Advertisement

Election: ಗೆಲ್ಲುವ ಅಸ್ತ್ರವಾದ ಉಚಿತ ಕೊಡುಗೆ

01:03 AM Oct 15, 2024 | Team Udayavani |

ಸಾಮಾಜಿಕ ಭದ್ರತಾ ಸೇವೆಗಳ (ಉಚಿತ ಕೊಡುಗೆ) ಮೂಲಕ ಕರ್ನಾಟಕದಲ್ಲಿ ಚುನಾವಣ ಯಶಸ್ಸು ದೊರೆಯುತ್ತಿದ್ದಂತೆ ಕಾಂಗ್ರೆಸ್‌, ಬಿಜೆಪಿ ಸೇರಿ ಎಲ್ಲ ರಾಜಕೀಯ ಪಕ್ಷಗಳು ಈಗ ಉಚಿತ ಕೊಡುಗೆಗಳ ಹಿಂದೆ ಬಿದ್ದಿವೆ. ಇತ್ತೀಚೆಗಷ್ಟೇ ಮುಕ್ತಾಯವಾದ ಹರಿಯಾಣ, ಜಮ್ಮು-ಕಾಶ್ಮೀರದಲ್ಲೂ ಉಚಿತ ಕೊಡುಗೆಗಳನ್ನು ಘೋಷಣೆ ಮಾಡಲಾಗಿದ್ದು ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಹಿಂದೆ ಉಚಿತ ಕೊಡುಗೆಗಳು ಕೆಲಸ ಮಾಡಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌- ಕಾಂಗ್ರೆಸ್‌ ಮೈತ್ರಿಕೂಟ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಉಚಿತ ಕೊಡುಗೆಗಳ ಕುರಿತಾದ ಮಾಹಿತಿ ಇಲ್ಲಿದೆ.

Advertisement

ಏನಿದು ಉಚಿತ ಕೊಡುಗೆ?
ಸ್ವಾತಂತ್ರ್ಯದ ಆರಂಭದಲ್ಲಿ ದೇಶದಲ್ಲಿನ ಕಡುಬಡವರನ್ನು ಮೇಲೆತ್ತಲು ಉಚಿತ ಯೋಜನೆಗಳನ್ನು ಸಾಮಾಜಿಕ ಭದ್ರತಾ ಸೇವೆಗಳ ಹೆಸರಿನಲ್ಲಿ ಆರಂಭಿಸಲಾ ಯಿತು. ಆ ಕಾಲದಲ್ಲಿ ಯಾವುದೇ ನಿರ್ದಿಷ್ಟ ಚುನಾವಣೆ ಇತ್ಯಾದಿ ಇಟ್ಟು ಕೊಂಡು ಇಂತಹ ಯೋಜನೆಗಳನ್ನು ಪ್ರಾರಂಭಿಸಲಿಲ್ಲ. ಬದಲಾಗಿ ಬಡಜನರ ಸಶಕ್ತೀಕರಣ ಮಾತ್ರ ಆಗಿನ ಗುರಿಯಾಗಿತ್ತು. ಮೊದಲು ಅಕ್ಕಿ, ಸೀಮೆಎಣ್ಣೆ ಇತ್ಯಾದಿಗಳನ್ನು ಬಡವರಿಗೆ ತಲುಪಿಸಲಾಯಿತು. ಅನಂತರ ಸಾಲಮೇಳಗಳನ್ನು ಮಾಡಲಾಯಿತು. ಎಮ್ಮೆ, ಕೋಳಿ, ಕುರಿ, ದನ ಹಂಚಲಾ ಯಿತು. ಉಚಿತ ವಿದ್ಯುತ್‌ ನೀಡಲಾ ಯಿತು. ಸೈಟ್‌ ಹಂಚಲಾಯಿತು. ಮನೆ ಕಟ್ಟಿಕೊಡಲಾಯಿತು. ದೇಶದಲ್ಲೇ ಮೊದಲ ಬಾರಿಗೆ 1956 ತಮಿಳು ನಾಡು ಮುಖ್ಯಮಂತ್ರಿ ಕೆ.ಕಾಮರಾಜ್‌ ಅವರು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿ ದರು. ಇವುಗಳೆಲ್ಲದರ ಏಕೈಕ ಉದ್ದೇಶ ಜನರ ಸಶಕ್ತೀಕರಣವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಕೇವಲ ಮತವನ್ನಷ್ಟೇ ಗಮನದಲ್ಲಿಟ್ಟುಕೊಂಡು ಉಚಿತ ಯೋಜನೆಗಳನ್ನು ರಾಜಕೀಯ ಪಕ್ಷಗಳು ಘೋಷಿಸುತ್ತಿವೆ. ಕೆಲ ಸರಕಾರಗಳು ತಮ್ಮ ಆಡಳಿತದ ಅಂತ್ಯದ ಸಮಯದಲ್ಲಿ ಜನರಿಗೆ ಕೊಡುಗೆಗಳ ಹೊಳೆಯನ್ನೇ ಹರಿಸುತ್ತಿವೆ. ಪ್ರಣಾಳಿಕೆ ಹೆಸರಿನಲ್ಲಿ ಭರಪೂರ “ಉಚಿತ’ಗಳನ್ನು ಸೇರಿಸುತ್ತಿವೆ. ಇದಕ್ಕೆ ಕಾಂಗ್ರೆಸ್‌, ಬಿಜೆಪಿಯೂ ಹೊರತಾಗಿಲ್ಲ. ಯಾವ ರಾಜಕೀಯ ಪಕ್ಷವೂ ಹಿಂದೆ ಬಿದ್ದಿಲ್ಲ.

ಉಚಿತ ಕೊಡುಗೆ ಪರಿಕಲ್ಪನೆ ಶುರುವಾಗಿದ್ದು ಎಲ್ಲಿಂದ?
ತಮಿಳುನಾಡಿನ ಜಯಲಲಿತಾ ಮತ್ತು ಕರುಣಾನಿಧಿ ಆಡಳಿತದಲ್ಲಿ ಉಚಿತ ಕೊಡುಗೆ ಸಂಸ್ಕೃತಿ ಹೆಚ್ಚಾಗಿ ಕಂಡುಬಂತು .ಉಚಿತ ವಿದ್ಯುತ್‌, ಉಚಿತ ಬಸ್‌ ಪ್ರಯಾಣ, ಟಿವಿ, ಮಿಕ್ಸರ್‌- ಗ್ರೈಂಡರ್ ಹಂಚಿಕೆ ಜನಪ್ರಿಯವಾದವು. ಸರಕಾರಿ ಬೊಕ್ಕಸದ ಹಣವನ್ನು ಬಳಸಿ ಮತದಾರರನ್ನು ಸೆಳೆಯುವ ಪ್ರಕ್ರಿಯೆಗೆ ನಾಂದಿ ಹಾಡಲಾಯಿತು. ಇದು ಅನಂತರ ಜಗನ್‌ ನೇತೃತ್ವದ ಆಂಧ್ರಪ್ರದೇಶ ಸರಕಾರದಲ್ಲೂ ದೊಡ್ಡ ಪ್ರಮಾಣದಲ್ಲಿ ಘೋಷಿಸಲಾಯಿತು. ತೆಲಂಗಾಣ ದಲ್ಲೂ ನಡೆಯಿತು. ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಪಂಚ ಗ್ಯಾರಂಟಿಗಳನ್ನು ಘೋಷಿಸಿತು. ಇದು ಇಲ್ಲಿ ವಕೌಟ್‌ ಕೂಡ ಆಯಿತು. ಇದನ್ನೇ ಮಾದರಿಯಾಗಿಟ್ಟು ಕಾಂಗ್ರೆಸ್‌ ಅನಂತರ ನಡೆದ ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಉಚಿತಗಳ ಘೋಷಣೆ ಮಾಡಿತು. ಆದರೆ ಅಲ್ಲಿ ಬಿಜೆಪಿ ಉಚಿತ ವಿಷಯದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಒಂದು ಹೆಜ್ಜೆ ಮುಂದಿತ್ತೆನ್ನಿ, ಕಾಂಗ್ರೆಸ್‌ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ ನೀಡು ವುದಾಗಿ ಘೋಷಿಸಿದರೆ ಬಿಜೆಪಿ 400 ರೂ. ಎಂದಿತು. ಪ್ರತೀ ಕುಟುಂಬದ ಮಹಿಳೆಗೆ ಮಾಸಿಕ 2000 ರೂ. ಕೊಡುವುದಾಗಿ ಕಾಂಗ್ರೆಸ್‌ ಹೇಳಿದರೆ, ತಾನು 3000 ರೂ.ವರೆಗೆ ನೀಡುವುದಾಗಿ ಹೇಳಿ ಬಿಜೆಪಿ ಗದ್ದುಗೆ ಏರಿತು. ಇದನ್ನು ಮೊನ್ನೆ ನಡೆದ ಹರಿಯಾಣ ಚುನಾವಣೆಯಲ್ಲಿ ಕೂಡ ಮಾಡಿತು. ಚುನಾವಣೆಗೆ ಮುನ್ನ ಅಲ್ಲಿನ ಸರಕಾರ ಸಾಲಮನ್ನಾ ಇತ್ಯಾದಿ ಅನೇಕ ಯೋಜನೆಗಳನ್ನು ಘೋಷಿಸಿತು. ಜತೆಗೆ ಪ್ರಣಾಳಿಕೆಯಲ್ಲಿ ಲಾಡೋ ಲಕ್ಷ್ಮೀ ಯೋಜನೆ ಘೋಷಿಸಿ 2100 ರೂ. ಪ್ರತೀ ತಿಂಗಳು ನೀಡುವುದಾಗಿ ಭರವಸೆ ನೀಡಿತು. ಇದು ಕಾಂಗ್ರೆಸ್‌ಗಿಂತ 100 ರೂ. ಜಾಸ್ತಿಯಾಗಿತ್ತು. ಜತೆಗೆ 500 ರೂ.ಗೆ ಸಿಲಿಂಡರ್‌, ಅಗ್ನಿವೀರರಿಗೆ ಸರಕಾರಿ ಉದ್ಯೋಗ, 10 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ಮುಂತಾದ ಉಚಿತ ಘೋಷಣೆಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದವು.

ಉಚಿತ ಕೊಡುಗೆ ಅಕ್ರಮವಲ್ಲ: ಕೋರ್ಟ್‌
2013ರಲ್ಲಿ ಸುಬ್ರಮಣಿಯಂ ಬಾಲಾಜಿ ಮತ್ತು ತಮಿಳುನಾಡು ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಉಚಿತ ಕೊಡುಗೆಗಳು ಅಕ್ರಮವಲ್ಲ ಎಂದು ಹೇಳಿದೆ. ಇಂತಹ ಅಧಿಕಾರ ಶಾಸಕಾಂಗಕ್ಕೆ ಇದೆ ಎಂದು ಕೂಡ ಹೇಳಿತು. ಬಡವರಿಗೆ ಟಿವಿ, ಇತರ ಗೃಹೋಪಯೋಗಿ ವಸ್ತುಗಳನ್ನು ಹಂಚುವುದನ್ನು ಎತ್ತಿ ಹಿಡಿದಿತ್ತು. ಏಕೆಂದರೆ ಇಂತಹ ಕಾರ್ಯಕ್ರಮಗಳು ಮಹಿಳೆಯರು, ರೈತರು ಮತ್ತು ಬಡವರಿಗೆ ಸಹಾಯವಾಗಿ ಎಂದು ಅಭಿಪ್ರಾಯಪಟ್ಟಿತ್ತು. ಜತೆಗೆ ಇದನ್ನು ಭ್ರಷ್ಟ ಸಂಸ್ಕೃತಿ ಎಂದು ಕರೆಯಲು ಆಗಲ್ಲ ಎಂದು ಹೇಳಿತ್ತು. ಆದರೂ ಈ ಬಗ್ಗೆ ನಿಯಮ ರಚಿಸುವಂತೆ ಚುನಾವಣಾ ಆಯೋಗಕ್ಕೆ ಹೇಳಿದ್ದು ಅದರಂತೆ ಆಯೋಗ, ಚುನಾವಣ ಪ್ರಕ್ರಿಯೆ ಕಳಂಕಗೊಳಿಸುವ ಮತ್ತು ಮತದಾರರ ಮೇಲೆ ಒತ್ತಡ ಹೇರದಂತೆ ನಿಯಮ ರಚಿಸುವುದಾಗಿ ಹೇಳಿತು.

ಜನರಿಗೆ ಲಾಭವಾಗುತ್ತಿದೆಯೇ?
ಉಚಿತ ಯೋಜನೆಗಳಿಂದ ಜನರಿಗೆ ಎಷ್ಟು ಲಾಭವಾಗುತ್ತಿದೆ ಎಂಬುದರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಮರ್ಪಕ ಸಮೀಕ್ಷೆಗಳು ನಡೆದಿಲ್ಲ. ಆದರೂ ಮೇಲ್ನೋಟಕ್ಕೆ ಒಂದಷ್ಟು ಫ‌ಲಾನುಭವಿಗಳ ಮೊಗದಲ್ಲಿ ಹರ್ಷವನ್ನುಂಟು ಮಾಡಿರುವುದು ಖಚಿತ. ಜತೆಗೆ ತಳ ಹಂತದಲ್ಲಿ ಆರ್ಥಿಕ ಸಶಕ್ತೀಕರಣಕ್ಕೂ ಕಾರಣವಾಗಿವೆ.

Advertisement

ವಿದೇಶದಲ್ಲಿರುವ ಯೋಜನೆಗಳಿಗೆ ಓಟ್‌ಬ್ಯಾಂಕ್‌ ಮುಖ್ಯವಲ್ಲ!
ವಿದೇಶಗಳಲ್ಲಿ ಇಂಥ ಯೋಜನೆಗಳನ್ನು ಕಾಣುತ್ತವೆ. ಮುಂದುವರಿದ ದೇಶಗಳಲ್ಲಿ ಜನರಿಗೆ ವಿದ್ಯುತ್‌, ನೀರು, ಶಿಕ್ಷಣ, ಆರೋಗ್ಯ ಇಂತಹ ಸಾರ್ವತ್ರಿಕ ಯೋಜನೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜರ್ಮನಿಯಂಥ ದೇಶದಲ್ಲಿ ಉನ್ನತ ಶಿಕ್ಷಣದವರೆಗೆ ವಿದ್ಯಾಭ್ಯಾಸ ಉಚಿತವಾಗಿರುತ್ತದೆ. ಅದೇ ರೀತಿ ಅಮೆರಿಕದಂತಹ ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ಯೋಜನೆ ಇದೆ. ಇನ್ನು ಅತೀ ಚಳಿಯಿಂದ ನಲಗುವ, ಹಿಮಚ್ಛಾದಿತ ದೇಶಗಳಲ್ಲಿ ಜನರಿಗೆ ಉಚಿತವಾಗಿ ಬಿಸಿನೀರು, ಮನೆ ಮನೆಗೆ ಪೈಪ್‌ ಮೂಲಕ ಗ್ಯಾಸ್‌ ಪೂರೈಸಲಾಗುತ್ತದೆ. ಇಲ್ಲಿ ಚುನಾವಣೆಯ ಎಂಬುದು ನಗಣ್ಯ. ಜನರ ಸೇವೆ ಮಾತ್ರ ಮುಖ್ಯವಾಗಿರುತ್ತದೆ.

ಎಲ್ಲರ ಕಾಡುವ ಹಿಮಾಚಲ ಪ್ರದೇಶದ ಗುಮ್ಮ
ಉಚಿತ ಕೊಡುಗೆಗಳಿಂದ ರಾಜ್ಯವೊಂದು ಆರ್ಥಿಕವಾಗಿ ದಿವಾಳಿ ಆಗಿರುವುದಕ್ಕೆ ಹಿಮಾಚಲ ಪ್ರದೇಶದತ್ತ ಎಲ್ಲರೂ ಬೊಟ್ಟು ಮಾಡುತ್ತಿದ್ದಾರೆ. ಕರ್ನಾಟಕವನ್ನು ಇದೇ ರೀತಿ ಹೆದರಿಸಲಾಗುತ್ತಿದೆ. ಆದರೆ ಅಲ್ಲಿನ ಆರ್ಥಿಕ ದುಸ್ಥಿತಿಗೆ ಸರಕಾರದ ಗ್ಯಾರಂಟಿಗಳು ಮಾತ್ರ ಕಾರಣವಲ್ಲ. ದೇಶದ ಚಿಕ್ಕ ರಾಜ್ಯಗಳ ಪೈಕಿ ಒಂದಾದ ಈ ರಾಜ್ಯ ಕಳೆದ ಒಂದು ದಶಕದಿಂದ ಪ್ರಾಕೃತಿಕ ದುರಂತಗಳ ಸರಮಾಲೆಗೆ ತುತ್ತಾಗುತ್ತಿದ್ದು ಇದು ರಾಜ್ಯದ ಆರ್ಥಿಕತೆಗೆ ಬಹುದೊಡ್ಡ ಹೊಡೆತ ನೀಡಿದೆ. ಹಿಂದಿನ ಬಿಜೆಪಿ ಸರಕಾರ ರಾಜ್ಯದ ಆರ್ಥಿಕ ಅವ್ಯವಸ್ಥೆ ಇನ್ನಷ್ಟು ಆಧೋಗತಿಗೆ ತಂದಿತ್ತು. ಬಳಿಕ ಬಂದ ಕಾಂಗ್ರೆಸ್‌ಗೆ ಗ್ಯಾರಂಟಿ ಜತೆಗೆ ಕೇಂದ್ರ ಸರಕಾರದ ಭರಪೂರ ಸಹಾಯ ಹಸ್ತವೂ ಕೈಕೊಟ್ಟಿತು. ಹೀಗಾಗಿ ಹಿಮಾಚಲ ಪ್ರದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ವಿಶ್ಲೇಷಣೆ ಇದೆ.

ಅತೀ ಚಿಕ್ಕ ರಾಜ್ಯಗಳಿಗೆ ಹೊಡೆತ ಸಾಧ್ಯತೆ
ಉಚಿತ ಕೊಡುಗೆಗಳ ವಿಚಾರದಲ್ಲಿ ರಿಸರ್ವ್‌ ಬ್ಯಾಂಕ್‌ ಸದಾ ಕಾಲ ರಾಜ್ಯಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ದೇಶದ ಕೆಲವೊಂದಿಷ್ಟು ರಾಷ್ಟ್ರಗಳು ಬೊಕ್ಕಸದ ಬಹುಭಾಗವನ್ನು ಸಾಮಾಜಿಕ ಭದ್ರತಾ ಯೋಜನೆಗಳಿಗೆ ಖರ್ಚು ಮಾಡುತ್ತಿವೆ. ಇನ್ನೊಂದಿಷ್ಟು ರಾಜ್ಯಗಳು ಸಾಲದಲ್ಲಿಯೇ ಸಾಗುತ್ತಿವೆ. ಆರ್ಥಿಕವಾಗಿ ಮುಂದುವರಿದ ರಾಜ್ಯಗಳಿಗೆ ಇದು ಹೆಚ್ಚು ಸಮಸ್ಯೆ ಆಗುವುದಿಲ್ಲ. ಆದರೆ ಅತಿ ಚಿಕ್ಕ ರಾಜ್ಯಗಳು, ಆರ್ಥಿಕವಾಗಿ ಹಿಂದುಳಿದ ರಾಜ್ಯಗಳು ಸಮಸ್ಯೆಗೆ ಸಿಲುಕುತ್ತಿವೆ. ದೇಶದ ನಂ.1 ರಾಜ್ಯ ಮಹಾರಾಷ್ಟ್ರ 8 ಲಕ್ಷ ಕೋಟಿ ರೂ. ಸಾಲ ಹೊಂದಿದ್ದು, ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಲಿ ಮಹಿಳೆಯರಿಗೆ ಮಾಸಿಕ 3000 ಸಾವಿರ ರೂ. ನೀಡುವುದಾಗಿ ಹೇಳಿದೆ. ಹೆಚ್ಚು ಜಿಎಸ್‌ಟಿ ಪಾವತಿಯಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ ತನ್ನ ಬಜೆಟ್‌ನ ಅಂದಾಜು 60 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದೆ. ಇಂತಹ ರಾಜ್ಯಗಳಿಗೆ ಇದು ತೀವ್ರ ಹೊರೆ ಆಗಲಿಕ್ಕಿಲ್ಲ. ಆದರೆ 10 ಲಕ್ಷ ಕೋಟಿ ಸಾಲ ಹೊಂದಿರುವ ಆಂಧ್ರದಂತಹ ರಾಜ್ಯಗಳು ಖಂಡಿತ ಸಮಸ್ಯೆಗೆ ಸಿಲುಕುತ್ತವೆ. ಕೇಂದ್ರ ಸರಕಾರದ ನೆರವಿಲ್ಲದೆ ಮುಂದುವರಿಯುವುದು ಕಷ್ಟವಾ ಗುತ್ತದೆ. ರಿಸರ್ವ್‌ ಬ್ಯಾಂಕ್‌ ಮಾಹಿತಿಯಂತೆ ಪಂಜಾಬ್‌ ಸರಕಾರ ತನ್ನ ತೆರಿಗೆ ಆದಾಯದ ಶೇ.45.4ನ್ನು ಇಂತಹ ಉಚಿತ ಯೋಜನೆಗಳಿಗೆ ಬಳಸುತ್ತಿದೆ. ಅದೇ ರೀತಿ ಆಂಧ್ರಪ್ರದೇಶ ಶೇ. 30.3, ಮಧ್ಯಪ್ರದೇಶ ಶೇ.28.8 ಮತ್ತು ಪಶ್ಚಿಮ ಬಂಗಾಳ ಶೇ.23.8ನ್ನು ಬಳಸುತ್ತದೆ. ಜಿಡಿಪಿ-ಸಾಲ ಅನುಪಾತ ಆಧರಿಸಿ ಅತೀಹೆಚ್ಚು ಸಾಲವನ್ನು ಹೊಂದಿರುವ ರಾಜ್ಯಗಳ ಪೈಕಿ ಪಂಜಾಬ್‌ ಮೊದಲ ಸ್ಥಾನದಲ್ಲಿವೆ. ರಾಜಸ್ಥಾನ, ಬಿಹಾರ, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ, ಝಾರ್ಖಂಡ್‌, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ಅನಂತರ ದಲ್ಲಿವೆ. ದೇಶದ ರಾಜ್ಯಗಳು ಖರ್ಚು ಮಾಡುವ ಅರ್ಧದಷ್ಟು ಈ ರಾಜ್ಯಗಳಿಗೆ ಹೋಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next