Advertisement

ಜಿಲ್ಲಾದ್ಯಂತ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

09:33 PM Aug 15, 2019 | Lakshmi GovindaRaj |

ಜಿಲ್ಲಾದ್ಯಂತ ಎಲ್ಲಿ ನೋಡಿದರೂ ದೇಶದ 73 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿತ್ತು. ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಲಾ, ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿ ಕಟ್ಟಡಗಳ ಮೇಲೆ ತ್ರಿವರ್ಣಧ್ವಜ ಹಾರಿಸಿ ಭಾರತಾಂಬೆಗೆ ಗೌರವ ಸೂಚಿಸಲಾಯಿತು. ಎತ್ತ ಕಣ್ಣಾಯಿಸಿದರೂ ರಾಷ್ಟ್ರಧ್ವಜಗಳು ರಾರಾಜಿಸಿದವು. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಭಾರತ ಮಾತೆಯ ಪರ ಕೂಗಿ ಘೋಷಣೆಗಳು, ಸ್ವಾತಂತ್ರ್ಯ ಸೇನಾನಿಗಳ ನುಡಿಮುತ್ತುಗಳು ಮಾರ್ದನಿಸಿದವು. ಅಲ್ಲಲ್ಲಿ ಸಂಘ, ಸಂಸ್ಥೆಗಳು ಬೃಹತ್‌ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ದೇಶಾಭಿಮಾನ ಮೂಡಿಸಿದರು.

Advertisement

ಚಿಕ್ಕಬಳ್ಳಾಪುರ: ಸೂಜಿಗಲ್ಲಿನಂತೆ ಸೆಳೆದ ಆಕರ್ಷಕ ಪಥ ಸಂಚಲನ. ಸ್ವಾತಂತ್ರ್ಯೋತವ್ಸದಲ್ಲಿ ಜಿಲ್ಲೆಯ ಜಲಕ್ಷಾಮದ ಆನಾವರಣ. ಎತ್ತ ಕಣ್ಣಾಯಿಸಿದರೂ ಪಳಪಳನೆ ರಾರಾಜಿಸಿದ ತ್ರಿವರ್ಣ ಧ್ವಜ. ಇದೇ ಮೊದಲ ಬಾರಿಗೆ ಸ್ವಾತಂತ್ರ್ಯೋತ್ಸವಕ್ಕೆ ಕಳೆ ತಂದು ಕೊಟ್ಟಿತು 777 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ. ನೆರೆದಿದ್ದವರಲ್ಲಿ ದೇಶ ಪ್ರೇಮದ ಕಿಚ್ಚು ಮೂಡಿಸಿದ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು, ಭಾರತಾಂಭೆಯ ಪರ ಮಾರ್ದನಿಸಿತು ಝೇಂಕಾರ.

ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ವತಿಯಿಂದ ಆಯೋಜನೆಗೊಂಡಿದ್ದ 73ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಕಂಡು ಬಂದ ಈ ದೃಶ್ಯಗಳು ಅಕ್ಷರಶಃ ನೆರೆದಿದ್ದವರ ಮನ ಪುಳಕಿತಗೊಂಡು ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಹಿಮ್ಮಡಿಗೊಳಿಸಿತು. ಹಲವು ದಿನಗಳಿಂದ ತಾಲೀಮು ನಡೆಸಿದ್ದ ಪೊಲೀಸ್‌ ಇಲಾಖೆ, ಗೃಹ ರಕ್ಷಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟು ಸ್ವಾತಂತ್ರ್ಯೋತ್ಸವಕ್ಕೆ ಕಳೆ ತಂದರು.

ವಿಶಾಲವಾದ ಮೈದಾನದಲ್ಲಿ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ರಾಷ್ಟ್ರ ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ನೆರೆದಿದ್ದವರು ಎದ್ದುನಿಂತು ರಾಷ್ಟ್ರಗೀತೆಗೆ ಧ್ವನಿಗೂಡಿಸಿ ಗೌರವ ಸೂಚಿಸಿದರು. ಬಳಿಕ ಜಿಲ್ಲಾಧಿಕಾರಿಗಳು ಪಥ ಸಂಚಲನ ತಂಡಗಳ ಪರಿವೀಕ್ಷಣೆ ನಂತರ ಒಂದರ ಹಿಂದೆ ಆರಂಭಗೊಂಡ ವಿದ್ಯಾರ್ಥಿಗಳ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಹೋರಾಟಗಾರರನ್ನು ಕಣ್ಣು ಮುಂದೆ ತಂದು ಸ್ಮರಿಸುವಂತೆ ಮಾಡಿತು.

ದೇಶಪ್ರೇಮದ ಕಿಚ್ಚು: ವಿಶೇಷವಾಗಿ ಪಂಚಗಿರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಏ ವತನ್‌ ಮೇರೆ ವತನ್‌ ನೃತ್ಯ, ಸಂತ ಜೋಸೆಫ್ ಶಾಲೆಯ ವಿದ್ಯಾರ್ಥಿಗಳಿಂದ ಮೂಡಿ ಬಂದ ವಂದೇ ಮಾತರಂ ನೃತ್ಯ, ಪ್ರಕೃತಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಏ ದೇಶ್‌ ವೀರ ಜವಾನ್‌ ಕೋ ಸಾಂಸ್ಕೃತಿಕ ನೃತ್ಯ ನೆರೆದಿದ್ದವರಲ್ಲಿ ದೇಶಪ್ರೇಮದ ಕಿಚ್ಚು ಮೂಡಿಸಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದಲ್ಲಿ ಮಹಾತ್ಮಗಾಂಧಿಜೀ, ಭಗತ್‌ಸಿಂಗ್‌, ಸುಭಾಷ್‌ಚಂದ್ರ ಬೋಸ್‌ ಮತ್ತಿತರ ಮಹಾನೀಯರನ್ನು ದರ್ಶನ ಮಾಡಿದರು. ಒಂದು ಸಾಂಸðತಿಕ ಕಾರ್ಯಕ್ರಮದಲ್ಲಿ 200 ರಿಂದ 600 ವಿದ್ಯಾರ್ಥಿಗಳು ಭಾಗವಹಿಸಿ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

777 ಅಡಿ ಉದ್ದದ ತ್ರಿವರ್ಣ ಧ್ವಜ: ಕಾರ್ಯಕ್ರಮದಲ್ಲಿ ನಗರದ ಹೊರ ವಲಯದ ಚೊಕ್ಕಬಳ್ಳಿ ಸಮೀಪದ ಶ್ರೀ ಸಾಯಿರಾಮ್‌ ಇಂಟರ್‌ ನ್ಯಾಷನಲ್‌ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡುವ ವೇಳೆ 777 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಸರ್‌ ಎಂ.ವಿ ಮೈದಾನದಲ್ಲಿ ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳು ವಿವಿಧ ಭಂಗಿಗಳಲ್ಲಿ ತ್ರಿರ್ವಣ ದ್ವಜವನ್ನು ಪ್ರದರ್ಶಿಸಿ ನೃತ್ಯ ಪ್ರದರ್ಶಿಸಿದರು.

ಜಿಲ್ಲಾಧಿಕಾರಿಗಳಿಂದ ಧ್ವಜಾರೋಹರಣ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗದೇ ಉಸ್ತುವಾರಿ ಸಚಿವರು ನೇಮಕಗೊಳ್ಳದ ಪರಿಣಾಮ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ರವರೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರದ ಶಾಸಕರಾಗಿದ್ದ ಡಾ.ಕೆ.ಸುಧಾಕರ್‌ ಶಾಸಕ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮದತ್ತ ಬರಲಿಲ್ಲ. ಸಂಸದ ಬಿ.ಎನ್‌.ಬಚ್ಚೇಗೌಡ, ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ ಬಿಟ್ಟರೆ ಡಾ.ಕೆ.ಸುಧಾಕರ್‌ ಬೆಂಬಲಿತ ಬಹುತೇಕ ಚುನಾಯಿತ ಜನಪ್ರತಿನಿಧಿಗಳು, ತಾಪಂ ಅಧ್ಯಕ್ಷರು, ಎಪಿಎಂಸಿ, ಟಿಎಪಿಎಂಸಿಎಸ್‌ ಮತ್ತಿತರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸ್ವಾತಂತ್ರ್ಯೋತ್ಸ ಕಾರ್ಯಕ್ರಮದ ಕಡೆಗೆ ಸುಳಿಯಲಿಲ್ಲ.

ವಿದ್ಯಾರ್ಥಿಗಳಿಂದ ಜಲಕ್ಷಾಮ ಅನಾವರಣ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ನಿರೀಗಾಗಿ ನೃತ್ಯ, ಕ್ವಯಟ್‌ ಕಾರ್ನರ್‌ ಶಾಲೆಯ ವಿದ್ಯಾರ್ಥಿಗಳು ಬರದ ಜಿಲ್ಲೆಯಲ್ಲಿ ಮಳೆ ಕೊಯ್ಲು ಪದ್ಧತಿ ಬಗ್ಗೆ ರೂಪಿಸಿದ ನೃತ್ಯ ರೂಪಕ ಹಾಗೂ ಶಿಡ್ಲಘಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ನಡೆಸಿಕೊಟ್ಟ ಪರಿಸರ ನೃತ್ಯ ಪ್ರದರ್ಶನ ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಜಲಕ್ಷಾಮವನ್ನು ಅನಾರವಣಗೊಳಿಸಿ ನೀರಿನ ಮಿತ ಬಳಕೆ ಹಾಗೂ ಮಳೆ ಕೊಯ್ಲು ಅನುಷ್ಠಾನದ ಕುರಿತು ಅರಿವು ಮೂಡಿಸಿದರು.

ಜಿಲ್ಲಾಡಳಿತ ಈ ಬಾರಿ ಇಡೀ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಮಳೆ ಕೊಯ್ಲು ಹಾಗೂ ಅಂತರ್ಜಲ ವೃದ್ಧಿ ಬಗ್ಗೆ ಸಾರ್ವಜನಿಕರಲ್ಲಿ, ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಕೇಂದ್ರೀಕರಿಸಿ ಕಾರ್ಯಕ್ರಮ ರೂಪಿಸಿ ನಡೆಸಿಕೊಡುವಲ್ಲಿ ಯಶಸ್ವಿಯಾಯಿತು.

ಗಮನ ಸೆಳೆದ ಆಕರ್ಷಕ ಪಥ ಸಂಚಲನ: ಸರ್‌ ಎಂವಿ ಕ್ರೀಡಾಂಗಣದಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ಬಳಿಕ ಜಿಲ್ಲಾ ನಾಗರಿಕ ಪೊಲೀಸ್‌ ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಮಹಿಳಾ ಪೊಲೀಸ್‌ ತುಕಡಿ, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ತುಕಡಿ ಸೇರಿದಂತೆ ನಗರದ ವಿವಿಧ ಶಾಲಾ ಕಾಲೇಜುಗಳ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ನಡೆಸಿಕೊಟ್ಟ ಆಕರ್ಷಕ ಪಥ ಸಂಚಲನ ಗಮನ ಸೆಳೆಯಿತು. ಇದಕ್ಕೂ ಮೊದಲು ಅಂದ ಕಲಾವಿದ ಮಹಾಲಿಂಗಯ್ಯ ಮಠದ್‌ ತಂಡದಿಂದ ರಾಷ್ಟ್ರಗೀತೆ, ನಾಡಗೀತೆ ಹಾಡಲಾಯಿತು. ಈ ವೇಳೆ ಪೊಲೀಸ್‌ ಬ್ಯಾಂಡ್‌ ತಂಡದಿಂದ ನಾಡಗೀತೆಯನ್ನು ನುಡಿಸಲಾಯಿತು.

ಸಾಧಕರಿಗೆ ಜಿಲ್ಲಾಡಳಿತದಿಂದ ಗೌರವ ಸನ್ಮಾನ: ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದ ನೇಕಾರ ಸಮುದಾಯದ ಚಿಂತಾಮತ ತಿಮ್ಮಸಂದ್ರದ ನಿವಾಸಿ ಗೋವಿಂದಪ್ಪ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬಾಗೇಪಲ್ಲಿಯ ಡಾ.ಎಂ.ಎನ್‌.ರಘು, ಚಿಕ್ಕಬಳ್ಳಾಪುರದ ಚಿತ್ರಕಲೆ ಹಾಗೂ ರೇಖಾಚಿತ್ರ ಕಲಾವಿದ ಬಿ.ಪಿ.ಲೋಕೇಶ್‌.

ಕ್ರೀಡಾ ವಿಭಾಗದಲ್ಲಿ ಶಿಡ್ಲಘಟ್ಟದ ಮೌನಿಕ, ಮ್ಯಾಜಿಕ್‌ ಶೋ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ಪಿ.ಜಿ.ಸುಚಲರನ್ನು ಹಾಗೂ ರೆಡ್‌ಕ್ರಾಸ್‌ ಸಂಸ್ಥೆಗೆ 48 ಬಾರಿ ರಕ್ತದಾನ ಮಾಡಿದ ಶಿಡ್ಲಘಟ್ಟದ ಉಪ ತಹಶೀಲ್ದಾರ್‌ ಕೆ.ಎನ್‌.ಮಂಜುನಾಥ, ಚಿಂತಾಮಣಿಯ ಸಮಾಜ ಸೇವಕ ಸುದರ್ಶನ್‌, ಶಿಡ್ಲಘಟ್ಟದ ಪ್ರಗತಿಪರ ರೈತ ಮಧುಕರ್‌ರನ್ನು ಹಾಗೂ ಜಿಲ್ಲೆಯ ಪ್ರಗತಿಪರ ರೈತರನ್ನು, ಆರೋಗ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಜಿಲ್ಲಾಡಳಿತದ ಪರವಾಗಿ ಸಂಸದ ಬಿ.ಎನ್‌.ಬಚ್ಚೇಗೌಡ, ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ, ಜಿಲ್ಲಾಧಿಕಾರಿ, ಜಿಪಂ ಸಿಇಒ ಬಿ.ಪೌಜಿಯಾ ತರನ್ನುಮ್‌ ಮತ್ತಿತರ ಗಣ್ಯರು ಸನ್ಮಾನಿಸಿದರು.

ಮಳೆಕೊಯ್ಲು ಪ್ರಸ್ತಾಪಿಸಿದ ಜಿಲ್ಲಾಧಿಕಾರಿ: ತಮ್ಮ ಭಾಷಣದಲ್ಲಿ ಮುಖ್ಯವಾಗಿ ಜಿಲ್ಲೆಯ ಅಂತರ್ಜಲ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಲ್ಲೆಯಲ್ಲಿ ಜಲಮೂಲಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ರೂಪಿಸಿರುವ ಜಲವರ್ಷ ಹಾಗೂ ಮಳೆ ಕೊಯ್ಲು ಪದ್ಧತಿ ಅನುಷ್ಠಾನದ ಪ್ರಮುಖ್ಯತೆ ವಿವರಿಸಿ ಜಿಲ್ಲೆಯಲ್ಲಿ 1,478 ಕೆರೆಗಳಿದ್ದು ಆ ಪೈಕಿ ಒತ್ತುವರಿಯಾಗಿದ್ದ 271 ಕೆರೆಗಳ ಪೈಕಿ 132 ಕೆರೆಗಳಲ್ಲಿ 1,473.33 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಜಲಶಕ್ತಿ ಅಭಿಯಾನದಡಿ 149 ಕಲ್ಯಾಣಿಗಳನ್ನು ಸ್ವತ್ಛಗೊಳಿಸಲಾಗಿದೆ. 1,000 ಚೆಕ್‌ ಡ್ಯಾಂ ನಿರ್ಮಾಣಗಳ ಗುರಿ ಹೊಂದಿ ಈಗಾಗಲೇ 105 ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಮಳೆ ನೀರು ಕೊಯ್ಲು ಯೋಜನೆಯನ್ನು ಎಲ್ಲಾ ಮನೆಗಳಿಗೆ ಕಡ್ಡಾಯಗೊಳಿಸಲಾಗಿದ್ದು, ಜಿಲ್ಲೆಯ ಜನತೆ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಕೋಟಿ ನಾಟಿ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತ ಇದುವರೆಗೂ 2 ಲಕ್ಷ ಸಸಿಗಳನ್ನು ನಾಟಿ ಮಾಡಲಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯದ ಆಸೆ ಮತ್ತು ಕನಸುಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸಿ ಜಗತ್ತಿನಲ್ಲಿ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಸಮಾನತೆಯ ನೆಲದಲ್ಲಿ ಶೋಷಣೆ ಮುಕ್ತ ನವ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಬದ್ಧರಾಗಿ ದುಡಿಯಬೇಕಿದೆ.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next