Advertisement

ರಾಷ್ಟ್ರಮಟ್ಟದ ಕಿಸಾನ್‌ ಸ್ವರಾಜ್‌ ಸಮ್ಮೇಳನಕ್ಕೆ ತೆರೆ 

03:08 PM Nov 14, 2022 | Team Udayavani |

ಮೈಸೂರು: ಹವಾಮಾನ ಬದಲಾವಣೆ ಕುರಿತು ನಡೆಯುತ್ತಿರುವ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯಮಟ್ಟದ ಸಮ್ಮೇಳನಗಳು ಕೇವಲ ಕಾಫಿ, ತಿಂಡಿಸೇವನೆಗೆ ಸೀಮಿತಗೊಳ್ಳುತ್ತಿವೆ ಹೊರತು, ಸಮ್ಮೇಳನದ ನಿರ್ಣಯಗಳ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ ಎಂದು ಆಶಾ ಕಿಶಾನ್‌ ಸ್ವರಾಜ್‌ ಸಂಸ್ಥೆ ರಾಷ್ಟ್ರೀಯಸಂಚಾಲಕ ಶ್ರೀಧರ್‌ ರಾಧಾಕೃಷ್ಣ ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಕರಾಮುವಿ ಘಟಿಕೋತ್ಸವ ಭವನದಲ್ಲಿ ನಡೆಯತ್ತಿರುವ 5ನೇ ರಾಷ್ಟ್ರ ಮಟ್ಟದ ಕಿಸಾನ್‌ ಸ್ವರಾಜ್‌  ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಿರ್ಣಯಗಳ ನಿರ್ಲಕ್ಷ್ಯ: ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ, ಅಕಾಲಿಕ ಮಳೆ ಹೀಗೆ ಅನೇಕ ವಿಷಯ ಕುರಿತು ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳು ಕಾಲ ಕಾಲಕ್ಕೆ ಜರುಗುತ್ತಿವೆ. ಅದರಂತೆ ಈ ವರ್ಷದ ಈಜಿಪ್ಟ್ನಲ್ಲಿ ಕಾಪ್‌-27 ಸಭೆ ನಡೆಯುತ್ತಿದೆ. ಆದರೆ, ಸಭೆಯಲ್ಲಿಚರ್ಚೆಯಾಗುವ ಗಂಭೀರ ಸ್ವರೂಪದ ಸಮಸ್ಯೆಗಳ ವಿರುದ್ಧ ತೆಗೆದುಕೊಳ್ಳುವ ನಿರ್ಣಯಗಳನ್ನು ಯಾವ ದೇಶದ ಸರ್ಕಾರಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದೆ ಕಾರ್ಪೊರೇಟ್‌ ಸಂಸ್ಥೆಗಳ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.

ಸಾವಿನ ದವಡೆಗೆ ಸಿಲುಕಬೇಕಾಗುತ್ತೆ: ನಮ್ಮ ಜೀವನ ಶೈಲಿಯಿಂದಾಗಿ ಪರಿಸರಲ್ಲಿ ಸಾಕಷ್ಟು ಏರುಪೇರು ಉಂಟಾಗಿ ಈಗಾಗಲೇ ಪ್ರವಾಹ, ಅಕಾಲಿಕ ಮಳೆ, ಅಧಿಕ ತಾಪಮಾನದಂತಹ ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಒಂದು ವೇಳೆ ಇಂತಹ ಸಮಸ್ಯೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ಮುಂದಿನ ತಲೆಮಾರುಗಳು ಶುದ್ಧ ಗಾಳಿ, ನೀರು, ಮಣ್ಣು ಸಿಗದೆ ಸಾವಿನ ದವಡೆಗೆ ಸಿಲುಕಿ ನರಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮರ್ಪಕ ಹೋರಾಟ ನಡೆಸುತ್ತಿಲ್ಲ: ಬಿಹಾರ ಸಂಸದ ಅನಿಲ್‌ ಹೆಗ್ಗಡೆ ಮಾತನಾಡಿ, 1990ರ ದಶಕದ ಹಿಂದೆಯೇ ಕರ್ನಾಟಕಲ್ಲಿ ಎಂ.ಡಿ.ನಂಜುಂಡ ಸ್ವಾಮಿ ಅವರ ನೇತೃತ್ವದಲ್ಲಿ ಬಂಡವಾಳಶಾಹಿ ಪರವಾದಂತಹಗ್ಯಾಟ್‌ ಒಪ್ಪಂದಗಳ ವಿರುದ್ಧ ಚಳವಳಿ ನಡೆದಿತ್ತು. ಸಾವಯುವ ಬೆಳೆಗಳಿಗೆ ವಿರುದ್ಧವಾದಂತಹ ಜಿಎಂ ಬೀಜಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವಂತಹ ಯಾವುದೇ ನಿರ್ಣಯಗಳಿಗೆ ಅವರು ತೀವ್ರವಾಗಿ ವಿರೋಧಿಸುತ್ತಿದ್ದರು. ಆದರೆ, ಇಂದಿನ ರೈತ ಚಳವಳಿ ಗಳಲ್ಲಿ ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಸಮರ್ಪಕ ಹೋರಾಟ ನಡೆಸುತ್ತಿಲ್ಲ ಎಂದು ಹೇಳಿದರು.

Advertisement

ಹಿಂಪಡೆಯಲು ಆಗಿಲ್ಲ: ಗುಜರಾತಿನ ಕಾಂಡ್ಲಾದಲ್ಲಿ ಕಾರ್ಗಿಲ್‌ ಟ್ರೇಡ್‌ ಕಂಪನಿಗೆ ಸುಮಾರು ಹದಿನೈದು ಸಾವಿರ ಎಕರೆ ಕೃಷಿ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ನೀಡಲು ನಿರ್ಧರಿಸಿದಾಗ ಅನೇಕ ರೈತ ಸಂಘಟನೆಗಳ ಹೋರಟ ನಡೆಸಿದ ಪರಿಣಾಮ ಸಾವಿರಾರು ಎಕರೆ ಕೃಷಿ ಭೂಮಿ ಉಳಿದು ಕೊಂಡಿತ್ತು. ನಮ್ಮ ದೇಶದ ಬಾಸುಮತಿ ಹಕ್ಕಿಯಪೇಟೆಂಟನ್ನು ಅಮೆರಿಕ ಪಡೆದುಕೊಂಡಿದ್ದು, ಇಂದಿಗೂ ಅದನ್ನು ಹಿಂಪಡೆಯಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ನಿಮ್ಮ ವಿಜ್ಞಾನ ಮತ್ತು ತಂತ್ರಜ್ಞಾಗಳಾದ ಡ್ರೋನ್‌ ಇತ್ಯಾದಿಗಳನ್ನು ತಲೆ ಮೇಲೆ ಇಟ್ಟುಕೊಳ್ಳಿ. ರೈತರಿಗೆ ಅನುಕೂಲವಾಗುವಂತಹ, ಹವಾಮಾನ ಬದಲಾವಣೆಗೆ ಬೇಕಿರುವ ನೀತಿ ನಿಯಮಗಳನ್ನು ಅನುಷ್ಠನಾಗೊಳಿಸುವ ಬದ್ಧತೆ ಸರ್ಕಾರಗಳು ತೋರಬೇಕಿದೆ.– ಶ್ರೀಧರ್‌ ರಾಧಾಕೃಷ್ಣ, ರಾಷ್ಟ್ರೀಯ ಸಂಚಾಲಕ ಆಶಾ ಕಿಶಾನ್‌ ಸ್ವರಾಜ್‌ ಸಂಸ್ಥೆ.

Advertisement

Udayavani is now on Telegram. Click here to join our channel and stay updated with the latest news.

Next