Advertisement

6 ಕೋಟಿ ರೂ. ವೆಚ್ಚದಲ್ಲಿ ಪತ್ರಿಕಾ ಭವನ

06:22 PM Apr 16, 2022 | Team Udayavani |

ಬೆಳಗಾವಿ: ಜಿಲ್ಲೆಯ ಪತ್ರಕರ ಹಲವು ದಿನಗಳ ಬೇಡಿಕೆಯಾದ ಪತ್ರಿಕಾ ಭವನ ನಿರ್ಮಾಣಕ್ಕೆ ಇಲ್ಲಿಯ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿ ನಿವೇಶನ ಮಂಜೂರಾಗಿದ್ದು, 6 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್‌ ಪತ್ರಿಕಾ ಭವನ ನಿರ್ಮಾಣವಾಗಲಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಡಾ| ಭೀಮಶಿ ಜಾರಕಿಹೊಳಿ ಹಾಗೂ ಅಧ್ಯಕ್ಷ ದಿಲೀಪ ಕುರಂದವಾಡೆ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇಶಕ್ಕೆ ಮಾದರಿಯಾಗುವಂತೆ ಸುಸಜ್ಜಿತ ಪತ್ರಿಕಾ ಭವನ 12.5 ಗುಂಟೆ ಜಾಗದಲ್ಲಿ ನಿರ್ಮಾಣವಾಗಲಿದೆ. ಐದಂತಸ್ತಿನ ಭವನದಲ್ಲಿ ಪತ್ರಕರ್ತರಿಗಾಗಿ ಹಲವಾರು ಅನುಕೂಲ ಒದಗಿಸಲಾಗುವುದು. ಮೇ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ಸಹಕಾರ ಬಹಳಷ್ಟಿದೆ ಎಂದರು.

ನಿವೇಶನ: ಪತ್ರಕರ್ತರ ಭದ್ರತೆ ಮತ್ತು ಶ್ರೇಯೋಭಿವೃದ್ಧೀಗಾಗಿ ನಿವೇಶನ ಮಂಜೂರಾತಿ ಸೇರಿದಂತೆ ಅನೇಕ ವಿನೂತನ ಯೋಜನೆಗಳನ್ನು ನೀಡಲಾಗುತ್ತಿದೆ. ದೇಶದಲ್ಲಿಯೇ ಮಾದರಿಯಾದ ಅನೇಕ ಯೋಜನೆಗಳನ್ನು ಜಿಲ್ಲೆಯ ಪತ್ರಕರ್ತರಿಗಾಗಿ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು.

ಸಂಘದ ಸದಸ್ಯರಿಗಾಗಿ ಬೆಳಗಾವಿ ನಗರದಲ್ಲಿ ರಿಯಾಯಿತಿ ದರದಲ್ಲಿ ನಿವೇಶನ ನೀಡುವುದನ್ನು ಆದ್ಯತೆ ಮೇಲೆ ಪರಿಗಣಿಸಲಾಗಿದೆ. ಈಗಾಗಲೇ ಮೂರು ಕಡೆ ಜಾಗಗಳನ್ನು ಗುರುತಿಸಲಾಗಿದ್ದು, ಅರ್ಹ ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ಹಂಚಲಾಗುವುದು ಎಂದು ಅಧ್ಯಕ್ಷ ದಿಲೀಪ ಕುರಂದವಾಡೆ ತಿಳಿಸಿದರು.

ತರಬೇತಿ: ಪತ್ರಕರ್ತರು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ತಮ್ಮ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಲು, ಜಾಗತಿಕ ಮಟ್ಟದ ಪರಿಣಿತರಿಂದ ಆಧುನಿಕ ತಂತ್ರಜ್ಞಾನ ತರಬೇತಿಯನ್ನು ಮುಂಬೆ„, ಬೆಂಗಳೂರು ಹಾಗೂ ಹೆ„ದ್ರಾಬಾದಿನಲ್ಲಿ ನೀಡಲಾಗುವುದು. ಅಲ್ಲಿಯ ಊಟ ಮತ್ತು ವಸತಿಯ ವೆಚ್ಚವನ್ನು ಪತ್ರಕರ್ತರು ಭರಿಸಿದರೆ, ಸುಮಾರು ರೂ. 45 ಸಾವಿರದಷ್ಟು ತರಬೇತಿ ವೆಚ್ಚವನ್ನು ಸಂಘ ಭರಿಸಲಿದೆ ಎಂದರು.

Advertisement

ಪತ್ರಕರ್ತರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳ ಸಿದ್ಧತೆಗಾಗಿ ಬೆಳಗಾವಿಯಲ್ಲಿ ಕೋಚಿಂಗ್‌ ಸೆಂಟರ್‌ ಆರಂಭಿಸಲಾಗುತ್ತಿದೆ. ಕೋಚಿಂಗ್‌ ಜೊತೆಗೆ, ಉಚಿತ ಊಟ ಮತ್ತು ವ್ಯವಸ್ಥೆ ಕಲ್ಪಿಸಲಾಗುವುದು. ಪತ್ರಕರ್ತರ ಮಕ್ಕಳು ಉದ್ಯೋಗ ವಂಚಿತರಾಗಿದ್ದರೆ ಅವರಿಗೆ ಉಚಿತವಾಗಿ ಸ್ವ-ಉದ್ಯೋಗ ತರಬೇತಿ ನೀಡಲಾಗುವುದು. ಸಂಘದ ಸಹಯೋಗದಲ್ಲಿ ದಿಲೀಪ ಕುರಂದವಾಡೆ ಅವರ ಎಸ್‌.ಎಸ್‌. ಪ್ರತಿಷ್ಠಾನ ವತಿಯಿಂದ 100 ಬಡ ಪತ್ರಕರ್ತರ ಮಕ್ಕಳನ್ನು ದತ್ತು ತೆಗೆದುಕೊಂಡು, 1ರಿಂದ 10ನೇ ತರಗತಿ ವರೆಗಿನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದರು.

ಆರೋಗ್ಯ ಯೋಜನೆ: ಅನಾರೋಗ್ಯಪೀಡಿತ ಪತ್ರಕರ್ತರಿಗೆ ನೆರವಾಗಲು ಆರೋಗ್ಯ ತುರ್ತುನಿ ಧಿ ಯೋಜನೆ ಜಾರಿಗೆ ತರಲಾಗುತ್ತಿದೆ. ಅವರ ಮನೆಗೆ ಹೋಗಿ ಧನಸಹಾಯ ನೀಡುವುದು ಮತ್ತು ಮೃತಪಟ್ಟ ಪತ್ರಕರ್ತರ ಕುಟುಂಬಸ್ಥರು ಸ್ವಾವಲಂಬಿಗಳಾಗಿ ಬದುಕಲು ನೆರವು ನೀಡಲಾಗುವುದು. ಜಿಲ್ಲೆಯಲ್ಲಿನ ಬಡ ಮತ್ತು ವಯಸ್ಸಾದ ಪತ್ರಿಕಾ ವಿತರಕರಿಗಾಗಿ 100 ಸೈಕಲ್‌, 5 ಇ-ಬೈಕ್‌ ಇನ್ನೆರಡು ವಾರದಲ್ಲಿ ವಿತರಿಸಲಾಗುವುದು. ಜತೆಗೆ ಪತ್ರಕರ್ತರ ಆರೋಗ್ಯ ತಪಾಸಣಾ ಶಿಬಿರ, ಕಾನೂನು ಅರಿವು ಕಾರ್ಯಕ್ರಮ, ಪತ್ರಕರ್ತರ ಕ್ರೀಡಾಕೂಟ ಮತ್ತು ಕುಟುಂಬ ಮಿಲನ ಕಾರ್ಯಕ್ರಮ ನಿರಂತರವಾಗಿ ನಡೆಯಲಿವೆ. ಹಿರಿಯ ಪತ್ರಕರ್ತರ ಮಾನಸಿಕ ಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಭಾನುವಾರದ ಬಾಂಧವ್ಯ ಕಾರ್ಯಕ್ರಮದಡಿ ಪತ್ರಕರ್ತರು ಅವರ ಮನೆಗೆ ಹೋಗಿ ಉಪಹಾರ ಸೇವಿಸಲಿದ್ದಾರೆ ಎಂದರು.

ವಿವಿಧ ಯೋಜನೆ ಅರ್ಜಿಗಳನ್ನು ಗೌರವಾಧ್ಯಕ್ಷ ಭೀಮಶಿ ಜಾರಕಿಹೊಳಿ ಬಿಡುಗಡೆ ಮಾಡಿದರು. ಚುನಾವಣಾ ಧಿಕಾರಿ ಗುರುಸಿದ್ದಪ್ಪ ಪೂಜೇರಿ, ಹಿರಿಯ ಪತ್ರಕರ್ತ ರಹಮತ್‌ ಕೆಂಚಗಾರ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯತ್ವ ಮತ್ತು ನವೀಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅಗತ್ಯ ಮಾಹಿತಿಯನ್ನು ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳ್ಳೋಜಿ ನೀಡಿದರು. ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ ಪಾಟೀಲ, ಯಲ್ಲಪ್ಪ ತಳವಾರ, ಶ್ರೀಶೈಲ ಮಠದ,
ಕಾರ್ಯದರ್ಶಿಗಳಾದ ಶ್ರೀಕಾಂತ ಕುಬಕಡ್ಡಿ, ಈಶ್ವರ ಹೋಟಿ, ತಾನಾಜಿರಾವ ಮುರಂಕರ, ಖಜಾಂಚಿ ಚೇತನ ಹೊಳೆಪ್ಪಗೋಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಗೊಂದಿ, ಪತ್ರಕರ್ತ ಮಂಜುನಾಥ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next