Advertisement

ಜಿಲ್ಲೆಯಲ್ಲಿ ಇನ್ನೂ ಉಳಿದುಕೊಂಡಿದೆ ಕಪ್ಪುಚುಕ್ಕಿ

12:33 AM Sep 28, 2019 | Sriram |

ಕಾಸರಗೋಡು: ಅಪ್ರಾಪ್ತ ವಯಸ್ಕ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕಾಸರಗೋಡು ಜಿಲ್ಲೆ ಇಂದಿಗೂ ಕಪ್ಪು ಚುಕ್ಕಿಯ ಕುಖ್ಯಾತಿಯನ್ನು ಉಳಿಸಿಕೊಂಡಿದೆ ಎಂಬುದು ಆತಂಕಕಾರಿ ವಿಚಾರ.

Advertisement

ಹೆಣ್ಣು ಮಕ್ಕಳ ಮೇಲೆ ಅತ್ಯ ಧಿಕ ಪ್ರಮಾಣದಲ್ಲಿ ಪೀಡನೆಗಳು ನಡೆದರೆ, ಕೆಲವೆಡೆ ಗಂಡುಮಕ್ಕಳೂ ಈ ಪಿಡುಗಿಗೆ ಈಡಾಗುತ್ತಿದ್ದಾರೆ ಎಂಬುದು ಜಿಲ್ಲೆಗೆ ಸಂಬಂಧಿಸಿ ನಡೆಸಲಾದ ಸಮೀಕ್ಷೆಗಳ ಅಂಕಿಅಂಶಗಳು ಪ್ರಕಟಪಡಿಸುತ್ತಿವೆ.

ಹೆತ್ತವರೇ “ವಿಲನ್‌’ಗಳಾದರೆ ಸಾಧಾರಣ ಗತಿಯಲ್ಲಿ ಮಲತಂದೆ ಯಿಂದ (ಅಪರೂಪದ ಪ್ರಕರಣಗಳಲ್ಲಿ ಮಲತಾಯಿಯಿಂದ) ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ ಎಂಬ ವದಂತಿ ಸಮಾಜದಲ್ಲಿ ಹರಡಿಕೊಂಡಿದೆ. ಆದರೆ ಚೈಲ್ಡ್‌ಲೈನ್‌ನ ಮೂಲಕ ದಾಖಲಾಗಿರುವ ಪ್ರಕರಣಗಳನ್ನು ಗಮನಿಸಿದಾಗ ಸ್ವಂತ ಹೆತ್ತವರಿಂದಲೇ ಲೈಂಗಿಕ ಪೀಡನೆಗೊಳಗಾದ ಪ್ರಕರಣಗಳು ಅಧಿಕವಾಗಿರುವುದು ಬೆಳಕಿಗೆ ಬಂದಿದೆ. ಒಟ್ಟು 12 ಪ್ರಕರಣಗಳು ಈ ವರ್ಷ ಸ್ವಂತ ತಂದೆಯಿಂದಲೇ ನಡೆದ ಲೈಂಗಿಕ ದೌರ್ಜನ್ಯ ನಿಟ್ಟಿನಲ್ಲಿ ದಾಖಲಾಗಿವೆ. ಸ್ವಂತ ತಾಯಿಯಿಂದ ನಡೆದ ಪೀಡನೆ ಸಂಬಂಧ 7 ಪ್ರಕರಣಗಳು ದಾಖಲಾಗಿವೆ. ಮಲತಂದೆಯಿಂದ ಹಿಂಸೆಗೊಳಗಾದ 4, ಮಲತಾಯಿಂದ ಲೈಂಗಿಕ ದಬ್ಟಾಳಿಕೆಗೆ ಒಳಗಾದ ಪ್ರಕರಣಗಳು 2 ಇವೆ.

ಬಸ್‌ಗಳ ಕಾರ್ಮಿಕರಿಂದ ಮಕ್ಕಳು ಲೈಂಗಿಕ ಪೀಡೆಗೆ ಒಳಗಾದ 5 ಪ್ರಕರಣಗಳಿವೆ. ಕೆಲವು ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಂದ ಹಿಂಸೆಗೆ ಒಳಗಾದ 3 ಘಟನೆಗಳೂ ಇವೆ.

ಇತರ ಪ್ರಕರಣಗಳು
ಇನ್ನೊಂದೆಡೆ ಲೈಂಗಿಕ ಪೀಡನೆ ಅಲ್ಲದೆ ಮಕ್ಕಳನ್ನು ಬೇರೆ ಬೇರೆ ರೀತಿ ಹಿಂಸೆಗೊಳ ಪಡಿಸುವ ಪ್ರಕ್ರಿಯೆಯೂ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂದು ಚೈಲ್ಡ್‌ ಲೈನ್‌ ದಾಖಲಾತಿಗಳು ತಿಳಿಸುತ್ತವೆ. 2018 ಎಪ್ರಿಲ್‌ ತಿಂಗಳಿಂದ 2019 ಮಾರ್ಚ್‌ ತಿಂಗಳ ವರೆಗೆ ನಡೆದ ವಿವಿಧ ಪ್ರಕರಣಗಳ ದಾಖಲಾತಿಯ ಅಂಕಿಅಂಶಗಳು ಈ ಕುರಿತು ಬೆಳಕು ಚೆಲ್ಲುತ್ತವೆ.

Advertisement

ಬಾಲ ಕಾರ್ಮಿಕತನಕ್ಕೆ ಸಂಬಂ ಧಿಸಿದ 8 ಪ್ರಕರಣಗಳು ಈ ಅವ ಧಿಯಲ್ಲಿ ದಾಖಲಾಗಿವೆ. ಬಾಲ್ಯ ವಿವಾಹಕ್ಕೆ ಸಂಬಂ ಧಿಸಿದ 2 ಘಟನೆಗಳು ನಡೆದಿವೆ. ದೈಹಿಕ ಹಿಂಸೆ (ಹೊಡೆಯುವುದು ಇತ್ಯಾದಿ)ಗೆ ಸಂಬಂ ಧಿಸಿದ 114 ಪ್ರಕರಣಗಳು, ಬಾಲ ಭಿಕ್ಷುಕತನಕ್ಕೆ ಹಚ್ಚಿದ ಪ್ರಕರಣಗಳು 6, ಮಕ್ಕಳ ಅಪಹರಣ, ಮಾರಾಟ ಇತ್ಯಾದಿಗಳಿಗೆ ಸಂಬಂ ಧಿಸಿದ 3 ಪ್ರಕರಣಗಳು ಇತ್ಯಾದಿಗಳಲ್ಲಿ ಮಕ್ಕಳಿಗೆ ಪುನಶ್ಚೇತನ ಒದಗಿಸುವಲ್ಲಿ ಚೈಲ್ಡ್‌ ಲೈನ್‌ ಯಶಸ್ವಿಯಾಗಿದೆ.

ಈ ಪಿಡುಗನ್ನು ಜಿಲ್ಲೆಯಿಂದ ಬೇರು ಸಹಿತ ಕಿತ್ತೆಸೆಯುವ ನಿಟ್ಟಿನಲ್ಲಿ ಜನಜಾಗೃತಿಯೊಂದೇ ದಾರಿ ಎಂದು ಚೈಲ್ಡ್‌ಲೈನ್‌ ಪರಿಣತರು ಅಭಿ ಪ್ರಾಯಪಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಡೆಸ ಲಾಗುತ್ತಿರುವ ಚಟುವಟಿಕೆಗಳೂ ಗಮನ ಸೆಳೆಯುತ್ತಿವೆ. ಜಿಲ್ಲೆಯಲ್ಲಿ ಈ ವರ್ಷ (ಈ ವರೆಗೆ) ಒಟ್ಟು 156 ಜಾಗೃತಿ ಕಾರ್ಯ ಕ್ರಮ ನಡೆಸಲಾಗಿದೆ. 5 ಚೈಲ್ಡ್‌ಲೈನ್‌ ತಂಡಗಳಿಗೆ ತರಬೇತು ನೀಡಲಾಗಿದೆ. ಬೇರೆ ಬೇರೆ ಸಂಘ-ಸಂಸ್ಥೆಗಳಿಗೆ 26 ತರಬೇತು ನೀಡಲಾ ಗಿದೆ. 16 ಮನೆ ಮನೆ ಸಂಪರ್ಕ ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಮೇಲೆ ಎಲ್ಲಾದರೂ ದೌರ್ಜನ್ಯ ನಡೆಯುತ್ತಿರುವುದು ಗಮನಕ್ಕೆ ಬಂದಲ್ಲಿ 1098 ಎಂಬ ನಂಬ್ರಕ್ಕೆ ಕರೆಮಾಡಿ ದೂರು ನೀಡಬೇಕು ಎಂದು ತಿಳಿಸಲಾಗಿದೆ.

2 ವರ್ಷದಲ್ಲಿ 220 ಪ್ರಕರಣ
ಮಕ್ಕಳ ಸಂರಕ್ಷಣೆಗೆ ಅಹೋರಾತ್ರಿ ದುಡಿಯುತ್ತಿರುವ ಸರಕಾರಿ ಸಂಸ್ಥೆ ಚೈಲ್ಡ್‌ ಲೈನ್‌ನ ದಾಖಲೆಗಳ ಪ್ರಕಾರ 2018-19 (ಈ ವರೆಗೆ) ಈ ಸಾಲಿಗೆ ಸೇರಿದ ಒಟ್ಟು 109 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 86 ಅಪ್ರಾಪ್ತವಯಸ್ಕ ಹೆಣ್ಣುಮಕ್ಕಳು ಲೈಂಗಿಕ ದಬ್ಟಾಳಿಕೆಗೆ ಈಡಾದರೆ, 23 ಪ್ರಾಯ ಪೂರ್ತಿಗೊಳ್ಳದ ಗಂಡುಮಕ್ಕಳೂ ಬಲಿಪಶುಗಳಾಗಿದ್ದಾರೆ. 2017-18ನೇ ಇಸವಿಯಲ್ಲಿ ಒಟ್ಟು 111 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಅಪ್ರಾಪ್ತ ವಯಸ್ಕರಾದ 88 ಹೆಣ್ಣುಮಕ್ಕಳು, 23 ಗಂಡುಮಕ್ಕಳು ಪೀಡನೆಗೆ ಒಳಗಾಗಿದ್ದರು ಎಂದು ದಾಖಲೆಗಳು ಸೂಚಿಸುತ್ತವೆ.

ಸಂಬಂಧಿಕರೇ ಆರೋಪಿಗಳು
ಸಂಬಂಧಿ ಕರಿಂದಲೇ ಅತಿ ಹೆಚ್ಚಿನ ಪೀಡನೆ ಮಕ್ಕಳ ಮೇಲೆ ನಡೆಯುತ್ತಿದೆ ಎಂದು ಅಂಕಿಅಂಶಗಳು ಸೂಚಿಸುತ್ತಿವೆ. ಈ ವರ್ಷ 26 ಪ್ರಕರಣಗಳು ಸಂಬಂ ಧಿಕರಿಂದ ನಡೆದಿರುವ ಬಗ್ಗೆ ಪ್ರಕರಣಗಳ ದಾಖಲಾತಿ ಖಚಿತಪಡಿಸುತ್ತಿದೆ. ನಂತರದ ಆರೋಪಿಗಳ ಸಾಲಿನಲ್ಲಿ ಶಾಲಾ ಶಿಕ್ಷಕರು ನಿಲ್ಲುತ್ತಾರೆ ಎಂದು ಅಂಕಿಅಂಶಗಳ ಪಟ್ಟಿ ತಿಳಿಸಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 23 ಪ್ರಕರಣಗಳು ಈ ನಿಟ್ಟಿನಲ್ಲಿ ದಾಖಲಾಗಿವೆ. ನೆರೆಮನೆಯವರಿಂದ ಮಕ್ಕಳು ಲೈಂಗಿಕ ಪೀಡನೆಗೊಳಗಾದ 19 ಪ್ರಕರಣಗಳು ದಾಖಲಾಗಿವೆ. ಅಪರಿಚಿತರಿಂದ, ಸಹಪಾಠಿಗಳಿಂದ ಹೀಗೆ ಬೇರೆ ಬೇರೆ ವ್ಯಕ್ತಿಗಳಿಂದ ದಬ್ಟಾಳಿಕೆಗೆ ಒಳಗಾದ 13 ಪ್ರಕರಣಗಳೂ ಇವೆ.

ಕಠಿನ ಕ್ರಮ ಚೈಲ್ಡ್‌ಲೈನ್‌ ಸಮಿತಿ
ಕಾಸರಗೋಡು ಸೆ. 27: ವಿವಿಧ ವಲಯಗಳಲ್ಲಿ ಮಕ್ಕಳ ಮೇಲೆ ನಡೆಯು ತ್ತಿರುವ ದೌರ್ಜನ್ಯ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಚೈಲ್ಡ್‌ಲೈನ್‌ ಸಲಹಾ ಸಮಿತಿ ಸಭೆ ತಿಳಿಸಿದೆ.

ಜಿಲ್ಲಾ ಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾ ಧಿಕಾರಿ ಎನ್‌.ದೇವಿದಾಸ್‌ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆಗಳು ಜತೆಸೇರಿ ಈ ಸಂಬಂಧ ಕಾರ್ಯಾಚರಣೆ ನಡೆಸಿದರೆ ಹೆಚ್ಚುವರಿ ಪರಿಣಾಮಕಾರಿಯಾದೀತು ಎಂದು ಸಭೆ ಅಭಿಪ್ರಾಯಪಟ್ಟಿದೆ. ಶಿಕ್ಷಣ, ಪೊಲೀಸ್‌, ಅಬಕಾರಿ, ಸಾಮಾಜಿಕ ನ್ಯಾಯ, ಡಿ.ಡಿ.ಒ.ಪಿ., ಪರಿಶಿಷ್ಟ ಜಾತಿ-ಪಂಗಡ ಇಲಾಖೆಗಳ ಜಂಟಿ ವತಿಯಿಂದ ಮುಂದೆ ಚೈಲ್ಡ್‌ಲೈನ್‌ ಚಟುವಟಿಕೆ ನಡೆಸಲಿದೆ. ಈ ಸಂಬಂಧ 30 ಮಂದಿಗೆ ವಿಶೇಷ ತರಬೇತು ನೀಡಲಾಗುವುದು ಎಂದು ತಿಳಿಸಲಾಗಿದೆ.

ಅನೇಕ ಪ್ರಕರಣಗಳಲ್ಲಿ ಸಂಕಷ್ಟಕ್ಕೀಡಾದ ಮಕ್ಕಳ ಸಂರಕ್ಷಣೆಗೆ ಚೈಲ್ಡ್‌ಲೈನ್‌ ನಡೆಸಿದ ಚಟುವಟಿಕೆಗಳು ಯಶಸ್ವಿಯಾಗಿದೆ ಎಂದು ಸಭೆ ಅವಲೋಕನ ನಡೆಸಿದೆ. ಜಿಲ್ಲೆಯಲ್ಲಿ ಅತ್ಯ ಧಿಕ ಪೀಡನೆಗಳಿಗೆ ಒಳಗಾದ ಮಕ್ಕಳು ನಗರಸಭೆ ಮತ್ತು ಚೆಂಗಳ ಗ್ರಾಮ ಪಂಚಾಯತ್‌ ವ್ಯಾಪ್ತಿಯವರು ಎಂದು ಸಭೆ ಆತಂಕ ವ್ಯಕ್ತಪಡಿಸಿದೆ.

ಶಾಲೆಗಳಲ್ಲಿ ಅರ್ಹರಾದವರನ್ನು ಮಾತ್ರ ಕೌನ್ಸಿಲಿಂಗ್‌ ನಡೆಸಲು ಆಯ್ಕೆಮಾಡಬೇಕು. ಮಕ್ಕಳು ಅಪರಿಚಿತರೊಂದಿಗೆ ಬೈಕ್‌ ಸಹಿತ ವಾಹನಗಳಲ್ಲಿ ಲಿಫ್ಟ್‌ ಯಾಚಿಸುವುದು, ಸಂಚಾರ ನಡೆಸಕೂಡದು. ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ತೆರಳುವ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಶಾಲೆಗಳ ಬಳಿಯ ಅಂಗಡಿಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ವಿರುದ್ಧ ತಪಾಸಣೆ ನಡೆಸಬೇಕು ಎಂದು ಸಭೆ ಸಲಹೆ ಮಾಡಿದೆ.

ಸಹಾಯಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಬಿ.ಪ್ರಷೋಬ್‌, ಚೈಲ್ಡ್‌ ಲೈನ್‌ ಜಿಲ್ಲಾ ಸಂಚಾಲಕ ಅನೀಷ್‌ ಜೋಸ್‌, ಸಿ.ಡಬ್ಲೂÂ.ಸಿ. ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಶಿಕ್ಷಣ ಉಪ ನಿರ್ದೇಶಕಿ ಕೆ.ಎನ್‌. ಪುಷ್ಪಾ, ಚೈಲ್ಡ್‌ಲೈನ್‌ ಸಂಚಾಲಕರಾದ ಎಂ. ಉದಯಕುಮಾರ್‌, ಕೆ.ವಿ.ಲಿಷಾ, ಡಿ.ಸಿ.ಪಿ.ಒ. ಸಿ.ಎ. ಬಿಂದು, ಚೈಲ್ಡ್‌ ಸೆಂಟರ್‌ ನಿರ್ದೇಶಕಿ ಎ.ಎ.ಅಬ್ದುಲ್‌ ರಹಮಾನ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next