Advertisement

65ರ ಹರೆಯದಲ್ಲಿಯೂ ಕೃಷಿಯಲ್ಲಿ ನಿರತರಾಗಿ ಮಾದರಿಯಾದ ರೈತ

10:31 AM Dec 22, 2019 | mahesh |

ಹೆಸರು : ಸುಬ್ಬಯ್ಯ ಶೆಟ್ಟಿ
ಏನೇನು ಕೃಷಿ: ಅಡಿಕೆ, ತೆಂಗು, ತರಕಾರಿ ಬೆಳೆ
ಎಷ್ಟು ವರ್ಷ : 55
ಕೃಷಿ ಪ್ರದೇಶ : 9 ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಆದ್ದರಿಂದಲೇ ಭೂಮಿ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಪಳ್ಳಿ: ಭಾರತೀಯ ಸಂಸ್ಕೃತಿಯಲ್ಲಿ ಕೃಷಿಗೆ ಮಹತ್ತರವಾದ ಸ್ಥಾನವಿದೆ. ಹಿಂದಿನ ಕಾಲದಲ್ಲಿ ಕೃಷಿಯಲ್ಲದೆ ಪರ್ಯಾಯ ವ್ಯವಸ್ಥೆಯಿಲ್ಲದೆ ಪ್ರತಿಯೊಬ್ಬರೂ ಕೃಷಿ ಕಾರ್ಯದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾದ್ದರಿಂದ ಸಾವಿರಾರು ಕುಟುಂಬಗಳು ಭತ್ತದ ಕೃಷಿಯನ್ನೇ ಅವಲಂಬಿಸಿ ಶತಮಾನಗಳ ಕಾಲ ಜೀವನ ನಡೆಸುತ್ತಾ ಬಂದಿದ್ದವು. ಅನಂತರದ ದಿನಗಳಲ್ಲಿ ಲಾಭದ ಉದ್ದೇಶದೊಂದಿಗೆ ಪಟ್ಟಣಗಳತ್ತ ಮುಖಮಾಡಿದ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳದೆ ಕೃಷಿ ಭೂಮಿಗಳು ಹಡಿಲು ಬೀಳುತ್ತಿರುವ ಸಂದರ್ಭ ಸುಬ್ಬಯ್ಯ ಶೆಟ್ಟಿ ಅವರು ತಮ್ಮ 7ನೇ ವರ್ಷ ವಯಸ್ಸಿನಿಂದಲೇ ತಂದೆ ಬೊರ್ಗ ಶೆಟ್ಟಿ ಅವರ ಜತೆ ಕೃಷಿ ಕಾರ್ಯದಲ್ಲಿ ಸೇರಿ ನಿರಂತರ 55 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪಳ್ಳಿ ಗ್ರಾಮದ ನಿಂಜೂರು ಬಾಗನ್‌ಬೆಟ್ಟು ಸುಬ್ಬಯ್ಯ ಶೆಟ್ಟಿ ಅವರು ಇಂದಿಗೂ ಸಹ ಸುಮಾರು 9 ಎಕ್ರೆ ಪ್ರದೇಶದಲ್ಲಿ ಭತ್ತದ ಎರಡು ಬೆಳೆ ಬೆಳೆದು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಸುಮಾರು 9 ಎಕ್ರೆ ಕೃಷಿ ಭೂಮಿಯನ್ನು ಹೊಂದಿರುವ ಇವರು ಎಕ್ರೆ ಪ್ರದೇಶದಲ್ಲಿ 100 ಅಡಿಕೆ, 100 ತೆಂಗು, ಜತೆಗೆ ತರಕಾರಿ ಬೆಳೆ ಬೆಳೆದು ಪ್ರಗತಿಪರ ಕೃಷಿಕರಾಗಿ ದುಡಿಯುತ್ತಿದ್ದು 2018ನೇ ಸಾಲಿನಲ್ಲಿ ಜಿಲ್ಲಾ ಉತ್ತಮ ಕೃಷಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಎಕರೆಗೆ 140 ಕ್ವಿಂಟಾಲ್‌ ಭತ್ತದ ಫ‌ಸಲು
ಪ್ರತಿ ಎಕರೆಗೆ ಸುಮಾರು 140 ಕ್ವಿಂಟಾಲ್‌ ಭತ್ತದ ಫ‌ಸಲು ಪಡೆಯುವ ಇವರು ಭತ್ತದ ಕೃಷಿಯಿಂದಲೂ ಸಾಕಷ್ಟು ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ವಿವಿಧ ತರಕಾರಿಗಳಾದ ಬೆಂಡೆ, ಅಲಸಂಡೆ, ಹೀರೇಕಾಯಿ, ಬೂದುಗುಂಬಳ ಬೆಳೆದು ಲಾಭ ಪಡೆಯುತ್ತಿದ್ದಾರೆ. ಅಡಿಕೆ, ತೆಂಗುಗಳಲ್ಲಿಯೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಕೊಳವೆಬಾವಿ ಕೊರೆಸದೆ ಎರಡು ಬಾವಿಗಳ ಮೂಲಕವೇ ಕೃಷಿಗೆ ನೀರನ್ನು ಬಳಸುತ್ತಿದ್ದಾರೆ. ಇವರು ಭತ್ತದಲ್ಲಿ ಕಾರ್ತಿ ಮತ್ತು ಸುಗ್ಗಿ ಬೆಳೆ ಬೆಳೆಯುತ್ತಾರೆ.

Advertisement

ಹೈನುಗಾರಿಕೆ
ಕೃಷಿಗೆ ಪೂರಕವಾಗಿ ಹೈನುಗಾರಿಕೆಯು ಅತ್ಯಗತ್ಯ ಎಂದು ಮನಗಂಡ ಇವರು ದಶಕಗಳಿಂದ ಹೈನುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. 8 ಜೆರ್ಸಿ ದನಗಳನ್ನು ಸಾಕುತ್ತಿರುವ ಇವರು ಪ್ರತಿ ದಿನ ಸರಾಸರಿ 35ಲೀ.ಗೂ ಅಧಿಕ ಹಾಲನ್ನು ಸಂಘಕ್ಕೆ ನೀಡುತ್ತಿದ್ದಾರೆ. ನಿಂಜೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರು ಹೆಚ್ಚಾಗಿ ಕೃಷಿಗೆ ಸುಣ್ಣ, ಹಟ್ಟಿ ಗೊಬ್ಬರ, ಸುಡುಮಣ್ಣುಗಳನ್ನೇ ಹೆಚ್ಚಾಗಿ ಬಳಸುತ್ತಿದ್ದು, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.ಪತ್ನಿ ಇವರ ಕೃಷಿ ಚಟುವಟಿಕೆಗೆ ಸಾಥ್‌ ನೀಡುತ್ತಿದ್ದಾರೆ.

ಕೃಷಿ ಸಮಸ್ಯೆಗಳು
ಕೃಷಿಯಲ್ಲಿ ಮಿಶ್ರ ಬೆಳೆಯಿಂದ ಲಾಭ ಪಡೆಯಬಹುದಾದರೂ ನವಿಲು, ಕಾಡುಹಂದಿ, ಮಂಗಗಳಿಂದ ಫ‌ಸಲನ್ನು ಸಂರಕ್ಷಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಯಾಂತ್ರೀಕೃತ ಉಳುಮೆ
ಸುಬ್ಬಯ್ಯ ಶೆಟ್ಟಿ ಅವರು 9 ಎಕರೆ ಗದ್ದೆ ಉಳುಮೆ ಮಾಡಲು ಯಂತ್ರಗಳನ್ನು ಬಳಸುತ್ತಿದ್ದು, ಕೂಲಿಯಾಳುಗಳ ಸಮಸ್ಯೆ ಹೆಚ್ಚಾಗಿದ್ದರೂ 15ರಿಂದ 20 ಜನರ ತಂಡವನ್ನು ನಾಟಿ ಹಾಗೂ ಕಟಾವು ಕಾರ್ಯದಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ಕೃಷಿ ಚಟುವಟಿಕೆ ಅಗತ್ಯ
ಕೃಷಿ ಬದುಕು ಉತ್ತಮ. ಹಿಂದೆ ಅವಿಭಕ್ತ ಕುಟುಂಬಗಳು ಇದ್ದುದರಿಂದ ಕೂಲಿಯಾಳುಗಳ ಸಮಸ್ಯೆ ಇರಲಿಲ್ಲ. ಆದರೆ ಇಂದು ಬಹುತೇಕರು ಕೃಷಿಯಿಂದ ವಿಮುಖರಾಗಿ ಕೃಷಿಭೂಮಿ ಹಡಿಲು ಬೀಳುವಂತಾಗಿದೆ. ಯುವಕರು ಕೃಷಿಯತ್ತ ಮುಖ ಮಾಡಬೇಕು. ಕೃಷಿ ನಮ್ಮ ಜೀವನಾಡಿ. ಇದರಿಂದ ಅಂತರ್ಜಲ ವೃದ್ಧಿಯಾಗುವ ಜತೆಗೆ ಕೃಷಿಯಿಂದ ಅಧಿಕ ಲಾಭ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಸಮುದಾಯ ನಿರಂತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
-ಸುಬ್ಬಯ್ಯ ಶೆಟ್ಟಿ, ಪ್ರಗತಿ ಪರ ಕೃಷಿಕ

ಸಂದೇಶ್‌ ಕುಮಾರ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next