿ ಶಾಲೆಯಲ್ಲಿ ಯಕ್ಷಗಾನ, ಜತೆಗೆ ಪಠ್ಯಕ್ಕೆ ಪೂರಕವಾಗಿ ಯೋಗ, ಭಜನೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆಯಲ್ಲಿ ಅನುಕೂಲ ಮಾಡಲಾಗುತ್ತಿದೆ.
-ವಾಸುದೇವ ಆಸ್ರಣ್ಣ, ಶಾಲೆಯ ಹಳೆವಿದ್ಯಾರ್ಥಿ

ಶಾಲೆ ಬೆಳೆಯ ಬೇಕಾದರೆ ಅದಕ್ಕೆ ಕಟೀಲು ದೇವಸ್ಥಾನ, ಹಳೆವಿದ್ಯಾರ್ಥಿಗಳು ಉತ್ತಮ ಸಹಕಾರ ಪ್ರೋತ್ಸಾಹ ನೀಡಿದರ ಫಲವಾಗಿ ಹೊಸ ಕಟ್ಟಡದಲ್ಲಿ ಮೈದಳೆದು ನಿಂತಿದೆ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿ ಶಾಲೆಯ ಗೌರವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಸರೋಜಿನಿ, ಮುಖ್ಯ ಶಿಕ್ಷಕರು

- ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next