Advertisement
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಈ ವಿಷಯ ತಿಳಿಸಿದ್ದು, ಅರಣ್ಯ ಇಲಾಖೆಯ ವಶದಲ್ಲಿ ಆರು ಲಕ್ಷ ಹೆಕ್ಟೇರ್ ನಷ್ಟು ಭೂಮಿ ಡೀಮ್ಡ್ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದ್ದು ಮೂಲತ: ಇದು ಕಂದಾಯ ಇಲಾಖೆಗೆ ಸೇರಿದ್ದು ಎಂದರು.
Related Articles
Advertisement
ಕೊಡಗು ಜಿಲ್ಲೆಯಲ್ಲಿ ಹನ್ನೆರಡು ಸಾವಿರ ಎಕರೆ ಭೂಮಿ,ಹಾಸನದಲ್ಲಿ ಮೂವತ್ತು ಸಾವಿರ ಎಕರೆ ಭೂಮಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಲವತ್ತೈದು ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ವಿವರ ನೀಡಿದರು.
ಹೀಗೆ ಒತ್ತುವರಿಯಾದ ಭೂಮಿಯಲ್ಲಿ ಕಾಫಿ,ಏಲಕ್ಕಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು ಈ ಭೂಮಿಯನ್ನು ಮೂವತ್ತು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಒತ್ತುವರಿದಾರರಿಗೇ ನೀಡಲಾಗುವುದು ಎಂದರು.
ಹೀಗೆ ಒತ್ತುವರಿಯಾದ ಭೂಮಿಯ ಪೈಕಿ ಐದು ಎಕರೆಗಿಂತ ಕಡಿಮೆ ಪ್ರಮಾಣದ ಭೂಮಿಯನ್ನು ಒತ್ತುವರಿ ಮಾಡಿಕೊಂಡವರ ಸಂಖ್ಯೆ ಶೇಕಡಾ ಎಂಭತ್ತರಷ್ಟಿದೆ ಎಂದು ಅವರು ವಿವರ ನೀಡಿದರು.
ಹೀಗಾಗಿ ಒಂದರಿಂದ ಎರಡು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎಕರೆಗೆ ವಾರ್ಷಿಕ ಒಂದೂವರೆ ಸಾವಿರ ರೂಪಾಯಿಗಳಿಂದ ಎರಡು ಸಾವಿರ ರೂಪಾಯಿಗಳಷ್ಟು ಗುತ್ತಿಗೆ ಹಣ ನಿಗದಿ ಪಡಿಸಲಾಗುವುದು. ಇನ್ನು ಮೂರರಿಂದ ಐದು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎರಡರಿಂದ ಎರಡೂವರೆ ಸಾವಿರ ರೂಪಾಯಿ,ಐದರಿಂದ ಹತ್ತು ಎಕರೆ ಮೇಲ್ಪಟ್ಟ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಗೆ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ಗುತ್ತಿಗೆ ದರ ನಿಗದಿ ಪಡಿಸಲಾಗುವುದು. ಇದೇ ರೀತಿ ಸ್ಲ್ಪಾಬ್ ಆಧಾರದ ಮೇಲೆ ಒತ್ತುವರಿ ಭೂಮಿಗೆ ಗುತ್ತಿಗೆ ದರವನ್ನು ನಿಗದಿ ಮಾಡಲಾಗುವುದು ಎಂದ ಅವರು,ಇಂತಹ ಭೂಮಿಯನ್ನು ಹಲ ಕಾಲದಿಂದ ಒತ್ತುವರಿದಾರರು ಸರ್ಕಾರಕ್ಕೆ ಹಣ ಪಾವತಿಸದೆಯೇ ಅನುಭವಿಸುತ್ತಿದ್ದರು. ಆದರೆ ಇನ್ನು ಮುಂದೆ ಅವರು ಗುತ್ತಿಗೆ ಹಣ ಪಾವತಿಸಬೇಕಾಗುತ್ತದೆ.ಆ ಮೂಲಕ ಒತ್ತುವರಿ ಜಮೀನು ಸರ್ಕಾರದ್ದು ಎಂದು ದಾಖಲೆಗಳಲ್ಲಿ ಖಚಿತವಾಗಿ ಗುರುತಿಸಲ್ಪಡುತ್ತದೆ ಎಂದರು.
ಇದೇ ರೀತಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒತ್ತುವರಿ ಗೇರು ಭೂಮಿಯನ್ನು ಒತ್ತುವರಿದಾರರಿಗೇ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.