Advertisement

800 ಕೋ. ರೂ.ವೆಚ್ಚದಲ್ಲಿ 34 ರೈಲು ನಿಲ್ದಾಣಗಳ ಆಧುನೀಕರಣ

12:27 AM Feb 27, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ಕೇಂದ್ರ ಸರಕಾರದ ಅಮೃತ್‌ ಭಾರತ್‌ ನಿಲ್ದಾಣ ಯೋಜನೆ (ಎಬಿಎಸ್‌ಎಸ್‌)ಯಡಿ ಎರಡನೇ ಹಂತದಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯ ರೈಲು ನಿಲ್ದಾಣಗಳ ಆಧುನೀಕರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚವಲ್‌ ಮೂಲಕ ಸೋಮವಾರ ಚಾಲನೆ ನೀಡಿದರು.

Advertisement

ಕರ್ನಾಟಕದ 28 ಹಾಗೂ ಆಂಧ್ರ ಪ್ರದೇಶ, ತಮಿಳುನಾಡು, ಗೋವಾ ತಲಾ ಎರಡು ನಿಲ್ದಾಣ ಸಹಿತ ಒಟ್ಟು 34 ರೈಲು ನಿಲ್ದಾಣಗಳನ್ನು 800.31 ಕೋಟಿ ರೂ. ವೆಚ್ಚದಲ್ಲಿ ಆಧುನೀ ಕರಿಸಲಾಗುತ್ತಿದೆ. ಹುಬ್ಬಳ್ಳಿ ವಿಭಾಗದ 7 ನಿಲ್ದಾಣಗಳಾದ ಆಲಮಟ್ಟಿ, ಬಾದಾಮಿ, ಬಾಗಲಕೋಟೆ, ವಿಜಯ ಪುರ, ಮುನಿರಾಬಾದ್‌, ಸಂವರ್ಧಂ, ವಾಸ್ಕೊ ಡಾ ಗಾಮಾ ನಿಲ್ದಾಣಗಳ ಅಭಿವೃದ್ಧಿಗೆ ಚಾಲನೆ ನೀಡಲಾಯಿತು.

ಬೆಂಗಳೂರು ವಿಭಾಗದ 15 ನಿಲ್ದಾಣಗಳಾದ ತುಮಕೂರು, ವೈಟ್‌ಫೀಲ್ಡ್‌, ಬಂಗಾರಪೇಟೆ, ಚನ್ನಪಟ್ಟಣ, ಧರ್ಮಪುರಿ, ಹೊಸೂರು, ದೊಡ್ಡಬಳ್ಳಾಪುರ, ಹಿಂದೂಪುರ, ಕೆಂಗೇರಿ, ಕೃಷ್ಣರಾಜಪುರಂ, ಕುಪ್ಪಂ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ರಾಮನಗರ ಹಾಗೂ ಮೈಸೂರು ವಿಭಾಗದ 12 ನಿಲ್ದಾಣಗಳಾದ ಸಾಗರ ಜಂಬಗೂರು, ಸಕಲೇಶಪುರ, ಶಿವಮೊಗ್ಗ ಟೌನ್‌, ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ, ತಿಪಟೂರು, ಬಂಟ್ವಾಳ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ರಾಣಿಬೆನ್ನೂರು ರೈಲು ನಿಲ್ದಾಣಗಳ ಉನ್ನತೀಕರಣಕ್ಕೆ ಚಾಲನೆ ನೀಡಲಾಯಿತು.

ನೈಋತ್ಯ ರೈಲ್ವೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಅಂದಾಜು 113.4 ಕೋ. ರೂ. ವೆಚ್ಚದಲ್ಲಿ 15 ರಸ್ತೆ ಕೆಳ ಸೇತುವೆ (ಆರ್‌ಯುಬಿ) ಮತ್ತು ಏಳು ಮೇಲ್ಸೇತುವೆ (ಆರ್‌ಒಬಿ)ಗಳನ್ನು ನಿರ್ಮಿಸಲಾಗಿದೆ. ಇವುಗಳನ್ನು ಇದೇ ವೇಳೆ ಪ್ರಧಾನಿ ಉದ್ಘಾಟಿಸಿದರು. ಅಂದಾಜು 278.64 ಕೋಟಿ ರೂ. ವೆಚ್ಚದಲ್ಲಿ ಏಳು ಆರ್‌ಒಬಿ ಮತ್ತು ಒಂದು ಆರ್‌ಯುಬಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಸಾರ್ವಜನಿಕ ವೀಕ್ಷಣೆಗೆ ಅವಕಾಶ
ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಫರೆನ್ಸ್‌ಮೂಲಕ ರೈಲು ನಿಲ್ದಾಣದ ಅಭಿವೃದ್ಧಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ವೀಕ್ಷಿಸಲು ರೈಲ್ವೆ ಇಲಾಖೆ ವತಿಯಿಂದ ಬೃಹತ್‌ಪರದೆ ಹಾಕಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಜತೆಗೆ ಸ್ಥಳೀಯವಾಗಿಯೂ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಸ್ಥಳೀಯವಾಗಿ ಆಯಾ ವಿಭಾಗದ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸದರು, ಶಾಸಕರು, ನೈಋತ್ಯ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಹೀಗಿರಲಿದೆ ಅತ್ಯಾಧುನಿಕ ಸೌಲಭ್ಯ
ನವೀಕರಣಗೊಳ್ಳುವ ನಿಲ್ದಾಣಗಳು ವಾಣಿಜ್ಯ ಹಬ್‌ ಆಗಿ ಅಭಿವೃದ್ಧಿಗೊಳ್ಳಲಿವೆ. ಕೆಮರಾ ಕಣ್ಗಾವಲಿನಲ್ಲಿರಲಿದ್ದು, 12 ಮೀಟರ್‌ ಅಗಲದ ಪಾದಚಾರಿ ಮೇಲ್ಸೇತುವೆ, ಉನ್ನತ ಮಟ್ಟದ ಪ್ಲಾಟ್‌ಫಾರ್ಮ್ ಶೆಲ್ಟರ್‌, ಆಗಮನ-ನಿರ್ಗಮನ ಪ್ರತ್ಯೇಕ ಪ್ರದೇಶ, ನಿಲ್ದಾಣದ ಪ್ರವೇಶ ದ್ವಾರ ಬಳಿ ವ್ಯವಸ್ಥಿತ ಪಾರ್ಕಿಂಗ್‌ ಸ್ಥಳ, ವಿದ್ಯುತ್‌ಚಾಲಿತ ವಾಹನಗಳಿಗೆ ಚಾರ್ಜಿಂಗ್‌ ಪಾಯಿಂಟ್ಸ್‌, ಸುಧಾರಿತ ಆಸನಗಳೊಂದಿಗೆ ವಿಶ್ರಾಂತಿ ಕೊಠಡಿ, ಟಿಕೆಟ್‌ ಕೌಂಟರ್‌ ವಿಸ್ತರಣೆ, ಲಿಫ್ಟ್‌ ಮತ್ತು ಎಸ್ಕ್ಲೇಟರ್‌, ಉಚಿತ ವೈಫೈ, ಶಾಪಿಂಗ್‌ ಪ್ರದೇಶ, ರೆಸ್ಟೋರೆಂಟ್‌-ಕೆಫೆಟೇರಿಯಾ, ಶುದ್ಧ ಕುಡಿವ ನೀರಿನ ಪಾಯಿಂಟ್ಸ್‌, ಎಟಿಎಂ, ವೈದ್ಯಕೀಯ ಸೌಲಭ್ಯ, ಮಾಹಿತಿಗಳ ಸೂಚನೆ ಫಲಕಗಳು, ಸೈನೇಜ್‌ ಬೋರ್ಡ್‌ಗಳೊಂದಿಗೆ ಅಭಿವೃದ್ಧಿಗೊಳಿಸಲಾಗುತ್ತದೆ. ಈಗಾಗಲೇ ಕೆಲವು ನಿಲ್ದಾಣಗಳಲ್ಲಿ ಕಾಮಗಾರಿ ಆರಂಭವಾಗಿದೆ. ಸೋಮವಾರ ಅಧಿಕೃತವಾಗಿ ಚಾಲನೆ ದೊರೆತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next