Advertisement

ಮೈಷುಗರ್‌ ನೌಕರರಿಗೆ ಜಾರಿಯಾಗದ 6ನೇ ವೇತನ

04:31 PM Nov 20, 2017 | Team Udayavani |

ಮಂಡ್ಯ: ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಕಾರ್ಮಿಕರಿಗೆ ರಾಜ್ಯಸರ್ಕಾರ 6ನೇ ವೇತನ ಒಪ್ಪಂದ ಜಾರಿ ಮಾಡಿ ಎರಡು ವರ್ಷವಾಗುತ್ತಿದೆ. ಆದರೆ, ಮೈಸೂರು ಸಕ್ಕರೆ ಕಂಪನಿ ತನ್ನ ನೌಕರರಿಗೆ ಮಾತ್ರ ಹೊಸ ಒಪ್ಪಂದದಂತೆ ವೇತನ ಜಾರಿಯೂ ಆಗಿಲ್ಲ. ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಹಣವನ್ನೂ ನೀಡಿಲ್ಲ. ರಾಜ್ಯದಲ್ಲಿ ಸುಮಾರು 74 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಲ್ಲಿ 13 ಸಹಕಾರಿ ಕ್ಷೇತ್ರದಲ್ಲಿ, ಏಳು ಸಹಕಾರಿ ಕಾರ್ಖಾನೆಗಳು ಖಾಸಗಿ ಗುತ್ತಿಗೆ ಒಡೆತನದಲ್ಲಿ, 43 ಖಾಸಗಿ ಒಡೆತನದಲ್ಲಿ ಹಾಗೂ 2 ಸರ್ಕಾರಿ ಸ್ವಾಮ್ಯದಲ್ಲಿವೆ. ಇವುಗಳಲ್ಲಿ ಎಲ್ಲ ವರ್ಗದ ಸುಮಾರು 60ರಿಂದ 75 ಸಾವಿರ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. 

Advertisement

ನಾಲ್ಕು ವರ್ಷಕ್ಕೊಮ್ಮೆ ಪರಿಷ್ಕರಣೆ: 1990 ರಿಂದ ಇದುವರೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸಕ್ಕರೆ ಕಾರ್ಖಾನೆ ಕಾರ್ಮಿಕರ ವೇತನ ಪರಿಷ್ಕರಣೆ ನಡೆಯುತ್ತಿದೆ. ಇದಕ್ಕಾಗಿ 6 ತ್ರಿಪಕ್ಷೀಯ ವೇತನ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ರಾಜ್ಯಸರ್ಕಾರ 18 ಮಾರ್ಚ್‌ 2016ರಂದು ಆರನೇ ವೇತನ
ಒಪ್ಪಂದವನ್ನು ಜಾರಿಗೊಳಿಸಿದೆ. ಇದು ಕಾರ್ಖಾನೆ ಆಡಳಿತ ಮಂಡಳಿ, ಕಾರ್ಮಿಕರ ಫೆಡರೇಷನ್‌, ಸರ್ಕಾರದ ಮೂರು ಪ್ರತಿನಿಧಿಗಳು ಸೇರಿ ಮಾಡಿಕೊಂಡಿರುವ ಒಪ್ಪಂದವಾಗಿದೆ. ಅದರಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ತಮ್ಮ ನೌಕರರಿಗೆ ಆರನೇ ವೇತನ ಒಪ್ಪಂದದಂತೆ ವೇತನ ಪಾವತಿ ಮಾಡುತ್ತಿವೆ. ಆದರೆ, ಮೈಷುಗರ್‌ ಆಡಳಿತ ಮಂಡಳಿ ತನ್ನ ನೌಕರರಿಗೆ ಹೊಸ ವೇತನ ಒಪ್ಪಂದವನ್ನು ಜಾರಿಗೊಳಿಸಲು ಇದುವರೆಗೆ ಕಿಂಚಿತ್ತೂ ಆಸಕ್ತಿ ತೋರಿಲ್ಲ.

ಸಾಕಷ್ಟು ಪತ್ರ ವ್ಯವಹಾರ: ಆರನೇ ವೇತನ ಒಪ್ಪಂದ ಜಾರಿಗೊಳಿಸುವಂತೆ ಸಚಿವರಾಗಿದ್ದ ಎಚ್‌.ಎಸ್‌. ಮಹದೇವ ಪ್ರಸಾದ್‌, ಕಬ್ಬು ಅಭಿವೃದ್ಧಿ ಆಯುಕ್ತರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಎಲ್ಲರಿಗೂ ಪತ್ರ ಬರೆದು ಹೊಸ ಒಪ್ಪಂದ ಜಾರಿಗೊಳಿಸುವಂತೆ ಮನವಿ ಮಾಡಲಾಗಿದೆ. ಕಾರ್ಮಿಕರ ಮನವಿಗೆ ಸ್ಪಂದಿಸಿ ಎಲ್ಲರೂ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ. 

ಕಾರ್ಖಾನೆ ಆಡಳಿತ ಮಂಡಳಿ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ಯಾವುದೇ ಆದೇಶಗಳಿಗೂ ಕನಿಷ್ಠ ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗದೆ ಉದ್ಧಟತನ ಪ್ರದರ್ಶಿಸಿದೆ. ಆರನೇ ವೇತನ ಒಪ್ಪಂದ 2014 ರಿಂದ 2018 ರವರೆಗೆ ಜಾರಿಯಲ್ಲಿರುತ್ತದೆ. ಇನ್ನೇನು ವೇತನ ಒಪ್ಪಂದದ ಅವಧಿ ಮುಗಿಯುತ್ತಾ ಬಂದಿದ್ದರೂ ಆದೇಶ ಜಾರಿಗೊಳಿಸದೆ ನೌಕರರಿಗೆ ಆಡಳಿತ ಮಂಡಳಿ ಅನ್ಯಾಯವೆಸಗಿದೆ.

180 ಜನ ನಿವೃತ್ತಿ: 2014ರಿಂದ ಇಲ್ಲಿಯವರೆಗೆ ಸುಮಾರು 180 ನೌಕರರು ಸೇವೆಯಿಂದ ನಿವೃತ್ತರಾಗಿದ್ದಾರೆ. 31 ಮೇ 2015 ರಿಂದ 30 ಸೆಪ್ಟೆಂಬರ್‌ 2016ರವರೆಗೆ 48 ನೌಕರರು
ನಿವೃತ್ತರಾಗಿದ್ದಾರೆ. ಈ ನೌಕರರಿಗೆ ಹೊಸ ಒಪ್ಪಂದದಂತೆ 1,54,51,084 ರೂ. ಪಾವತಿಸಬೇಕಿದೆ. ನಿವೃತ್ತರಾಗಿರುವ ಪ್ರತಿಯೊಬ್ಬ ನೌಕರರಿಗೂ ತಲಾ 40 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೆ ಗ್ರಾಚ್ಯುಟಿ ಹಣ ಪಾವತಿಸಬೇಕಾಗುತ್ತದೆ. ಹಣ ಏನಾಯ್ತು? ರಾಜ್ಯಸರ್ಕಾರ ಹತ್ತು ವರ್ಷಗಳಲ್ಲಿ ಕಾರ್ಖಾನೆಗೆ 400 ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿದೆ. ಯಂತ್ರೋಪಕರಣಗಳ ದುರಸ್ತಿ, ಸಹ ವಿದ್ಯುತ್‌ ಘಟಕ ಪುನಶ್ಚೇತನ ಹೆಸರಿನಲ್ಲಿ ಕೋಟ್ಯಂತರ ರೂ. ಹಣವನ್ನು ಲೂಟಿ ಹೊಡೆಯಲಾಯಿತೇ ಹೊರತು ಕಾರ್ಖಾನೆ ಪುನಶ್ಚೇತನಗೊಳಿಸುವ ಬದ್ಧತೆಯನ್ನು ಮೈಷುಗರ್‌ ಆಡಳಿತ ಮಂಡಳಿ ಪ್ರದರ್ಶಿಸಲಿಲ್ಲ. ನಿವೃತ್ತ ನೌಕರರಿಗೆ ಗ್ರ್ಯಾಚ್ಯುಟಿ ಹಣ ನೀಡಲಿಲ್ಲ. ನೌಕರರಿಗೆ ಪರಿಷ್ಕೃತ ವೇತನವನ್ನೂ ನೀಡದೆ ವಂಚಿಸಿತು.

Advertisement

2017-18ನೇ ಸಾಲಿನ ಆಯವ್ಯಯದಲ್ಲಿ ನಿವೃತ್ತ ನೌಕರರ ಆಪದ್ಧನ (ಗ್ರಾಚ್ಯುಟಿ)ಕ್ಕೆ 1 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆಯಾದರೂ ಅದನ್ನೂ ನಿವೃತ್ತ ನೌಕರರಿಗೆ ನೀಡಿಲ್ಲ. ಅಲ್ಲದೆ ಸೇವೆಯಿಂದ ನಿವೃತ್ತರಾಗುವ ನೌಕರರಿಗೆ ನೀಡುವ ಭವಿಷ್ಯ ನಿಧಿ ಹಣವನ್ನು ಸರಿಯಾದ ವೇಳೆಗೆ ಪಾವತಿಸದೆ ಶೇ.30ರಿಂದ ಶೇ.50 ಹಣವನ್ನು ಮಾತ್ರ ಪಾವತಿಸುತ್ತಿದೆ. ಕಾರ್ಖಾನೆ ಅಧಿಕಾರಿಗಳನ್ನು ಹೇಳ್ಳೋರು, ಕೇಳ್ಳೋರು ಇಲ್ಲದಂತಾಗಿದೆ ಎನ್ನುವುದು ನಿವೃತ್ತ ನೌಕರರ ಆರೋಪವಾಗಿದೆ. ನಡೆಯದ ಆಡಳಿತ ಮಂಡಳಿ ಸಭೆ: ಮೈಸೂರು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕು. 15 ಜುಲೈ 2016 ರಂದು ನಡೆದ ಆಡಳಿತ ಮಂಡಳಿ ಸಭೆಯನ್ನು ಬಿಟ್ಟರೆ ಇದುವರೆಗೂ ಸಭೆ ನಡೆದೇ ಇಲ್ಲ. ಇದಕ್ಕೆ ಕಾರಣವೇನೆಂದು ಕೇಳಿದರೆ ಅಧ್ಯಕ್ಷರಿಲ್ಲದ ಕಾರಣ ಆಡಳಿತ ಮಂಡಳಿ ಸಭೆ ನಡೆಸಿಲ್ಲವೆಂಬ ಉತ್ತರ ಬರುತ್ತಿದೆ.

ನಾವು ಅಧಿವೇಶನ ಮುಗಿಯುವವರಿಗೂ ಕಾಯುತ್ತೇವೆ. ನಂತರ ನಿವೃತ್ತ ನೌಕರರೆಲ್ಲರೊಡಗೂಡಿ ಸರ್ಕಾರದ ಬಳಿಗೆ ನಿಯೋಗ ತೆರಳುತ್ತೇವೆ. 6ನೇ ವೇತನ ಒಪ್ಪಂದದಂತೆ ಗ್ರ್ಯಾಚ್ಯುಟಿ ಹಣ ನೀಡುವಂತೆ ಮನವಿ ಮಾಡುತ್ತೇವೆ. ಶೀಘ್ರ ಹಣ ಬಿಡುಗಡೆ ಮಾಡದಿದ್ದರೆ ಹೋರಾಟಕ್ಕೆ ಸಿದ್ಧರಾಗುತ್ತೇವೆ.
ವಿನಾಯಕ, ಮೈಷುಗರ್‌ ಕಾರ್ಮಿಕ ಸಂಘದ ಮಾಜಿ ಕಾರ್ಯದರ್ಶಿ

ಕಾರ್ಮಿಕ ಸಚಿವರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವರು 6ನೇ ವೇತನ ಒಪ್ಪಂದದಂತೆ ಕಾರ್ಮಿಕರಿಗೆ ವೇತನ, ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದರೂ ಕಾರ್ಖಾನೆ ಆಡಳಿತ ಮಂಡಳಿ ಉದ್ಧಟತನ ಪ್ರದರ್ಶಿಸುತ್ತಿದೆ.
ಕೃಷ್ಣೇಗೌಡ, ಮೈಷುಗರ್‌ ನಿವೃತ್ತ ನೌಕರ 

ಆರನೇ ವೇತನ ಒಪ್ಪಂದದ ಪ್ರಕಾರ ಕಾರ್ಮಿಕರಿಗೆ ವೇತನ, ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಹಣ ಬಿಡುಗಡೆ ಮಾಡದ ಮೈಷುಗರ್‌ ಆಡಳಿತ ಮಂಡಳಿ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ನಮಗೆ ಜೀವನ ನಡೆಸುವುದೇ ಕಷ್ಟವಾಗಿದೆ. ನೌಕರರು ಸಂಕಷ್ಟದಲ್ಲಿದ್ದರೂ ವೇತನ ಬಿಡುಗಡೆ ಮಾಡದೆ ಚೆಲ್ಲಾಟವಾಡುತ್ತಿದೆ. 
ರಾಜಣ್ಣ, ನಿವೃತ್ತ ನೌಕರ 

ಹೊರಗುತ್ತಿಗೆ ನೇಮಕಾತಿಯಲ್ಲಿ ಅವ್ಯವಹಾರ
ಮೈಷುಗರ್‌ ಕಾರ್ಖಾನೆ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ.
ಗಂಭೀರ ಭ್ರಷ್ಟಾಚಾರ ನಡೆಸಿ ವಜಾಗೊಂಡ ಹಲವು ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ
ಕಂಪನಿಗೆ ಮತ್ತೆ ನೇಮಿಸಿಕೊಳ್ಳಲಾಗಿದೆ. ಅವರಿಗೆ ಮನಸೋ ಇಚ್ಛೆ ವೇತನ ನಿಗದಿಪಡಿಸಲಾಗಿದೆ.

ಹೊರಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಳ್ಳುವ ವೇಳೆ ಸರ್ಕಾರ ವಿಧಿಸಿರುವ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ. ಮೈಷುಗರ್‌ ಕಂಪನಿಯೊಳಗಿರುವ ಅಧಿಕಾರಿಗಳು ಯಾರ ನಿಯಂತ್ರಣಕ್ಕೂ ಸಿಗುತ್ತಿಲ್ಲ. ಸಚಿವರಾಗಿದ್ದ ಮಹದೇವ ಪ್ರಸಾದ್‌ ಕಾರ್ಖಾನೆ ಅಧ್ಯಕ್ಷರಾಗಿದ್ದಾಗಲೂ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಲಿಲ್ಲ. ಅವರ ನಿಧನದ ಬಳಿಕ ಹೊಸ ಅಧ್ಯಕ್ಷರನ್ನೂ ನೇಮಿಸಲಿಲ್ಲ.

ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಾಗಿ ಬರುವವರ ಹಾದಿ ತಪ್ಪಿಸುವಲ್ಲಿ ನಿಸ್ಸೀಮರಾಗಿರುವ ಅಧಿಕಾರಿ ವರ್ಗ ಯಾವುದೇ ಒಳಗುಟ್ಟನ್ನು ಬಿಟ್ಟುಕೊಡುತ್ತಿಲ್ಲ. ಇದರ ನಡುವೆ ನಾಲ್ಕೈದು ತಿಂಗಳಿಗೊಮ್ಮೆ ಕಾರ್ಖಾನೆ ವ್ಯವಸ್ಥಾಪಕರನ್ನು ಬದಲಾಯಿಸುವ ಪ್ರವೃತ್ತಿಗೆ ಸರ್ಕಾರ ಕಡಿವಾಣ ಹಾಕಿಲ್ಲ. ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಳ್ಳುವ ಅಧಿಕಾರಿಗಳು ಕಂಪನಿಯೊಳಗಿನ ವ್ಯವಸ್ಥೆಯನ್ನು ಅರಿತುಕೊಳ್ಳುವಷ್ಟರಲ್ಲೇ ವರ್ಗಾವಣೆಯಾಗುತ್ತಿದ್ದಾರೆ. ಕಂಪನಿ ಅಧಿಕಾರಿಗಳು ಎಗ್ಗಿಲ್ಲದೆ ನಡೆಸುವ ಹಣ ಲೂಟಿಗೆ ಇದೂ ಒಂದು ಕಾರಣವಾಗಿದೆ.

ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next