Advertisement

Dengue: ಕುಂದಾಪುರದಲ್ಲಿ 6 ತಿಂಗಳಲ್ಲಿ 76 ಮಂದಿಗೆ ಡೆಂಗ್ಯೂ

12:58 AM Jul 07, 2024 | Team Udayavani |

ಕುಂದಾಪುರ: ತಾಲೂಕಿನಲ್ಲಿ ಕಳೆದ 6 ತಿಂಗಳುಗಳಲ್ಲಿ ಸುಮಾರು 40 ಜನರಿಗೆ ಡೆಂಗ್ಯೂ ಜ್ವರ ಬಂದಿದ್ದರೆ, ವಿವಿಧೆಡೆ ಉದ್ಯೋಗ ಮಾಡುತ್ತಿದ್ದ 36 ಮಂದಿ ಜ್ವರಬಾಧಿತರಾಗಿ ಕುಂದಾಪುರಕ್ಕೆ ಬಂದಿದ್ದಾರೆ!

Advertisement

ಮಲೆನಾಡು ಪ್ರಾಂತ್ಯ
ತಾಲೂಕಿನ ಮಲೆನಾಡು ಹಾಗೂ ಅರೆಮಲೆನಾಡು ಪ್ರಾಂತ್ಯದಲ್ಲಿ ಡೆಂಗ್ಯೂ ಬಾಧೆ ಹೆಚ್ಚು. 2-3 ವರ್ಷಗಳಿಂದ ಕೊಲ್ಲೂರು ಹಾಗೂ ಹಳ್ಳಿಹೊಳೆಯಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿದೆ. ಹಗಲು ವೇಳೆ ಕಡಿಯುವ ಸೊಳ್ಳೆಯಿಂದ ಡೆಂಗ್ಯೂ ಬರುತ್ತಿದ್ದು, ರಾತ್ರಿ ವೇಳೆ ಕಡಿಯುವ ಸೊಳ್ಳೆ ಯಿಂದ ಆನೆಕಾಲು ಹಾಗೂ ಮಲೇರಿಯಾ ಬರುತ್ತದೆ. ಆದ್ದರಿಂದ ಹಗಲು ವೇಳೆಯೂ ಸೊಳ್ಳೆ ಪರದೆ ಬಳಸುವ ಮೂಲಕ ಜಾಗರೂಕತೆ ವಹಿಸಬೇಕಿದೆ.

ವರ್ಷವಿಡೀ ಕ್ರಮ
ಕೊಲ್ಲೂರು, ಹಳ್ಳಿಹೊಳೆಯಲ್ಲಿ ವರ್ಷವಿಡೀ ಎಂಬಂತೆ ಡೆಂಗ್ಯೂ ತಡೆಗೆ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಇತರೆಡೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರ ಸುರûಾ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು ಕ್ಷೇತ್ರ ಭೇಟಿ ನಡೆಸುತ್ತಿದ್ದಾರೆ. ಸೊಳ್ಳೆಗಳ ನಿಯಂತ್ರಣ, ಸೊಳ್ಳೆ, ಲಾರ್ವಾ ನಾಶ ಮಾಡುವ ಬಗ್ಗೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡುತ್ತಿದ್ದಾರೆ. ಪೇಟೆಗಳಲ್ಲಿ ಅಂಗಡಿಗಳ ಸುತ್ತಮುತ್ತ ಇರುವ ಎಳನೀರಿನ ಚಿಪ್ಪಿನಲ್ಲಿ, ತೆರೆದ ಬಾಟಲಿಗಳಲ್ಲಿ ತುಂಬಿದ ನೀರನ್ನು ಚೆಲ್ಲುವ ಕೆಲಸ ಆರೋಗ್ಯ ಇಲಾಖೆ ಕಾರ್ಯಕರ್ತರಿಂದ ನಡೆಯುತ್ತಿದೆ. ಈ ಕೆಲಸಕ್ಕೆ ಜನರೂ ಕೈ ಜೋಡಿಸಿದರೆ ಸುಲಭವಾಗಲಿದೆ.

ಜಾಗರೂಕತೆ ಅವಶ್ಯ
ಕುಂದಾಪುರ ತಾಲೂಕಿನ ವಿವಿಧೆಡೆಯವರಿಗೆ ಜ್ವರ ಬಂದಷ್ಟೇ ಪ್ರಮಾಣದಲ್ಲಿ, ಮೂಲತಃ ಕುಂದಾಪುರದವರಾಗಿದ್ದು ಇತರೆಡೆ ಉದ್ಯೋಗದಲ್ಲಿದ್ದು ಡೆಂಗ್ಯೂ ಬಾಧೆಗೆ ಒಳಗಾಗಿ ಕುಂದಾಪುರದಲ್ಲಿ ಚಿಕಿತ್ಸೆ ಪಡೆದವರ ಪ್ರಮಾಣವೂ ದೊಡ್ಡದಿದೆ. ಆದ್ದರಿಂದ ಅಂತಹ ಪ್ರಕರಣ ಕಂಡುಬಂದರೆ ಅಂತಹವರನ್ನು ಜಾಗರೂಕತೆಯಿಂದ ಆರೈಕೆ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಸೊಳ್ಳೆ ಪರದೆ ಉಪಯೋಗಿಸಲಿ, ಪ್ರತ್ಯೇಕವಾಗಿರಲಿ, ಉತ್ತಮ ಪೌಷ್ಟಿಕ ಆಹಾರ ಸೇವಿಸಲಿ ಇತ್ಯಾದಿ ಸೂಚನೆಗಳನ್ನು ನೀಡುತ್ತಿದೆ.

ನಗರಕ್ಕೆ ಹಬ್ಬಿದ ಡೆಂಗ್ಯೂ
ಮಲೆನಾಡಿನ ಗ್ರಾಮಾಂತರದಲ್ಲಿ ಕಂಡುಬರುತ್ತಿದ್ದ ಡೆಂಗ್ಯೂ ಈಗ ನಗರದಲ್ಲೂ ಕಾಣಿಸಿಕೊಳ್ಳುತ್ತಿದೆ. ನಗರದ ತಾಲೂಕು ಆಸ್ಪತ್ರೆಯಲ್ಲಿ 10 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾರ್ಡ್‌ ಗಳನ್ನು ತೆರೆಯಲಾಗಿದೆ. ಡೆಂಗ್ಯೂ ಬಾಧಿತರಿಗಾಗಿ ವಿಶೇಷ ವಾರ್ಡ್‌ ರಚಿಸಲಾಗಿದೆ.

Advertisement

ಆಸ್ಪತ್ರೆಗಳು ಸಜ್ಜು
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಡೆಂಗ್ಯೂ ಬಾಧಿತರಿಗೆ ಚಿಕಿತ್ಸೆ ನೀಡಲು ಎಲ್ಲ ಸೌಕರ್ಯಗಳೂ ಇವೆ. ಪ್ಲೇಟ್‌ಲೆಟ್‌ ಕಡಿಮೆಯಾಗದಂತೆ ನೋಡುವುದು, ಕಡಿಮೆಯಾದರೆ ಪ್ಲೇಟ್‌ಲೆಟ್‌ ನೀಡುವುದು, ಜ್ವರಕ್ಕೆ ಔಷಧ ನೀಡುವುದೇ ಡೆಂಗ್ಯೂಗೆ ಮಾಡಬೇಕಾದ ಮುಖ್ಯ ಆರೈಕೆ. ಜ್ವರ ಕಂಡು ಬಂದರೆ ತತ್‌ಕ್ಷಣ ಆಸ್ಪತ್ರೆಗೆ ಧಾವಿಸುವುದೇ ನಾವು ಮಾಡುವ ಮೊದಲ ಕರ್ತವ್ಯ ಆಗಬೇಕಿದೆ. ಡೆಂಗ್ಯೂ ಜ್ವರ ಪೀಡಿತರು ದಾಖಲಾದರೆ ಮಾಹಿತಿ ನೀಡುವಂತೆ ಖಾಸಗಿ ಆಸ್ಪತ್ರೆಯವರಿಗೂ ಆರೋಗ್ಯ ಇಲಾಖೆ ಸೂಚಿಸಿದೆ.

ಕೈ ಜೋಡಿಸಿ
ಆರೋಗ್ಯ ಕಾರ್ಯಕರ್ತರ ಜತೆ ಕೈ ಜೋಡಿಸಿ. ಸೊಳ್ಳೆ ಹಾಗೂ ಲಾರ್ವಾ ನಿರ್ಮೂಲನೆಗೆ ನೆರವಾಗಿ. ವಾರಕ್ಕೊಮ್ಮೆ ಡ್ರೈ ಡೇ ಎಂದು ಮಾಡುತ್ತಿದ್ದು, ಆ ದಿನ ಬಕೆಟ್‌ ಹಾಗೂ ತೆರೆದ ವಸ್ತುಗಳಲ್ಲಿ ನಿಂತ ನೀರನ್ನು ಚೆಲ್ಲುವ ಕೆಲಸವನ್ನು ಪ್ರತಿಯೊಂದು ಮನೆಯ ಪರಿಸರದಲ್ಲೂ ಮಾಡಬೇಕು. ಫಾಗಿಂಗ್‌ ಇತ್ಯಾದಿ ಸ್ಥಳೀಯಾಡಳಿತಗಳ ಮೂಲಕ ನಡೆಯುತ್ತಿದೆ.
ಡಾ| ಪ್ರೇಮಾನಂದ್‌, ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next