ಕುಷ್ಟಗಿ: ಹಾವೇರಿಯಲ್ಲಿ ಮೇ ತಿಂಗಳಿನಲ್ಲಿ ನಿಗದಿಯಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಸಮ್ಮೇಳನಕ್ಕಿಂತ ವಿಭಿನ್ನ ಎಂದು ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ, ಡಾ.ಮಹೇಶ ಜೋಷಿ ಹೇಳಿದರು.
ಕುಷ್ಟಗಿಯಲ್ಲಿ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹಾಗೂ ನನ್ನ ಸ್ವಂತ ಜಿಲ್ಲೆಯೂ ಆಗಿರುವುದರಿಂದ ಈ ಸಮ್ಮೇಳನದ ಬಗ್ಗೆ ವಿಶೇಷ ಕಾಳಜಿ ಇದೆ. ಕನ್ನಡದ ಹಬ್ಬ ನನ್ನ ತವರಿನಲ್ಲಿ ನಡೆಯುತ್ತಿರುವಾಗ ಯಾವ ತೊಂದರೆಯೂ ಇಲ್ಲದೇ, ಊಟ ವ್ಯವಸ್ಥೆ, ಸಾರಿಗೆ ಇತ್ಯಾದಿಯನ್ನು ಸುಗಮವಾಗಿ ನಡೆಸಲು ಉತ್ಸುಕನಾಗಿದ್ದೇನೆ. ಸಮ್ಮೇಳನದಲ್ಲಿ ಆಗುವ ಚರ್ಚೆಗಳು ಸರ್ಕಾರ ಹಾಗೂ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಗೋಷ್ಠಿಗಳಾಗಲಿವೆ ಎಂದರು.
ಕೊರೊನಾ ಮಾರಿ ಹಿನ್ನೆಲೆಯಲ್ಲಿ ಎರಡು ವರ್ಷ ಸಮ್ಮೇಳನಗಳು ನಡೆದಿಲ್ಲ ಹೀಗಾಗಿ ಸಮ್ಮೇಳನದ ಬಗ್ಗೆ ಕನ್ನಡಿಗರ ಸಾಕಷ್ಟು ನಿರೀಕ್ಷೆ ಇದೆ. ಈ ಸಮ್ಮೇಳನ ಬೇರೆ ಸಮ್ಮೇಳನಕ್ಕಿಂತ ವಿಭಿನ್ನವಾಗಿರುತ್ತದೆ. ಹಾವೇರಿಯಲ್ಲಿ ನಡೆಯುವ ಸಮ್ಮೇಳನ ಹಿಂದೆಯೂ ಆಗಿಲ್ಲ, ಮುಂದೆಯೂ ಆಗಬಾರದು ಎನ್ನುವ ವಿಚಾರದಲ್ಲಿ ಯಾರಿಗೂ ತೊಂದರೆಗೆ ಆಸ್ಪದ ಆಗದಂತೆ ಸಮ್ಮೇಳನ ನಡೆಸಲಾಗುವುದು ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಕೈಯಲ್ಲಿ ಏನೂ ಇಲ್ಲ ಹೀಗಾಗಿ ದೂರು ಕೊಡುತ್ತಿದೆ : ಆರಗ ಜ್ಞಾನೇಂದ್ರ
ಕೊರೊನಾದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಅನೇಕ ಕಲಾವಿದರನ್ನು ಸಾಹಿತಿಗಳನ್ನು ಕಳೆದುಕೊಂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರ ಬಡವಾಗಿದೆ. ಹೀಗಾಗಿ ಈ ಎಲ್ಲಾ ಅರ್ಥಗರ್ಭಿತ ಚಿಂತನೆಗಳೊಂದಿಗೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವ ನಿರ್ಣಯಗಳನ್ನು ಯಾವುದೇ ಹಿಂಜರಿತವಿಲ್ಲದೇ ಅನುಷ್ಠಾನಕ್ಕೆ ತರುವ ಭರವಸೆಯನ್ನು ನಾಡೋಜ ಡಾ. ಮಹೇಶ ಜೋಷಿ ಭರವಸೆ ನೀಡಿದರು.