Advertisement

ಶಿರ್ಡಿ: 3 ದಿನಗಳಲ್ಲಿ 6.66ಕೋ.ರೂ.ದೇಣಿಗೆ ಸಂಗ್ರಹ !

12:55 PM Aug 01, 2018 | Team Udayavani |

ಶಿರ್ಡಿ: ಇಲ್ಲಿನ ಪ್ರಸಿದ್ಧ  ಸಾಯಿಬಾಬಾ ಮಂದಿರದಲ್ಲಿ  ನಡೆದ  ಮೂರು ದಿನಗಳ ಗುರು ಪೂರ್ಣಿಮೆ ಹಬ್ಬ  ಆಚರಣೆ  ಸಮಯದಲ್ಲಿ   ಶಿರ್ಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌  ಭಕ್ತರಿಂದ 6.66 ಕೋ.ರೂ.ಗಿಂತಲೂ ಅಧಿಕ ದೇಣಿಗೆಗಳನ್ನು  ಪಡೆದಿದೆ.  

Advertisement

ದೇಶ-ವಿದೇಶಗಳಿಂದ ಆಗಮಿಸಿದ ಭಕ್ತರು ಜು. 26ರಿಂದ 28ರ ವರೆಗೆ ಮಂದಿರದ ದೇಣಿಗೆ ಪೆಟ್ಟಿಗೆಗಳಲ್ಲಿ 3.83 ಕೋ.ರೂ.ಗಳ ನಗದು ದೇಣಿಗೆ ನೀಡಿದರು ಎಂದು ಶಿರ್ಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಎಒ) ರುಬಾಲ್‌ ಅಗರ್ವಾಲ್‌  ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದಕ್ಕೆ ಹೆಚ್ಚುವರಿಯಾಗಿ ದೇಣಿಗೆ ಕೌಂಟರ್‌ಗಳಲ್ಲಿ  1.57 ಕೋ.ರೂ. ಗಳ ದೇಣಿಗೆಗಳನ್ನು ಪಡೆಯಲಾಗಿದೆ ಎಂದವರು ಹೇಳಿದ್ದಾರೆ.   ಆನ್‌ಲೈನ್‌, ಡೆಬಿಟ್‌ ಕಾರ್ಡ್‌, ಚೆಕ್‌ ಮತ್ತು ಡಿಮಾಂಡ್‌ ಡ್ರಾಫ್ಟ್‌ (ಡಿಡಿ)ಗಳ ಮೂಲಕ ಮಂದಿರಕ್ಕೆ ಸುಮಾರು 1 ಕೋಟಿ ರೂ.ಗಳಷ್ಟು ದೇಣಿಗೆ ಲಭ್ಯವಾಗಿದೆ ಎಂದು ಅಗರ್ವಾಲ್‌ ನುಡಿದಿದ್ದಾರೆ. ಅಮೆರಿಕ, ಲಂಡನ್‌, ಮಲೇಶಿಯಾ, ಕೆನಡಾ, ನ್ಯೂಜಿಲೆಂಡ್‌  ಮತ್ತಿತರ ಕೊಲ್ಲಿ ರಾಷ್ಟ್ರಗಳ ಭಕ್ತರಿಂದ  11.25 ಲ.ರೂ. ಮೌಲ್ಯದ ವಿದೇಶಿ ಕರೆನ್ಸಿಗಳು ದಾನ ರೂಪದಲ್ಲಿ ದೊರೆತಿವೆ. ಟ್ರಸ್ಟ್‌  ಹಬ್ಬದ ವೇಳೆ ಗುರುದಕ್ಷಿಣೆ ರೂಪದಲ್ಲಿ  13.53 ಲ.ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪಡೆದಿದೆ ಎಂದವರು ಹೇಳಿದ್ದಾರೆ.

ದೇಣಿಗೆಗಳ ಹೊರತಾಗಿ ಟ್ರಸ್ಟ್‌ಗೆ  ಪಾಸ್‌, ಲಡ್ಡು ವಿತರಣೆ ಹಾಗೂ ಭಕ್ತರಿಗೆ ಬಡಿಸಲಾದ ಭೋಜನದಿಂದ 2.7 ಕೋ.ರೂ. ಆದಾಯ ಸಂಗ್ರಹವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಧಿಕ ದೇಣಿಗೆ
ಕಳೆದ ವರ್ಷದ  ಗುರುಪೂರ್ಣಿಮೆ ಆಚರಣೆಯ ತುಲನೆಯಲ್ಲಿ  ಈ ವರ್ಷ ಸುಮಾರು 1.10 ಕೋ.ರೂ.ಗಿಂತಲೂ ಅಧಿಕ ಮೊತ್ತದ ದೇಣಿಗೆಗಳನ್ನು ಪಡೆಯಲಾಗಿದೆ. ಕಳೆದ ವರ್ಷ ಮೂರು ದಿನಗಳ ಉತ್ಸವ ಆಚರಣೆಯ ವೇಳೆ 5.52 ಕೋ.ರೂ.ಗಳ ದೇಣಿಗೆ ಸಂಗ್ರಹವಾಗಿತ್ತು.

Advertisement

ಶಿರ್ಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌  ತನ್ನ ಖಜಾನೆಯಲ್ಲಿ 425  ಕೆ.ಜಿ. ಚಿನ್ನ ಹಾಗೂ 4,800 ಕೆ.ಜಿ.  ಬೆಳ್ಳಿ ಆಭರಣಗಳನ್ನು  ಹೊಂದಿರುವ ಹೊರತಾಗಿ  ವಿವಿಧ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ  ಒಟ್ಟು 2,180 ಕೋ.ರೂ.ಗಳ ಸ್ಥಿರ ಠೇವಣಿಗಳನ್ನು ಹೊಂದಿದೆ ಎಂದು ಅಗರ್ವಾಲ್‌ ಅವರು ಹೇಳಿದ್ದಾರೆ.

ಈ ಬಾರಿಯ ಗುರುಪೂರ್ಣಿಮೆ ಆಚರಣೆಯ ವೇಳೆ ದೇಶ ಹಾಗೂ ವಿದೇಶಗಳ ವಿವಿಧ ಭಾಗಗಳಿಂದ ಸುಮಾರು 3 ಲಕ್ಷ ಭಕ್ತರು ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿದ್ದರು ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next