Advertisement

ಎಂಟು ವರ್ಷದಲ್ಲಿ ಎಂಟು ವಿಶ್ವಕೂಟ: ಐಸಿಸಿಗೆ ವಿರೋಧ ತೋರಿದ್ಯಾಕೆ ಬಿಸಿಸಿಐ

03:38 PM Apr 10, 2020 | keerthan |

ಮುಂಬೈ: ಒಂದು ಕಡೆ ಕೋವಿಡ್-19 ವೈರಸ್‌ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಲೇ ಇದೆ. ಇನ್ನೊಂದು ಕಡೆ ಅದಕ್ಕೆ ಸಿಲುಕಿಕೊಂಡು ಅಳಿವಿನಂಚಿಗೆ ಮನುಷ್ಯ ಸರಿಯುತ್ತಲೇ ಇದ್ದಾನೆ. ಮತ್ತೂಂದು ಕಡೆ ತಮ್ಮ ಕರ್ತವ್ಯವನ್ನು ಮರೆಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ, ಕೆಲವರು ಚಟುವಟಿಕೆಯನ್ನು ತಮ್ಮ ಮಿತಿಯಲ್ಲಿಯೇ ಮುಂದುವರಿಸಿದ್ದಾರೆ. ಅದರಲ್ಲಿ ಕ್ರೀಡೆಗೆ ಮಹತ್ವದ ಸ್ಥಾನ. ಮುಂದೇನು ಮಾಡ ಬೇಕೆಂದು ಇನ್ನೂ ಹಲವು ಕೂಟಗಳ ಸಂಘಟಕರಿಗೆ ಖಚಿತವಾಗಿಲ್ಲ. ಆದ್ದರಿಂದ ಲೆಕ್ಕಾಚಾರ ಮುಂದುವರಿದಿದೆ.

Advertisement

ಈ ಪೈಕಿ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ಬಹಳ ಇಕ್ಕಟ್ಟಿನಲ್ಲಿದೆ. ಮುಂದಿನ ಜುಲೈನಲ್ಲಿ ಅದರ ಚುನಾವಣೆಯಿದೆ. ಅಷ್ಟರೊಳಗೆ ಅದು ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಐಸಿಸಿಗೆ ಸದ್ಯ ತಲೆನೋವಾಗಿರುವ ಸಂಗತಿ 2023ರಿಂದ 2031ರವರೆಗಿನ 8 ವರ್ಷದ ವೇಳಾಪಟ್ಟಿ. ಈ ವೇಳೆ ವರ್ಷಕ್ಕೊಂದರಂತೆ 8 ವಿಶ್ವಕೂಟಗಳನ್ನು ನಡೆಸಬೇಕೆಂದು ಅದು ತೀರ್ಮಾನಿಸಿದೆ. ಇದು ಹೊಸ ತೀರ್ಮಾನ (ಈ ಹಿಂದೆ 4 ಕೂಟಗಳು ನಡೆಯುತ್ತಿದ್ದವು). ಇದರಲ್ಲಿ 10 ರಾಷ್ಟ್ರಗಳ ಎರಡು ಟಿ20 ಚಾಂಪಿಯನ್ಸ್‌ ಟ್ರೋಫಿಗಳೂ ಸೇರಿವೆ. ಈ ವರ್ಷಕ್ಕೊಂದು ಕೂಟವೇ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಗಳಿಗೆ ತಲೆನೋವಾಗಿರುವುದು. ಇದಕ್ಕೆ ಇವು ನೇರವಾಗಿಯಲ್ಲದಿದ್ದರೂ, ಪರೋಕ್ಷವಾಗಿ ತಕರಾರೆತ್ತಿವೆ. ಇದನ್ನು ಬಗೆಹರಿಸಿಕೊಳ್ಳುವ ದಾರಿ ಕಾಣದೇ ಐಸಿಸಿ ಕಂಗಾಲಾಗಿದೆ.

ಪರಿಸ್ಥಿತಿ ಏನು?
ಐಸಿಸಿ 2023ರಿಂದ 31ರ ಅವಧಿಯಲ್ಲಿ ಪುರುಷರ ಕ್ರಿಕೆಟ್‌ನ 8 ಪ್ರಮುಖ ವಿಶ್ವಕೂಟಗಳು ಸೇರಿ, ಒಟ್ಟು 28 ಪ್ರಮುಖ ಕೂಟಗಳನ್ನು ಆಯೋಜಿಸಲಿದೆ. ಇದರಲ್ಲಿ 2024 ಮತ್ತು28ರಲ್ಲಿ ನಡೆಯುವ ಟಿ20 ಚಾಂಪಿಯನ್ಸ್‌ ಟ್ರೋಫಿಯೂ ಸೇರಿದೆ. ಜೊತೆಗೆ 19 ವಯೋಮಿತಿ ವಿಶ್ವಕಪ್‌, ಎರಡು ವರ್ಷಗಳಿಗೊಮ್ಮೆ ಬರುವ ಟೆಸ್ಟ್‌ ವಿಶ್ವಚಾಂಪಿಯನ್‌ ಶಿಪ್‌ ಫೈನಲ್‌, ಮಹಿಳಾ ಕ್ರಿಕೆಟ್‌ ಕೂಟಗಳ ಆತಿಥ್ಯವನ್ನೆಲ್ಲ ಸೇರಿಸಿ, ಸದಸ್ಯ ರಾಷ್ಟ್ರಗಳು, ಸಹ ಸದಸ್ಯ ರಾಷ್ಟ್ರಗಳಿಗೆ ಐಸಿಸಿ ಮಾಹಿತಿ ರವಾನಿಸಿದೆ.

ವಿಶೇಷವೆಂದರೆ ಒಟ್ಟು 18 ರಾಷ್ಟ್ರಗಳ ಪ್ರತಿಕ್ರಿಯಿಸಿ, 93 ಬೇಡಿಕೆಗಳನ್ನಿಟ್ಟಿವೆಯಂತೆ. ಇದರಲ್ಲಿ 15 ರಾಷ್ಟ್ರಗಳು ತಮ್ಮ ಬಯಕೆಯನ್ನು ನಿರ್ದಿಷ್ಟವಾಗಿ ತಿಳಿಸಿದ್ದರೂ, ಮೂರು ರಾಷ್ಟ್ರಗಳು ಮಾತ್ರ, ತಮ್ಮ ಆಸಕ್ತಿಯನ್ನು ಸ್ಪಷ್ಟಪಡಿಸಿಲ್ಲ. ಅವು ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ ಎಂದು ಊಹಿಸಲಾಗಿದೆ.

ಸಮಸ್ಯೆ ಏನು?
ಜುಲೈ ತಿಂಗಳಲ್ಲಿ ಐಸಿಸಿ ಚುನಾವಣೆ ನಡೆಯಲಿದೆ. ಆ ವೇಳೆಗಾಗಲೇ ಐಸಿಸಿ ಮತ್ತು ಸದಸ್ಯ ರಾಷ್ಟ್ರಗಳ ನಡುವಿನ ಭಿನ್ನಮತ ಬಗೆಹರಿಯಬೇಕು.  ಇಲ್ಲವಾದರೆ ಮುಂದಿನ ಕೂಟಗಳು ಅಸ್ತವ್ಯಸ್ತವಾಗುತ್ತವೆ. ಈಗ ಐಸಿಸಿ ಚುನಾವಣೆ ಎಂದಿನಂತಿಲ್ಲ. ಐಸಿಸಿಗೆ ಮುಖ್ಯಸ್ಥರಾಗುವವರಿಗೆ ಯಾವುದೇ ರಾಷ್ಟ್ರಗಳ ಹಂಗಿರುವುದಿಲ್ಲ. ಅವರು ಸ್ವತಂತ್ರರಾಗಿ ತಮ್ಮ ಸಾಮರ್ಥಯದ ಮೇಲೆ ಸ್ಪರ್ಧಿಸಬಹುದು. ಆ ವ್ಯಕ್ತಿಗೆ ಈ ಜಟಾಪಟಿಯನ್ನೆಲ್ಲ ಬಗೆಹರಿಸಬೇಕಾದ ತಾಪತ್ರಯ ಎದುರಾಗುತ್ತದೆ. ಇಲ್ಲಿ ಯಾವುದೇ ರಾಷ್ಟ್ರಗಳ ಬೆಂಬಲ ಸಿಕ್ಕದಿದ್ದರೆ ಕಷ್ಟ.

Advertisement

ಇಲ್ಲಿ ಪ್ರತೀವರ್ಷ ವಿಶ್ವಕೂಟ ನಡೆಸುವುದಕ್ಕೆ ಬಿಸಿಸಿಐ, ಎಸಿಎ, ಇಸಿಬಿ ಸಿದ್ಧವಿಲ್ಲ. ಪ್ರತೀವರ್ಷದ ಕೂಟಗಳಿಂದ; ಈ ರಾಷ್ಟ್ರಗಳು ದೇಶೀಯವಾಗಿ ನಡೆಸುವ ಐಪಿಎಲ್‌, ಬಿಗ್‌ಬಾಷ್‌, ದಿ ಹಂಡ್ರೆಡ್‌ನ‌ಂತಹ ಕೂಟಗಳ ಮೇಲೆ ಒತ್ತಡ ಬೀಳುತ್ತದೆ. ಆಟಗಾರರ ಹೊಂದಾಣಿಕೆ, ದಿನಾಂಕದ ಹೊಂದಾಣಿಕೆ ಇವೆಲ್ಲ ಸಮಸ್ಯೆಯಾಗುತ್ತದೆ. ಇವಕ್ಕೆ ಈ ಕೂಟಗಳಿಂದಲೇ ಗರಿಷ್ಠ ಆದಾಯ ಬರುವುದು. ಇನ್ನು ಇವು ದ್ವಿಪಕ್ಷೀಯ ಪಂದ್ಯ ನಡೆಸಲು ಬೇರೆ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತವೆ. ಅವೂ ರದ್ದಾಗುತ್ತವೆ. ಅದರಿಂದ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ ಮಾಧ್ಯಮಹಕ್ಕಿನ ರೂಪದಲ್ಲೇ 60 ಕೋಟಿ ರೂ. ನಷ್ಟ ಸಂಭವಿಸುವ ನಿರೀಕ್ಷೆಯಿದೆ.

ಐಸಿಸಿ ಕೂಟಗಳು ನಡೆದಾಗ ಆದಾಯ ಐಸಿಸಿ ಮತ್ತು ಆತಿಥೇಯ ರಾಷ್ಟ್ರದ ನಡುವೆ ಹಂಚಿ ಹೋಗುತ್ತದೆ. ಉಳಿದ ರಾಷ್ಟ್ರಗಳಿಗೆ ಸಿಗುವುದೇನು? ಆದ್ದರಿಂದ ಪ್ರತೀವರ್ಷ ವಿಶ್ವಕೂಟ ಬೇಡ ಎಂದು ಇವು ತಕರಾರು ತೆಗೆಯುತ್ತಿವೆ. ಇವು ಎತ್ತುತ್ತಿರುವ ಇನ್ನೊಂದು ಮಹತ್ವದ ಪ್ರಶ್ನೆ, ಪ್ರತೀವರ್ಷ ವಿಶ್ವಕಪ್‌ನಂತಹ ಕೂಟ ನಡೆಸುವುದರಿಂದ ಅವುಗಳ ಮಹತ್ವವೇ ಕುಗ್ಗುತ್ತದೆ ಎನ್ನುವುದು. ಇದನ್ನೂ ಹಲವರು ಒಪ್ಪಿಕೊಂಡಿದ್ದಾರೆ. ಇಷ್ಟರ ಮಧ್ಯೆ ಐಸಿಸಿಗೆ ಕೋವಿಡ್-19 ಬಂದು ಅಪ್ಪಳಿಸಿದೆ. ಆದ್ದರಿಂದ ಅದು ಅಕ್ಟೋಬರ್‌ನಲ್ಲಿ ನಡೆಸಬೇಕಾಗಿರುವ ಟಿ20 ವಿಶ್ವಕಪ್‌ ರದ್ದು ಮಾಡಬೇಕಾದ ಇಕ್ಕಟ್ಟಿನಲ್ಲಿದೆ. ಮುಂದಿನ ಎಲ್ಲ ಕೂಟಗಳ ಬಗ್ಗೆಯೂ ಒಂದು ಅತಂತ್ರ ಸ್ಥಿತಿ ಎದುರಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next