Advertisement

ಕನ್ನಡ ಸೊಲ್ಲು, ಸಾರ್ವಭೌಮತೆಗೆ ಧಕ್ಕೆ ಸಹಿಸಲಾರೆ: ಸಿಎಂ

06:00 AM Aug 16, 2017 | |

ಬೆಂಗಳೂರು: “ರಾಜ್ಯಗಳಲ್ಲಿ ರಾಜ್ಯಭಾಷೆಯೇ ಸಾರ್ವಭೌಮ ಹೊರತು ಬೇರಾವ ಭಾಷೆ ಆ ನೆಲದ ಬದುಕಿನ ಮೇಲೆ ಅಧಿಪತ್ಯ ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರೋಕ್ಷವಾಗಿ ಕರ್ನಾಟಕದಲ್ಲಿ ಹಿಂದಿ ಭಾಷೆ ಹೇರಿಕೆ ಯತ್ನವನ್ನು ಕಟುವಾಗಿ ಟೀಕಿಸಿದ್ದಾರೆ.


ಕಳೆದ ಕೆಲವು ದಿನಗಳಿಂದ ಕನ್ನಡ ಅಸ್ಮಿತೆ ಪರ ನಿರಂತರ ಪ್ರತಿಪಾದಿಸಿಕೊಂಡು ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳವಾರ ಸಿಕ್ಕ ಸ್ವಾತಂತ್ರ್ಯ ದಿನದ ವೇದಿಕೆಯಲ್ಲೂ ಕನ್ನಡದ ಸೊಲ್ಲನ್ನು ಮತ್ತಷ್ಟು ಗಟ್ಟಿ ದನಿಯಲ್ಲಿ ಎತ್ತಿದರು. ಮಾಣೆಕ್‌ ಷಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ ಮುಖ್ಯಮಂತ್ರಿ ವಿವಿಧ ವಿಷಯಗಳ ಕುರಿತು ವ್ಯಕ್ತಪಡಿಸಿದ ನಿಲುವು ಹೀಗಿದೆ:


ಕೋಮುವಾದ:
ಕೋಮುವಾದ ಹಾಗೂ ಜಾತಿವಾದವೂ ಸೇರಿದಂತೆ ಬಹುರೂಪಿ ಫ್ಯಾಸಿಸಂ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿರುವ ದಿನಗಳಲ್ಲಿ ನಾವಿದ್ದೇವೆ. ಧರ್ಮ ವೈಯಕ್ತಿಕವಾದುದು. ಅದನ್ನು ವ್ಯಕ್ತಿ, ಸಮುದಾಯ ಮತ್ತು ಕೋಮುಗಳ ನಡುವೆ ದ್ವೇಷ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭ ಪಡೆಯುವ ಸಾಧನಗಳಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ ಕರ್ನಾಟಕ ಅಭಿವೃದ್ದಿ ಮಾದರಿ ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡುವ, ನಾಡಿನ ಪ್ರತಿಯೊಬ್ಬ ಪ್ರಜೆಯ ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಟ್ಟು ಕೊಂಡ ಸರ್ವೋದಯ ತತ್ವದ ಅಭಿವೃದ್ದಿ ಮಾದರಿ. ಇದನ್ನು ನಾನು “ಕರ್ನಾಟಕ ಅಭಿವೃದ್ದಿ ಮಾದರಿ’ ಎಂದು  ಹೆಮ್ಮೆಯಿಂದ ಕರೆಯುತ್ತೇನೆ. ಈ ಅಭಿವೃದ್ಧಿ ಮಾದರಿಗೆ ಸಾಮಾಜಿಕ ನ್ಯಾಯದ ಕನಸುಗಾರ ಬಸವಣ್ಣ,  ಗ್ರಾಮ ಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಹೋರಾಟಗಾರ ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳೇ ಪ್ರೇರಣೆ ಎಂದರು.


ಬಸವಣ್ಣ
ಕಾಯಕ ಜೀವಿಗಳ ಚಳುವಳಿಯ ನೇತಾರ ಬಸವಣ್ಣನವರು ನಮ್ಮೆಲ್ಲರ ಮನಸ್ಸಲ್ಲಿ ಸದಾ ನೆಲೆಸಿ ಮಾರ್ಗದರ್ಶನ ನೀಡುತ್ತಿದ್ದರು. ಇದೀಗ ಅವರ ಭಾವಚಿತ್ರಗಳನ್ನು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ಹೊರಡಿಸಲಾಗಿದೆ. ಇದು ಜ್ಞಾನ, ಅನ್ನ ಮತ್ತು ಸೇವೆಯ ತ್ರಿವಿಧ ದಾಸೋಹದ ಮೂಲಕ ಸಮ ಸಮಾಜ ನಿರ್ಮಾಣದ ಕನಸು ಕಂಡ ಬಸವಣ್ಣ ನಮ್ಮ ಹಾದಿಯ ತೋರುಗಂಬ ಎಂಬುದಕ್ಕೆ ಸಾಕ್ಷಿ.


ಸಾಂಸ್ಕೃತಿಕ ನೀತಿ
ಕನ್ನಡ ನಾಡಿನ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಬದ್ಧತೆಯ ಪ್ರತೀಕವಾಗಿ ನಮ್ಮ ಸರ್ಕಾರ ಸಾಂಸ್ಕೃತಿಕ ನೀತಿ ಜಾರಿಗೆ ತಂದಿದೆ. ಕನ್ನಡ ನಾಡು-ನುಡಿಯ ಗರಿಮೆಯನ್ನು ವಿಶ್ವಾದ್ಯಾಂತ ಪ್ರಚಾರಪಡಿಸಲು ಮತ್ತು ಪಸರಿಸಲು ಇದೇ ವರ್ಷ ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಅಲ್ಲದೇ 12ನೇ ಶತಮಾನದ ವಚನಕಾರರ 15 ಸಂಪುಟಗಳ ಸಮಗ್ರ ವಚನಗಳನ್ನು ಎರಡು ಸಂಪುಟಗಳಲ್ಲಿ ಹೊರತರಲಾಗಿದೆ. ಕನ್ನಡ ಭಾಷೆಯ ಬಹು ಮುಖ್ಯ ಸಾಹಿತ್ಯ ಪ್ರಕಾರವಾದ ತತ್ವಪದ ಸಾಹಿತ್ಯವನ್ನು ಈಗಾಗಲೇ 32 ಸಂಪುಟಗಳಲ್ಲಿ ಪ್ರಕಟಿಸಲಾಗಿದ್ದು, ಇನ್ನೂ 18 ಸಂಪುಟಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.


ಸಾಮಾಜಿಕ ಸ್ವಾತಂತ್ರ್ಯ
ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದ ಆಶಯಗಳನ್ನೊಳಗೊಂಡ ಸಾಮಾಜಿಕ ಸ್ವಾತಂತ್ರ್ಯವನ್ನು ಒಳಗೊಳ್ಳದ ರಾಜಕೀಯ ಸ್ವಾತಂತ್ರ್ಯ ಬಹಳ ಕಾಲ ಬಾಳಲಾರದು ಎಂದು ಸಂವಿಧಾನಶಿಲ್ಪಿಬಾಬಾಸಾಹೇಬ… ಅಂಬೇಡ್ಕರ್‌ ನೀಡಿದ್ದ ಎಚ್ಚರಿಕೆ ನಮ್ಮನ್ನು ಸದಾ ಜಾಗೃತ ಸ್ಥಿತಿಯಲ್ಲಿಟ್ಟಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾಜದ ಎಲ್ಲಾ ಜನವರ್ಗಗಳಿಗೂ ಹಂಚಿಕೆ ಮಾಡುವ ಮೂಲಕ ಸಂವಿಧಾನದ ಆಶಯವನ್ನು ಸಾಕಾರಗೊಳಿಸಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.


ಹುತಾತ್ಮ ಯೋಧರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ: ಸಿಎಂ
ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ಬಗೆಗಿನ ನಮ್ಮ ಕಾಳಜಿ ಕೇವಲ ಬಾಯಿ ಮಾತಿನದ್ದಲ್ಲ. ಈ ಹಿನ್ನೆಲೆಯಲ್ಲಿ ಯುದ್ಧದಲ್ಲಿ ಅಥವಾ ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಅಥವಾ ಶಾಶ್ವತ ಅಂಗವೈಕಲ್ಯ ಹೊಂದಿದ ಕರ್ನಾಟಕ ಮೂಲದ ಯೋಧರ ಕುಟುಂಬದ ಓರ್ವ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಾತಂತ್ರೋತ್ಸವ ಭಾಷಣದಲ್ಲಿ ಘೋಷಿಸಿದ್ದಾರೆ.


ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅನ್ಯ ಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ನೀಡುವ ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ, ಕನ್ನಡ ಭಾಷೆಯ ಸಾರ್ವಭೌಮತೆಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ
– ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next