Advertisement

ಕಾಸರಗೋಡು: 9 ಮಂದಿಗೆ ಕೋವಿಡ್ 19 ಸೋಂಕು ; ಮೀನುಗಾರಿಕೆ, ಮೀನು ಮಾರಾಟ ನಿಷೇಧ

01:13 AM Jul 14, 2020 | Hari Prasad |

ಕಾಸರಗೋಡು: ನೀಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತ ಸಹಿತ ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

ಅವರಲ್ಲಿ 7 ಮಂದಿ ವಿದೇಶಗಳಿಂದಲೂ ಒಬ್ಬರು ಹೊರರಾಜ್ಯದಿಂದಲೂ ಬಂದವರು. ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.

ಕತಾರ್‌ನಿಂದ ಬಂದ ಕುಂಬಳೆಯ ವ್ಯಕ್ತಿ, ದುಬಾೖಯಿಂದ ಬಂದ ಮೊಗ್ರಾಲ್‌ ಪುತ್ತೂರು, ಚೆಮ್ನಾಡ್‌, ಕಾಸರಗೋಡು ನಗರಸಭೆ, ಮುಳಿಯಾರು ನಿವಾಸಿಗಳು, ಒಮಾನ್‌ನಿಂದ ಬಂದ ಕಾಸರಗೋಡು ನಗರಸಭೆ ವ್ಯಾಪ್ತಿಯ ಯುವಕ, ಸೌದಿಯಿಂದ ಬಂದ ಚೆಂಗಳದ ಯುವಕ, ಬೆಂಗಳೂರಿನಿಂದ ಬಂದ 35 ವರ್ಷದ ಕುಂಬಳೆಯ ನಿವಾಸಿಯನ್ನು ಸೋಂಕು ಬಾಧಿಸಿದೆ.

ನೀಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತರಾದ 54 ವರ್ಷದ ಕರಿವೆಳ್ಳೂರು ಪಂಚಾಯತ್‌ ನಿವಾಸಿಯನ್ನು ಸೋಂಕು ಬಾಧಿಸಿದೆ. ಇದೇ ವೇಳೆ 9 ಮಂದಿ ಗುಣಮುಖರಾಗಿದ್ದಾರೆ.

ಕೇರಳದಲ್ಲಿ 449 ಮಂದಿಗೆ ಸೋಂಕು
ಕೇರಳದಲ್ಲಿ ಸೋಮವಾರ 449 ಮಂದಿಗೆ ಕೋವಿಡ್ 19 ಸೋಂಕು ದೃಢಪಡಿಸಲಾಗಿದೆ. 162 ಮಂದಿ ಗುಣಮುಖರಾಗಿದ್ದಾರೆ. 144 ಮಂದಿಗೆ ಸಂಪರ್ಕದ ಮೂಲಕ ಬಾಧಿಸಿದೆ. 140 ಮಂದಿ ವಿದೇಶದಿಂದಲೂ 64 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 18 ಮಂದಿಯ ಸೋಂಕಿನ ಮೂಲ ತಿಳಿದು ಬಂದಿಲ್ಲ. ಐವರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.

Advertisement

33 ಮಂದಿ ಬಂಧನ
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಜಿಲ್ಲೆಯಲ್ಲಿ 199 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಲಾಕ್‌ಡೌನ್‌ ಆದೇಶ ಉಲ್ಲಂಘನೆ ಆರೋಪದಲ್ಲಿ 15 ಪ್ರಕರಣಗಳನ್ನು ದಾಖಲಿಸಿ 33 ಮಂದಿಯನ್ನು ಬಂಧಿಸಲಾಗಿದೆ. 8 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೀನುಗಾರಿಕೆ, ಮೀನು ಮಾರಾಟ ನಿಷೇಧ
ಕೋವಿಡ್ 19 ಸಾಮೂಹಿಕ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ  ಜು. 14ರಿಂದ 17ರ ವರೆಗೆ ಮೀನುಗಾರಿಕೆ, ಮೀನು ಮಾರಾಟ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕೊಡಗು: 15 ಪಾಸಿಟಿವ್‌ ಪ್ರಕರಣ
ಕೊಡಗು ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 15 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ 13, ವೀರಾಜಪೇಟೆ 1, ಮಡಿಕೇರಿ ತಾಲೂಕಿನ ಒಬ್ಬರು ಬಾಧಿತರಲ್ಲಿ ಸೇರಿದ್ದಾರೆ. ಸೋಮವಾರಪೇಟೆ ತಾಲೂಕು ತೊರೆನೂರು ಗ್ರಾಮದ 85 ವರ್ಷದ ಮಹಿಳೆ ಬಾಧಿತರಲ್ಲಿ ಅತೀ ಹಿರಿಯರಾದರೆ, 18ರ ಹರೆಯದ ಇಬ್ಬರು ಯುವಕರು ಅತೀ ಕಿರಿಯರು.

ಲಾಕ್‌ ಡೌನ್‌ಗೆ ಜನರ ಒಲವು
ಹಸುರು ವಲಯದಲ್ಲಿದ್ದ ಪುಟ್ಟ ಜಿಲ್ಲೆ ಕೊಡಗು ಇಂದು 184 ಸೋಂಕಿತರನ್ನು ಕಂಡಿದ್ದು, ಜನರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಯಲ್ಲಿ ಅನಾಹುತವೇ ಸಂಭವಿಸಬಹುದು ಎಂದು ಅಭಿಪ್ರಾಯಪಡುತ್ತಿರುವ ವಿವಿಧ ಸಂಘ-ಸಂಸ್ಥೆಗಳು ಕನಿಷ್ಠ ಎರಡು ವಾರಗಳ ಕಾಲ ಲಾಕ್‌ ಡೌನ್‌ ಜಾರಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಡ ಹೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next