Advertisement

ರಾಜ್ಯದ ರೈತರಿಗೆ ನಿತ್ಯ 7 ಗಂಟೆ ವಿದ್ಯುತ್‌

03:45 AM Feb 08, 2017 | Team Udayavani |

ವಿಧಾನ ಪರಿಷತ್‌: ರಾಜ್ಯದ ರೈತರಿಗೆ ನಿತ್ಯ ಏಳು ಗಂಟೆ ವಿದ್ಯುತ್‌ ನೀಡಲಾಗುತ್ತಿದ್ದು, ಇದನ್ನು ಸುಳ್ಳು ಎಂದು ಸಾಬೀತುಪಡಿಸಿದರೆ
ಯಾವುದೇ ಶಿಕ್ಷೆ ಅನುಭವಿಸಲು ಸಿದ್ದ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸವಾಲೆಸೆದ ಪ್ರಸಂಗ ನಡೆಯಿತು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಅಪ್ಪಾಜಿಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ನೀವು (ಅಪ್ಪಾಜಿಗೌಡ) ಹಳ್ಳಿಗಳಿಗೆ ಹೋಗಿ
ಪರಿಶೀಲಿಸದ ಕಾರಣ ವಾಸ್ತವ ಗೊತ್ತಿದ್ದಂತಿಲ್ಲ. ರಾಜ್ಯಾದ್ಯಂತ ರೈತರಿಗೆ ನಿತ್ಯ ಏಳು ಗಂಟೆ ವಿದ್ಯುತ್‌ ಪೂರೈಸಲಾಗುತ್ತಿದ್ದು, ಇದು ಸುಳ್ಳು ಎನ್ನುವುದಾದರೆ ಯಾವ ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ ಎಂದರು.

ರೈತರಿಗೆ 8,500 ಕೋಟಿ ರೂ. ಸಬ್ಸಿಡಿ ಮೂಲಕ ವಿದ್ಯುತ್‌ ಪೂರೈಸಲಾಗುತ್ತಿದೆ. ಅಂದರೆ ಪ್ರತಿಯೊಬ್ಬ ರೈತರಿಗೆ 50 ಸಾವಿರ ರೂ.ನಿಂದ 75 ಸಾವಿರ ರೂ.ವರೆಗೆ ಪುಕ್ಕಟ್ಟೆಯಾಗಿ ವಿದ್ಯುತ್‌ ನೀಡಲಾಗುತ್ತಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ ವಿದ್ಯುತ್‌ಗೆ ಹೆಚ್ಚಿನ ಬೇಡಿಕೆಯಿಲ್ಲ. ಕೆಲವೆಡೆ ಆರೇಳು ಗಂಟೆ ವಿದ್ಯುತ್‌ ನೀಡಿದರೂ ಕೆಲ ರೈತರು 10 ಗಂಟೆ ವಿದ್ಯುತ್‌ ಬಳಸುತ್ತಿದ್ದಾರೆ. ಆದರೂ ಅಂತವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ನಿತ್ಯ 9,500 ಮೆಗಾವ್ಯಾಟ್‌ ವಿದ್ಯುತ್‌ಗೆ ಬೇಡಿಕೆಯಿದ್ದು, 10,500 ಮೆಗಾವ್ಯಾಟ್‌ ವಿದ್ಯುತ್‌ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೈಗಾರಿಕೆಗಳಿಗೆ 24 ಗಂಟೆ ವಿದ್ಯುತ್‌ ನೀಡಲು ಸರ್ಕಾರ ಸಿದ್ದವಿದೆ. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಿ ಉದ್ಯಮಿಗಳನ್ನು ಆಹ್ವಾನಿಸಿದ್ದರು ಎಂದರು.

ದರ ಏರಿಕೆಗೆ ಅನುಮತಿ ಕೋರಿ ಪ್ರಸ್ತಾವ ಎಲ್ಲ ಎಸ್ಕಾಂಗಳು ವಿದ್ಯುತ್‌ ಖರೀದಿ, ವಿತರಣೆಗೆ ತಗಲುವ ವೆಚ್ಚದ ಆಧಾರದ ಮೇಲೆ ಪ್ರತಿ ಯೂನಿಟ್‌ಗೆ 1.48 ರೂ. ದರ ಏರಿಕೆಗೆ ಅನುಮತಿ ಕೋರಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವ ಸಲ್ಲಿಸಿವೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು. ವಿದ್ಯುತ್‌ ವಿತರಣಾ ಕಂಪನಿಗಳು 2012-13ನೇ ಸಾಲಿನಲ್ಲಿ ಪ್ರತಿ
ಯೂನಿಟ್‌ಗೆ 73 ಪೈಸೆ ಏರಿಕೆಗೆ ಮನವಿ ಮಾಡಿದರೆ 13 ಪೈಸೆ ಏರಿಕೆಗೆ ಕೆಇಆರ್‌ಸಿ ಅನುಮತಿ ನೀಡಿತ್ತು. ಅದೇ ರೀತಿ 2013-14ನೇ ವರ್ಷದಲ್ಲಿ 70 ಪೈಸೆ ಏರಿಕೆ ಮನವಿಗೆ 23 ಪೈಸೆ, 2014-15ರಲ್ಲಿ 66 ಪೈಸೆ ಕೋರಿಕೆಗೆ 32 ಪೈಸೆ, 2015-16ನೇ ಸಾಲಿನಲ್ಲಿ 80 ಪೈಸೆಗೆ ಬದಲಾಗಿ 13 ಪೈಸೆ ಹಾಗೂ 2016-17ನೇ ಸಾಲಿನಲ್ಲಿ 1.02 ರೂ. ದರ ಏರಿಕೆ ಪ್ರಸ್ತಾವಕ್ಕೆ ಕೆಇಆರ್‌ಸಿ ಕೇವಲ 46 ಪೈಸೆ ಹೆಚ್ಚಳಕ್ಕಷ್ಟೇ ಒಪ್ಪಿಗೆ ನೀಡಿತ್ತು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next